ಕರೋನಾ ಸೋಂಕು ದೇಶಾದ್ಯಂತ ಏರುಗತಿಯಲ್ಲಿಯೇ ಸಾಗುತ್ತಿದೆ. ಈಗಾಗಲೇ 8ಸಾವಿರಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾದರೆ, ಇನ್ನೂರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತ ತಕ್ಕಮಟ್ಟಿಗೆ ರೋಗ ನಿಯಂತ್ರಿಸುವಲ್ಲಿ ಯಶಸ್ವಿ ಸಾಧಿಸಿದೆಯಾದರೂ, ಸೋಂಕು ಹರಡುವ ಭೀತಿ ನಿಂತಿಲ್ಲ. ಜೊತೆಗೆ ಕಾರ್ಮಿಕರ ಬದುಕು ಅನ್ನೋದು ಅನಿಶ್ಚಿತತೆ ಬಂದು ನಿಲ್ಲುವ ಆತಂಕವೂ ಇದೆ. ಈಗಲೇ ಶುರುವಾಗಿರುವ ವಲಸೆ ಕಾರ್ಮಿಕರ ಸಂಕಷ್ಟ ಅನ್ನೋದು ಇನ್ನಷ್ಟು ಹೆಚ್ಚಾಗಲಿದೆ. ಅದರಲ್ಲೂ ಈ ವಲಸೆ ಕಾರ್ಮಿಕರ ಬದುಕು ದೊಡ್ಡ ಪ್ರಮಾಣದಲ್ಲಿ ದುಸ್ತರಗೊಳ್ಳುವ ಸಾಧ್ಯತೆಗಳು ಭವಿಷ್ಯದ ದಿನಗಳಲ್ಲಿ ಕಾಣಸಿಗುವ ಆತಂಕ ಎದುರಾಗಿದೆ.
ಸಾಮಾನ್ಯವಾಗಿ ರಾಜ್ಯ ಬಿಟ್ಟು ಹೊರರಾಜ್ಯಕ್ಕೆ ತೆರಳುವ ವಲಸೆ ಕಾರ್ಮಿಕರು ಅಲ್ಲಿಯೇ ತಮ್ಮ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈ ರೀತಿ ಹೊರರಾಜ್ಯಕ್ಕೆ ತೆರಳುವ ಮಂದಿಯ ಮಕ್ಕಳಿಗೆ ಶಿಕ್ಷಣ ಅನ್ನೋದು ಗಗನ ಕುಸುಮಗಳಾಗುವುದೇ ಜಾಸ್ತಿ. ಈಗಾಗಲೇ ದೇಶಾದ್ಯಂತ ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿ ಮೂರು ವಾರಗಳಾಗುತ್ತ ಬಂದಿವೆ. ಇದರಿಂದ ದೇಶದ ಶೇಕಡಾ 92.5 ರಷ್ಟು ಉದ್ಯೋಗಿಗಳು ಮೂರು ವಾರಗಳಿಂದ ಕೆಲಸ ಇಲ್ಲದಂತಾಗಿದ್ದಾರೆ. ಅದರಲ್ಲೂ ವಲಸೆ ಕಾರ್ಮಿಕರಿಗೆ ಮತ್ತು ದಿನಗೂಲಿ ಕಾರ್ಮಿಕರಿಗೆ ಬೇಸಿಗೆ ಅವಧಿಯ ಈ ದಿನಗಳಲ್ಲಿ ವಾರವಿಡೀ ಕೆಲಸವಿರುತ್ತವೆ. ಆದರೆ ಈ ಬಾರಿ ಹಾಗೆ ಆಗಲಿಲ್ಲ, ಮಾರ್ಚ್ ಆರಂಭದಲ್ಲಿಯೇ ಬಹುತೇಕ ಕಾರ್ಮಿಕರು, ದಿನಗೂಲಿ ನೌಕರರು ಕೆಲಸ ಕಳೆದುಕೊಳ್ಳುತ್ತಾ ಬಂದಿದ್ದಾರೆ. ಮುಂದೆ ಮಳೆಗಾಲ ಆರಂಭವಾಗಲಿದ್ದು ಕಾರ್ಮಿಕರ ಪರಿಸ್ಥಿತಿ ನಿಜಕ್ಕೂ ಚಿಂತಾಜನಕ ಸ್ಥಿತಿಗೆ ತಳ್ಳಲ್ಪಡುವ ಆತಂಕ ಎದುರಾಗಿದೆ.
ದೇಶದಲ್ಲಿರುವ ಶೇಕಡಾ 80 ಕ್ಕಿಂತಲೂ ಅಧಿಕ ವಲಸೆ ಕಾರ್ಮಿಕರು ಹಾಗೂ ದಿನಗೂಲಿ ನೌಕರರ ಕುಟುಂಬಗಳು ಈಗಾಗಲೇ ಆಹಾರ ಸಾಮಗ್ರಿಗಳ ಕೊರತೆ ಎದುರಿಸುತ್ತಿದೆ. ಅಲ್ಲದೇ ಇನ್ನು ಕೆಲವು ಕಾರ್ಮಿಕರು ಕರೋನಾ ದೂರವಾದ ಮೇಲೂ ಹೊಸ ಕೆಲಸ ಸಿಗದೇ ಇರುವ ಆತಂಕವನ್ನೂ ಎದುರಿಸುತ್ತಿದ್ದಾರೆ. ಉತ್ತರ ಹಾಗೂ ಮದ್ಯಭಾರತದ 3,196 ವಲಸೆ ಕಾರ್ಮಿಕರನ್ನು ಸಮೀಕ್ಷೆ ನಡೆಸಿದ ಸಾಮಾಜಿಕ ಸಂಸ್ಥೆ ಜಾನ್ ಸಹಾಸ್ ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ.ಈ ರೀತಿ ಕೆಲವೇ ದಿನಗಳಲ್ಲಿ ಕನಿಷ್ಟ ತುತ್ತಿಗೂ ಪರದಾಡುವ ಪರಿಸ್ಥಿತಿ ಎದುರಿಸಲು ಕಾರಣವಾಗಿದ್ದೇ ವಲಸೆ ಕಾರ್ಮಿಕರು ಗಳಿಸುತ್ತಿರುವ ಕಡಿಮೆ ವೇತನ ಅನ್ನೋದು ಸ್ಪಷ್ಟ.
ದೇಶದ ಅರ್ಧದಷ್ಟು ದಿನಗೂಲಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು ದಿನವೊಂದಕ್ಕೆ ಗರಿಷ್ಠ ಅಂದರೆ 200 ರೂ. ಯಿಂದ 400 ರೂ.ವರೆಗೆ ಮಾತ್ರ ಗಳಿಸಲು ಸಾಧ್ಯವಾಗುತ್ತಿದೆ. ಇನ್ನು ಒಂದಿಷ್ಟು ಕೌಶಲ್ಯಯುಕ್ತ ಕೆಲಸಕ್ಕೆ ಮಹಾನಗರಗಳಲ್ಲಿ ಅವರ ಅನುಭವದ ಆಧಾರದ ಮೇಲೆ ಕನಿಷ್ಠ 500ರೂ. ಅಥವಾ 700 ರೂ. ವರೆಗೆ ಗಳಿಸಲು ಸಾಧ್ಯವಾಗುತ್ತದೆ. ಸದ್ಯ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಸ್ಥಳೀಯ ಅಥವಾ ರಾಜ್ಯ ಆಡಳಿತ ವ್ಯವಸ್ಥೆ ನಿಗದಿಪಡಿಸಿದ ವೇತನಕ್ಕಿಂತಲೂ ಹೆಚ್ಚಿನ ಆದಾಯವನ್ನೇ ಕೂಲಿ ಕಾರ್ಮಿಕರಿಗೆ ಪಡೆಯಲು ಕೂಡಾ ಸಾಧ್ಯವಾಗುತ್ತಿದೆ. ಕರ್ನಾಟಕ ಸರ್ಕಾರವು 249 ರೂ. ಯಿಂದ 275 ರೂ. ಕನಿಷ್ಠ ವೇತನ ನಿಗದಿಪಡಿಸಿದ್ದರ ಬಗ್ಗೆ ಲಾಕ್ಡೌನ್ ಜಾರಿ ಬಳಿಕ ದಿನಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿ ವಲಸೆ ಕಾರ್ಮಿಕರ ಗಮನಸೆಳೆಯುವ ಕೆಲಸ ಮಾಡಿತ್ತು.
ಕರೋನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರಕಾರ 1.7 ಲಕ್ಷ ಕೋಟಿ ಪ್ಯಾಕೆಜ್ ಅನ್ನು ಘೋಷಿಸಿದೆ. ಅದರಿಂದ ಕಾರ್ಮಿಕ ವರ್ಗಕ್ಕೆ ಹೆಚ್ಚಿನ ಅನುಕೂಲವಾಗುತ್ತೆ ಅಂತಾ ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದರು. ಆದರೆ ಜಾನ್ ಸಹಾಸ್ ಸಂಸ್ಥೆ ಅಧ್ಯಯನ ಪ್ರಕಾರ ಈ ರೀತಿಯ ಪರಿಹಾರದಿಂದ ವಲಸೆ ಕಾರ್ಮಿಕರ ದೊಡ್ಡ ವರ್ಗವೇ ಹೊರಗೆ ಉಳಿದಿದೆ ಎನ್ನುತ್ತಿದೆ.
ಇದಲ್ಲದೇ ಕಟ್ಟಡ ನಿರ್ಮಾಣ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಇರುವ ಕಲ್ಯಾಣ ನಿಧಿಯಡಿ ಆರ್ಥಿಕ ಸಹಕಾರ ನೀಡಲಾಗುತ್ತದೆಯಾದರೂ, ಅದಕ್ಕೆ ಬೇಕಾದ ಕಲ್ಯಾಣ ನಿಧಿಯ ಕಾರ್ಡ್ನ್ನು ಹೆಚ್ಚಿನ ಕಾರ್ಮಿಕರು ಹೊಂದಿಲ್ಲ. ಜಾನ್ ಸಹಾಸ್ ಸರ್ವೇ ಪ್ರಕಾರ ಈ ರೀತಿಯ ಕಾರ್ಡ್ನ್ನು ಕೇವಲ 18.8% ಜನರಲ್ಲಷ್ಟೇ ಇದೆ. ಅರ್ಥಾತ್ ಸಮೀಕ್ಷೆಗೊಳಪಡಿಸಿದ 3196 ಕಾರ್ಮಿಕರಲ್ಲಿ 600 ಮಂದಿಯಷ್ಟೇ ಇಂತಹ ಕಾರ್ಡ್ನ್ನು ಹೊಂದಿದವರಾಗಿದ್ದರು. ಇದು ದೇಶದ ಎಲ್ಲಾ ಕಟ್ಟಡ ನಿರ್ಮಾಣ ಹಾಗೂ ಇನ್ನಿತರ ನಿರ್ಮಾಣ ಕಾರ್ಯದ ಕಾರ್ಮಿಕರ ಅನುಪಾತಕ್ಕೆ ಹೋಲಿಸಿದರೆ ಶೇಕಡಾವಾರು ಕಡಿಮೆಯಾಗುವ ಸಾಧ್ಯತೆಗಳೂ ಇವೆ. ಮಾಹಿತಿ ಪ್ರಕಾರ ಶೇಕಡಾ 94 ರಷ್ಟು ಮಂದಿ ಇಂತಹ ಕಾರ್ಡ್ನ್ನು ಹೊಂದಿಲ್ಲ ಅಂತಲೇ ಹೇಳಲಾಗುತ್ತಿದೆ. ಅಲ್ಲದೇ ಶೇಕಡಾ 60ರಷ್ಟು ಮಂದಿಗೆ ಈ ಯೋಜನೆಯನ್ನು ಪಡೆಯುವುದು ಹೇಗೆ ಎಂದೇ ತಿಳಿಯದಾಗಿರುವುದು ಯೋಜನೆಯ ಮಾಹಿತಿ ಸಮರ್ಪಕವಾಗಿ ತಿಳಿಯದಿರುವುದೇ ಕಾರಣ ಎನ್ನಬಹುದು.
ಶೇಕಡಾ 40ರಷ್ಟು ಮಂದಿ ವಲಸೆ ಕಾರ್ಮಿಕರು ಈಗಾಗಲೇ ಆಹಾರ ಸಾಮಗ್ರಿ ಇಲ್ಲದೇ ಕಂಗಾಲಾಗಿದ್ದಾರೆ. ಉಳಿದ ವಲಸೆ ಕಾರ್ಮಿಕರ ಸಂಗ್ರಹವೂ ಮುಂದಿನ ಎರಡರಿಂದ ನಾಲ್ಕು ವಾರಗಳಿಗಷ್ಟೇ ಸಾಕಾದೀತು ಅನ್ನೋದನ್ನ ಜಾನ್ ಸಹಾಸ್ ಅಭ್ಯಸಿಸಿದೆ. ಲಾಕ್ಡೌನ್ ಮುಂದುವರೆದಲ್ಲಿ ಈ ಕಾರ್ಮಿಕರ ಸ್ಥಿತಿ ಇನ್ನಷ್ಟು ಹದಗೆಡಲಿದೆ.
ಆದ್ದರಿಂದ ವಲಸೆ ಹಾಗೂ ದಿನಗೂಲಿ ಕಾರ್ಮಿಕರ ಸಂಕಷ್ಟಗಳಿಗೆ ಅಗತ್ಯವಾಗಿ ಕೇಂದ್ರ ಹಾಗೂ ಆಯಾಯ ರಾಜ್ಯ ಸರಕಾರಗಳು ಸ್ಪಂದಿಸಬೇಕಿದೆ. ಈಗಾಗಲೇ ಬಿಡುಗಡೆಗೊಳಿಸಲಾದ ಯೋಜನೆಗಳು, ಹಣಕಾಸು ಪರಿಹಾರಗಳು ಹಾಗೂ ಪಡಿತರಗಳು ಕಾರ್ಮಿಕ ವರ್ಗವನ್ನ ಸೂಕ್ತ ಸಮಯದಲ್ಲಿ ತಲುಪಬೇಕಿದೆ. ಭವಿಷ್ಯದಲ್ಲಿ ಕರೋನಾ ತಂದಿಡಲಿರುವ ಆತಂಕಗಳಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದವರು ಶತಪ್ರಯತ್ನಕ್ಕೆ ಇಳಿಯಬೇಕಿದೆ. ಇಲ್ಲದೇ ಹೋದಲ್ಲಿ ಕರೋನೋತ್ತರ ಸಂದಿಗ್ಧತೆಯಲ್ಲಿ ಈ ಬಡಪಾಯಿ ಕಾರ್ಮಿಕರು ಬಲಿಪಶುಗಳಾಗುವುದರಲ್ಲಿ ಸಂಶಯವಿಲ್ಲ.