ಕರೋನಾ ಮಹಾಮಾರಿ ತಡೆಗೆ ದೇಶವನ್ನು 21 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಮಾಡಿದ್ದಾರೆ. ಮಾರ್ಚ್ 24ರಿಂದ ಶುರುವಾಗಿರುವ ಲಾಕ್ಡೌನ್ ಏಪ್ರಿಲ್ 14ಕ್ಕೆ ಮುಕ್ತಾಯವಾಗಲಿದೆ. ಆದರೆ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಹೆಗಲಿಗೆ ಹೆಗಲು ಕೊಟ್ಟು ಹೋರಾಡೋಣ ಎನ್ನುವ ಸಂದೇಶ ಕೊಟ್ಟಿದ್ದಾರೆ. ಇನ್ನೂ ಲಾಕ್ ವಿಸ್ತರಣೆ ಬಗ್ಗೆ ಇಂದೇ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ. ಈ ನಡುವೆ 21 ದಿನಗಳ ಕಾಲ ಸಮಯ ವ್ಯರ್ಥವಾದರೆ ಪರೀಕ್ಷೆಗಳ ಸಮಯ ಏರುಪೇರಾಗಿ ಶೈಕ್ಷಣಿಕ ವರ್ಷಕ್ಕೆ ಸಮಸ್ಯೆ ಆಗಲಿದೆ ಎನ್ನುವ ಆತಂಕದಿಂದ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಶಿಕ್ಷಣದ ಮೊರೆ ಹೋಗಿವೆ. ಭಾರತ ಒಕ್ಕೂಟಗಳ ದೇಶ. ಅದರೊಳಗೆ ಹಳ್ಳಿಗಳೇ ಪ್ರಮುಖವಾಗಿರುವ ರಾಷ್ಟ್ರದಲ್ಲಿ ಆನ್ಲೈನ್ ಶಿಕ್ಷಣಕ್ಕೆ ಸಾಕಷ್ಟು ಸವಾಲುಗಳು ಎದುರಾಗಿವೆ. ಶಿಕ್ಷಣ ಸಂಸ್ಥೆಗಳ ದೂರದರ್ಶಿತ್ವಕ್ಕೆ ಹಿಂದುಳಿದ ತಂತ್ರಜ್ಞಾನ ಪೆಟ್ಟು ಕೊಡುತ್ತಿದೆ.
ರಾಜ್ಯದ ಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲೂ ಆನ್ಲೈನ್ ತರಗತಿಗಳನ್ನು ಶುರು ಮಾಡಲಾಗಿದೆ. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ಹೇಳುವಂತೆ ದೇಶದಲ್ಲಿ ಲಾಕ್ಡೌನ್ ಪರಿಸ್ಥಿತಿ ಉದ್ಬವ ಆಗಿರುವ ಕಾರಣ ಆನ್ಲೈನ್ ಕ್ಲಾಸ್ಗಳ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಮಕ್ಕಳಿಗೆ ಶೈಕ್ಷಣಿಕ ಜೀವನಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಪಿಪಿಟಿ (Power Point Tutorial) ಸಿದ್ಧ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕಳಿಸುತ್ತೇವೆ. ಆ ಬಳಿಕ ಆನ್ಲೈನ್ನಲ್ಲಿ ಮಕ್ಕಳ ಜೊತೆ ಒಟ್ಟಿಗೆ ಪಾಠವನ್ನು ವಿವರಿಸಿಕೊಂಡು ಸಾಗುತ್ತೇವೆ ಎನ್ನುತ್ತಾರೆ.
ಆನ್ಲೈನ್ ಪಾಠದ ಸವಾಲುಗಳು!
ನಾವು ಕಾಲೇಜುಗಳಲ್ಲಿ ಬೋರ್ಡ್ ಮೇಲೆ ಬರೆಯುತ್ತಾ, ನಿಧಾನವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸುತ್ತೇವೆ. ಆದರೆ ಆನ್ಲೈನ್ನಲ್ಲಿ ಮೊದಲೇ ಸ್ಟಡಿ ಮೆಟಿರೀಯಲ್ ಕಳಹಿಸಿ ಆ ಬಳಿಕ ಪಾಠ ಮಾಡುತ್ತೇವೆ. ನಮ್ಮ ವಿವರಣೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲದಿದ್ದರೂ ಸ್ಲೈಡ್ಗಳನ್ನು ನೋಡಿಕೊಂಡು ವಿದ್ಯಾರ್ಥಿಗಳು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದು ನಮಗೆ ಸವಾಲಿನ ಕೆಲಸವಾಗಿದೆ. ಗೂಗಲ್ ಕ್ಲಾಸ್ ಆ್ಯಪ್ ಮೂಲಕ ಸ್ಟಡಿ ಮೆಟಿರೀಲ್, ಸಂಬಂಧಪಟ್ಟ ವಿಡಿಯೋಗಳನ್ನು ಕಳುಹಿಸುತ್ತೇವೆ. ಆದರೆ ನೇರಾನೇರಾ ಕಾಲೇಜಿನಲ್ಲಿ ಕುಳಿತು ಕೇಳುವ ರೀತಿ ಆನ್ಲೈನ್ ಪಾಠದಲ್ಲಿ ನಿರೀಕ್ಷೆ ಮಾಡುವುದು ಕಷ್ಟ ಎನ್ನುತ್ತಾರೆ. ಕಾಲೇಜುನಲ್ಲಿ ಪಾಠ ಕೇಳಿದಷ್ಟು ಪರಿಣಾಮಕಾರಿ ಆಗಿರಲ್ಲ ಆನ್ಲೈನ್ ತರಗತಿ. ಅದರಲ್ಲೂ ನೆಟ್ವರ್ಕ್ ಸಮಸ್ಯೆ ಆದರೆ ಮಧ್ಯೆ ಮಧ್ಯೆ ಸಂಪರ್ಕ ಕಡಿತ ಉಂಟಾಗುತ್ತದೆ. ನೇರವಾಗಿ ಸಂಹವನ ಮಾಡುವುದಕ್ಕೆ ಸಾಧ್ಯವಾದರೂ ತರಗತಿಯಲ್ಲಿ ಕೇಳುವ ರೀತಿಯಲ್ಲಿ ಮಕ್ಕಳು ಪ್ರಶ್ನೆಗಳನ್ನು ಕೇಳುವುದಿಲ್ಲ. ಎಲ್ಲದಕ್ಕೂ ಅರ್ಥವಾಯ್ತು ಎನ್ನುವ ಉತ್ತರ ಕೊಡುತ್ತಾರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ನವೀನ್ ಕುಮಾರ್.
ಶ್ರವಣಬೆಳಗೊಳದ ಬಾಹುಬಲಿ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲೂ ಆನ್ಲೈನ್ ತರಗತಿಗಳು ಶುರುವಾಗಿದೆ. ಅಸೋಸಿಯೇಟ್ ಪ್ರೊಫೆಸರ್ ಹಾಗೂ ಮಾಹಿತಿ ತಂತ್ರಜ್ಞಾನ (IS) ವಿಭಾಗದ ಮುಖ್ಯಸ್ಥರಾದ ಯಶೋಧ ಅವರು ಹೇಳುವ ಪ್ರಕಾರ ಆನ್ಲೈನ್ ತರಗತಿಗಳು ವಿದ್ಯಾರ್ಥಿಗಳು ಲಾಕ್ಡೌನ್ ಸಮಯದಲ್ಲಿ ಮಾನಸಿಕವಾಗಿ ಕುಗ್ಗದಂತೆ ಮಾಡಲು ಸಹಕಾರಿ ಆಗಿವೆ. ವಿದ್ಯಾರ್ಥಿಗಳ ಜೊತೆಗೆ ನಾವೂ ಕೂಡ ಕರೋನಾ ಸಂಕಷ್ಟದ ಸಮಯವನ್ನು ಎಂದಿನಂತೆಯೇ ಕಳೆಯಲು ಆನ್ಲೈನ್ ತರಗತಿಗಳು ಅನುಕೂಲ. ಲಾಕ್ಡೌನ್ಗೂ ಮೊದಲು 1 ವಾರ ಮಾತ್ರ ರಜೆ ಎಂದುಕೊಂಡು ಸುಮ್ಮನಾಗಿದ್ದೆವು. ಆದರೆ 21 ದಿನಗಳ ಕಾಲ ಲಾಕ್ಡೌನ್ ಆಗಿದ್ದರಿಂದ ವಿದ್ಯಾರ್ಥಿಗಳ ಓದಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ನಾವು ಮೊದಲು ತಯಾರಾಗಿ ಆ ಬಳಿಕ ಆನ್ಲೈನ್ ತರಗತಿ ಶುರು ಮಾಡಿದ್ದೆವು ಎನ್ನುತ್ತಾರೆ.
ಇನ್ನು ಕ್ಲಾಸ್ ಚೆನ್ನಾಗಿ ನಡೆಯುತ್ತಿದೆ. ಮಕ್ಕಳು ಕೂಡ ಆಸಕ್ತಿಯಿಂದಲೇ ಆನ್ ತರಗತಿಗೆ ಸೇರ್ಪಡೆ ಆಗ್ತಿದ್ದಾರೆ. ಆದರೆ ನಾವು ಪಾಠ ಮಾಡುವುದು ಎಷ್ಟರ ಮಟ್ಟಿಗೆ ಅವರಿಗೆ ಅರ್ಥ ಆಗುತ್ತಿದೆ ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ. ಕಾಲೇಜಿನಲ್ಲಿ ಆಗಿದ್ದರೆ, ನೇರವಾಗಿ ಅವರ ಹಾವಭಾವ ಸೇರಿದಂತೆ ವರ್ತನೆಯಲ್ಲೇ ಅರ್ಥವಾಗುತ್ತಿತ್ತು. ಇದೀಗ ಆನ್ಲೈನ್ ತರಗತಿಯಲ್ಲಿ ಅದು ಸಾಧ್ಯವಾಗ್ತಿಲ್ಲ. ಒಂದು ಗಂಟೆ ತರಗತಿ ತೆಗೆದುಕೊಳ್ಳಲು ನಾವು ಮೂರ್ನಾಲ್ಕು ಗಂಟೆ ತಯಾರಿ ನಡೆಸುವ ಅಗತ್ಯವಿದೆ. ಮನೆಯಲ್ಲೇ ಇರುವುದರಿಂದ ನಾವು ಕೂಡ ಸಂಪೂರ್ಣ ತಯಾರಿಯೊಂದಿಗೆ ಪಾಠ ಮಾಡುತ್ತಿದ್ದೇವೆ. ಲಾಕ್ಡೌನ್ ಸಮಯದಲ್ಲಿ ರಜೆ ಸಿಕ್ಕಿದೆ ಎನ್ನುವ ಮಾತ್ರಕ್ಕೆ ಮಕ್ಕಳು ಓದುವುದನ್ನು ನಿಲ್ಲಿಸದಂತೆ ಮಾಡಲು ಆನ್ಲೈನ್ ತರಗತಿಗಳು ಅನುಕೂಲಕರ. ಇದರಿಂದ ಪಾಠವನ್ನು ನೆನಪಿನಲ್ಲಿ ಉಳಿಸಿಕೊಳ್ಳುತ್ತಾರೆ. ಆದರೆ ಕೆಲವೊಂದು ತರಗತಿಗಳಿಗೆ ಆನ್ಲೈನ್ ತರಗತಿಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ ಎನ್ನುತ್ತಾರೆ.
ವಿದ್ಯಾರ್ಥಿಗಳು ಏನಂತಾರೆ..?
ನಾವು ಮೊಬೈಲ್ನಲ್ಲಿ ಕಡಿಮೆ ಪ್ರಮಾಣದ ಇಂಟರ್ನೆಟ್ ಹಾಕಿಸಿಕೊಂಡು ಇರುತ್ತೇವೆ. ಆದರೆ ಲ್ಯಾಪ್ಟಾಪ್ಗೆ ಇಂಟರ್ನೆಟ್ ಕನೆಕ್ಟ್ ಮಾಡುತ್ತಿದ್ದರೆ, ತರಗತಿಗೆ ಸಾಕಾಗುವುದಿಲ್ಲ. ಜೊತೆಗೆ ಹಳ್ಳಿಪ್ರದೇಶ ಆಗಿರುವುದರಿಂದ ವಿದ್ಯುತ್ ಕೂಡ ಆಗಾಗ ಕೈಕೊಡುತ್ತದೆ. ಮನೆಯಲ್ಲೇ ಇರುವುದರಿಂದ ಸ್ವಲ್ಪ ಗದ್ದಲ, ಗಲಾಟೆ ಸಾಮಾನ್ಯ. ಮೊಬೈಲ್ನಲ್ಲೇ ನೋಡುತ್ತಾ ಪಾಠ ಕೇಳುವುದರಿಂದ ಹಾಗಾಗ ಕಣ್ಣು ನೋವು, ತಲೆ ನೋವು ಬರುತ್ತಿದೆ. ಒಟ್ಟಾರೆ ಕಾಲೇಜಿನಲ್ಲಿ ಪಾಠ ಕೇಳಿದಷ್ಟು ಹಿತ ಎನಿಸುವುದಿಲ್ಲ – ಹರ್ಷಿತಾ, ಎಸ್.ಎಂ ಕಂಪ್ಯೂಟರ್ ಸೈನ್ಸ್ ವಿಭಾಗ, ಬಾಹುಬಲಿ ಕಾಲೇಜ್ ಆಫ್ ಎಂಜಿನಿಯರಿಂಗ್, ಶ್ರವಣಬೆಳಗೊಳ
ನೆಟ್ವರ್ಕ್ ಸಮಸ್ಯೆ ಆಗುತ್ತಿದೆ. ಲಾಕ್ಡೌನ್ ಆಗಿರುವುದರಿಂದ ಎಲ್ಲರೂ ಮನೆಯಲ್ಲೇ ಇರುವುದರಿಂದ ಸ್ವಲ್ಪ ಮನೆಯಲ್ಲಿ ಜಾಸ್ತಿ ಜನ ಇರುತ್ತಾರೆ. ಇನ್ನೂ ಕಾಲೇಜು ಟೈಮಲ್ಲಿ ಪಾಠ ಕೇಳಿದಂತೆ ಆಗುವುದಿಲ್ಲ. ಲೆಕ್ಷರ್ ಬಳಿ ನಾವೇನಾದರೂ ಸಮಸ್ಯೆ ಹೇಳಿಕೊಂಡರೆ ಸರಿಯಾಗಿ ಕಮ್ಯುನಿಕೇಷನ್ ಆಗುವುದಿಲ್ಲ. ಕೆಲವೊಮ್ಮೆ ನೆಟ್ವರ್ಕ್ ಕಡಿತ ಆಗುತ್ತದೆ. ಕಾನ್ವರ್ಜೇಷನ್ ಕಷ್ಟ ಆಗುತ್ತೆ. ಕ್ಲಾಸ್ ಮುಗಿದ ಬಳಿಕ ಮೊಬೈಲ್ನಲ್ಲಿ ಗೊಂದಲ ಬಗೆಹರಿಸಿಕೊಳ್ತೇವೆ – ಯಶವಂತಿ, ದ್ವಿತೀಯ ಎಂಎಸ್ಸಿ, ಎಸ್ಡಿಎಂ ಕಾಲೇಜು ಉಜಿರೆ
ಒಟ್ಟಾರೆ ಶಿಕ್ಷಣ ಸಂಸ್ಥೆಗಳ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಯಾಕೆಂದರೆ ವಿದ್ಯಾರ್ಥಿಗಳನ್ನು ಲಾಕ್ಡೌನ್ ಸಮಯದಲ್ಲಿ ಸುಮ್ಮನೆ ಬಿಟ್ಟರೆ, ರಜೆ ಮಜೆಯಲ್ಲಿ ಪಾಠಗಳನ್ನು ಸಂಪೂರ್ಣವಾಗಿ ಮರೆತು ಫಲಿತಾಂಶದಲ್ಲಿ ಪ್ರತಿಫಲಿಸುತ್ತದೆ. ಕಾಲೇಜಿನಲ್ಲಿ ಫಲಿತಾಂಶ ಕಡಿಮೆಯಾಯ್ತು ಎನ್ನುವುದಕ್ಕಿಂತ ಶಿಕ್ಷಣದ ಮಹತ್ವ ತಿಳಿಯದ ಮಕ್ಕಳು ಭವಿಷ್ಯದಲ್ಲಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಆದರೆ ಆನ್ಲೈನ್ ತರಗತಿಗಳಲ್ಲಿ ಎಷ್ಟು ಪ್ರಯೋಜನಕಾರಿ ಆಗುತ್ತೋ ಇಲ್ಲವೋ ಆದರೆ ಮಕ್ಕಳು ಪಠ್ಯದ ಕಡೆಗೆ ಗಮನಹರಿಸುವಂತೆ ಮಾಡಲು ಸಹಕಾರಿಯಾಗಿದೆ. ಲಾಕ್ಡೌನ್ ವಿಸ್ತರಣೆ ಆದಲ್ಲಿ ಶಿಕ್ಷಣ ಸಂಸ್ಥೆಗಳು ಆನ್ಲೈನ್ ತರಗತಿಗಳ ಮೂಲಕವೇ ಶೈಕ್ಷಣಿಕ ವರ್ಷ ಪೂರೈಸಿ, ಕಾಲೇಜುಗಳು ಆರಂಭವಾದ ಬಳಿಕ ಮತ್ತೊಮ್ಮೆ ಪಾಠವನ್ನು ಪುನರಾವರ್ತನೆ ಮಾಡುವುದು, ಪ್ರಯೋಗಾಲಯಲ್ಲಿ ಸಮಸ್ಯೆ ಬಿಡಿಸುವುದು, ನಂತರ ಪರೀಕ್ಷೆ ಮಾಡಲು ತಯಾರಿ ನಡೆಸುತ್ತಿವೆ.
ಸರ್ಕಾರಿ ಕಾಲೇಜುಗಳಲ್ಲಿ ಈ ರೀತಿಯ ಪಾಠಗಳು ಇನ್ನೂ ಶುರುವಾಗಿಲ್ಲ. ಮಾನ್ಯ ಶಿಕ್ಷಣ ಸಚಿವರು ಎಸ್ಎಸ್ಎಲ್ಸಿ ಮೇಲ್ಪಟ್ಟ ತರಗತಿಗಳಿಗೆ ಆನ್ಲೈನ್ ಶಿಕ್ಷಣ ಆರಂಭ ಮಾಡಿದರೆ, ಶೈಕ್ಷಣಿಕ ವರ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಇಲ್ಲದಿದ್ದಲ್ಲಿ ಮುಂದಿನ ವರ್ಷದ ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶ ಹಳ್ಳಹಿಡಿಯಲಿದೆ ಎನ್ನುತ್ತಾರೆ ಶಿಕ್ಷಣ ತಜ್ಞರು. ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಕಾಲೇಜು ಸಮಯದಲ್ಲೇ ಪಾಠ ಮಾಡಲು ಮುಂದಾಗುವ ಬದಲು ಮಕ್ಕಳಿಗೆ ಅನುಕೂಲ ಆಗುವಂತೆ ಬೆಳಗ್ಗೆ ಒಂದು ತರಗತಿ ಹಾಗು ಸಂಜೆ ವೇಳೆ ಹೆಚ್ಚಿನ ತರಗತಿ ನಡೆಸಿದರೆ ಬೇಸಿಗೆ ಬೇಗೆಯಲ್ಲಿ ಬೇಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಇನ್ನು ಲಾಕ್ಡೌನ್ನಿಂದಾಗಿ ಎಲ್ಲರೂ ಇಂಟರ್ನೆಟ್ ಬಳಕೆ ಮಾಡುತ್ತಿರುವುದರಿಂದ ಇಂಟರ್ನೆಟ್ ಸೇವಾ ಸಂಸ್ಥೆಗಳ ಮೇಲೆ ಒತ್ತಡ ಅಧಿಕವಾಗಿದೆ. ಆದರೂ ಈಗಿನ ಸಮಸ್ಯೆಯನ್ನು ಅರ್ಥಮಾಡಿಕೊಂಡು ವೇಗದ ಇಂಟರ್ನೆಟ್ ಸೌಲಭ್ಯ ಒದಗಿಸುವಂತೆ ಹಾಗೂ ಪೂರಕ ವಿದ್ಯುತ್ ಸೌಲಭ್ಯ ಸಿಗುವಂತೆ ಮಾಡಲು ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.