ಇಡೀ ಜಗತ್ತಿಗೆ ಜಗತ್ತೇ ಕರೋನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೆ, ಪಾಕಿಸ್ತಾನದ ಮಾತ್ರ ವಿರುದ್ಧ ದಿಕ್ಕಿಗೆ ಈಜಿ ದಡ ಸೇರುವ ಮೂರ್ಖ ಪ್ರಯತ್ನಕ್ಕೆ ಇಳಿದಿದೆ. ಅದ್ಯಾವಾಗ ಭಾರತ ವಿಭಜನೆಯಾಗಿ ಪಾಕಿಸ್ತಾನ ಪ್ರತ್ಯೇಕಗೊಂಡಿತೋ ಅಂದಿನಿಂದ ಇಂದಿನವರೆಗೂ ಭಯೋತ್ಪಾದನೆ, ಮತಾಂಧತೆ ಅಲ್ಲಿ ತಾಂಡವವಾಡುತ್ತಿದೆ. ಇಸ್ಲಾಮ್ ಹೆಸರಲ್ಲಿ ಅವರು ಎಸಗುವ ಧರ್ಮಾಂಧ ಚಟುವಟಿಕೆಗಳು ಇನ್ನಿತರ ದೇಶಗಳಿಗೂ ಮಾರಕವಾಗುತ್ತಲೇ ಇದೆ. ಇದೀಗ ಕರೋನಾ ವೈರಸ್ ವಿರುದ್ಧ ಹುಚ್ಚಾಟ ನಡೆಸಲು ಹೋಗಿ ಪಾಕಿಸ್ತಾನ ತನ್ನ ಬಲಿಯನ್ನ ತಾನೇ ಪಡೆದುಕೊಳ್ಳಲು ಮುಂದಾಗಿದೆ. ದುರಂತ ಅಂದ್ರೆ ಇತ್ತ ಭಾರತದಲ್ಲಿ ಕರೋನಾ ಸೋಂಕಿಗೆ ಇಸ್ಲಾಮಿನ ಹೆಸರನ್ನ ಬಳಸಿಕೊಂಡು ಮಾಧ್ಯಮಗಳು ದಾಳಿ ನಡೆಸುತ್ತಿದ್ದರೆ, ಅತ್ತ ಪಾಕಿಸ್ತಾನ ಅದೇ ಇಸ್ಲಾಮಿನ ಹೆಸರಿನಲ್ಲಿ ತನ್ನ ದೇಶಕ್ಕೆ ತಾನೇ ಮರಣ ಶಾಸನವನ್ನ ಬರೆಯಲು ಮುಂದಾಗಿದೆ. ದುರಂತ ಅಂದ್ರೆ ಈ ಮಾರಣಹೋಮ ಏನಾದರೂ ನಡೆದು ಹೋದರೆ ಅದಕ್ಕೆ ಬೇರಾರೂ ಕಾರಣವೂ ಅಲ್ಲ, ಬದಲಾಗಿ ಆ ದೇಶದಲ್ಲಿರುವ ಅದಕ್ಷತೆ, ಅನಕ್ಷರತೆ ಮತ್ತು ಧರ್ಮಾಂಧತೆಯೇ ಕಾರಣವಾಗಿ ಬಿಡುತ್ತದೆ.
ಲಾಕ್ಡೌನ್ ಆ ದೇಶದಲ್ಲಿಯೂ ಭಾರತದಂತೆ ಜಾರಿಯಲ್ಲಿದೆ. ಆದರೆ ಹೆಸರಿಗಷ್ಟೇ. ಲಾಕ್ಡೌನ್ ಮಧ್ಯೆಯೂ ಅವರ ಜನಜೀವನ ಸಹಜ ಸ್ಥಿತಿಯಲ್ಲಿರಲು ಇಚ್ಛಿಸೋದಾದರೆ, ಆ ದೇಶಕ್ಕೆ ಲಾಕ್ಡೌನ್ ಅನ್ನೋದಾದರೂ ಯಾಕೆ ಅನ್ನೋ ಪ್ರಶ್ನೆ ಎದುರಾಗಿ ಬಿಡುತ್ತದೆ.
ಅಚ್ಚರಿ ಅಂದ್ರೆ ಇಸ್ಲಾಮ್ ದೇಶಗಳಲ್ಲೇ ಅತೀ ಉನ್ನತ ಸ್ಥಾನದಲ್ಲಿರುವ ಸೌದಿ ಅರೇಬಿಯಾವೇ ತನ್ನೆಲ್ಲ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ತಡೆದಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಂಝಾನ್ ತಿಂಗಳ ವಿಶೇಷ ನಮಾಝ್, ಇಫ್ತಾರ್ಗಳನ್ನೂ ರದ್ದುಪಡಿಸಿದೆ. ಮಾತ್ರವಲ್ಲದೇ ಮುಂದಿನ ಹಜ್ಜ್ ಯಾತ್ರೆಯನ್ನ ಕೈ ಬಿಡುವ ಬಗ್ಗೆಯೂ ಆಲೋಚನೆಗೆ ಮುಂದಾಗಿದೆ. ಆದರೆ ಇದ್ಯಾವುದನ್ನೂ ಅನುಸರಿಸದ ಪಾಕಿಸ್ತಾನ ತಾನು ನಡೆದಿದ್ದೇ ದಾರಿ ಅನ್ನೋ ಹಾಗೆ ಹೆಜ್ಜೆಯಿರಿಸಿ ಪಾತಾಳ ಸೇರುವ ಕನಸು ಕಾಣುತ್ತಿದೆ. ಈ ಕನಸಿನ ನೇತೃತ್ವವನ್ನ ನನಸು ಮಾಡಲೆಂದೇ ಅಲ್ಲಿನ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರೇ ವಹಿಸಲಿರುವುದು ಇನ್ನೊಂದು ಇಂಟರೆಸ್ಟಿಂಗ್ ಸಂಗತಿ.
ಅಷ್ಟಕ್ಕೂ ಪಾಕಿಸ್ತಾನದಲ್ಲಿ ಸದ್ಯ 8 ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 190ರಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹೀಗಿದ್ದರೂ ಈ ದೇಶ ಕರೋನಾ ವಿರುದ್ಧವೂ ತನ್ನ ಹುಚ್ಚಾಟ ನಿಲ್ಲಿಸಿಲ್ಲ. ಆತ್ಮಾಹುತಿ ದಾಳಿ ಮಾದರಿಯಲ್ಲಿ ತಾನೊಬ್ಬ ಮಾತ್ರವಲ್ಲದೇ ಇಡೀ ಕುಟಂಬವನ್ನೇ ಈ ಪಾಕಿಸ್ತಾನಿಯರು ಬಲಿ ಪಡೆಯಲು ಮುಂದಾಗಿದ್ದಾರೆ. ಧರ್ಮಾಂಧತೆ ತುಂಬಿದ ಪುರುಷರ ಮಾಡುವ ಅತಿರೇಕಕ್ಕೆ ಮಹಿಳೆಯರು, ಅಮಾಯಕ ಮಕ್ಕಳು ಬಲಿಯಾಗುವ ಆತಂಕ ಎದುರಾಗಿದೆ.
ಈಗಾಗಲೇ ಪಾಕಿಸ್ತಾನದಲ್ಲಿ ಕರೋನಾ ಸೋಂಕಿನ ವಿರುದ್ಧ ಹೋರಾಟ ಮಾಡುವ ವೈದ್ಯರೇ ದಂಡೇ ಇದೆ. ಆದರೆ ಅವರ್ಯಾರಿಗೂ ಸಮರ್ಪಕವಾದ ಪಿಪಿಇ ಗಳ ಪೂರೈಕೆಯಾಗಿಲ್ಲ. ಅದರಿಂದ ಅಲ್ಲಿನ ವೈದ್ಯರು ಇದನ್ನ ಪ್ರತಿಭಟಿಸಿ ಅಲ್ಲಿನ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದರು. ಅದಲ್ಲದೇ ಯುವ ವೈದ್ಯನೊಬ್ಬನು ಕರೋನಾ ಸೋಂಕಿಗೆ ಬಲಿಯಾದ ಘಟನೆಯೂ ಆ ದೇಶದಲ್ಲಿ ನಡೆದಿತ್ತು. ಸದ್ಯ ಪಾಕಿಸ್ತಾನದ ಪತ್ರಕರ್ತರೂ ಸುರಕ್ಷತಾ ಸಾಧನಗಳ ಕೊರತೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಅಲ್ಲಿನ ಕೆಲವು ಕಂಪೆನಿಗಳು ಚಟುವಟಿಕೆಗಳಿಗಾಗಿ ತೆರೆದುಕೊಂಡಿದ್ದಾವೆ.
ಇದೆಲ್ಲಕ್ಕೂ ಮಿಕ್ಕಿ ಪಾಕಿಸ್ತಾನ ಶುಕ್ರವಾರದ ಸಾಮೂಹಿಕ ನಮಾಝ್ ಗೆ ಅವಕಾಶ ನೀಡಿದೆ. ಮಸೀದಿ ಹೊರಗಡೆ ಗುಂಪುಗೂಡದಂತೆ ಪೊಲೀಸರು ಕಾವಲು ನಿಂತರೆ ಕಳೆದ ಶುಕ್ರವಾರ ಅದೆಲ್ಲವ ಮೀರಿ ಒಳಗಡೆ ಸಾಮೂಹಿಕ ಪ್ರಾರ್ಥನೆಗೆ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಇನ್ನು ಪಾಕಿಸ್ತಾನದ ರಾವಲ್ಪಿಂಡಿ ಮಸೀದಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಶುಕ್ರವಾರದ ಸಾಮೂಹಿಕ ನಮಾಝ್ ನಿರ್ವಹಿಸಲಾಯಿತು.
ಪಾಕ್ ರಾಜಧಾನಿ ಇಸ್ಲಾಮಾಬಾದ್ ನ ಮಸೀದಿಯೊಂದರಲ್ಲಂತೂ ಸಾವಿರ ಸಂಖ್ಯೆಯಲ್ಲಿ ಜನ ಸೇರಿದ್ದರು. ಯಾವುದೇ ಅಂತರವೂ ಇಲ್ಲ, ಸೋಂಕಿನ ಭೀತಿಯೂ ಇಲ್ಲ ಅನ್ನುವಂತಿತ್ತು ಅವರ ವರ್ತನೆಗಳು. ಇದಕ್ಕೆ ಪೂರಕವೆನ್ನುವಂತೆ ಅಲ್ಲಿನ ಧಾರ್ಮಿಕ ಮುಖಂಡರು ನೀಡುವ ಬೋಧನೆಗಳು ಇನ್ನೂ ವಿಚಿತ್ರವಾದದ್ದು. “ಲಾಕ್ಡೌನ್ ನಿಂದ ಯಾವುದೇ ಸಮಸ್ಯೆ ಪರಿಹಾರವಾಗದು, ಒಂದು ವೇಳೆ ಸಾವು ನಮ್ಮ ಹಣೆಯಲ್ಲಿ ಬರೆದಿದ್ದರೆ ಅದು ಬಂದೇ ಬರುತ್ತದೆ. ಹಾಗಾಗಿ ನಾವು ದೇವರಲ್ಲಿ ಭಯವಿಡಬೇಕು. ವೈದ್ಯರ ಅಭಿಪ್ರಾಯ ಅನ್ನೋದು ದೇವರ ಅಭಿಪ್ರಾಯವಲ್ಲ. ಆದರೆ ನಮ್ಮ ಪ್ರಕಾರ ಇದು ದೇವರು ನೀಡಿದ ಪರೀಕ್ಷೆಯಾಗಿದೆ” ಅನ್ನೋದು ಅಬ್ದುಲ್ ಅಝೀಝ್ ಎನ್ನುವ ಧಾರ್ಮಿಕ ವಿದ್ವಾಂಸನ ಅಭಿಪ್ರಾಯ.
Also Read: ಅಲ್ಲಾಹನೇ ಬಂದು ಗುಣಪಡಿಸುತ್ತಾನೆ ಅನ್ನೋ ಭ್ರಮೆಯಲ್ಲಿದೆಯೇ ʼಮುಸ್ಲಿಂ ಸಮುದಾಯʼ!?
ಇಂತಹ ಅಭಿಪ್ರಾಯಗಳೇ ಆ ದೇಶದ ಜನರಲ್ಲಿ ಧರ್ಮಾಂಧತೆಯ ಬೀಜ ಬಿತ್ತಿದೆ. ಅದನ್ನೇ ʼಧರ್ಮʼ ಎಂದುಕೊಂಡವರು ಸಾಮೂಹಿಕ ನಮಾಝ್ ಗೆ ಆಗಮಿಸುತ್ತಿದ್ದಾರೆ. ಅತ್ತ ಇಸ್ಲಾಮಿನ ಪಕ್ಕಾ ಅನುಯಾಯಿಯಾಗಿರುವ ಸೌದಿ ಅರೇಬಿಯಾವೇ ಸಾಮೂಹಿಕ ಪ್ರಾರ್ಥನೆಯಿಂದ ದೂರ ನಿಲ್ಲುವಂತೆ ತನ್ನ ದೇಶದ ಜನತೆಗೆ ಕರೆಕೊಟ್ಟರೆ, ಪಾಕಿಸ್ತಾನ ಧರ್ಮದ ಹೆಸರಿನಲ್ಲಿ ಚೆಲ್ಲಾಟವಾಡುತ್ತಿದೆ.
ಪಾಕಿಸ್ತಾನದಲ್ಲಿ ಹೆಸರಿಗಷ್ಟೇ ಲಾಕ್ಡೌನ್ ಅನ್ನೋ ಹಾಗಾಗಿದೆ. ಮಸೀದಿ ಸಿಬ್ಬಂದಿಗಳು ಗರಿಷ್ಠ ಐದು ಜನರಿಗಿಂತ ಹೆಚ್ಚು ಮಂದಿ ನಮಾಝ್ ಮಾಡದಂತೆ ಅಲ್ಲಿನ ಸರಕಾರ ಆದೇಶವಿತ್ತಿದೆ. ಆದರೆ ಅದು ಕೇವಲ ಘೋಷಣೆಯಾಗಿ ಉಳಿದು, ವಿಶ್ವ ಆರೋಗ್ಯ ಸಂಸ್ಥೆಯ ಮುಂದೆ ಪ್ರದರ್ಶನಕ್ಕಷ್ಟೇ ಸೀಮಿತವಾಗಿದೆ. ವಾಸ್ತವದಲ್ಲಿ, ಪಾಕಿಸ್ತಾನ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ. ಶುಕ್ರವಾರದ ಜುಮಾ ಪ್ರಾರ್ಥನೆಗೆ ಜನ ಸೇರುತ್ತಿದ್ದಂತೆ ಹೊರಗಡೆ ಕಾವಲಿರುವ ಪೊಲೀಸರು ಅಸಹಾಯಕರಾಗಿ ಬಿಡುತ್ತಾರೆ.
ಕಳೆದ ಮಂಗಳವಾರ ಪಾಕಿಸ್ತಾನದ ಹತ್ತಾರು ಧಾರ್ಮಿಕ ಸಂಸ್ಥೆಗಳು ಮಸೀದಿಗಳನ್ನ ತೆರೆಯಲು ಅವಕಾಶ ನೀಡುವಂತೆ ಅಲ್ಲಿನ ಸರಕಾರಕ್ಕೆ ಅವಕಾಶ ಕೇಳಿದ್ದರು. ಕರೋನಾ ಸೋಂಕು ಹರಡದಂತೆ ಮಾಡಬಹುದಾದ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಅದು ಜಾರಿ ಬರುತ್ತಲೇ ಪಾಕಿಸ್ತಾನದ ಧಾರ್ಮಿಕ ವಿದ್ವಾಂಸರು ಹಾಗೂ ಅಲ್ಲಿಯ ಜನ ಅದರಿಂದ ವಿಮುಖರಾಗಿದ್ದಾರೆ.
ಹೀಗೆ ಸಾವಿರ ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೋಗುವ ಮಂದಿ ಕರೋನಾ ಸೋಂಕನ್ನ ಹರಡಿಸಿಕೊಂಡಲ್ಲಿ ಇಡೀ ಕುಟುಂಬವನ್ನೇ ಬಲಿ ಪಡೆಯುತ್ತಾನೆ. ಆದರೆ ಇದ್ಯಾವುದರ ಪರಿಜ್ಞಾನವೂ ಇಲ್ಲದೇ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆದ ಶುಕ್ರವಾರದ ಪ್ರಾರ್ಥನೆ ಮುಂದಿನ ಎರಡು ವಾರಗಳಲ್ಲಿ ಕೆಟ್ಟ ಪರಿಣಾಮ ಬೀರಿದರೂ ಅಚ್ಚರಿ ಪಡುವಂತದ್ದೇನಿಲ್ಲ. ಯಾಕೆಂದರೆ ಇದೇ ಇಸ್ಲಾಮಾಬಾದ್ವೊಂದರಲ್ಲೇ 180 ಕ್ಕೂ ಅಧಿಕ ಮಂದಿ ಕೋವಿಡ್-19 ಸೋಂಕಿತರಿದ್ದಾರೆ. ಅಲ್ಲದೇ 20ಸಾವಿರದಷ್ಟು ಜನ ತಬ್ಲೀಗಿಗಳು ಪಾಕಿಸ್ತಾನದಾದ್ಯಂತ ಕ್ವಾರೆಂಟೈನ್ನಲ್ಲಿದ್ದಾರೆ. ಹೀಗಿದ್ದರೂ ಹುಚ್ಚಾಟ ಬಿಡದ ಪಾಕಿಸ್ತಾನ ಧರ್ಮಾಂಧತೆಯ ಅಮಲಿನಲ್ಲಿ ಬಿದ್ದು ಮಾರಣಹೋಮವನ್ನೇ ತನ್ನ ಮನೆ ಬಾಗಿಲಿಗೆ ಕರೆದಂತಿದೆ.