ಕರೋನಾ ಸೋಂಕು ಬಹುತೇಕ ಕಂಗೆಡಿಸಿದ್ದೇ ಮಹಾನಗರಗಳನ್ನ. ಅದರಲ್ಲೂ ದೇಶದ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ, ಚೆನ್ನೈ, ಅಹ್ಮದಾಬಾದ್, ಹೈದರಾಬಾದ್ ಮುಂತಾದ ಪ್ರಮುಖ ನಗರಗಳೆಲ್ಲವೂ ಕರೋನಾ ಸೋಂಕಿನ ಏಟಿಗೆ ತತ್ತರಿಸಿ ಹೋಗಿದೆ. ಆದ್ರೆ ಉದ್ಯಾನ ನಗರಿ ಬೆಂಗಳೂರು ಮಾದರಿಯಾಗುವ ರೀತಿಯಲ್ಲಿ ಕರೋನಾ ನಿಯಂತ್ರಿಸಿಕೊಂಡಿದೆ.
ʼದಿ ಕ್ವಿಂಟ್ʼ ವರದಿಯನ್ವಯ ಬೆಂಗಳೂರು ಮಹಾನಗರದಲ್ಲಿ 1.2 ಕೋಟಿ ಜನರಿದ್ದಾರೆ. ಆದರೆ ಬೆಂಗಳೂರು ನಗರದಲ್ಲಿ 399 ಕರೋನಾ ಪ್ರಕರಣಗಳಷ್ಟೇ ದೃಢಪಟ್ಟಿವೆ. ಆದರೆ ಮುಂಬೈ, ಅಹ್ಮದಾಬಾದ್, ಚೆನ್ನೈ ಮುಂತಾದೆಡೆಗೆ ಹೋಲಿಸಿದರೆ ಬೆಂಗಳೂರು ಕರೋನಾ ನಿಯಂತ್ರಣದಲ್ಲಿ ಬಹುದೊಡ್ಡ ಸಾಧನೆಯನ್ನೇ ಮಾಡಿದೆ. ಬೆಂಗಳೂರಿನಲ್ಲಿ ಇದುವರೆಗೂ ದಾಖಲಾದ ಒಟ್ಟು ಪ್ರಕರಣಗಳಿಗಂತಲೂ ಎರಡು-ಮೂರು ಪಟ್ಟು ಹೆಚ್ಚು ಪ್ರಕರಣಗಳು ಮುಂಬೈ, ಚೆನ್ನೈ, ಅಹ್ಮದಾಬಾದ್ಗಳಲ್ಲಿ ದಾಖಲಾಗುತ್ತವೆ. ಈ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಭಾರತದಲ್ಲೇ ಜನರ ವಾಸಕ್ಕೆ “ಅಡ್ಡಿಯಿಲ್ಲ” ಅನ್ನೋ ಹಾಗಿದೆ ಎಂದರೂ ತಪ್ಪಾಗದು.

ಮುಂಬೈಯಲ್ಲಿ ಇದುವರೆಗೂ 42,216 ಪ್ರಕರಣ, ಚೆನ್ನೈನಲ್ಲಿ 16,575, ದೆಹಲಿಯಲ್ಲಿ 22,130 ಹೀಗೆ ಐದಂಕಿ ಲೆಕ್ಕದಲ್ಲಿ ಸೋಂಕು ದೃಢಪಟ್ಟಿದ್ದರೆ, ಅದೇ ಬೆಂಗಳೂರು ಮಹಾನಗರದಲ್ಲಿ 417ರಷ್ಟಿದ್ದು ಪ್ರಕರಣ, ಅದರಲ್ಲೂ 256 ಮಂದಿ ಗುಣಮುಖರಾದವರಾಗಿದ್ದಾರೆ. 149 ರಷ್ಟು ಮಂದಿ ಪ್ರಸ್ತುತ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ. ಆದರೆ ಇದೆಲ್ಲವೂ ಹೇಗೆ ಸಾಧ್ಯವಾಯಿತು ಅನ್ನೋದೆ ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ, ಯಾಕೆಂದರೆ ಮಾರ್ಚ್ ತಿಂಗಳಲ್ಲೇ ಮೊದಲ ಕರೋನಾ ಸೋಂಕು ಬೆಂಗಳೂರು ನಗರದಲ್ಲಿ ಪತ್ತೆಯಾಗಿತ್ತು. ಅದರೊಂದಿಗೆ ಮಾಲ್ ಹಾಗೂ ಥಿಯೇಟರ್ ಬಂದ್ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶವಿತ್ತಿದ್ದರು. ಆದರೆ ಆನಂತರದ ದಿನಗಳಲ್ಲಿ ದೇಶವ್ಯಾಪಿ ಲಾಕ್ಡೌನ್ ಜಾರಿಯಾದರೂ, ಬೆಂಗಳೂರು ಮಹಾನಗರದಲ್ಲಿ ವಾರಗಳ ಕಾಲವಷ್ಟೇ ಬಿಗಿಯಾಗಿದ್ದು, ಆನಂತರ ಅನುಮತಿ ಪಡೆದು ತಿರುಗಾಡುವ ವಾಹನಗಳ ಸಂಖ್ಯೆ ಕಡಿಮೆಯಿದ್ದಿರಲಿಲ್ಲ. ಆದರೂ ಬೆಂಗಳೂರು ʼಮಾದರಿʼ ರೂಪದಲ್ಲಿ ಕರೋನಾ ನಿಯಂತ್ರಣ ನಡೆಸಿದ್ದು ಹೇಗೆ?ಈ ಕುತೂಹಲ ಇನ್ನಿತರ ಸೋಂಕು ಬಾಧಿತ ಮಹಾನಗರಗಳನ್ನ ಕಾಡದೇ ಇರದು.
ಹಾಗಂತ ಬೆಂಗಳೂರು ನಗರವೊಂದರಲ್ಲಿ ನಿಯಂತ್ರಣ ಮಾಡದೇ ಹೋಗಿದ್ದಲ್ಲಿ ರಾಜ್ಯ ಸರಕಾರ ಪರದಾಡಬೇಕಾಗುತ್ತಿತ್ತು. ಏಕೆಂದರೆ ಇಂದಿಗೂ ಇದೇ ಮಹಾನಗರದಿಂದ ದಿನವೊಂದಕ್ಕೆ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರಿಗೆ ವಾಪಾಸ್ ಆಗುತ್ತಲೇ ಇದ್ದಾರೆ. ಆದರೆ ಆರಂಭಿಕ ಹಂತದಲ್ಲಿ ರಾಜ್ಯ ಸರಕಾರ ತೋರಿದ ಬುದ್ಧಿವಂತಿಕೆಯೇ ಬೆಂಗಳೂರು ನಗರದಲ್ಲಿ ಸೋಂಕು ಪರಿಣಾಮಕಾರಿ ಮಟ್ಟದಲ್ಲಿ ಕಡಿಮೆಗೊಂಡಿದೆ. ಸರಕಾರಿ ಅಧಿಕಾರಿಗಳ ಪ್ರಕಾರ ಸರಕಾರ ತೆಗೆದುಕೊಂಡ, “ಪತ್ತೆ ಹಚ್ಚುವಿಕೆ, ನಿಗಾವಿರಿಸುವಿಕೆ, ಪರೀಕ್ಷೆ ಮಾಡುವಿಕೆ ಹಾಗೂ ಚಿಕಿತ್ಸೆ ನೀಡುವಿಕೆ” ಈ ಪ್ರಯೋಗ ಹೆಚ್ಚಿನ ಯಶಸ್ವಿಯನ್ನ ತಂದುಕೊಟ್ಟಿದೆ ಎನ್ನುತ್ತಾರೆ. ಆದರೆ ಬಹುತೇಕ ಎಲ್ಲಾ ಮಹಾನಗರಗಳಲ್ಲೂ ಇಂತಹದ್ದೇ ಕ್ರಮಗಳನ್ನ ಅನುಸರಿಸಲಾಗಿದೆ. ಆದರೆ ಜಾರಿ ಮಾಡಿರುವ ರೀತಿಯಲ್ಲಿ ಮಾತ್ರ ವ್ಯತ್ಯಾಸಗಳಿವೆ ಅನ್ನೋದು ನಿಜ.
ಕರೋನಾ ಕರ್ನಾಟಕದಲ್ಲಿ ಅಧಿಕವಾಗುತ್ತಲೇ ರಾಜ್ಯ ಸರಕಾರದ ಒಳಗೆಯೇ ಒಂದಿಷ್ಟು ಸಮನ್ವಯತೆಯ ಕೊರತೆ ಕಂಡು ಬಂದರೂ, ಅಧಿಕಾರಿಗಳಿಗೆ ಯಾವುದೇ ಒತ್ತಡ ಹೇರಲಾಗಿರಲಿಲ್ಲ. ಮಾತ್ರವಲ್ಲದೇ ತಜ್ಞರ ಜೊತೆ ಸದಾ ಸಂಪರ್ಕದಲ್ಲಿದ್ದು ಆರೋಗ್ಯ ಸಚಿವಾಲಯವು ಮಾಡಬೇಕಾದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದೆ. ವೈದ್ಯಲೋಕದ ತಜ್ಞರು ನೀಡುತ್ತಿದ್ದ ಮಾರ್ಗದರ್ಶನವನ್ನು ಎಲ್ಲೂ ಮೀರುವ ಪ್ರಯತ್ನವನ್ನ ರಾಜ್ಯ ಸರಕಾರದ ಅಧಿಕಾರಿಗಳಾಗಲೀ, ಸಚಿವರಾಗಲೀ ಮಾಡಲಿಲ್ಲ.
ಈ ಕುರಿತು ʼದಿ ಕ್ವಿಂಟ್ʼಗೆ ಮಾಹಿತಿ ಹಂಚಿಕೊಂಡಿರುವ ಐಸಿಎಂಆರ್ ನ ಸಾಂಕ್ರಾಮಿಕ ರೋಗಶಾಸ್ತ್ರ ಸಂಶೋಧನಾ ಟಾಸ್ಕ್ ಫೋರ್ಸ್ ಸದಸ್ಯ, ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆದ ಡಾ.ಗಿರಿಧರ್ ಬಾಬು, “ಕರೋನಾ ವಿರುದ್ಧ ಹೋರಾಟ ನಡೆಸುವ ಪ್ರಮುಖ ಜವಾಬ್ದಾರಿ ರಾಜ್ಯ ಆರೋಗ್ಯ ಇಲಾಖೆ ಮೇಲಿತ್ತು. ಆದರೆ ಅವರು ನಾವು ನೀಡಿರುವ ಸಲಹೆಯನ್ನು ಯಾವತ್ತೂ ತಿರಸ್ಕರಿಸಿಲ್ಲ. ಯಾವುದೇ ಒಂದು ಸಲಹೆ ನೀಡಿದಾಗ ಅದರ ಬಗ್ಗೆ ಚರ್ಚಿಸುತ್ತಿದ್ದರು ಮತ್ತು ಅದನ್ನ ಜಾರಿಗೆ ತರುತ್ತಿದ್ದರು. ಸರಕಾರ ತಜ್ಞರ ಮೇಲಿಟ್ಟಿದ್ದ ಭರವಸೆ ನಿಜಕ್ಕೂ ಆಶ್ಚರ್ಯಕರ ಎನಿಸುತ್ತಿತ್ತು. ಆದ್ದರಿಂದ ಕರ್ನಾಟಕ ಸರಕಾರ ತಾಂತ್ರಿಕ ಸಲಹಾ ಸಮಿತಿಗೆ ನೀಡಿರುವ ಸ್ವಾತಂತ್ರ್ಯ ಇನ್ನಿತರ ರಾಜ್ಯಗಳಿಗೂ ಮಾದರಿಯಾಗಬೇಕಿದೆ” ಎಂದು ಹೇಳುತ್ತಾರೆ.
ರಾಜ್ಯಾದ್ಯಂತ ವಲಯಗಳನ್ನಾಗಿ ವಿಂಗಡಿಸಿ ರಾಜ್ಯ ಸರಕಾರ ಟಾಸ್ಕ್ ತಂಡಗಳನ್ನ ರಚಿಸಿತ್ತು. ಹಾಗೂ ಸರಕಾರ ಅದನ್ನ ನಿಯಂತ್ರಿಸುತ್ತಾ ಪತ್ತೆ ಹಚ್ಚುವಿಕೆ, ಮಾದರಿ ಸಂಗ್ರಹಿಸುವಿಕೆ ಹಾಗೂ ಚಿಕಿತ್ಸೆ ನೀಡುವಿಕೆಗಳನ್ನ ಪರಿಣಾಮಕಾರಿಯಾಗಿ ನಡೆಸಿತ್ತು.
ಇನ್ನು ಬೆಂಗಳೂರು ನಗರದಲ್ಲಿ ರಾಜ್ಯ ಸರಕಾರದ ವೇಗಕ್ಕೆ ತಕ್ಕ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಕೂಡಾ ಶ್ರಮವಹಿಸಿ ಕೆಲಸ ನಿರ್ವಹಿಸಿದೆ. ಒಂದರ್ಥದಲ್ಲಿ ಬಿಬಿಎಂಪಿ ಬೆಂಗಳೂರಿನಲ್ಲಿ ಮಾಡಿದ ಚುರುಕಿನ ಕೆಲಸದಿಂದಾಗಿ ಕರೋನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವಂತೆಯೂ ಮಾಡಿತ್ತು. ಮಾರ್ಚ್ 8 ರಂದು ಮೊದಲ ಕೋವಿಡ್-19 ಪ್ರಕರಣ ಬೆಂಗಳೂರು ನಗರದಲ್ಲಿ ಪತ್ತೆಯಾಗಿತ್ತು. ಅಮೆರಿಕಾದಿಂದ ಬಂದ 40 ವರುಷದ ಟೆಕ್ಕಿಯೊಬ್ಬರಲ್ಲಿ ಪ್ರಥಮತವಾಗಿ ಸೋಂಕು ದೃಢಪಟ್ಟಿತ್ತು. ಅದಾಗಲೇ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ 2,666 ಮಂದಿಯನ್ನ ತಿಂಗಳ ಒಳಗಾಗಿ ಪತ್ತೆ ಹಚ್ಚಿ ಹೋಂ ಕ್ವಾರೆಂಟೈನ್ ಗೆ ಒಳಪಡಿಸಲಾಗಿತ್ತು.
ಈಗಾಗಲೇ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 4 ಸಾವಿರ ಗಡಿ ದಾಟಿದೆ. ಆದರೆ ಸದ್ಯ ಏರಿಕೆ ಆಗಿರುವ ಪ್ರಕರಣದಲ್ಲೆಲ್ಲ ಬಹುತೇಕ ಮಂದಿ ಮಹಾರಾಷ್ಟ್ರದಿಂದ ಬಂದು ಹೋಂ ಅಥವಾ ಸಾಂಸ್ಥಿಕ ಕ್ವಾರೆಂಟೈನ್ಗೆ ಒಳಗಾದವರೇ ಆಗಿದ್ದಾರೆ. ಆದ್ದರಿಂದ ಇವರಿಂದ ಸಾಮುದಾಯಿಕ ಹಂತಕ್ಕೆ ಅಥವಾ ದ್ವಿತೀಯ ಹಂತಕ್ಕೆ ಸೋಂಕು ಹರಡುತ್ತೆ ಅನ್ನೋ ಭಯ ಅಷ್ಟಾಗಿ ಕಾಡದು.
ಆದರೆ, ಆತಂಕಕಾರಿ ವಿಚಾರವೆಂದರೆ ಶೇಕಡಾ 90ರಷ್ಟು ಪ್ರಕರಣಗಳಲ್ಲಿ ಕರೋನಾ ಸೋಂಕಿನ ಅತಿಯಾದ ಲಕ್ಷಣ ಕಾಣಿಸಿಕೊಳ್ಳದೇ ಇರುವ ಸೋಂಕಿತರೇ ಆಗಿದ್ದಾರೆ. ಅವರೆಲ್ಲರನ್ನ ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ನೀಡುವುದರ ಹಿಂದೆ ಸರಕಾರದ ವಿವಿಧ ಇಲಾಖೆಗಳ 2 ಲಕ್ಷ ಸಿಬ್ಬಂದಿಗಳ ಶ್ರಮವಿದೆ ಅನ್ನೋದನ್ನು ಮರೆಯುವಂತಿಲ್ಲ.
ಒಟ್ಟಾರೆಯಾಗಿ ರಾಜ್ಯದಲ್ಲೇ ಸರಕಾರ ತಂಡವಾಗಿ ಅಧಿಕಾರಿಗಳಿಂದ ಮಾಡಿಸಿದ ಕೆಲಸವೂ ಹೆಚ್ಚು ಪರಿಣಾಮಕಾರಿಯಾದುದು. ಏಕೆಂದರೆ, ಮುಂಬೈಯ ಧಾರಾವಿ, ದೆಹಲಿಯ ನಿಜಾಮುದ್ದೀನ್, ಚೆನ್ನೈ ಕೋಯಾಂಬೇಡು ಮಾರ್ಕೆಟ್ ರೀತಿಯೇ ಮೈಸೂರಿನ ನಂಜನಗೂಡನ್ನೂ ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಲಾಗಿತ್ತು. ಆದರೆ ರಾಜ್ಯದಲ್ಲಿ ಘೋಷಿಸಲಾದ ಕಂಟೈನ್ಮೆಂಟ್ ಝೋನ್ಗಳೆಲ್ಲವೂ ಅತ್ಯಂತ ಪರಿಣಾಮಕಾರಿಯಾಗಿದ್ದು, ಮೈಸೂರು ಜಿಲ್ಲೆಗೇ ಕಂಟಕವಾಗಿದ್ದ ನಂಜನಗೂಡು ಒಂದರಲ್ಲೇ 74 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದರೂ, ಅಲ್ಲಿ ಹಾಕಲಾಗಿದ್ದ ಕಠಿಣ ಸೀಲ್ಡೌನ್ ನಿಂದಾಗಿ 56 ದಿನಗಳಲ್ಲೇ ಇಡೀ ಮೈಸೂರು ಜಿಲ್ಲೆಯೇ ಕರೋನಾ ಮುಕ್ತ ಜಿಲ್ಲೆಯಾಗಿ ಘೋಷಿಸುವಂತಾಯಿತು.

ಇನ್ನು ಬೆಂಗಳೂರು ನಗರದಲ್ಲೂ ಅಷ್ಟೇ ಸೀಲ್ ಡೌನ್ ಮಾಡಬೇಕಾದ ಸಮಯದಲ್ಲಿ ಅತ್ಯಂತ ಕಠಿಣವಾಗಿ ಜಾರಿ ಮಾಡಲಾಗುತ್ತಿತ್ತು. ಅದಕ್ಕೊಂದು ಉದಾಹರಣೆಯೇ ಪಾದರಾಯನಪುರ. ಅತೀ ಅಪಾಯಕಾರಿ ಆಗಿದ್ದ ಆ ಪ್ರದೇಶವನ್ನ ಸಂಪೂರ್ಣ ಲಾಕ್ಡೌನ್ ಮಾಡಿ, ಕೇವಲ ಆರೋಗ್ಯ ಕಾರ್ಯಕರ್ತರಿಗಷ್ಟೇ ಹೋಗಲು ಅವಕಾಶ ಮಾಡಿಕೊಡಲಾಯಿತು. ಆದ್ದರಿಂದ ಸುಲಭವಾಗಿ ಅಲ್ಲಿದ್ದವರಲ್ಲಿ ಯಾರು ಸೋಂಕಿತರು, ಯಾರು ಸೋಂಕಿತರಲ್ಲದವರು ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಯಿತು.
ಇಡೀ ಬೆಂಗಳೂರು ನಗರದಲ್ಲಿ ದಾಖಲಾದ ಕೋವಿಡ್-19 ನಲ್ಲಿ ಪಾದರಾಯನಪುರದಿಂದಲೇ ಅಧಿಕವಾಗಿತ್ತು. ಶೇಕಡಾ 23.6 ರಷ್ಟು ಪ್ರಕರಣ ದಾಖಲಾಗಿತ್ತಾದರೂ, ಪೊಲೀಸ್ ಅಧಿಕಾರಿಗಳೇ ಅಲ್ಲಿಗೆ ಬೇಕಾದ ರೇಷನ್ ವ್ಯವಸ್ಥೆ ಕಲ್ಪಿಸಿ ಪ್ರತಿಯೊಬ್ಬನ ಸ್ಕ್ರೀನಿಂಗ್ ಮಾಡದ ಹೊರತು ಸೀಲ್ಡೌನ್ ಸಡಿಲಿಸಿರಲಿಲ್ಲ.
ಈ ಎಲ್ಲಾ ಕಾರಣಗಳಿಗಾಗಿ ಬೆಂಗಳೂರು ನಗರ ಎಲ್ಲೂ ಹಳಿ ತಪ್ಪಿ ಹೋಗುವ ಸಾಧ್ಯತೆಯಿಲ್ಲ. ಜೊತೆಗೆ ಇನ್ನಷ್ಟು ಪರಿಣಾಮಕಾರಿ ಆಲೋಚನೆಗಳನ್ನ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಜಾರಿ ಮಾಡುವ ಪ್ರಯತ್ನದಲ್ಲಿದ್ದು, ಇದು ರಾಜ್ಯವನ್ನ ಹಾಗೂ ವಿಶೇಷವಾಗಿ ಬೆಂಗಳೂರು ಮಹಾನಗರವನ್ನ ಸಂಪೂರ್ಣ ಕರೋನಾ ಮುಕ್ತ ನಗರವಾಗಿಸಲಿದೆ ಅನ್ನೋ ಭರವಸೆ ಜನತೆಯಲ್ಲಿದೆ.






