ಜಾಗತಿಕವಾಗಿ ಜನರನ್ನು ಹೈರಾಣವಾಗಿಸುತ್ತಿರುವ ಕರೋನಾ ಸೋಂಕು ರಾಜ್ಯದಲ್ಲೂ ತನ್ನ ಕರಾಳ ಛಾಯೆ ತೋರಿಸುತ್ತಿದೆ. ಈ ಸೋಂಕು ಹರಡದಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲವೂ ನಡೆಯುತ್ತಿದೆ. ಇಷ್ಟಾದರೂ ಜನ ಮತ್ತು ಅಧಿಕಾರಸ್ಥರು ಸ್ಪಂದಿಸುತ್ತಿಲ್ಲ ಎಂಬುದಕ್ಕೆ ಉದಾಹರಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ನಡೆಸಿದ ಎರಡು ಸಭೆಗಳು ಮತ್ತು ಅದಕ್ಕಿಂತಲೂ ಮುಖ್ಯವಾಗಿ ಖುದ್ದು ಮುಖ್ಯಮಂತ್ರಿಗಳೇ ಎಲ್ಲಾ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಕೆಲಸ ಮಾಡುತ್ತಿರುವುದು. ಶುಕ್ರವಾರ ಲಾಕ್ ಡೌನ್ ಜಾರಿಗೊಳಿಸುವ ಕುರಿತಂತೆ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಅದರ ಜತೆ ಜತೆಗೆ ಮುಸ್ಲಿಂ ಧಾರ್ಮಿಕ ಮುಖಂಡರ ಜತೆ ಸಹಕರಿಸಿ ಕರೋನಾ ನಿಯಂತ್ರಣ ಮತ್ತು ಲಾಕ್ ಡೌನ್ ನಿಯಮ ಪಾಲಿಸುವ ವಿಚಾರದಲ್ಲಿ ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಹೌದು, ಕರೋನಾ ವೈರಸ್ ದೇಶದಲ್ಲೂ ಹಬ್ಬುತ್ತಿದ್ದ ಹಿನ್ನೆಲೆಯಲ್ಲಿ ಮಾ. 14ರಿಂದ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಆದರೆ, ಅದು ಕಟ್ಟುನಿಟ್ಟಾಗಿ ಜಾರಿಗೆ ಬರಲಿಲ್ಲ. ನಂತರದಲ್ಲಿ ಕೇಂದ್ರ ಸರ್ಕಾರವೂ ರಾಷ್ಟ್ರಾದ್ಯಂತ ಲಾಕ್ ಡೌನ್ ಘೋಷಿಸಿತು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇತರ ಸೇವೆಗಳನ್ನು ರದ್ದುಗೊಳಿಸಲಾಯಿತು. ಜನರ ಓಡಾಟ, ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಯಿತು. ಆದರೆ, ಅದಾವುದೂ ಕಟ್ಟುನಿಟ್ಟಾಗಿ ಜಾರಿಗೆ ಬರಲೇ ಇಲ್ಲ. ಸರ್ಕಾರವನ್ನು ಪ್ರತಿನಿಧಿಸುವ ಸಚಿವರು ತಾವು ಜವಾಬ್ದಾರಿ ಹೊಂದಿರುವ ಜಿಲ್ಲೆಗಳಲ್ಲಿ ಅವುಗಳನ್ನು ಜಾರಿಗೊಳಿಸುವಲ್ಲಿ ಸಚಿವರು ಇದುವರೆಗೂ ಗಮನಹರಿಸಿಲ್ಲ. ಇನ್ನೊಂದೆಡೆ ಲಾಕ್ ಡೌನ್ ಘೋಷಣೆಯಾದ ಮೇಲೆ ದೇವಸ್ಥಾನ, ಮಠ, ಚರ್ಚ್ ಗಳಲ್ಲಿ ಸಾರ್ವಜನಿಕ ಪ್ರಾರ್ಥನೆ, ಪೂಜೆಗಳು ನಿಂತಿದ್ದರೂ ಮಸೀದಿಗಳಲ್ಲಿ ಮಾತ್ರ ಕದ್ದುಮುಚ್ಚಿ ನಮಾಜ್ ನಡೆಯುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಸಮುದಾಯದ ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಸಭೆಗಳನ್ನು ನಡೆಸುವುದು ಅನಿವಾರ್ಯವಾಯಿತು.

ಇನ್ನೂ ಎಚ್ಚೆತ್ತುಕೊಳ್ಳದ ಸಚಿವರು
ರಾಜ್ಯಕ್ಕೆ ಕರೋನಾ ಸೋಂಕು ಕಾಲಿಟ್ಟು ತಿಂಗಳಾಗುತ್ತಿದೆ. ನಿರಂತರವಾಗಿ ವ್ಯಾಪಿಸುತ್ತಿರುವ ಕರೋನಾ ಸೋಂಕು 125ಕ್ಕೂ ಹೆಚ್ಚು ಮಂದಿಯಲ್ಲಿ ಕಾಣಿಸಿಕೊಂಡಿದ್ದು, ಇದುವರೆಗೆ ಮೂರು ಮಂದಿಯ ಬಲಿ ಪಡೆದಿದೆ. ಹೀಗಿದ್ದರೂ ಸಚಿವರು ತಾವು ಜವಾಬ್ದಾರಿ ಹೊತ್ತಿರುವ ಜಿಲ್ಲೆಗಳತ್ತ ಸುಳಿಯುತ್ತಿಲ್ಲ. ಅಲ್ಲಿ ಪರಿಸ್ಥಿತಿ ಏನು ಎಂಬ ಬಗ್ಗೆ ಗಮನಹರಿಸುತ್ತಿಲ್ಲ. ಕರೋನಾ ನಿಯಂತ್ರಣ ಕುರಿತು ಗಮನಹರಿಸಬೇಕು ಎಂಬ ಕಾರಣಕ್ಕೆ ಮಾರ್ಚ್ 31ರವರೆಗೆ ನಡೆಯಬೇಕಿದ್ದ ವಿಧಾನ ಮಂಡಲ ಅಧಿವೇಶನವನ್ನು ಮಾ. 24ಕ್ಕೆ ಮೊಟಕುಗೊಳಿಸಲಾಯಿತು. ನಂತರದಲ್ಲಿ ಶಾಸಕರು ತಮ್ಮ ಕ್ಷೇತ್ರಗಳಿಗೆ ತೆರಳಿ ಕೆಲಸ ಮಾಡಲಾರಂಭಿಸಿದರು. ಆದರೆ, ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಆ ಬಗ್ಗೆ ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
ಕರೋನಾ ನಿಯಂತ್ರಣ ಮತ್ತು ಉಸ್ತುವಾರಿಗಾಗಿ ಸರ್ಕಾರ ಕಾರ್ಯಪಡೆಯೊಂದನ್ನು ರಚಿಸಿದೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಈ ಕಾರ್ಯಪಡೆಯ ಅಧ್ಯಕ್ಷರಾದರೆ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಗೃಹ ಸಚಿವ ಎಸ್.ಆರ್.ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಇದರ ಸದಸ್ಯರು. ನಂತರದಲ್ಲಿ ಕರೋನಾ ಜವಾಬ್ದಾರಿಯನ್ನು ವಿಂಗಡಿಸಿ ಬೆಂಗಳೂರಿನ ಜವಾಬ್ದಾರಿಯನ್ನು ಡಾ.ಸುಧಾಕರ್ ಮತ್ತು ರಾಜ್ಯದ ಇತರೆ ಜಿಲ್ಲೆಗಳ ಜವಾಬ್ದಾರಿಯನ್ನು ಶ್ರೀರಾಮುಲು ಅವರಿಗೆ ವಹಿಸಲಾಯಿತು. ನಂತರ ಶ್ರೀರಾಮುಲು ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಸುಧಾಕರ್ ಬೆಂಗಳೂರಿನಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಾ ಮಾಧ್ಯಮಗಳಿಗೆ ಮಾಹಿತಿಗಳನ್ನು ನೀಡುತ್ತಿದ್ದಾರೆ. ಕರೋನಾ ಕಾರ್ಯಪಡೆಯಲ್ಲಿ ಇರುವುದರಿಂದ ಗೃಹ ಸಚಿವರು ಮತ್ತು ಉಪಮುಖ್ಯಮಂತ್ರಿಗಳು ತಮ್ಮ ಉಸ್ತುವಾರಿ ಜಿಲ್ಲೆಗಳತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇನ್ನುಳಿದ ಒಬ್ಬಿಬ್ಬರು ಸಚಿವರು ಸ್ವಲ್ಪ ಮಟ್ಟಿಗೆ ಗಂಭೀರವಾಗಿ ಕೆಲಸ ಮಾಡುತ್ತಿದ್ದರೂ ಉಳಿದವರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದಕ್ಕೆ ಹಳಬರು ಮತ್ತು ಹೊಸಬರ ಮಧ್ಯೆ ಅಧಿಕಾರ ಹಂಚಿಕೆಯಲ್ಲಿ ಆಗಿರುವ ಗೊಂದಲವೂ ಕಾರಣ.
ಹೀಗಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಗಾಗ್ಯೆ ಬೆಂಗಳೂರಿನಲ್ಲಿರುವ ಸಚಿವರನ್ನು ಕರೆಸಿ, ಅಧಿಕಾರಿಗಳನ್ನು ಜತೆಗೆ ಕೂರಿಸಿಕೊಂಡು ಸಭೆ ಮಾಡುತ್ತಿದ್ದಾರೆ. ಆ ಮೂಲಕ ಉಸ್ತುವಾರಿ ವಹಿಸಿರುವ ಜಿಲ್ಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದು ಸೂಚಿಸುತ್ತಿದ್ದಾರೆ. ಶುಕ್ರವಾರವೂ ಬೆಂಗಳೂರಿನಲ್ಲಿದ್ದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕಂದಾಯ ಸಚಿವ ಆರ್.ಅಶೋಕ್, ಪ್ರಾಥಮಿಕ ಶಿಕ್ಷಣ ಸಚಿವ ಆರ್.ಸುರೇಶ್ ಕುಮಾರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ಕೆ. ಸುಧಾಕರ್ ಮತ್ತಿತರರೊಂದಿಗೆ ಕರೋನಾ ನಿಯಂತ್ರಣ ಹಾಗೂ ಲಾಕ್ ಡೌನ್ ಆದೇಶದ ಕಟ್ಟುನಿಟ್ಟಿನ ಪಾಲನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ.
ಇದೇ ವೇಳೆ ಸರ್ಕಾರದ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಜಿಲ್ಲೆಗಳಲ್ಲಿ ಕಾರ್ಯರೂಪಕ್ಕೆ ತರುವಂತೆ ಸಭೆಯಲ್ಲಿ ಭಾಗವಹಿಸದೇ ಇದ್ದ ಸಚಿವರಿಗೆ ಮುಖ್ಯಮಂತ್ರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇದ್ದರೆ ವೈರಸ್ ನಿಯಂತ್ರಣಕ್ಕೆ ಬಾರದೇ ಇರುವ ಜಿಲ್ಲೆಗಳಲ್ಲಿ . 14ರ ನಂತರವೂ ಲಾಕ್ ಡೌನ್ ಮುಂದುವರಿಸಬೇಕಾಗುತ್ತದೆ. ಅದಕ್ಕೆ ನೀವೇ ಜವಾಬ್ದಾರರಾಗಬೇಕಾಗುತ್ತದೆ ಎಂಬ ಪರೋಕ್ಷ ಸಂದೇಶವನ್ನೂ ಮುಖ್ಯಮಂತ್ರಿಗಳು ನೀಡಿದ್ದಾರೆ. ಅಷ್ಟರವರೆಗೆ ಸಚಿವ ಸಂಪುಟ ಸದಸ್ಯರ ಮಧ್ಯೆ ರಾಜಕೀಯ ಗೊಂದಲ ಮುಂದುವರಿದಿದೆ.

ಮುಸ್ಲಿಮರ ಮನವೊಲಿಸಲು ಧರ್ಮಗುರುಗಳು, ಮುಖಂಡರ ಮೊರೆ
ಕರೋನಾ ವೈರಸ್ ಹರಡುವಾಗ ಜಾತಿ, ಧರ್ಮ ನೋಡುವುದಿಲ್ಲ. ಎಲ್ಲರಿಗೂ ಹಬ್ಬುತ್ತದೆ. ಹೀಗಾಗಿ ಯಾವುದೇ ಒಂದು ಧರ್ಮದ ಮೇಲೆ ಈ ಕುರಿತು ಆರೋಪ ಹೊರಿಸುವುದು, ಒಂದು ಕೋಮಿನ ಮೇಲೆ ಗೂಬೆ ಕೂರಿಸುವುದು ಘೋರ ಅಪರಾಧ. ಅದೇ ರೀತಿ ಧರ್ಮ, ಕೋಮುಗಳ ಜನರು, ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಕೂಡ ತಮ್ಮ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ. ಈ ಜವಾಬ್ದಾರಿಯನ್ನು ನೆವಪಿಸುವುದಕ್ಕಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಮುಸ್ಲಿಂ ಧರ್ಮಗುರುಗಳು, ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ಕರೆದಿರುವುದು.
ಪ್ರಸ್ತುತ ಕರೋನಾ ವೈರಸ್ ಹರಡುವ ವಿಚಾರದಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಮಾಧ್ಯಮಗಳು ಮುಸ್ಲಿಮ್ ಸಮುದಾಯದವರನ್ನು ಬಲಿಪಶು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರಲಾರಂಭಿಸಿವೆ. ಅದರಲ್ಲೂ ಮಾಧ್ಯಮಗಳನ್ನು ಮುಸ್ಲಿಂ ವಿರೋಧಿ ಎಂಬಂತೆ ಪರಿಗಣಿಸಲಾಗುತ್ತಿದೆ. ಆದರೆ, ಭಾರತೀಯ ಮಾಧ್ಯಮಗಳು ಮುಸ್ಲಿಮರು ಮಾತ್ರವಲ್ಲ, ಯಾರೇ ನಿಯಮ ಉಲ್ಲಂಘಿಸಿದರೂ ಆ ಬಗ್ಗೆ ವರದಿ ಮಾಡುತ್ತವೆ. ಯಾವುದೇ ಸಂದರ್ಭದಲ್ಲೂ ಧರ್ಮ, ಜಾತಿ ಕಾರಣಕ್ಕೆ .ಯಾರನ್ನೂ ಟಾರ್ಗೆಟ್ ಮಾಡುವುದಿಲ್ಲ ಎಂಬುದನ್ನು ಮಾಧ್ಯಮಗಳನ್ನು ಅನಗತ್ಯವಾಗಿ ದೂರುವವರು ಗಮನಿಸಬೇಕು.
ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಹಿಂದೂ ದೇವಾಲಯಗಳಲ್ಲಿ ಸಾರ್ವಜನಿಕ ಪೂಜೆ, ದರ್ಶನ ರಪದ್ದುಗೊಳಿಸಲಾಯಿತು, ಜಾತ್ರೆಗಳನ್ನು ಮುಂದೂಡಲಾಯಿತು. ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಂತುಹೋಯಿತು. ಗುರುದ್ವಾರ, ಜೈನ ಮಂದಿರ ಸೇರಿದಂತೆ ಬಹುತೇಕ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಸಾರ್ವಜನಿಕ ಪ್ರಾರ್ಥನೆ, ಪೂಜೆಗಲು ನಿಂತುಹೋದವು. ಆದರೆ, ಮಸೀದಿಗಳಲ್ಲಿ ಮಾತ್ರ ಸಾಮೂಹಿಕ ನಮಾಜ್ ನಡೆಯುತ್ತಿತ್ತು. ಈಗಲೂ ಕೆಲವು ಕಡೆ ಕದ್ದುಮುಚ್ಚಿ ನಡೆಯುತ್ತಿದೆ. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿಲ್ಲ. ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದರೂ ಜನ ಬುದ್ಧಿ ಕಲಿತಿಲ್ಲ. ಇನ್ನು ಬೆಂಗಳೂರಿನ ಸಾರಾಯಿಪಾಳ್ಯದ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯ ಮೊಬೈಲ್ ಕಸಿದುಕೊಂಡು ಅವರಿಗೆ ದಮಕಿ ಹಾಕಿದ್ದು, ಕಲಬುರಗಿಯ ಯದುಲ್ಲಾ ಕಾಲೋನಿಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವೈದ್ಯರ ತಂಡದ ಜತೆ ವಾಗ್ವಾದ ನಡೆಸಿ ಕಡತಗಳನ್ನು ಹರಿದುಹಾಕಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಯನ್ನು ನಿಂದಿಸಿದ್ದು, ಹುಬ್ಬಳ್ಳಿಯಲ್ಲಿ ನಿಯಮ ಉಲ್ಲಂಘಿಸಿ ನಮಾಜ್ ನಡೆಸುತ್ತಿದ್ದವರನ್ನು ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ತೂರಾಟನಡೆಸಿರುವುದು ಇದೇ ಕೋಮಿಗೆ ಸೇರಿದವರು ಎಂಬುದು ಸುಳ್ಳಲ್ಲ. ಈ ಎಲ್ಲರೂ ಕರೋನಾ ಕುರಿತು ಜಾಗೃತಿ ಮೂಡಿಸುವ, ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದವರು. ಜನರ ಆರೋಗ್ಯಕ್ಕಾಗಿ ತಮ್ಮ ಪ್ರಾಣದ ಹಂಗು ತೊರೆದು ಶ್ರಮಿಸುತ್ತಿದ್ದವರು.
ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳು ಮುಸ್ಲಿಂ ಧರ್ಮಗುರುಗಳು, ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿರುವುದು. ಆ ಮೂಲಕ ಕರೋನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದವರ ಸಹಕಾರ ಕುರಿತಂತೆ ಮನವಿ ಮಾಡಿದ್ದು. ಇನ್ನಾದರೂ ಸಮುದಾಯದವರು ತಾವೂ ಸಮಾಜದ ಒಂದು ಭಾಗ ಎಂದು ಸರ್ಕಾರದೊಂದಿಗೆ ಸಹಕರಿಸಿದರೆ ಯಾವುದೇ ಕಾರಣಕ್ಕೂ ಅವರನ್ನು ಟಾರ್ಗೆಟ್ ಮಾಡುವ ಅಥವಾ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ನಡೆಯುವುದಿಲ್ಲ ಎಂಬುದನ್ನು ಟೀಕಾಕಾರರು ಅರಿತುಕೊಳ್ಳಬೇಕು.