ಕರೋನಾ ತಡೆಗಾಗಿ ತುರ್ತು ಕ್ಯಾಬಿನೆಟ್ ಸಭೆ ನಡೆಸಿದ ಮುಖ್ಯಮಂತ್ರಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಉಳಿದ ಲಾಕ್ಡೌನ್ ದಿನಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸಿಎಂ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಹಿತಿ ಪಡೆದ ಯಡಿಯೂರಪ್ಪ, ಲಾಕ್ಡೌನ್ ಮುಂದುವರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ನಿಮ್ಮ ಅಭಿಪ್ರಾಯವೇನು ಎಂದು ಎಲ್ಲಾ ಸಚಿವರನ್ನು ಕೇಳಿದ್ದಾರೆ. ಸಾಕಷ್ಟು ಮಂತ್ರಿಗಳು ಲಾಕ್ಡೌನ್ ಮುಂದುವರಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಕೆಲವು ಜಿಲ್ಲಾ ಉಸ್ತುವಾರಿ ಸಚಿವರು ಸ್ವಲ್ಪ ರಿಲ್ಯಾಕ್ಸ್ ಬೇಕೆಂದು ಕೇಳಿಕೊಂಡಿದ್ದಾರೆ.
ರಾಜ್ಯದ 18 ಜಿಲ್ಲೆಗಳು ಕರೋನಾ ಹಾಟ್ಸ್ಪಾಟ್ ಆಗಿದೆ. ಅದರಲ್ಲೂ 5 ಜಿಲ್ಲೆಗಳು ಡೇಂಜರ್ ಜೋನ್ನಲ್ಲಿ ಇವೆ ಎನ್ನುವ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ಆಗಿದ್ದು, ಲಾಕ್ಡೌನ್ ಆದೇಶ ಮೀರಿ ಮನೆಯಿಂದ ಹೊರಬರುವ ಜನರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯ ಮಾಡಲಾಯ್ತು. ಈಗಾಗಲೇ ಬೆಂಗಳೂರಲ್ಲಿ 20 ಸಾವಿರ ಹಾಗೂ ರಾಜ್ಯದಲ್ಲಿ ಒಟ್ಟು 30 ಸಾವಿರ ವಾಹನಗಳನ್ನು ಸೀಜ್ ಮಾಡಲಾಗಿದೆ. ಅನವಶ್ಯಕವಾಗಿ ಮನೆಯಿಂದ ಹೊರಬಂದರೆ ಇನ್ನು ಮುಂದೆ ಕಠಿಣ ಕಾನೂನು ಕ್ರಮ ಅನಿವಾರ್ಯ ಎಂದು ಜನರಿಗೆ ಎಚ್ಚರಿಸುವ ಕೆಲಸ ಆಗಬೇಕೆಂದು ತಿಳಿಸಿದರು.
ಕರೋನಾ ವರದಿ ಪಡೆಯಲು ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರ ನೇಮಕ ಮಾಡಿದ್ದು, ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರತಿದಿನ ಕರೋನಾ ವರದಿ ಸಂಗ್ರಹ ಮಾಡಲಾಗುತ್ತದೆ. ಕರೋನಾ ಸ್ತಬ್ಧ ಹಿನ್ನಲೆಯಲ್ಲಿ 49 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿದ್ದು, 27 ವಾರಗಳಿಗೆ ಆಗುವಷ್ಟು ಮೇವು, ರಸಗೊಬ್ಬರ, ಬಿತ್ತನೆ, ಬೀಜ ಸಂಗ್ರಹ ಮಾಡಲಾಗಿದೆ. ಎಲ್ಲಾ ಬರಪೀಡಿತ ಜಿಲ್ಲೆಗಳಿಗೆ 112 ಕೋಟಿ ಹಣ ಬಿಡುಗಡೆಗೆ ಆದೇಶ ಮಾಡಲಾಗಿದ್ದು, ಯಾರು ಹಸಿವಿನಿಂದ ಇರದಂತೆ ನೋಡಿಕೊಳ್ಳಬೇಕೆಂದು ಎಲ್ಲಾ ಜಿಲ್ಲೆಗಳ ಡಿಸಿಗಳಿಗೆ, ಮಂತ್ರಿಗಳಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಇನ್ನು ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕುಎಂದು ಅಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ.
ಕ್ಯಾಬಿನೆಟ್ ಸಭೆಯಲ್ಲಿ ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿ ಮಾಡಬೇಕೆಂದು ಶುಭ ಶುಕ್ರವಾರದ ಮುಂಜಾನೆಯಿಂದ ಟೈಟ್ ಸೆಕ್ಯುರಿಟಿ ಮಾಡುವಂತೆ ಕಮೀಷನರ್ ಆದೇಶ ಮಾಡಿದ್ದಾರೆ. ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾ ಅಂಡ್ ಆರ್ಡರ್ ಹಾಗೂ ಟ್ರಾಫಿಕ್ ಪೊಲೀಸರು ಜಂಟಿಯಾಗಿ ಕಾರ್ಯ ನಿರ್ವಹಿಸುವಂತೆ ಆದೇಶ ಮಾಡಿದ್ದಾರೆ. ಸುಖಾ ಸುಮ್ಮನೆ ಓಡಾಡೋ ಬೈಕ್ಗಳನ್ನು ಕೂಡಲೇ ಸ್ಥಳದಲ್ಲೇ ಸೀಜ್ ಮಾಡುವಂತೆ ವಾಕಿ ಟಾಕಿ ಮೂಲಕ ಆದೇಶ ಮಾಡಿದ್ದಾರೆ. ಈಗಾಗಲೇ ಸುಮಾರು ಸಾವಿರಾರು ವಾಹನಗಳು ಸೀಜ್ ಆಗಿವೆ. ಆದ್ರೂ ಸುಮ್ಮನೆ ಓಡಾಡೋಕೆ ಜನರು ಹೊರಗಡೆ ಬರ್ತಾ ಇದ್ದಾರೆ. ಎಷ್ಟೇ ಹೇಳಿದ್ರು ಜನ ಮಾತ್ರ ಬುದ್ದಿ ಕಲಿಯುತ್ತಿಲ್ಲ. ಹೀಗಾಗಿ ಶುಕ್ರವಾರದಿಂದ ಬಂದೋಬಸ್ತ್ ಹೆಚ್ಚಿಸಿ, ರಸ್ತೆಗೆ ಇಳಿದವರನ್ನು ಗಾಡಿ ಸೀಜ್ ಮಾಡಿ ಎಂದು ಆದೇಶ ಮಾಡಿದ್ದಾರೆ. ಒಟ್ಟಾರೆ, ಲಾಕ್ಡೌನ್ ಮುಂದುವರಿಯುವ ಬಗ್ಗೆ ಸಾಕಷ್ಟು ಸಚಿವರು ಒತ್ತಡ ಹೇರಿದ್ದಾರೆ. ಜೊತೆಗೆ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿ ಆಗಬೇಕೆಂದು ಸಿಎಂ ಪೊಲೀಸರಿಗೆ ಸೂಚಿಸಿದ್ದಾರೆ. ಇದಕ್ಕಾಗಿ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ ಎನ್ನಲಾಗಿದೆ.