ವಿಶ್ವವನ್ನೇ ಭೀತಿಯ ಮಡಿಲಿಗೆ ನೂಕಿರುವ ಮಹಾಮಾರಿ ಕರೋನಾ ಸೋಂಕು ತಡೆಗಟ್ಟಲು ಬಹುತೇಕ ದೇಶಗಳು ಲಾಕ್ ಡೌನ್ ಘೋಷಿಸಿವೆ. ದೇಶದ ಬಹುತೇಕ ಕಡೆಗಳಲ್ಲಿ ಕಟ್ಟು ನಿಟ್ಟಿನ ಲಾಕ್ ಡೌನ್ ಮಾಡಲಾಗಿದೆ. ಕರೋನಾ ಸೋಂಕಿತರು ಹೆಚ್ಚಿರುವ ಕಡೆಗಳಲ್ಲಿ ಸೀಲ್ ಡೌನ್ ಕೂಡ ಮಾಡಲಾಗಿದೆ. ಎಲ್ಲ ಕಡೆಗಳಲ್ಲಿ ಅಂಗಡಿಗಳ ತೆರೆಯುವಿಕೆ ಮತ್ತು ಜನರ ಓಡಾಟಕ್ಕೆ ನಿರ್ದಿಷ್ಟ ಸಮಯ ನಿಗದಿ ಪಡಿಸಲಾಗಿದೆ. ಜಿಲ್ಲೆಗಳು ಮತ್ತು ಅಂತರರಾಜ್ಯ ಗಡಿಗಳಲ್ಲೂ ಕಟ್ಟು ನಿಟ್ಟಿನ ತಪಾಸಣೆ ನಡೆಸಲಾಗುತಿದ್ದು ಬರೇ ವೈದ್ಯಕೀಯ, ಸಾವು ಸಂಭವಿಸಿದ ತುರ್ತು ಸಮಯಕ್ಕೆ ಮಾತ್ರ ಅನುಮತಿ ನೀಡಲಾಗುತ್ತಿದೆ.
ಈ ಬಿಗಿ ಕ್ರಮಗಳ ನಡುವೆಯೂ ವಿಐಪಿಗಳ ಓಡಾಟ ಮಾತ್ರ ನಡೆದೇ ಇದೆ. ಬಹುತೇಕ ಸಂದರ್ಭಗಳಲ್ಲಿ ಇದು ಸುದ್ದಿಯೂ ಆಗುತ್ತಿಲ್ಲ. ಕಳೆದ ವಾರ ರಾಜಾಸ್ಥಾನದ ಕೋಟಾದಲ್ಲಿ ಓದುತಿದ್ದ ಬಿಹಾರದ ಬಿಜೆಪಿ ಶಾಸಕರೊಬ್ಬರ ಪುತ್ರಿಯು ತನ್ನ ಮನೆಗೆ ವಾಪಾಸಾಗಲು ತನ್ನ ತಂದೆಯ ಪ್ರಭಾವದಿಂದ ಪಾಸ್ ಪಡೆದುಕೊಂಡಳು. ಲಾಕ್ ಡೌನ್ ನಿಯಮ ಉಲ್ಲಂಘಿಸಿದರೂ ಶಾಸಕರಿಗೇನೂ ಶಿಕ್ಷೆ ಆಗಲಿಲ್ಲ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉತ್ತಮ ಆಡಳಿತಗಾರ ಎಂಬ ಕಾರಣಕ್ಕೆ ಶ್ಲಾಘನೆಯನ್ನೂ ಪಡೆದುಕೊಂಡಿದ್ದಾರೆ.ಇನ್ನೊಂದು ಪ್ರಕರಣ ಗಮನಿಸಿ. ಇದರಲ್ಲಿ ತೆಲಂಗಾಣದಿಂದ ತನ್ನ ಮನೆಯಾದ ಛತ್ತೀಸ್ ಘಡಕ್ಕೆ ಕಾಲ್ನಡಿಗೆಯಲ್ಲಿಯೇ ತೆರಳುತಿದ್ದ 11 ವರ್ಷದ ಕಾರ್ಮಿಕ ಕುಟುಂಬದ ಬಾಲಕಿಯು ನೂರು ಕಿಲೋಮೀಟರ್ ನಡೆದು ಬಸವಳಿದು ತನ್ನ ಮನೆಯಿಂದ ಕೇವಲ 11 ಕಿಲೋಮೀಟರ್ ದೂರದಲ್ಲಿ ಕುಸಿದು ಬಿದ್ದು ಸಾವನ್ನಪ್ಪುತ್ತಾಳೆ. ಈ ಎರಡೂ ಪ್ರಕರಣಗಳಲ್ಲಿ ಇಬ್ಬರೂ ವಲಸೆಗಾರರಾಗಿದ್ದು ಒಬ್ಬರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಲಸೆ ಹೋಗಿದ್ದರೆ ಮತ್ತೊಬ್ಬರು ಜೀವನೋಪಾಯಕ್ಕಾಗಿ ವಲಸೆ ಹೋಗಿದ್ದಾರೆ. ಶ್ರೀಮಂತರು ಮತ್ತು ಪ್ರಭಾವಿಗಳು ತಮ್ಮ ಅನುಕೂಲಕ್ಕಾಗಿ ತಪ್ಪು ಮಾಹಿತಿ ನೀಡಿ ವಾಹನ ಪಾಸ್ ಪಡೆದುಕೊಂಡು ನಿಯಮ ಉಲ್ಲಂಘಿಸುತ್ತಿರುವ ನೂರಾರು ಉದಾಹರಣೆಗಳಿದ್ದರೂ ಯಾವುದೂ ಬೆಳಕಿಗೆ ಬರುತ್ತಿಲ್ಲ.
ದೇಶದ ಕಾನೂನಿನ ನಿಯಮವು ಸಾಮಾನ್ಯವಾಗಿ ಎಲ್ಲಾ ನಾಗರಿಕರಿಗೆ ಒಂದೇ ರೀತಿಯ ಅಪರಾಧಗಳು ಅಥವಾ ಸನ್ನಿವೇಶಗಳಿಗೆ ಧರ್ಮ, ಜಾತಿ, ವಯಸ್ಸು, ಲಿಂಗ, ಬಣ್ಣ ಇತ್ಯಾದಿಗಳನ್ನು ಲೆಕ್ಕಿಸದೆ ಒಂದೇ ರೀತಿಯ ಅಥವಾ ಸಮಾನವಾಗಿ ಪರಿಗಣಿಸಬೇಕು ಎಂದು ಹೇಳುತ್ತದೆ. ಆದರೆ ಬಿಹಾರದ ಬಿಜೆಪಿ ಶಾಸಕರ ಒತ್ತಡಕ್ಕೆ ಮಣಿದು ಪಾಸ್ ನೀಡಿದ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಅಥವಾ ತಮ್ಮ ಆಪ್ತರಿಗೆ ಅಕ್ರಮ ಪಾಸ್ ವಿತರಿಸಿದ ಮಹಾರಾಷ್ಟ್ರದ ಗ್ರಹ ಇಲಾಖೆಯ ಕಾರ್ಯದರ್ಶಿ ಅಮಿತಾಭ್ ಗುಪ್ತ ಅವರಿಗೆ ಶಿಕ್ಷೆ ಏನೂ ಅಗಿಲ್ಲ. ಗುಪ್ತ ಅವರು ವಾಣಿಜ್ಯೋದ್ಯಮಿ ಹೆಚ್ಡಿಏಫ್ಎಲ್ ಪ್ರವರ್ತಕರಾದ ಕಪಿಲ್ ವಾದ್ವಾನ್ ಮತ್ತು ದೀಪಕ್ ವಾದ್ವನ್ ಅವರಿಗೆ ಮಹಾಬಲೇಶ್ವರದಿಂದ ಖಂಡಾಲಕ್ಕೆ ಹೋಗಲು ವಾಹನ ಪಾಸ್ ನೀಡಿದ್ದರು. ಕಳೆದ ವಾರ ಬೆಂಗಳೂರಿನಲ್ಲೇ ಇಬ್ಬರು ಪ್ರಭಾವೀ ಯುವತಿಯರು ನಶೆ ಏರಿಸಿಕೊಂಡು ಪೋಲೀಸರ ಮೇಲೇ ಕಾರು ಹರಿಸಲು ಹೋಗಿದ್ದ ಘಟನೆಯನ್ನು ಸ್ಮರಿಸಿಕೊಳ್ಳಬಹುದು. ಈ ಪ್ರಕರಣದಲ್ಲಿ ಯುವತಿಯರು ತಮ್ಮ ಪೋಷಕರ ಪ್ರಭಾವ ಬಳಸಿಕೊಂಡು ಮಂಡ್ಯದ ಜಿಲ್ಲಾಧಿಕಾರಿಯಿಂದ ಪಾಸ್ ಪಡೆದುಕೊಂಡು ಬೆಂಗಳೂರಿಗೆ ಪಾರ್ಟಿ ಮಾಡಲು ಬಂದಿದ್ದರು. ಈ ರೀತಿಯ ಘಟನೆಗಳು ದೇಶದಲ್ಲಿ ವಿಐಪಿಗಳ ಓಡಾಟಕ್ಕೆ ನಿರ್ಬಂಧ ಇಲ್ಲ ಎಂಬ ವಿಷಯವನ್ನು ತುಂಬ ಸ್ಪಷ್ಟವಾಗಿಯೇ ಜಾಹೀರು ಪಡಿಸಿವೆ.
ದೇಶದಲ್ಲಿ ಇಂದು ಲಾಕ್ ಡೌನ್ ಪರಿಣಾಮದಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಹಣ ಮತ್ತು ಅಹಾರ ಲಭ್ಯವಾಗದೆ ಶೋಚನೀಯ ಸ್ಥಿತಿಯಲ್ಲಿ ಇದ್ದಾರೆ. ಇವರಿಗೆ ಕಳೆದ ಒಂದು ತಿಂಗಳಿನಿಂದ ಯಾವುದೇ ಆದಾಯ ಮೂಲ ಇಲ್ಲ. ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ಇನ್ನಿತರ ಕಡೆಗಳಲ್ಲಿ ಉತ್ತರ ಭಾರತದ ವಲಸೆ ಕಾರ್ಮಿಕರ ಪರಿಸ್ಥಿತಿ ದಯನೀಯ. ಬಹುತೇಕ ಕಾರ್ಮಿಕರಿಗೆ ಮನೆಯೊಳಗೆ ಇರಲಿಕ್ಕೆ ಸೂಕ್ತ ಸ್ಥಳಾವಕಾಶವೂ ಇಲ್ಲ. ಒಂದು ರೂಮಿನಲ್ಲಿ 10-12 ಜನರು ಇದ್ದಾರೆ. ದೇಶದಲ್ಲಿ ಸಾವಿರಾರು ವಾಹನಗಳನ್ನು ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿಯೇ ಸೀಜ್ ಮಾಡಲಾಗಿದೆ. ಸಾವಿರಾರು ಜನರ ಮೇಲೂ ಇದೇ ಅರೋಪಕ್ಕಾಗಿ ಮೊಕದ್ದಮೆ ದಾಖಲಿಸಲಾಗಿದೆ. ಅದರೆ ಶ್ರೀಮಂತರ ಮತ್ತು ಪ್ರಭಾವಿ ರಾಜಕಾರಣಿಗಳ ಮೇಲೆ ದಾಖಲಾಗಿರುವ ಮೊಕದ್ದಮೆಗಳ ಸಂಖ್ಯೆ ಬಹುತೇಕ ಇಲ್ಲ.
ಕೋವಿಡ್ 19 ಸೋಂಕು ಪ್ರಸರಣ ತಡೆಯಲು ದೇಶದ ಸರ್ವೋಚ್ಚ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಜೈಲುಗಳಲ್ಲಿರುವ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಜೈಲುಗಳಲ್ಲಿನ ದಟ್ಟಣೆ ತಪ್ಪಿಸಲು ಸ್ವತಃ ಸುಪ್ರೀಂ ಕೋರ್ಟು ಈ ಅದೇಶವನ್ನು ನೀಡಿದೆ. ಆದರೆ ಜಿಲ್ಲಾ ಹಾಗೂ ಜೆ ಎಂ ಎಫ್ ಸಿ ನ್ಯಾಯಾಲಯಗಳು ಯೋಗಿಕವಾಗಿ ಮುಚ್ಚಿರುವುದರಿಂದ ಕೈದಿಗಳ ಬಿಡುಗಡೆ ಇನ್ನೂ ಸಂಪೂರ್ಣವಾಗಿಲ್ಲ. ಮತ್ತೊಂದೆಡೆ ಕೇಂದ್ರ ಸರ್ಕಾರ ಲಾಕ್ ಡೌನ್ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಮುಂದಾಗಿದೆ. ಸರ್ಕಾರ ನಿಯಮಾವಳಿಗಳನ್ನು ಬಿಗಿ ಮಾಡಿದರೂ ಅಂತಿಮವಾಗಿ ಅದು ಪರಿಣಾಮಕಾರಿ ಅಗುವುದು ಬಡ ಮತ್ತು ಮದ್ಯಮ ವರ್ಗದವರ ಬದುಕಿನಲ್ಲಿ ಮಾತ್ರ. ವಿಐಪಿಗಳು ಎಂದಿನಂತೆ ಆರಾಮವಾಗಿಯೇ ಓಡಾಡಿಕೊಂಡೇ ಇದ್ದಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯ ವ್ಯಂಗ್ಯ.
ಕೃಪೆ: ದ ಪ್ರಿಂಟ್