ಶಿವರಾಜ್ಕುಮಾರ್ ಅವರ ‘ಓಂ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ನನಗೆ ದೊಡ್ಡ ಪ್ರವೇಶ ದೊರಕಿಸಿಕೊಟ್ಟಿತು ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಇಂದು ಅವರ ಜನ್ಮದಿನ. ಕಲಾವಿದನಾಗಿ ಅವರ ಬದ್ಧತೆ, ಉತ್ಸಾಹ ನನಗೆ ಸದಾ ಸ್ಫೂರ್ತಿ. ಶಿವಣ್ಣನ `ಓಂ’ ನನ್ನ ಎರಡನೇ ಸಿನಿಮಾ. ನಿರ್ದೇಶಕ ಉಪೇಂದ್ರ ಕೂಡ ಆಗ ಹೊಸಬರು. ಬೆಂಗಳೂರಿನ ಹೈಲ್ಯಾಂಡ್ಸ್ ಹೋಟೆಲ್ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅದು ಹೀರೋ ಶಿವಣ್ಣನ ಇಂಟ್ರಡಕ್ಷನ್ ಸೀನ್. ರೌಡಿ ಪಾತ್ರದಲ್ಲಿದ್ದ ಅವರು ನನ್ನ ಜಡೆಯನ್ನು ಗಟ್ಟಿಯಾಗಿ ಹಿಡಿದೆಳೆದು, ತಾವು ತಂದ ಸೀರೆ ಉಟ್ಟುಕೊಳ್ಳುವಂತೆ ಹೇಳುವ ಸನ್ನಿವೇಶ.
ನಿರ್ದೇಶಕ ಉಪೇಂದ್ರ ಒಂದು ಸನ್ನಿವೇಶಕ್ಕೆ ಕನಿಷ್ಠ ಹೇಳೆಂಟು ಬಾರಿ ಮಾನಿಟರ್ ಮಾಡಿಸುತ್ತಿದ್ದರು. ಅವರಿಗೆ ಸಮಾಧಾನ ಆಗುವವರೆಗೂ ಶಾಟ್ ತೆಗೆಯುತ್ತಿರಲಿಲ್ಲ. ಶಿವರಾಜ್ಕುಮಾರ್ ನನ್ನ ಜುಟ್ಟು ಹಿಡಿಯುವ ಸನ್ನಿವೇಶಕ್ಕೆ ಅದಾಗಲೇ ಎಂಟು ಬಾರಿ ಮಾನಿಟರ್ ಆಗಿತ್ತು. ಕೊನೆಗೂ ಉಪೇಂದ್ರ ಶಾಟ್ ಚಿತ್ರಿಸಿ ಓಕೆ ಮಾಡಿದರು. ನಿಜ ಹೇಳುತ್ತೇನೆ, ಆಗ ನನಗೆ ಅಕ್ಷರಶಃ ತಲೆ ತಿರುಗತೊಡಗಿತ್ತು. ಶಿವಣ್ಣ ಎಂಟ್ಹತ್ತು ಬಾರಿ ಬಿಗಿಯಾಗಿ ಜಡೆ ಹಿಡಿದದ್ದರಿಂದ ತಲೆ ಹಿಂಬಾಗ ತೀವ್ರವಾಗಿ ನೋಯುತ್ತಿತ್ತು.
ಉಪೇಂದ್ರ ಮತ್ತು ಶಿವಣ್ಣನ ಮೇಲೆ ನನಗೆ ಸಿಕ್ಕಾಪಟ್ಟೆ ಕೋಪ ಬಂದಿತ್ತು! ಸೀನ್ ಮುಗಿಯುತ್ತಿದ್ದಂತೆ ನನಗೇ ಗೊತ್ತಿಲ್ಲದಂತೆ ಶಿವಣ್ಣನನ್ನು ಕೆಂಗಣ್ಣನಿಂದ ನೋಡುತ್ತಿದ್ದೆ. ಶಿವಣ್ಣ ಇನ್ನೂ ಆ ಸನ್ನಿವೇಶದ ಹ್ಯಾಂಗ್ ಓವರ್ನಲ್ಲೇ ಇದ್ದಂತಿತ್ತು. ಅದೇ ಗುಂಗಿನಲ್ಲಿ ಅವರು, `ಏನೂ ಮಾಡೋಕಾಗಲ್ಲ… ಶಾಟ್ ಇರೋದೇ ಹಂಗೆ’ ಅಂದರು. ಆಗ ಅವರ ಮುಖದಲ್ಲಿ ಸೀನ್ನಲ್ಲಿ ಇದ್ದುದಕ್ಕಿಂತ ಹೆಚ್ಚಿನ ಎಕ್ಸ್ಪ್ರೆಶನ್ ಇತ್ತು! ಅಷ್ಟೊಂದು ನೋವು, ಕೋಪದಲ್ಲೂ ನನಗೆ ನಗು ತಡೆಯಲಾಗಲಿಲ್ಲ. ನಾನು ಜೋರಾಗಿ ನಗುತ್ತಿದ್ದರೆ ಉಪೇಂದ್ರ ಅಚ್ಚರಿಯಿಂದ ನನ್ನನ್ನೇ ನೋಡುತ್ತಿದ್ದರು!
![](https://pratidhvani.in/wp-content/uploads/2021/02/Stay_Home_2-190.jpg)
ನಮ್ಮೂರ ಮಂದಾರ ಹೂವೇ: ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ `ನಮ್ಮೂರ ಮಂದಾರ ಹೂವೇ’ ಚಿತ್ರೀಕರಣದ ಸಂದರ್ಭ. ಉತ್ತರ ಕನ್ನಡ, ಶಿರಸಿ ಸಮೀಪದ ಫಾಲ್ಸ್ವೊಂದರ ಬಳಿ `ಹೇಳೇ ಕೋಗಿಲೆ..’ ಹಾಡು ಚಿತ್ರಿಸುತ್ತಿದ್ದರು. ನಾನು, ಹೀರೋ ಶಿವರಾಜ್ಕುಮಾರ್ ನೀರಿಗಿಳಿದಿದ್ದೆವು. ಶಾಟ್ಗೆ ಮುನ್ನ ಸಹಾಯಕಿಯೊಬ್ಬಳು ಪಕ್ಕದಲ್ಲೇ ನನ್ನ ಕೂದಲು ಸರಿ ಮಾಡುತ್ತಾ ನಿಂತಿದ್ದಳು. ಫಾಲ್ಸ್ ಸಮೀಪದ ಮರವೊಂದರಲ್ಲಿ ಜೇನು ಹುಳುಗಳು ಗೂಡು ಕಟ್ಟಿದ್ದವು. ಇದು ಚಿತ್ರತಂಡದ ಯಾರ ಗಮನಕ್ಕೂ ಬಂದಿರಲಿಲ್ಲ.
ಅಂದು ಬಿಸಿಲು ಕೂಡ ಜೋರಾಗಿತ್ತು. ನಿರ್ದೇಶಕ ದೇಸಾಯಿ ರಿಫ್ಲೆಕ್ಟರ್ಗಳನ್ನು ಮತ್ತೊಂದೆಡೆ ತಿರುಗಿಸುವಂತೆ ಯಾರಿಗೋ ಸೂಚಿಸಿದರು. ರಿಫ್ಲೆಕ್ಟರ್ನ ಪ್ರತಿಫಲನ ಜೇನುಗೂಡಿನ ಮೇಲೆ ಬಿತ್ತೆಂದು ಕಾಣುತ್ತದೆ! ಮೊದಲು ಹಾರಿದ ಒಂದೆರಡು ಜೇನು ಹುಳುಗಳು ದೇಸಾಯಿ ಅವರನ್ನೇ ಕಚ್ಚಿದವು. ಅವರು, `ಜೇನು ಜೇನು’ ಎಂದು ಕೂಗುತ್ತಿದ್ದಂತೆ ಎಲ್ಲರೂ ಓಟಕಿತ್ತರು. ನೀರಿನಲ್ಲಿದ್ದ ನಾನು, ಶಿವಣ್ಣ, ಸಹಾಯಕಿ ಓಡಲು ಸಾಧ್ಯವಿರಲಿಲ್ಲ.
ನನಗೆ ಜೇನು ಕಡಿಯಬಾರದೆಂದು ಸಹಾಯಕಿ ತನ್ನ ಸೀರೆ ಸೆರಗನ್ನು ನನಗೆ ಮುಚ್ಚಿದಳು. ಮತ್ತೊಂದೆಡೆ ಶಿವಣ್ಣನೂ ನನ್ನ ನೆರವಿಗೆ ಧಾವಿಸಿದರು. ಜೇನಿನಿಂದ ಅಪಾಯ ತಪ್ಪುತ್ತದೆಂದು ನನ್ನನ್ನು ನೀರೊಳಗೆ ಮುಳುಗಿಸತೊಡಗಿದರು! ಈಜು ಬಾರದ ನನಗೆ ಉಸಿರು ಕಟ್ಟತೊಡಗಿತು. ಒಂದೆಡೆ ಜೇನು, ಮತ್ತೊಂದೆಡೆ ನೀರು. ಗಾಬರಿಯಿಂದ ಓಡಿದ ನಾನು ಅಪಾಯದಿಂದ ಪಾರಾದೆ. ಆದರೆ ಶಿವಣ್ಣ ಸಿಕ್ಕಿಹಾಕಿಕೊಂಡರು. ಜೇನು ಹುಳುಗಳು ಕಡಿದು ಅವರ ಮುಖ, ಮೈ ಊದಿಕೊಂಡಿತು. ನಾಲ್ಕೈದು ದಿನಗಳವರೆಗೆ ದೇಸಾಯಿ ಶೂಟಿಂಗ್ ಕ್ಯಾನ್ಸಲ್ ಮಾಡಿದರು. ಶಿವರಾಜ್ಕುಮಾರ್ ಚಿಕಿತ್ಸೆಗೆಂದು ಬೆಂಗಳೂರಿಗೆ ಮರಳಿದರು.
ಸಹಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ, ಅವರಿಗೆ ತಮ್ಮ ಕೈಲಾದ ನೆರವು ನೀಡುವ ನಟ ಶಿವಣ್ಣ. 58ರ ಹರೆಯದಲ್ಲೂ ಅವರು ಯುವಕರೂ ನಾಚಿಸುವಂತೆ ಡ್ಯಾನ್ಸ್ ಮಾಡುತ್ತಾರೆ. ಇತ್ತೀಚಿನ ಅವರ ವೈವಿಧ್ಯಮಯ ಪಾತ್ರಗಳು ನನಗೆ ಖುಷಿ ಕೊಟ್ಟಿವೆ. ಅವರು ಹೀಗೇ ನಟಿಸುತ್ತಾ, ನಮ್ಮೆಲ್ಲರನ್ನೂ ರಂಜಿಸುತ್ತಿರಲಿ, ಒನ್ಸ್ ಎಗೈನ್ ಹ್ಯಾಪಿ ಬರ್ತ್ಡೇ ಶಿವಣ್ಣ.