ಭಾರೀ ಕಸರತ್ತು ನಡೆಸಿ ಗಳಿಸಿಕೊಂಡಿದ್ದ ಮುಖ್ಯಮಂತ್ರಿ ಪದವಿಯನ್ನು ಉಳಿಸಿಕೊಳ್ಳಲು ಎದುಸಿರು ಬಿಡುತ್ತಿದ್ದ ಉದ್ಧವ್ ಠಾಕ್ರೆ ಈಗ ನಿಟ್ಟುಸಿರು ಬಿಡುವಂತಾಗಿದೆ. ಮುಖ್ಯಮಂತ್ರಿ ಕುರ್ಚಿಯಲ್ಲಿ ಮುಂದುವರೆಯಲು ಒಂದೇ ಸಲಕ್ಕೆ ಮೂರು ರೀತಿಯ ದಾಳ ಉರುಳಿಸಿದ ಉದ್ಧವ್ ಠಾಕ್ರೆಗೆ ಕೇಂದ್ರ ಚುನಾವಣಾ ಆಯೋಗದಿಂದ ಶುಕ್ರವಾರ ಶುಭ ಸುದ್ದಿ ಸಿಕ್ಕಿದೆ.
ಉದ್ಧವ್ ಠಾಕ್ರೆ ಸಮಸ್ಯೆ ಏನಿತ್ತು?
ಉದ್ಧವ್ ಠಾಕ್ರೆ ಕಳೆದ ವರ್ಷ ನವೆಂಬರ್ 28ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಿಲ್ಲದವರು ಕೂಡ ಸಚಿವ, ಉಪ ಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ ಆಗಲು ಭಾರತದ ಸಂವಿಧಾನದ 164ನೇ ವಿಧಿ ಪ್ರಕಾರ ಅವಕಾಶ ಇದೆ. ಈ ಅವಕಾಶದ ಆಧಾರ ಮೇಲೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಆದರೆ ಅದೇ ಕಾನೂನು ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಿಲ್ಲದವರು ಸಚಿವ, ಉಪ ಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಆರು ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಗೆ ಸದಸ್ಯರಾಗಿ ಆಯ್ಕೆ ಆಗಬೇಕೆಂದು ಹೇಳುತ್ತದೆ. ಆ ಕಾಲಮಿತಿಯ ಪ್ರಕಾರ ಉದ್ಧವ್ ಠಾಕ್ರೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಬೇಕಾಗಿದೆ.
ವಿಧಾನಸಭೆಗೆ ಹೋಗುವುದನ್ನು ಉದ್ಧವ್ ಠಾಕ್ರೆ ಮೊದಲಿಂದಲೂ ಒಂದು ಆಯ್ಕೆ ಎಂದು ಪರಿಗಣಿಸಿರಲಿಲ್ಲ. ಹೇಗೂ ವಿಧಾನ ಪರಿಷತ್ತಿನ 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತಾವು ಸುಲಭವಾಗಿ ಆಯ್ಕೆ ಆಗಬಹುದು ಎಂದುಕೊಂಡಿದ್ದರು. ಆದರೆ ಕರೋನ ಮತ್ತು ಲಾಕ್ಡೌನ್ ಕಾರಣಕ್ಕೆ ಮಾರ್ಚ್ 26ರಂದು ಮಹಾರಾಷ್ಟ್ರ ವಿಧಾನ ಪರಿಷತ್ತಿನ 9 ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆ ಮುಂದೂಡಲ್ಪಟ್ಟಿದೆ. ಆದುದರಿಂದ ಉದ್ಧವ್ ಠಾಕ್ರೆ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಆಗುವ ಏಕಮಾತ್ರ ಆಯ್ಕೆ ಉಳಿದುಕೊಂಡಿತು. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಜೂನ್ 1ಕ್ಕೆ 12 ನಾಮ ನಿರ್ದೇಶನ ಸ್ಥಾನಗಳು ಖಾಲಿಯಾಗಲಿವೆ. ಅಲ್ಲದೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಎನ್ ಸಿಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ರಾಹುಲ್ ನಾವೆರ್ಕರ್ ಮತ್ತು ರಾಮರಾವ್ ವಾಧೋಢ್ಕರ್ ಬಿಜೆಪಿ ಸೇರಿದ್ದರಿಂದ ಆ ಎರಡು ಸ್ಥಾನಗಳು ಖಾಲಿಯಾಗಿವೆ.
ಖಾಲಿಯಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಉದ್ಧವ್ ಠಾಕ್ರೆ ಅವರನ್ನು ನಾಮನಿರ್ದೇಶನ ಮಾಡುವಂತೆ ಏಪ್ರಿಲ್ 9ರಂದು ಮಹಾರಾಷ್ಟ್ರ ಸಚಿವ ಸಂಪುಟ ಸಭೆ ತೀರ್ಮಾನಿಸಿ ರಾಜ್ಯಪಾಲ ಬಿ.ಎಸ್. ಕೊಶ್ಯಾರಿ ಅವರಿಗೆ ಶಿಫಾರಸು ಮಾಡಿತ್ತು. ಸರ್ಕಾರದ ಪ್ರಸ್ತಾಪವನ್ನು ರಾಜ್ಯಪಾಲರು ನಿರಾಕರಿಸಿದ್ದರಿಂದ ಏಪ್ರಿಲ್ 27 ರಂದು ಮತ್ತೊಮ್ಮೆ ಸಂಪುಟ ಸಭೆ ಸೇರಿ ಶಿಫಾರಸನ್ನು ಮಾಡಿತು. ಆದರೂ ರಾಜ್ಯಪಾಲ ಕೊಶ್ಯರಿಯಿಂದ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಮರೆಯಲಾಗದ ಮುಖಭಂಗ
ಈಗಾಗಲೇ ಎನ್ ಸಿ ಪಿ ಸದಸ್ಯರ ನಿರ್ಗಮನದಿಂದ ತೆರವಾಗಿದ್ದ ವಿರೋಧ ಪರಿಷತ್ತಿನ ಎರಡು ಸ್ಥಾನಗಳಿಗೆ ರಾಜ್ಯಪಾಲ ಬಿ.ಎಸ್. ಕೊಶ್ಯಾರಿ ಸಿಎಂ ಉದ್ಧವ್ ಠಾಕ್ರೆಯನ್ನು ನಾಮ ನಿರ್ದೇಶನ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಇದಕ್ಕೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವೇಳೆ ನಡೆದ ಹೈಡ್ರಾಮಗಳೇ ಕಾರಣ ಎಂದು ಹೇಳಲಾಗುತ್ತಿದೆ. ಅಜಿತ್ ಪವಾರ್ ನೆರವಿನಿಂದ ರಚಿಸಿದ್ದ ಬಿಜೆಪಿ ಸರ್ಕಾರವನ್ನು ಪತನಗೊಳಿಸಿ ತನ್ನ ಸರ್ಕಾರ ರಚಿಸುವಲ್ಲಿ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆಗಳು ಯಶಸ್ವಿಯಾಗಿದ್ದವು. ಆಗ ಪ್ರಧಾನಿ ಮೋದಿ, ಬಿಜೆಪಿಯ ಅಂದಿನ ಅಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯಪಾಲ ಬಿ.ಎಸ್. ಕೊಶ್ಯಾರಿ ಅವರಿಗೆ ತೀವ್ರ ಮುಖಭಂಗವಾಗಿತ್ತು. ಆ ಮುಖಭಂಗವನ್ನು ತ್ರಿಮೂರ್ತಿಗಳು ಮರೆತಿರಲಾರರು. ಅದೇ ಕಾರಣಕ್ಕೆ ‘ಖಾಲಿ ಇರುವ ಸ್ಥಾನದ ಅವಧಿ ವರ್ಷ ಅಥವಾ ವರ್ಷಕ್ಕಿಂತ ಹೆಚ್ಚಾಗಿದ್ದರೆ ಮಾತ್ರ ರಾಜ್ಯಪಾಲರಿಗೆ ನಾಮ ನಿರ್ದೇಶನ ಮಾಡುವ ವಿವೇಚನಾಧಿಕಾರ ಇರುತ್ತೆ’ ಎಂಬ ತಾಂತ್ರಿಕ ಕಾರಣ ಕೊಟ್ಟು ಉದ್ಧವ್ ಠಾಕ್ರೆಯನ್ನು ನಾಮ ನಿರ್ದೇಶನ ಮಾಡಿರಲಿಲ್ಲ.
ಮೋದಿಗೆ ಮಧ್ಯರಾತ್ರಿ ಕರೆ
ರಾಜ್ಯಪಾಲ ಬಿ.ಎಸ್. ಕೊಶ್ಯಾರಿ ನಡೆಯಿಂದ ವಿಚಲಿತರಾದ ಉದ್ಧವ್ ಠಾಕ್ರೆ ಮೊನ್ನೆ ಮಧ್ಯರಾತ್ರಿ ಪ್ರಧಾನ ಮಂತ್ರಿ ಮೋದಿಗೆ ಕರೆ ಮಾಡಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿದರು. ಒಂದು ಕಡೆ ಸಚಿವ ಸಂಪುಟ ಸಭೆಗಳ ತೀರ್ಮಾನದ ಮೂಲಕ ಇನ್ನೊಂದೆಡೆ ಕೇಂದ್ರ ಸರ್ಕಾರದ ಮೂಲಕ ರಾಜ್ಯಪಾಲರ ಮೇಲೆ ಒತ್ತಡ ತಂದ ಉದ್ದವ್ ಠಾಕ್ರೆ, ಭಾರತ್ ಜನ ಆಧಾರ್ ಪಕ್ಷದ ಸ್ಥಾಪಕ ಅಧ್ಯಕ್ಷರಾಗಿರುವ ಸುರಿಂದರ್ ಅರೋರಾ ಎಂಬುವವರ ಮೂಲಕ ಬಾಂಬೆ ಹೈಕೋರ್ಟಿನಲ್ಲೂ ಅರ್ಜಿ ಸಲ್ಲಿಸಿದರು. ಈ ಅರ್ಜಿಯ ವಿಚಾರಣೆ ಮೇ 5ರಂದು ನಡೆಯುವ ಸಂಭವ ಇತ್ತು. ಒಂದೇ ಸಲಕ್ಕೆ ಹೀಗೆ ಉದ್ಧವ್ ಠಾಕ್ರೆ ಮೂರು ರೀತಿಯ ದಾಳ ಉರುಳಿಸಿದರು.
ಎಲ್ಲೆಡೆಯಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲ ಬಿ.ಎಸ್. ಕೊಶ್ಯಾರಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮಹಾರಾಷ್ಟ್ರದಲ್ಲಿ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸುವ ಬಗ್ಗೆ ಮಾಹಿತಿ ಕೇಳಿದರು. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನಿಲ್ ಅರೋರಾ ಲಾಕ್ಡೌನ್ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಸಿಲುಕಿದ್ದಾರೆ. ಅವರು ಶುಕ್ರವಾರ ಬೆಳಿಗ್ಗೆಯೇ ಆಯೋಗದ ಇತರೆ ಆಯುಕ್ತರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ ಮೇ 27ರೊಳಗೆ ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಅನುಮೋದನೆ ನೀಡಿದ್ದಾರೆ. ಇದರಿಂದ ಉದ್ಧವ್ ಠಾಕ್ರೆ ಕಡೆಗೂ ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.