‘ಇದು ಧರ್ಮ ಹಾಗೂ ಅಧರ್ಮದ ನಡುವಣ ಚುನಾವಣೆ. ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ, ಮಹಿಳೆಯರಿಗೆ ಕಿರುಕುಳ, ಮತ ಮಾರಾಟ, ಮಾತೃ ಪಕ್ಷಕ್ಕೆ ದ್ರೋಹದಂತಹ ಅಧರ್ಮವನ್ನು ಮಣಿಸಲು, ನಿಮ್ಮ ಸೇವೆಗೆ ಪ್ರಾಮಾಣಿಕವಾಗಿ ಧರ್ಮ ಪಾಲಿಸುತ್ತಿರುವ ಕುಸುಮಾ ಅವರಿಗೆ ಮತ ನೀಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತದಾರರಿಗೆ ಕರೆ ನೀಡಿದ್ದಾರೆ.
ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಪ್ರಚಾರ ನಡೆಸಿದ ಶಿವಕುಮಾರ್ ರಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಚೆಲುವರಾಯಸ್ವಾಮಿ, ಪಕ್ಷದ ಅಭ್ಯರ್ಥಿ ಕುಸುಮಾ ಹೆಚ್ ಅವರು ಜೊತೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
‘ಚುನಾವಣಾ ಆಯೋಗ ನನಗೆ ನೋಟೀಸ್ ಕೊಟ್ಟಿತ್ತು ಹೀಗಾಗಿ ತಡವಾಗಿ ಬಂದಿದ್ದೇನೆ. ನಿನ್ನೆ ನಾನು ಭಾಷಣ ಮಾಡುವಾಗ ಮುನಿರತ್ನ ದುಡ್ಡು ಕೊಟ್ಟರೆ ತೆಗೆದುಕೊಳ್ಳಿ, ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಮತಹಾಕಿ ಎಂದು ಹೇಳಿದ್ದೆ. ಅದು ನಡೀತಿರೋದು ನಿಜತಾನೆ? ನೀವು ಹೌದು ಎನ್ನುತ್ತಿದ್ದೀರಿ. ಅವರು ನನಗೆ 24 ಗಂಟೆಯಲ್ಲಿ ಉತ್ತರ ನೀಡುವಂತೆ ಹೇಳಿದ್ದಾರೆ. ಬಿಜೆಪಿಯವರು ದುಡ್ಡು, ಸೆಟ್ಟ್ಯಾಪ್ ಬಾಕ್ಸ್ ಕೊಡುತ್ತಿರೋದು ನಿಜತಾನೇ? ಚುನಾವಣಾ ಆಯೋಗ ಏನು ಮಾಡುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ನಾಮಪತ್ರ ಸಲ್ಲಿಸುವಾಗ ನಮ್ಮ ಅಭ್ಯರ್ಥಿ ಮೇಲೆ ಪ್ರಕರಣ ದಾಖಲಿಸುತ್ತಾರೆ. ಹೀಗೆ ಕೇಸು ಹಾಕುತ್ತಿದ್ದಾರೆ, ಹೆದರಿಸುತ್ತಿದ್ದಾರೆ, ಮತದಾರರ ಗುರುತಿನ ಚೀಟಿ ಕಿತ್ತುಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಚುನಾವಣಾ ಆಯೋಗ ನೋಡಲಿ ಅಂತಾನೆ ನಿಮಗೆ ಈ ಪ್ರಶ್ನೆ ಕೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಮುನಿರತ್ನ ನೀಡುತ್ತಿರುವ ಸೆಟ್ಟಾಪ್ ಬಾಕ್ಸ್ ಅನ್ನು ಎತ್ತಿಕೊಂಡು ಹೋಗಿ ಬಿಸಾಡುವ. ನಮಗೆ ನೋಟೀಸ್ ಕೊಟ್ಟವರ ಆಫೀಸ್ ಮುಂದೆ ಹಾಕೋಣ. ಅವರು ದುಡ್ಡು ಕೊಡೋದನ್ನು ರೆಕಾರ್ಡ್ ಮಾಡಿಕೊಳ್ಳಿ ಎಂದಿದ್ದಾರೆ.
ಬಿಜೆಪಿಯು, ಸಾವಿರಾರು ಕಾರ್ಯಕರ್ತರ ಮೇಲೆ ಒಬ್ಬೊಬ್ಬರ ಮೇಲೆ 8-10 ಕೇಸ್ ದಾಖಲಿಸಿ ಕಿರುಕುಳ ನೀಡುತ್ತಿದೆ. ದಳದ 300 ಜನರ ಮೇಲೆ ಪ್ರಕರಣ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಾವಿರ ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿನ ಮಹಿಳಾ ಕಾರ್ಪೊರೇಟರ್ ಗಳು ಕಣ್ಣೀರಿಟ್ಟರು. ನಾವೆಲ್ಲ ಇವರಿಗೆ ಮತ ಹಾಕಬೇಕಾ? ಸಂಸಾರಸ್ಥರು, ಮರ್ಯಾದಸ್ಥರು ಹೆಣ್ಣನ್ನು ಗೌರವಿಸುತ್ತಾರೆ. ನವರಾತ್ರಿ ಸಮಯ ಇದು ತಾಯಿ ಚಾಮುಂಡೇಶ್ವರಿ ಭಕ್ತರ ದುಃಖ ದೂರಮಾಡುವ ತಾಯಿ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಇಂತಹ ಅನಿಷ್ಟ ರಾಜಕಾರಣಿಯಿಂದ ಮುಕ್ತಿ ಕೊಡಿಸಬೇಕಿದೆ ಎಂದು ಕರೆ ಈಡಿದ್ದಾರೆ.
ನಿಮ್ಮ ಪ್ರೀತಿ ವಿಶ್ವಾಸವನ್ನು ಹಣ, ಅಧಿಕಾರದ ಆಸೆಗೆ ಮಾರಲ್ಲ: ಕುಸುಮಾ
‘ನಾನು ನಿಮ್ಮ ಸೇವೆ ಮಾಡಲು ಬಯಸಿದ್ದು, ನಿಮ್ಮ ಪ್ರೀತಿ ವಿಶ್ವಾಸವನ್ನು ಎಂದಿಗೂ ಹಣ, ಅಧಿಕಾರದ ಆಸೆಗೆ ಮಾರಿಕೊಳ್ಳುವುದಿಲ್ಲ’ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನಲೆಯಲ್ಲಿ ಭಾನುವಾರ ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಜತೆ ಪ್ರಚಾರ ನಡೆಸಿದ ಕುಸುಮಾ ʼನಾನು ಯಾವುದೇ ದುರಾಲೋಚನೆ ಇಟ್ಟುಕೊಂಡು ಈ ಚುನಾವಣೆಗೆ ಬಂದಿಲ್ಲ. ನಿಮ್ಮ ಸೇವೆಗೆ ನಾನು ಬಂದಿದ್ದೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೈಲಾದ ಪ್ರಯತ್ನ ಪಡುತ್ತೇನೆ. ನೀವು ಕೊಡುವ ಮತವನ್ನು ಮಾರಿಕೊಳ್ಳುವುದಿಲ್ಲ. ನಿಮ್ಮ ನೋವು, ದುಃಖದಲ್ಲಿ ನಿಮ್ಮ ಮನೆ ಮಗಳಂತೆ ಜೊತೆಗಿರುತ್ತೇನೆ. ನಿಮ್ಮ ಮಗಳಿಗೆ ನೀಡುವ ಪ್ರೋತ್ಸಾಹವನ್ನೇ ನನಗೂ ನೀಡಿ ಎಂದು ಅವರು ಕೇಳಿಕೊಂಡಿದ್ದಾರೆ.