ಕರೋನಾ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಹೊತ್ತಿನಲ್ಲಿ ಆಡಳಿತ ಮತ್ತು ಕಾನೂನು ವ್ಯವಸ್ಥೆಯಲ್ಲಿ ಕೂಡ ಬಿಜೆಪಿ ಸರ್ಕಾರ ತನಗೆ ಬೇಕಾದಂತೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ ಎಂಬುದು ಹಲವು ಕಾನೂನು ತಿದ್ದುಪಡಿಗಳು ಮತ್ತು ಆಡಳಿತ ನೀತಿಯ ಬದಲಾವಣೆಗಳಲ್ಲಿ ಸಾಬೀತಾಗಿದೆ. ಹೊಸ ಸಂಗತಿ ಎಂದರೆ; ದೇಶದ ಪರಿಸರ, ಕೃಷಿ, ಶಿಕ್ಷಣ, ಆರೋಗ್ಯ ವಲಯಗಳಿಗೆ ಸಂಬಂಧಿಸಿದಂತೆ ಕಾರ್ಪೊರೇಟ್ ಕಂಪನಿಗಳ ಹಿತ ಕಾಯುವ, ಜನಹಿತವನ್ನು ಬುಡಮೇಲು ಮಾಡುವ ಇಂತಹ ನಡೆಗಳನ್ನು ವಿರೋಧಿಸುವವರ ಮೇಲೆ ಸರ್ಕಾರ ಪರೋಕ್ಷ ದಾಳಿಗೆ ಇಳಿದಿರುವುದು!
ಹೌದು, ಸರ್ಕಾರದ ಜನವಿರೋಧಿ ನಡೆಗಳನ್ನು, ಕ್ರಮಗಳನ್ನು ಪ್ರಶ್ನಿಸುವ, ವಿರೋಧಿಸುವ ಮತ್ತು ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮುಂದಾಗುವ ಸಂಘಟನೆಗಳು, ವ್ಯಕ್ತಿಗಳ ವಿರುದ್ಧ ಸರ್ಕಾರ ಪ್ರತ್ಯಕ್ಷ ಮತ್ತು ಪರೋಕ್ಷ ದಾಳಿ ನಡೆಸುತ್ತಿದೆ. ಅದಕ್ಕೆ ತಾಜಾ ಉದಾಹರಣೆ; ವಿವಾದಾತ್ಮಕ ಪರಿಸರ ಪರಿಣಾಮ ಅಂದಾಜು(ಇಐಎ) ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಿರುವ ಕಾಯ್ದೆ ತಿದ್ದುಪಡಿಗಳು ಪರಿಸರ ಮಾರಕವಾಗಿವೆ. ಉದ್ಯಮ ಮತ್ತು ಕಂಪನಿಗಳ ಹಿತ ಕಾಯುವ ಉದ್ದೇಶ ಹೊಂದಿದೆ. ಹಾಗಾಗಿ ಆ ಕರಡು ತಿದ್ದುಪಡಿಯನ್ನು ಕೈಬಿಡಬೇಕು ಎಂದು ಸಕಾರಗಳನ್ನು ನೀಡಿ ಸರ್ಕಾರದ ಕ್ರಮವನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಮೂರು ಸ್ವಯಂಸೇವಾ ಸಂಸ್ಥೆಗಳ ವೆಬ್ ತಾಣಗಳನ್ನು ಈಗ ಸ್ಥಗಿತಗೊಳಿಸಲಾಗಿದೆ.
ಈ ಮೊದಲು ಜಾರಿಯಲ್ಲಿದ್ದ, ಯಾವುದೇ ಉದ್ಯಮ ಮತ್ತು ಕಾರ್ಖಾನೆ ಆರಂಭಿಸಲು ಪರಿಸರ ಪರಿಣಾಮ ಅಂದಾಜು (ಇಐಎ) ವರದಿ ಕಡ್ಡಾಯ ಎಂಬ ನಿಯಮವನ್ನು ತೆಗೆದುಹಾಕಿ, ಮೊದಲು ಉದ್ಯಮ ಅಥವಾ ಕಾರ್ಖಾನೆಯ ಚಟುವಟಿಕೆ ಆರಂಭಿಸಲಿ, ಬಳಿಕ ಕ್ರಮೇಣ ಇಐಎ ವರದಿ ಪಡೆದುಕೊಳ್ಳಲಿ ಎಂಬ ಹೊಸ ಪದ್ಧತಿ ಜಾರಿಗೆ ತರುವುದು ಈ ತಿದ್ದುಪಡಿಯ ಪ್ರಮುಖ ಅಂಶ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ಛತ್ತೀಸಗಢ, ಜಾರ್ಖಂಡ್ ನ ಲಕ್ಷಾಂತರ ಎಕರೆ ಅರಣ್ಯ (ಅಭಯಾರಣ್ಯವೂ ಸೇರಿ) ಭೂಮಿಯಲ್ಲಿ ಗಣಿಗಾರಿಕೆಯಂತಹ ಚಟುವಟಿಕೆಗೆ ಖಾಸಗಿ ಕಂಪನಿಗಳಿಗೆ ಅವಕಾಶ ನೀಡಲಾಗಿದೆ. ಕರ್ನಾಟಕದ ಶರಾವತಿ ಕಣಿವೆಯಲ್ಲಿ ಅತ್ಯಂತ ಅಪಾಯಕಾರಿ ಭೂಗರ್ಭ ಜಲವಿದ್ಯುತ್ ಯೋಜನೆಗೆ ಮುಂದಾಗಿದೆ. ಲಕ್ಷಾಂತರ ಮರ ನಾಶದ ಹಲವು ಹೆದ್ದಾರಿ ಯೋಜನೆಗಳಿಗೆ, ರೈಲು ಮಾರ್ಗ ನಿರ್ಮಾಣ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವೇ ಖುದ್ದು ಆಸಕ್ತಿ ವಹಿಸಿ ಹಸಿರು ನಿಶಾನೆ ತೋರಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪರಿಸರ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಕಾನೂನು ಕ್ರಮವಾದ ಪರಿಸರ ಪರಿಣಾಮ ಅಂದಾಜು ವರದಿಯನ್ನು ಅಪ್ರಸ್ತುಗೊಳಿಸಲು ಸರ್ಕಾರದ ಹೊಸ ತಿದ್ದುಪಡಿಗೆ ಮುಂದಾಗಿದೆ.
ಸರ್ಕಾರದ ಈ ತಿದ್ದುಪಡಿ ಜಾರಿಗೆ ಬಂದಲ್ಲಿ; ಇನ್ನು ಮುಂದೆ ಯಾವುದೇ ಉದ್ಯಮ ಅಥವಾ ಪರಿಸರ ಮಾರಕ ಚಟುವಟಿಕೆಗಳನ್ನು ಆರಂಭಿಸಲು ಪರಿಸರಕ್ಕೆ ಸಂಬಂಧಿಸಿದ ಯಾವ ಅನುಮತಿಯೂ ಬೇಕಾಗಿಲ್ಲ. ಯಾರು ಬೇಕಾದರೂ ನೇರವಾಗಿ ಉದ್ಯಮ ಚಟುವಟಿಕೆ ಆರಂಭಿಸಬಹುದು. ಮತ್ತು ಎಲ್ಲಾ ಚಟುವಟಿಕೆ ಆರಂಭವಾದ ಬಳಿಕ ಕ್ರಮೇಣ ಪ್ರಮಾಣ ಪತ್ರ ಪಡೆಯಬಹುದು! ಇಂತಹ ತಿದ್ದುಪಡಿ ಪರಿಸರವನ್ನು ಕೊಳ್ಳೆ ಹೊಡೆಯುವ ಹುನ್ನಾರ, ಈಗಾಗಲೇ ದೇಶದಲ್ಲಿ ವಿವಿಧ ಕಾರಣಗಳಿಗಾಗಿ ಅರಣ್ಯ ಮತ್ತು ಪರಿಸರ ಆತಂಕಕಾರಿ ಪ್ರಮಾಣದಲ್ಲಿ ಅಪಾಯದಲ್ಲಿದೆ. ಇದೀಗ ಇನ್ನಷ್ಟು ಬಿಗಿ ಕ್ರಮಗಳ ಮೂಲಕ ಪರಿಸರ ಸಂರಕ್ಷಣೆಯ ಯತ್ನ ಮಾಡಬೇಕಾದ ಸರ್ಕಾರ, ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ದೇಶಾದ್ಯಂತ ಹಲವು ಪರಿಸರ ಸಂಘಟನೆಗಳು ಈ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.
ಆ ಪೈಕಿ ‘ಲೆಟ್ ಇಂಡಿಯಾ ಬ್ರೀತ್’, ‘ಫ್ರೈಡೆ ಫಾರ್ ಫ್ಯೂಚರ್’ ಮತ್ತು ‘ದೇರ್ ಈಸ್ ನೋ ಅರ್ಥ್ ಬಿ’ ಎಂಬ ಮೂರು ಪರಿಸರ ಸಂಘಟನೆಗಳ ವೆಬ್ ಸೈಟುಗಳನ್ನು ಸರ್ಕಾರ ಪ್ರತೀಕಾರದ ಕ್ರಮವಾಗಿ ಸ್ಥಗಿತಗೊಳಿಸಿದೆ. ಕೇಂದ್ರ ಸರ್ಕಾರದ ಪರಿಸರ ವಿರೋಧಿ ನೀತಿಗಳನ್ನು ವಿರೋಧಿಸಿದ್ದೇ ತಮ್ಮ ಮೇಲೆ ಈ ಕ್ರಮ ಜರುಗಿಸಲಾಗಿದೆ. ನಮ್ಮ ವೆಬ್ ತಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಇಂಟರ್ ನೆಟ್ ಸೆನ್ಸಾರ್ ಶಿಪ್ ಅಲ್ಲದೆ ಬೇರೇನಲ್ಲ ಎಂದು ಆ ಸಂಘಟನೆಗಳು ಹೇಳಿವೆ.
ಅದೇ ಹೊತ್ತಿಗೆ, ಸರ್ಕಾರದ ಆದೇಶದ ಪ್ರಕಾರವೇ ತಾವು ಆ ವೆಬ್ ತಾಣಗಳನ್ನು ಸ್ಥಗಿತಗೊಳಿಸಿರುವುದಾಗಿ ಡೊಮೈನ್ ರೆಜಿಸ್ಟ್ರಿ ನ್ಯಾಷನಲ್ ಇಂಟರ್ ನೆಟ್ ಎಕ್ಸ್ ಚೇಂಜ್ ಆಫ್ ಇಂಡಿಯಾ(ನಿಕ್ಸಿ) ಖಚಿತಪಡಿಸಿದೆ ಎಂದು ‘ದ ಪ್ರಿಂಟ್’ ಸುದ್ದಿ ಜಾಲತಾಣ ಹೇಳಿದೆ. ನಿಕ್ಸಿ ಸಿಇಒ ಸಂಜಯ್ ಗೋಯಲ್, “ಸರ್ಕಾರದ ಸೂಚನೆಯಂತೆ ವೆಬ್ ತಾಣಗಳನ್ನು ಸ್ಥಗಿತಗೊಳಿಸಲಾಗಿದೆ” ಎಂದಿದ್ದಾರೆ. ಆದರೆ, ನಿರ್ದಿಷ್ಟವಾಗಿ ಯಾವ ಸಚಿವಾಲಯದ ಆದೇಶದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ ಎಂದು ‘ದ ಪ್ರಿಂಟ್’ ವರದಿ ಹೇಳಿದೆ.
ಯಾವುದೇ ನೋಟೀಸ್ ನೀಡದೆ, ಯಾಕೆ ಈ ಕ್ರಮ ಎಂಬ ಕಾರಣವನ್ನೂ ನೀಡದೆ ವೆಬ್ ತಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಇಂತಹ ಕ್ರಮ ಇದೇ ಮೊದಲು. ಜಾಲತಾಣದ ಮೂಲಕ ಸರ್ಕಾರದ ಪ್ರಸ್ತಾವಿತ ಕರಡು ತಿದ್ದುಪಡಿಗೆ ಆಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಅಂತಹ ಆಕ್ಷೇಪಗಳು ದೊಡ್ಡ ಸಂಖ್ಯೆಯಲ್ಲಿ ಸಲ್ಲಿಕೆಯಾಗುತ್ತಿದ್ದವು. ಬಹುಶಃ ಸರ್ಕಾರ ಜನಾಭಿಪ್ರಾಯವನ್ನು ಹತ್ತಿಕ್ಕುವ ಉದ್ದೇಶದಿಂದಲೇ ಆ ಆಕ್ಷೇಪಗಳಿಗೆ ತಡೆಯೊಡ್ಡುವ ದುರುದ್ದೇಶದಿಂದಲೇ ಈ ವೆಬ್ ತಾಣಗಳನ್ನ ಅಕಾರಣವಾಗಿ ಸ್ಥಗಿತಗೊಳಿಸಿದೆ ಎಂದು ಸ್ವಯಂಸೇವಾ ಸಂಸ್ಥೆಗಳು ಆರೋಪಿಸಿವೆ.
ಈ ಕರಡು ತಿದ್ದುಪಡಿಗೆ ಆಕ್ಷೇಪ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿತ್ತು. ಆದರೆ, ಆ ಗಡುವು ವಿಸ್ತರಣೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಆಗಸ್ಟ್ 11ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿ ತೀರ್ಪು ನೀಡಿತ್ತು. ಆದರೆ, ಈ ವೆಬ್ ತಾಣಗಳು ಬಹುತೇಕ ಜೂನ್ ಎರಡನೇ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಸ್ಥಗಿತವಾಗಿವೆ ಎಂಬುದು ಗಮನಾರ್ಹ.
ಸರ್ಕಾರ, ಪರಿಸರ ವಿರೋಧಿಯಾದ ತನ್ನ ಕಾನೂನು ತಿದ್ದುಪಡಿಯನ್ನು ಶತಾಯಗತಾಯ ಜಾರಿಗೆ ತರಲು ಯಾವೆಲ್ಲಾ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಈ ಸ್ವಯಂಸೇವಾ ಸಂಸ್ಥೆಗಳ ಮೇಲಿನ ಈ ದಾಳಿ ಒಂದು ನಿದರ್ಶನ.