ಲಾಕ್ಡೌನ್ ಹಿನ್ನಲೆಯಲ್ಲಿ ಶಾಲಾ ಕಾಲೇಜು ತರಗತಿಗಳು ಸ್ಥಗಿತಗೊಳಿಸಿರುವುದರಿಂದ ಆನ್ಲೈನ್ ತರಗತಿಗಳು ಆರಂಭಿಸಲಾಗಿದೆ. ಆನ್ಲೈನ್ ತರಗತಿ ಆರಂಭವಾದ್ದರಿಂದ ಹಲವಾರು ವಿವಾದಗಳು ಈ ಪ್ರಕ್ರಿಯೆಯ ಸುತ್ತ ಜರುಗುತ್ತಿವೆ. ಆನ್ಲೈನ್ ತರಗತಿಗಳು ನಡೆಸದಂತೆ ತಡೆ ಹಿಡಿಯಲು ಚೆನೈ ಮೂಲ ಸರಣ್ಯ ಎಸ್ ಎಂಬವರು ವಕೀಲ ಆರ್ ಕೃಷ್ಣ ಕುಮಾರ್ ಎಂಬವರ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ.
ಕೋವಿಡ್-19 ಬಿಕ್ಕಟ್ಟಿನ ಹಿನ್ನಲೆಯಲ್ಲಿ ಪ್ರಸ್ತುತ ಬಳಸುತ್ತಿರುವ ಆನ್ಲೈನ್ ಭೋಧನಾ ವ್ಯವಸ್ಥೆಯು ಹಲವಾರು ಮೂಲಭೂತ ನ್ಯೂನ್ಯತೆಗಳನ್ನು ಹೊಂದಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಅರ್ಜಿಯಲ್ಲಿ ಆನ್ಲೈನ್ ಕಲಿಕೆಗೆ ಎಲ್ಲಾ ವರ್ಗದ ಮಕ್ಕಳಿಗೂ ತಲುಪಲು ಸಾಧ್ಯವಾಗುತ್ತಿಲ್ಲ ಎಂಬುವುದನ್ನು ಎತ್ತಿ ಹಿಡಿಯಲಾಗಿದೆ.
ಕೇವಲ 8 ಶೇಕಡಾ ಮಕ್ಕಳ ಮನೆಯಲ್ಲಷ್ಟೇ ಇಂಟರ್ನೆಟ್ ಸಂಪರ್ಕ ಇರುವ ಕಂಪ್ಯೂಟರ್ಗಳು ಇವೆ. ಅನುಕೂಲಸ್ಥರ ಮನೆ ಮಕ್ಕಳಿಗಷ್ಟೇ ಸರಾಗವಾಗಿ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿದೆ. ಅವರಿಗಷ್ಟೇ ಆನ್ಲೈನ್ ತರಗತಿಗಳ ಹೆಚ್ಚುವರಿ ಶುಲ್ಕವನ್ನು ಭರಿಸಲಾಗುತ್ತಿದೆ, ಬಡ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದು ದುರ್ಭರವೆನಿಸುತ್ತಿದೆ ಎಂದಿದ್ದಾರೆ.

ಹಲವಾರು ಪೋಷಕರು ಆನ್ಲೈನ್ ತರಗತಿ ನಡೆಯುವ ಮಧ್ಯೆ ಅಶ್ಲೀಲ ಪಾಪ್ ಅಪ್ ಜಾಹಿರಾತುಗಳು ಬರುತ್ತಿದೆ, ಇದು ಮಕ್ಕಳ ಗಮನವನ್ನು ಕಲಿಕೆಯ ಕಡೆಯಿಂದ ಬೇರೆಡೆಗೆ ತಿರುಗಿಸುತ್ತದೆ, ಅಲ್ಲದೆ ವೆಬ್ಗಳಲ್ಲಿರುವ ನ್ಯೂನ್ಯತೆಗಳನ್ನು ಬಳಸಿಕೊಂಡು ಹ್ಯಾಕರ್ಗಳು ಮಕ್ಕಳ ಜೀವನದೊಂದಿಗೆ ಆಟವಾಡಬಹುದಾದ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.
ಆನ್ಲೈನ್ ತರಗತಿಗಳ ಕಲಿಕೆ ಎಲ್ಲಾ ಮಕ್ಕಳಿಗೂ ಸೂಕ್ತವಲ್ಲ ಎಂದು ವಾದಿಸಲಾಗಿದೆ. ಅಂತರ್ಜಾಲದಲ್ಲಿ ಹಲವಾರು ಆಯ್ಕೆಗಳಿದ್ದು ವಿದ್ಯಾರ್ಥಿಗಳು ಪಾಠದ ವಿಷಯ ಹೊರತು ಇನ್ನುಳಿದ ವಿಷಯಗಳನ್ನು ಹುಡುಕುವ ಸಾಧ್ಯತೆ ಇರುತ್ತದೆ. ಅಂತರ್ಜಾಲದಲ್ಲಿ ಅದಕ್ಕೆ ಅವಕಾಶವೂ ಇದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಕಂಪ್ಯೂಟರ್ ಸಿಸ್ಟಮ್ ಚೆನ್ನಾಗಿ ಉಪಯೋಗಿಸಲು ಬರುವ ಮಕ್ಕಳು ತರಗತಿಗೆ ಹಾಜರಾದಂತೆ ತೋರಿಸಲು ಹಾಗೂ ಅದೇ ಸಮಯ ಗೈರಾಗುವ ಸಾಧ್ಯತೆಯಿದೆ. ಇದು ಶಿಕ್ಷಕರ ಗಮನಕ್ಕೂ ಬರುವುದಿಲ್ಲ. ಹಾಜರಾತಿಯ ಕುರಿತು ಪರಿಣಮಕಾರಿ ಕ್ರಮ ಇನ್ನೂ ಕೈಗೊಂಡಿಲ್ಲಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರ ಆನ್ಲೈನ್ ಬೋಧನಾ ತರಗತಿಗಳಿಗೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಕಲಿಕೆಯಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತದೆ. ಹಾಗಾಗಿ ಮಾಹಿತಿ ತಂತ್ರಜ್ಞಾನದ ಕಾಯ್ದೆ 2000 ದ ಅಡಿಯಲ್ಲಿ ಮಾರ್ಗಸೂಚಿಗಳನ್ನು ರೂಪಿಸುವವರೆಗೆ ಆನ್ಲೈನ್ ತರಗತಿಗಳನ್ನು ನಿಲ್ಲಿಸಬೇಕೆಂದು ಅರ್ಜಿದಾರರು ಕೋರ್ಟಲ್ಲಿ ಕೇಳಿಕೊಂಡಿದ್ದಾರೆ.






