ಬೆಂಗಳೂರು ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ರಾಜಕಾರಣಿಗಳ ಆರೋಪ- ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. ಒಂದು ಕಡೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಲಿತರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದರೆ, ಕಾಂಗ್ರೆಸ್ ತನ್ನ ಮುಸ್ಲಿಂ ವೋಟ್ ಬ್ಯಾಂಕ್ ಭದ್ರಗೊಳಿಸಲು ಯತ್ನಿಸುತ್ತಿರುವುದು ಗೋಚರಿಸುತ್ತಿದೆ.
ಕಾವಲ ಭೈರಸಂದ್ರ ಪ್ರಕರಣದಲ್ಲಿ ಮೌನವಾಗಿದ್ದ ಮಾಜಿ ಗೃಹ ಸಚಿವ ರೋಷನ್ ಬೇಗ್ ಇತ್ತೀಚೆಗೆ ಅಖಾಡಕ್ಕಿಳಿದಿದ್ದರು. ಗಲಭೆಗೆ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಕಾರಣ ಎಂದಿದ್ದರು. ಅಲ್ಲದೆ ಎಸ್ಡಿಪಿಐಯನ್ನು ಕಾಂಗ್ರೆಸ್ ಪೋಷಿಸುತ್ತಿದೆ ಎಂಬ ಆರೋಪವನ್ನೂ ಮಾಡಿದ್ದರು.
ಸತತ ಏಳು ಬಾರಿ ಶಾಸಕರಾಗಿದ್ದ ರೋಷನ್ ಬೇಗ್, ಐದು ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದವರು. ಅಲ್ಲದೆ ಗೃಹ, ಪ್ರವಾಸೋದ್ಯಮ ಮತ್ತು ಹಜ್ ಸಚಿವ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆ, ಮೂಲಸೌಕರ್ಯ, ಮಾಹಿತಿ & ಸಾರ್ವಜನಿಕ ಸಂಪರ್ಕ, ನಗರಾಭಿವೃದ್ಧಿ, ನಗರ ನಿಗಮಗಳು, ನಗರ ಭೂ ಸಾರಿಗೆ ಮೊದಲಾದ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅದಾಗ್ಯೂ, 2019ರಲ್ಲಿ ಆಪರೇಷನ್ ಕಮಲದ ವೇಳೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷ ಉಚ್ಛಾಟಿಸಿತ್ತು. ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿತರಾದ ರೋಷನ್, ಬಳಿಕ ಬಿಜೆಪಿ ಸೇರಿಕೊಳ್ಳಲಾಗಿರಲಿಲ್ಲ. ಅದೇ ವೇಳೆ ಐಎಮ್ಎ ಬಹುಕೋಟಿ ಹಗರಣ ಬೆಳಕಿಗೆ ಬಂದಿದ್ದು, ರೋಷನ್ ಬೇಗ್ ಹೆಸರು ಹಗರಣದಲ್ಲಿ ತಳುಕು ಹಾಕಿಕೊಂಡಿತ್ತು.

ಶಾಸಕತ್ವದಿಂದ ಅನರ್ಹಗೊಂಡು ಅತ್ತಕಡೆ ಐಎಮ್ಎ ಹಗರಣ ಹಿನ್ನಲೆಯಲ್ಲಿ ಉಪಚುನಾವಣೆಯಲ್ಲೂ ಸ್ಪರ್ಧಿಸಲಾಗದೆ ಅತಂತ್ರರಾಗಿ ಉಳಿದ ರೋಷನ್ ರಾಜಕೀಯ ಭವಿಷ್ಯ ಮಸುಕು ಕವಿಯಲು ಶುರುವಾಗಿತ್ತು. ಬಿಜೆಪಿಯೊಂದಿಗೆ ಸೇರಿ ಮಾತೃ ಪಕ್ಷಕ್ಕೆ ದ್ರೋಹ ಬಗೆದು ಸರ್ಕಾರ ಉರುಳಿಸಲು ಸಹಕರಿಸಿದ ರೋಷನ್ರನ್ನು ಬಿಜೆಪಿಯೂ ಕೈಬಿಟ್ಟಿತು. ಬಳಿಕ ಜೆಡಿಎಸ್ ಕದ ತಟ್ಟಿದರೂ, ಜನತಾ ಪರಿವಾರದಲ್ಲಿ ಜೊತೆಗಿದ್ದ ಈ ಹಳೇ ಸ್ನೇಹಿತನ ಸ್ನೇಹ ಹಸ್ತಕ್ಕೆ ಜೆಡಿಎಸ್ ನಾಯಕತ್ವ ಕೂಡಾ ವಿಶೇಷ ಮನ್ನಣೆ ನೀಡಿರಲಿಲ್ಲ.
ರಾಜಕೀಯವಾಗಿ ಸಂಪೂರ್ಣ ಅತಂತ್ರರಾಗಿರುವ ರೋಷನ್, ಇದೇ ಕಾರಣಕ್ಕೆ ಬಿಜೆಪಿ ನಾಯಕತ್ವವನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಅದಕ್ಕೆ ಪೂರಕವೆಂಬಂತೆ ಕಾವಲಭೈರಸಂದ್ರ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ. ಜೊತೆಗೆ ಎಸ್ಡಿಪಿಐಯನ್ನು ಕಾಂಗ್ರೆಸ್ ಪೋಷಿಸುತ್ತಿದೆ ಎಂದಿದ್ದಾರೆ, ಆ ಮೂಲಕ ತನ್ನ ಇರುವಿಕೆಯನ್ನು ಬಿಜೆಪಿಗೆ ತೋರಿಸಲು ಹೆಣಗಾಡುತ್ತಿರುವಂತೆ ಭಾಸವಾಗುತ್ತಿದೆ.
ಆದರೆ ಇವರ ಆರೋಪಗಳಿಗೆ ಕಾಂಗ್ರೆಸ್ ಪಕ್ಷದ ಪ್ರಮುಖ ರಾಜಕಾರಣಿಯಾಗಿರುವ ಝಮೀರ್ ಅಹಮದ್ ಖಾನ್ ತೀಕ್ಷ್ಣ ಉತ್ತರ ನೀಡಿದ್ದಾರೆ. ಕರೋನಾ ಕಾಲದಲ್ಲೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದ, ಕರೋನಾ ಭಯವನ್ನು ಮೀರಿ ಜನ ಸಾಮಾನ್ಯರೊಂದಿಗೆ ಬೆರೆಯುತ್ತಿದ್ದ ಝಮೀರ್ ಅಹ್ಮದ್ ಖಾನ್, ಜೆಡಿಎಸ್ನಿಂದ ಕಾಂಗ್ರೆಸ್ಗೆ ಪಕ್ಷಾಂತರವಾದವರು. ಚಾಮರಾಜಪೇಟೆಯಲ್ಲಿ ತನ್ನ ಅಭೇಧ್ಯ ಮತ ಕೋಟೆ ಸೃಷ್ಟಿಸಿರುವ ಝಮೀರ್ ಅವರದ್ದು ಯಾವುದೇ ವಿವಾದಗಳಿಗೂ ಡೋಂಟ್ ಕೇರ್ ಅನ್ನುವ ಸ್ವಭಾವ. ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುವ ಝಮೀರ್ ಅಹ್ಮದ್, ಸದ್ಯ ಕೋವಿಡ್ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ರೋಷನ್ ಬೇಗ್ ಅವರ ಆರೋಪಗಳಿಗೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ರೋಷನ್ ಬೇಗ್ ಹಾಗೂ ಎಸ್ಡಿಪಿಐ ಪಕ್ಷದ ನಡುವಿನ ಸಂಬಂಧದ ಮೇಲೆ ಬೆಳಕು ಚೆಲ್ಲಿದ್ದಾರೆ.

ರೋಷನ್ ಬೇಗ್ ಬಿಜೆಪಿಗೆ ಸೇರಲು ಉತ್ಸುಕರಾಗಿದ್ದಾರೆ ಎಂಬರ್ಥದಲ್ಲಿ ಟ್ವೀಟ್ ಮಾಡಿರುವ ಝಮೀರ್, ʼರೋಷನ್ ಬೇಗ್ ಅವರೇ, ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪ ಮಾಡಿ ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿ ಕಸ ಗುಡಿಸಿ, ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 10 ವರ್ಷದ ಷರತ್ತು ಸಡಿಲಿಸಿ 2023ರ ಚುನಾವಣೆಯಲ್ಲಾದರೂ ಬಿಜೆಪಿ ಟಿಕೆಟ್ ನೀಡಬಹುದು. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಿʼ ಎಂದಿದ್ದಾರೆ.
ಅದೇ ವೇಳೆ ಪ್ರವಾದಿಯವರನ್ನು ಅವಹೇಳನ ಮಾಡಿರುವ ನವೀನ್ ಕೃತ್ಯವನ್ನು ಕನಿಷ್ಟ ಖಂಡಿಸುವ ಗೋಜಿಗೂ ಹೋಗದ ರೋಷನ್ ಬೇಗ್, ಮುಸ್ಲಿಮರ ಬಡತನ, ಅನಕ್ಷರತೆ, ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದೆ, ಅಮಾಯಕ ಮುಸ್ಲಿಮರನ್ನು ರಾಜಕೀಯ ಸ್ವಾರ್ಥಕ್ಕಷ್ಟೇ ಬಳಸಿಕೊಂಡಿದ್ದಾರೆ ಎಂದಿದ್ದಾರೆ. ಡಿ ಜೆ ಹಳ್ಳಿ ಗಲಭೆ ಬಗ್ಗೆ ಇಲ್ಲಿಯವರೆಗೆ ಮೌನವಹಿಸಿದ್ದ ರೋಷನ್ ಇದ್ದಕ್ಕಿದ ಹಾಗೆ ಎಸ್ಡಿಪಿಐ ಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನ ಪಡುತ್ತಿರುವುದಾಗಿ ಝಮೀರ್ ಆರೋಪ. ಪೊಲೀಸರ ತನಿಖೆಯ ಸುಳಿವು ರೋಷನ್ರಿಗೆ ಸಿಕ್ಕಿದ ಕಾರಣಕ್ಕೆ ಎಸ್ಡಿಪಿಐ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದೂ ಹೇಳಿದ್ದಾರೆ. ಅಂದರೆ, ಅದಕ್ಕೂ ಮೊದಲು ಎಸ್ಡಿಪಿಐ ಹಾಗೂ ರೋಷನ್ ಬೇಗ್ ನಡುವೆ ಸಖ್ಯವಿತ್ತು ಎಂಬುದು ಝಮೀರ್ ಆರೋಪದ ಒಟ್ಟು ಸಾರಾಂಶ.
ಇದಕ್ಕೆ ಪೂರಕವೆನಿಸುವಂತೆ ಝಮೀರ್ ಖಾನ್ ಇನ್ನೊಂದು ಟ್ವೀಟ್ ಮಾಡಿದ್ದಾರೆ. ಶಿವಾಜಿನಗರದಲ್ಲಿ, ರೋಷನ್ ಬೇಗ್ ಅವರು ಸ್ಪರ್ಧಿಸುತ್ತಿದ್ದಾಗ ಎಂದೂ ಸ್ಪರ್ಧಿಸದಿದ್ದ ಎಸ್ಡಿಪಿಐ ಇತ್ತೀಚಿನ ಶಿವಾಜಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಣಕ್ಕಿಳಿದದ್ದು ಯಾಕೆ? ಕಾಂಗ್ರೆಸ್ ಬೆಂಬಲಿಸುವ ಮುಸ್ಲಿಮ್ ಮತಗಳನ್ನು ವಿಭಜಿಸುವ ದುರುದ್ದೇಶದಿಂದ ಎಸ್ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಯಾರು ಎನ್ನುವುದನ್ನು ಬೇಗ್ ಸಾಹೇಬರು ತಿಳಿಸಬೇಕು ಎಂದು ಸ್ಪಷ್ಟನೆ ಕೇಳಿದ್ದಾರೆ.
ಅಂದರೆ, ಎಸ್ಡಿಪಿಐ ಪಕ್ಷದೊಂದಿಗೆ ರೋಷನ್ ಬೇಗ್ ಸಖ್ಯವಿತ್ತು, ರೋಷನ್ ಬೇಗ್ ಸ್ಪರ್ಧಿಸುವಾಗ ಎಸ್ಡಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರಲಿಲ್ಲ ಎಂಬುದು ಝಮೀರ್ ವಾದವಾದರೆ, ಕಾಂಗ್ರೆಸ್ ಹಾಗೂ ಎಸ್ಡಿಪಿಐ ಜೊತೆಗಾರರು ಎಂಬಂತೆ ರೋಷನ್ ಬೇಗ್ ಸೇರಿದಂತೆ ಬಿಜೆಪಿ ನಾಯಕರ ವಾದ. ಒಟ್ಟಿನಲ್ಲಿ ಎಸ್ಡಿಪಿಐ ಜೊತೆಗೆ ಸಖ್ಯ ಬೆಳೆಸಿದವು ಅಪರಾಧಿಗಳೆಂಬಂತೆ ಎರಡೂ ಪಕ್ಷಗಳ ಧುರೀಣರು ಬಿಂಬಿಸುತ್ತಿದ್ದಾರೆ.

ಎಸ್ಡಿಪಿಐ ಪಕ್ಷದೊಂದಿಗೆ ಸಖ್ಯ ಬೆಳೆಸಿಕೊಳ್ಳುವುದು ಅಪರಾಧವೇ?
ಒಂದು ವೇಳೆ ಎಸ್ಡಿಪಿಐ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿ, ನಿಷೇಧಿಸಲ್ಪಟ್ಟ ಪಕ್ಷವಾದರೆ ಇವರೊಂದಿಗೆ ಸಂಬಂಧ ಬೆಳೆಸುವುದು ಅಪರಾಧ ಸರಿ. ಆದರೆ ಎಸ್ಡಿಪಿಐ ಮೇಲೆ ಇರುವುದು ಆರೋಪಗಳು ಮಾತ್ರ. ಎಸ್ಡಿಪಿಐ ಪಕ್ಷದ ಮೇಲೆ ಗುರುತರ ಆರೋಪವನ್ನು ಆಡಳಿತ ಪಕ್ಷದ ನಾಯಕರು ಹೊರಿಸಿದರಾದರೂ, ಸರ್ಕಾರ ಅಧಿಕೃತವಾಗಿ ಇದುವರೆಗೂ ನಿಷೇಧಿಸಿಲ್ಲ. ಕಾಂಗ್ರೆಸ್, ಜೆಡಿಎಸ್ ಆಡಳಿತ ಇದ್ದಾಗಲೂ ಎಸ್ಡಿಪಿಐಯನ್ನು ನಿಷೇಧಿಸುವ ಗೋಜಿಗೆ ಹೋಗಿಲ್ಲ.
ಹೀಗಿರುವಾಗ, ಎಸ್ಡಿಪಿಐ ಜೊತೆ ಸಖ್ಯ ಬೆಳೆಸಿದನ್ನು ಭಯೋತ್ಪಾದಕ ಸಂಘಗಳೊಂದಿಗೆ ಸಂಪರ್ಕ ಬೆಳೆಸಿದ ರೀತಿ ಉಭಯ ಪಕ್ಷಗಳು ಬಿಂಬಿಸಿಕೊಳ್ಳತ್ತಿರುವುದು ಯಾಕೆ? ಆ ಮೂಲಕ ನಾಡಿನ ಜನತೆಗೆ ನೀಡಲು ಹೊರಟಿರುವ ಸಂದೇಶ ಏನು? ತಮ್ಮನ್ನು ರಕ್ಷಿಸಿಕೊಳ್ಳಲು, ಎಸ್ಡಿಪಿಐಯನ್ನು ಬಲಿಪಶು ಮಾಡಲಾಗುತ್ತಿದೆಯೇ, ಅಥವಾ ನಿಜವಾಗಿಯೂ ಬೆಂಗಳೂರು ಗಲಭೆಯಲ್ಲಿ ಎಸ್ಡಿಪಿಐ ಪಾತ್ರವಿದೆಯೇ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ.
ಸದ್ಯ ತನಿಖಾ ಸಂಸ್ಥೆಗಳು ಎಸ್ಡಿಪಿಐ ನಾಯಕರನ್ನು ಗಲಭೆ ಸಂಬಂಧವಾಗಿ ಬಂಧಿಸಿದ್ದಾರೆ. ಗಲಭೆಯಲ್ಲಿ ಎಸ್ಡಿಪಿಐ ಪಾತ್ರವೇನು ಎಂಬುದು ತನಿಖೆ ನಡೆಯುತ್ತಿದೆ. ಒಂದು ವೇಳೆ ಎಸ್ಡಿಪಿಐ ಪಾತ್ರ ಸಾಬೀತಾದರೆ ಎಸ್ಡಿಪಿಐ ನಿಷೇಧಕ್ಕೊಳಗಾಗುವ ಸಾಧ್ಯತೆಗಳು ಬಲವಾಗಿವೆ. ಬಿ ಎಲ್ ಸಂತೋಷ್ ಬಣದ ಒತ್ತಡದಿಂದ ತನ್ನ ಖುರ್ಚಿಯನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಎಸ್ಡಿಪಿಐಯನ್ನು ನಿಷೇಧಗೊಳಿಸಿ ಖಟ್ಟರ್ ಹಿಂದುತ್ವವಾದಿಗಳನ್ನು ಸಮಾಧಾನ ಪಡಿಸಲೂಬಹುದು.
ಒಟ್ಟಿನಲ್ಲಿ ಕಾಂಗ್ರೆಸ್ನಿಂದ ಪಕ್ಷಾಂತರವಾದ ಹಾಗೂ ಕಾಂಗ್ರೆಸ್ಗೆ ಪಕ್ಷಾಂತರವಾದ ಇಬ್ಬರು ಅಲ್ಪಸಂಖ್ಯಾತ ರಾಜಕಾರಣಿಗಳು ಎಸ್ಡಿಪಿಐಯಿಂದ ಅಂತರ ಕಾಯ್ದುಕೊಳ್ಳುತ್ತಿರುವಂತೆ ತೋರಿಸುತ್ತಿದ್ದಾರೆ. ಬಹುಷ಼, ಎಸ್ಡಿಪಿಐ ನಿಷೇಧಕ್ಕೊಳಗಾಗಬಹುದು ಹಾಗೂ ಬಿಜೆಪಿಗೆ ತಾನು ಸೇರಿಕೊಂಡಾಗ ಎಸ್ಡಿಪಿಐ ಕುರಿತಂತೆ ಯಾವ ಆರೋಪಗಳೂ ತನಗೆ ಮೆತ್ತಬಾರದೆಂಬ ಮುಂದಾಲೋಚನೆಯಿಂದ ತಾವು ಈ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದೇನೆ ಎಂದು ಸಾಬೀತುಪಡಿಸಲು ರೋಷನ್ ಬೇಗ್ ಯೋಜನೆ ಹಾಕಿಕೊಂಡಿರಬಹುದು. ಅದೇ ವೇಳೆ ಈ ಯೋಜನೆಯನ್ನು ಬೇಧಿಸಲು ಪಣತೊಟ್ಟಿರುವಂತೆ ಝಮೀರ್ ಪ್ರಯತ್ನಗಳು ಕಾಣುತ್ತಿದೆ.
ಮುಸ್ಲಿಮ್ ನಾಯಕತ್ವ: ರೋಷನ್ ಬೇಗ್ vs ಎಸ್ಡಿಪಿಐ vs ಝಮೀರ್ ಅಹ್ಮದ್
ಬೇರೊಂದು ಆಯಾಮದಲ್ಲಿ ಗಮನಿಸುವಾಗ ಮುಸ್ಲಿಂ ನಾಯಕತ್ವಕ್ಕೆ ನಡೆಯುವ ತಿಕ್ಕಾಟವೆಂಬಂತೆ ಗೋಚರಿಸುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಸಮರ್ಥ ನಾಯಕತ್ವದ ಕೊರತೆಯಿದೆ. ಒಂದು ಕಡೆ ಎಸ್ಡಿಪಿಐ ಮುಸ್ಲಿಮರ ಹೊಣೆ ಹೊತ್ತುಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಅದೇ ಕಾರಣಕ್ಕೆ ಕಾಂಗ್ರೆಸ್-ಎಸ್ಡಿಪಿಐ ತಿಕ್ಕಾಟ ನಡೆಯುತ್ತಲೇ ಇದೆ. ಬೆಂಗಳೂರಿನ ಗಲಭೆಯ ಬಳಿಕ ಮುಸ್ಲಿಮರ ರಾಜಕೀಯ ನಾಯಕತ್ವದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಎಲ್ಲರೂ ಒಪ್ಪುವಂತಹ ಸಮರ್ಥ ರಾಜಕೀಯ ನಾಯಕನ ಅಗತ್ಯ ಮುಸ್ಲಿಂ ಸಮುದಾಯಕ್ಕೆ ಜ಼ರೂರಿದೆ. ಝಮೀರ್ ಹಾಗೂ ರೋಷನ್ ನಡುವಿನ ಪ್ರಹಸನ ʼಆ ಸ್ಥಾನವನ್ನುʼ ತುಂಬುವ ಪ್ರಯತ್ನ ಎಂಬ ಮಾತು ರಾಜಕೀಯ ವಲಯದಲ್ಲಿದೆ ತೇಲಿಬರುತ್ತಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ಕಾವಲು ನಿಲ್ಲಲು ಹೋಗುತ್ತೇನೆಂದ ಝಮೀರ್ ಅಹ್ಮದ್ರ ಹಳೇ ಹೇಳಿಕೆಯನ್ನು ಮತ್ತೆ ಕೆದಕಿರುವ ರೋಷನ್ ಬೇಗ್, ಹೆಸರು ಹೇಳದೆಯೇ ಝಮೀರ್ರನ್ನು ಕೆಣಕಿದ್ದಾರೆ. ಈಗ ಯಡಿಯೂರಪ್ಪರ ಕಚೇರಿಗೆ ಹೋಗಿ ವಾಚ್ಮನ್ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದೆಂದು ಸೂಚ್ಯವಾಗಿ ಝಮೀರ್ರಿಗೆ ತಿಣುಚಿದ್ದಾರೆ.
ಒಂದು ಕಾಲದಲ್ಲಿ ಗೃಹಸಚಿವ ಪಟ್ಟ ಹೊತ್ತಿದ್ದ ರೋಷನ್, ಈಗ ಎಲ್ಲಿಯೂ ಸಲ್ಲದವರು. ಸಕ್ರಿಯ ರಾಜಕಾರಣದಲ್ಲಿರುವ ಮುಸ್ಲಿಂ ರಾಜಕಾರಣಿಗಳ ಪೈಕಿ ಮುಂಚೂಣಿಯಲ್ಲಿರುವುದು ಝಮೀರ್. ಹಾಗಾಗಿ ರೋಷನ್ರಿಗೆ ಮುಸ್ಲಿಂ ಸಮುದಾಯದ ಅನಭಿಷಕ್ತ ನಾಯಕನಾಗಲು ಝಮೀರ್ ತೊಡಕಾಗಲಿದ್ದಾರೆ. ಅದೇ ಸಮಯದಲ್ಲಿ ಈ ಇಬ್ಬರಿಗೂ ಸಮಾನವಾಗಿ ತೊಡಕಾಗಿರುವುದು ಎಸ್ಡಿಪಿಐ. ಒಟ್ಟಿನಲ್ಲಿ ಮುಸ್ಲಿಂ ನಾಯಕತ್ವಕ್ಕೇ ಈ ಕಿತ್ತಾಟ ಎಂದಾದರೆ, ಇದು ತ್ರಿಕೋಣ ಪಗಡೆ. ಹಾಗೂ ಮೊದಲು ಔಟಾಗುವ ಎಲ್ಲಾ ಸಾಧ್ಯತೆಗಳಿರುವುದು ಎಸ್ಡಿಪಿಐಗೆ.











