ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆಗೂಡಿ ರಚಿಸಿದ್ದ ಸಮ್ಮಿಶ್ರ ಸರ್ಕಾರ ಪತನಗೊಳಿಸಿದ ಬಿಜೆಪಿಯ ವಿರುದ್ಧ ಸಿಡಿದೇಳುವ ಬದಲಿಗೆ ತೀರ ಇತ್ತೀಚಿನವರೆಗೂ ಸ್ನೇಹಿತನಾಗಿದ್ದ ‘ಹಸ್ತ’ ಗುರುತಿನ ಪಕ್ಷದ ವಿರುದ್ಧ ಕಟುಟೀಕೆ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. 2018ರ ವಿಧಾನಸಭೆಯ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಜೊತೆಗೂಡಿ ಅಧಿಕಾರ ಹಿಡಿದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಒಂದು ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದ ಸವಿಯುಂಡಿತ್ತು. ಈ ಮೂಲಕ ಹಲವು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದು ಕಂಗೆಟ್ಟಿದ್ದ ಕಾರ್ಯಕರ್ತರ ಪಡೆಯಲ್ಲಿ ಉತ್ಸಾಹ ಚಿಮ್ಮುವಂತೆ ಮಾಡಿತ್ತು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆದು ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಿದ್ದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಯು ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿದೆ. ಕಾಂಗ್ರೆಸ್ ಬೆಂಬಲದಿಂದ ಪರಿಸ್ಥಿತಿಯ ಲಾಭ ಪಡೆದು, ಕೇವಲ 37 ಸ್ಥಾನ ಗೆದ್ದಿದ್ದರೂ ಮುಖ್ಯಮಂತ್ರಿ ಗಾದಿಯ ಸವಿಯುಂಡ ಜೆಡಿಎಸ್ ಸಹಜವಾಗಿ ಕಾಂಗ್ರೆಸ್ ಬಗ್ಗೆ ಅನುಕಂಪ ಹೊಂದಿದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ, ಜೆಡಿಎಸ್ ವರಸೆ ಬೇರೆಯದೇ ಇದ್ದಂತಿದೆ ಎಂಬುದರ ಸುಳಿವನ್ನು ಕುಮಾರಸ್ವಾಮಿ ಅವರ ಮಾತುಗಳು ದಾಟಿಸಿವೆ.
ರಾಜ್ಯದಲ್ಲಿ ಎರಡನೇ ವಿರೋಧ ಪಕ್ಷವಾದ ಜೆಡಿಎಸ್ ಪಕ್ಷವು ಆಡಳಿತ ಪಕ್ಷದ ಅಂಕು-ಡೊಂಕು, ತಪ್ಪು-ಒಪ್ಪುಗಳನ್ನು ಮುಂದಿಟ್ಟು ಅದರ ಕಿವಿಹಿಂಡುವ ಕೆಲಸ ಮಾಡಬೇಕಿತ್ತು. ಈ ಮೂಲಕ ಕಾಂಗ್ರೆಸ್ ಜೊತೆಗೂಡಿ ಆಡಳಿತರೂಢ ಬಿಜೆಪಿಯನ್ನು ಎದುರಿಸುವ ಯತ್ನ ಮಾಡಬೇಕಿತ್ತು. ಆದರೆ, ಇದನ್ನು ಮಾಡದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ರಾಜಸ್ಥಾನ ರಾಜಕಾರಣದಲ್ಲಿ ಆಗುತ್ತಿರುವ ಪಲ್ಲಟಗಳನ್ನು ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ್ದಾರೆ. ಶಾಸಕರ ಖರೀದಿ ವಿಚಾರವನ್ನು ಪ್ರಸ್ತಾಪಿಸಿ “ಕುದುರೆ ವ್ಯಾಪಾರಕ್ಕೆ ಕಾಂಗ್ರೆಸ್ ಅನ್ವರ್ಥನಾಮ” ಎಂದು ದೂರಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳನ್ನೂ ಕುಮಾರಸ್ವಾಮಿಯವರು ನೀಡಿದ್ದಾರೆ. ಇವುಗಳ ಪೈಕಿ ಮಾಜಿ ಮುಖ್ಯಮಂತ್ರಿ ಹಾಗೂ ಅಂದಿನ ಕಾಂಗ್ರೆಸ್ ನಾಯಕ ಎಸ್ ಎಂ ಕೃಷ್ಣ ಅವರು 2004ರಲ್ಲಿ ಜೆಡಿಎಸ್ ಮುಗಿಸಲು ಯತ್ನಿಸಿದ್ದರು. ಇದಕ್ಕಾಗಿ ತಾನು ಕ್ಷಿಪ್ರ ರಾಜಕೀಯ ಪಲ್ಲಟಕ್ಕೆ ಕಾರಣವಾಗಬೇಕಾಯಿತು ಎಂದು ಸಮರ್ಥನೆ ನೀಡಿದ್ದಾರೆ. ಇಂದು ಅದೇ ಎಸ್ ಎಂ ಕೃಷ್ಣ ಯಾವ ಪಕ್ಷದಲ್ಲಿದ್ದಾರೆ ಎಂಬುದನ್ನು ಕುಮಾರಸ್ವಾಮಿ ಅವರು ಮರೆತಂತಿದೆ. ಇಷ್ಟಕ್ಕೆ ವಿರಮಿಸದ ಕುಮಾರಸ್ವಾಮಿ ಅವರು ಸಂವಿಧಾನ, ಪ್ರಜಾಪ್ರಭುತ್ವ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಇದರರ್ಥ ಪರೋಕ್ಷವಾಗಿ ಬಿಜೆಪಿಯ ನಡೆಯನ್ನು ಸಮರ್ಥಿಸುತ್ತಿದ್ದಾರೆಯೇ ಎಂಬ ಗುಮಾನಿಯನ್ನು ಹುಟ್ಟುಹಾಕಿದ್ದಾರೆ.
ಇಷ್ಟಕ್ಕೂ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಕಹಳೆ ಊದುತ್ತಿರುವುದೇಕೆ ಎಂಬುದೇ ಕುತೂಹಲಕಾರಿಯಾದ ಬೆಳವಣಿಗೆ. ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಅಧಿಕಾರ ಹಿಡಿಯುತ್ತಲೇ ಯಡಿಯೂರಪ್ಪನವರು ಉತ್ತರ ಕರ್ನಾಟಕದಲ್ಲಾದ ಜಲಪ್ರಳಯವನ್ನು ಸಮರ್ಥವಾಗಿ ನಿರ್ವಹಿಸಲು ವಿಫಲರಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಕಪಿಮುಷ್ಟಿಗೆ ಸಿಲುಕಿ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಈಗ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಿಸಲು ವಿಫಲರಾಗಿದ್ದು, ರೋಗ ನಿಯಂತ್ರಣಕ್ಕೆ ಅಗತ್ಯವಾದ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಬಿಜೆಪಿ ವಲಯದಲ್ಲಿ ಯಡಿಯೂರಪ್ಪ ತಮ್ಮ ಪ್ರಾಬಲ್ಯ ಕಳೆದುಕೊಂಡಿದ್ದಾರೆ ಎಂಬುದು ಸೇರಿದಂತೆ ಕಾಂಗ್ರೆಸ್ ಆರೋಪಗಳನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಎಡತಾಕುತ್ತಿರುವುದನ್ನು ಪ್ರಳಯಾಂತಕ ರಾಜಕಾರಣಿಯಾದ ಕುಮಾರಸ್ವಾಮಿ ಅರಿತಿದ್ದಾರೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ವಿಚಾರಗಳು ಕಾಂಗ್ರೆಸ್ ರಾಜಕೀಯ ಏಳಿಗೆಗೆ ನೆರವಾಗುವ ಸಾಧ್ಯತೆಯನ್ನು ಕುಮಾರಸ್ವಾಮಿ ಗ್ರಹಿಸಿದಂತಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದರ ಜೊತೆಗೆ ಕಾಂಗ್ರೆಸ್ ಹೋರಾಟಕ್ಕೆ ಹಿನ್ನಡೆಯುಂಟು ಮಾಡಿ, ತಾನು ಸಮರ್ಥ ವಿರೋಧ ಪಕ್ಷ ಎಂದು ಬಿಂಬಿಸಿಕೊಳ್ಳುವ ಮೂಲಕ ರಾಜಕೀಯ ಚದುರಂಗದಲ್ಲಿ ಉಳಿಯುವ ಯತ್ನವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ವಿರುದ್ಧ ಹೋರಾಡುವುದಾಗಿ ತೀರ ಇತ್ತೀಚಿನವರೆಗೂ ಸಾರುತ್ತಿದ್ದ ಜೆಡಿಎಸ್, ಏಕಾಏಕಿ ಉಲ್ಟಾ ಹೊಡೆಯುತ್ತಿರುವುದೇಕೆ? ಕಾಂಗ್ರೆಸ್ ಇತಿಹಾಸ ಹಾಗೂ ನಯವಂಚಕತನ ತಿಳಿದಿದ್ದರೂ ಅವರ ಜೊತೆಗೂಡಿ ಅಧಿಕಾರ ಅನುಭವಿಸುವ ಅಗತ್ಯ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಗೆ ಅಗತ್ಯವಿತ್ತೇ? ಕಾಂಗ್ರೆಸ್-ಬಿಜೆಪಿ ಸಮಾನ ವೈರಿಗಳು ಎಂದು ಸಾರುವ ಜೆಡಿಎಸ್, ಕಳೆದ ತಿಂಗಳು ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲ ಪಡೆದು ಎಚ್ ಡಿ ದೇವೇಗೌಡ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿಕೊಂಡಿದ್ದೇಕೆ? ಎಂಬ ಹಲವು ಪ್ರಶ್ನೆಗಳು ಸಹಜವಾಗಿ ಏಳುತ್ತವೆ.
ಇದಕ್ಕೂ ಬಹುಮುಖ್ಯವಾಗಿ 2008ರಲ್ಲಿ ಕುಮಾರಸ್ವಾಮಿ ಅವರ ವಚನ ಭ್ರಷ್ಟತೆ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿಯ ಯಡಿಯೂರಪ್ಪ ಅವರು ಅನುಕಂಪದ ಮೇಲೆ ಅಧಿಕಾರ ಗಳಿಸಿದ್ದರು. ಇದಾದ ಬಳಿಕ ಕುಮಾರಸ್ವಾಮಿ ಅವರು ಹತ್ತು ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿಯಬೇಕಾಯಿತು. ಯಾವುದೇ ರಾಜಕೀಯ ಪಕ್ಷ ಎರಡು ಚುನಾವಣೆಗಳಲ್ಲಿ ಸತತವಾಗಿ ಸೋತ ನಂತರವೂ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ. ಅದರಲ್ಲೂ ಜಾತಿಯನ್ನೇ ಪ್ರಮುಖವಾಗಿ ನಂಬಿಕೊಂಡಿರುವ ಜೆಡಿಎಸ್ ನಂಥ ಪ್ರಾದೇಶಿಕ ಪಕ್ಷ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಜೀವಂತವಾಗಿ ಉಳಿಯುವುದು ಸುಲಭ ಸಾಧ್ಯವಲ್ಲ. ಇಂಥ ಸಂದರ್ಭದಲ್ಲಿ 2018ರ ಅತಂತ್ರ ಫಲಿತಾಂಶವು ಜೆಡಿಎಸ್ ಅನ್ನು ಕಿಂಗ್ ಮೇಕರ್ ಬದಲಿಗೆ ಕಿಂಗ್ ಆಗಿ ಬದಲಿಸಿತ್ತು. ಕುಮಾರಸ್ವಾಮಿ ಕಿಂಗ್ ಮಾಡುವ ಹಿಂದೆ ಕಾಂಗ್ರೆಸ್ ಪಾತ್ರ ದೊಡ್ಡದಿತ್ತು. ಈ ರೀತಿಯ ರಾಜಕೀಯ ಹಿನ್ನೆಲೆಯನ್ನು ಹೊಂದಿರುವ ಕುಮಾರಸ್ವಾಮಿ ಅವರು ಆಡಳಿತರೂಢ ಪಕ್ಷದ ಲೋಪಗಳನ್ನು ಜನರ ಮುಂದಿಡಲು ಮೀನಮೇಷ ಎಣಿಸುತ್ತಿರುವುದರ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರವಿದೆ ಎನ್ನಲಾಗುತ್ತಿದೆ.
ಜಗತ್ತನ್ನೇ ಕಂಗೆಡಿಸಿರುವ ಕೋವಿಡ್ ನಿಂದ ರಾಜ್ಯ ಕಂಗಲಾಗಿದೆ. ಇಂಥ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಪಡೆಯನ್ನು ಜನರ ನೆರವಿಗೆ ನಿಯೋಜಿಸುವ ಮೂಲಕ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಜೆಡಿಎಸ್ ಗೆ ಜನಹಿತ ಮುಖ್ಯ ಎಂಬುದನ್ನು ಸಾರಬೇಕಿತ್ತು. ರಾಷ್ಟ್ರೀಯ ಪಕ್ಷಕ್ಕಿಂತ ಪ್ರಾದೇಶಿಕ ಪಕ್ಷದ ಅಗತ್ಯ ಹಾಗೂ ಅನಿವಾರ್ಯತೆಯನ್ನು ತನ್ನ ಕೆಲಸದ ಮೂಲಕ ಜೆಡಿಎಸ್ ಹಾಗೂ ಅದರ ನಾಯಕ ಕುಮಾರಸ್ವಾಮಿ ಅವರು ಸಾಬೀತುಪಡಿಸುವುದು ಅಗತ್ಯವಿದೆ. ಇದನ್ನು ಬಿಟ್ಟು ಕಾಂಗ್ರೆಸ್ ತೆಗಳಿ, ಬಿಜೆಪಿ ಬೆನ್ನು ಸವರುವ ಅನುಕೂಲ ಸಿಂಧು ರಾಜಕಾರಣಕ್ಕೆ ಕೈಹಾಕಬಾರದು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಬಹುತೇಕ ಪ್ರಾದೇಶಿಕ ಪಕ್ಷಗಳಿಗೆ ವಿರುದ್ಧವಾದ ನಿಲುವು ತಳೆಯುವ ಮೇಲ್ಪಂಕ್ತಿ ಹಾಕುವ ಕೆಲಸವನ್ನು ದೇವೇಗೌಡರ ಮೂಲಕ ಪ್ರಧಾನಿಕೊಟ್ಟ ಹಿರಿಮೆ ಹೊಂದಿದ ಜೆಡಿಎಸ್ ಮಾಡಬೇಕಿದೆ. ಆದರೆ, ದ್ವಂದ್ವ, ವೈರುಧ್ಯ, ಅನುಕೂಲ ಸಿಂಧು ರಾಜಕಾರಣವನ್ನೇ ಉಸಿರಾಡುವ ಜೆಡಿಎಸ್ ಹಾಗೂ ಅದರ ನಾಯಕತ್ವದಿಂದ ಇದನ್ನು ನಿರೀಕ್ಷಿಸಲಾದೀತೇ?