ಭಾರತದಲ್ಲಿ ಕರೋನಾ ವೈರಸ್ ಈಗ ಸೃಷ್ಟಿಸಿರುವ ಅನಾಹುತ ಅಷ್ಟಿಷ್ಟಲ್ಲ. ಪ್ರತಿದಿನ ಸರಿಸುಮಾರು 60 ಸಾವಿರ ಜನರಿಗೆ ಕರೋನಾ ಸೋಂಕು ಹರಡುತ್ತಿದೆ. ಅದೇ ರೀತಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 26,47,664 ಆಗಿದ್ದು, ಭಾನುವಾರದ ಅಂತ್ಯಕ್ಕೆ ಸಾವನ್ನಪ್ಪಿದವರ ಸಂಖ್ಯೆ 50 ಸಾವಿರ ಗಡಿ ದಾಟಿದ್ದು, ಒಟ್ಟು 50,921 ಅಗಿದೆ. ಆದರೆ ಕರೋನಾ ಸೋಂಕಿನಿಂದ 19,19,843 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಜನರ ಸಂಖ್ಯೆ 6,76,900 ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆದರೆ ಈ ನಡುವೆ ಕೇಳಿ ಬಂದಿರುವ ಮಾಹಿತಿ ಕರೋನಾ ಕುರಿತಂತೆ ಜನರು ಇನ್ನಷ್ಟು ಜಾಗರೂಕರಾಗಬೇಕಾದ ಅನಿವಾರ್ಯತೆಯನ್ನು ತಂದೊಡ್ಡಿದೆ.
ಕಳೆದ 8 ತಿಂಗಳ ಹಿಂದೆ ಚೀನಾದ ವುಹಾನ್ನಲ್ಲಿ ಪತ್ತೆಯಾದ ಕರೋನಾ ವೈರಸ್, ಪ್ರಪಂಚದಾದ್ಯಂತ 21.6 ದಶಲಕ್ಷ ಜನರನ್ನು ಬಾಧಿಸಿದೆ. ಮೊದಲು ಕರೋನಾ ವೈರಾಣು ಜನ್ಮ ತಾಳಿದ ವುಹಾನ್ ಹೊರತು ಪಡಿಸಿ ಬೇರೆ ನಗರಗಳಲ್ಲಿ ಕರೋನಾ ಸೋಂಕು ಹೆಚ್ಚುಕಡಿಮೆ ಅಷ್ಟೇ ಪ್ರಮಾಣದ ಪರಿಣಾಮ ಬೀರುತ್ತಿತ್ತು. ಆದರೆ ಇದೀಗ ಕರೋನಾ ವೈರಾಣ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಮಲೇಷಿಯಾ ವಿಜ್ಞಾನಿಗಳ ಪ್ರಕಾರ ಈಗ ಸಿಕ್ಕಿರುವ ಕರೋನಾ ವೈರಸ್, ಸಾಕಷ್ಟು ಜನರಿಗೆ ಸೋಂಕು ಹರಡಿಸಬಲ್ಲ ಶಕ್ತಿ ಹೊಂದಿದೆ. ಜೊತೆಗೆ ಕರೋನಾ ವೈರಸ್ ತನ್ನ ರೂಪವನ್ನೇ ಬದಲಾಯಿಸಬಲ್ಲ ತಾಕತ್ತು ಹೊಂದಿದೆ ಎನ್ನಲಾಗ್ತಿದೆ.
ವೈರಾಣು ಯಾವಾಗಲು ತನ್ನ ರೂಪವನ್ನು ಬದಲಾಯಿಸುವ ಗುಣ ಹೊಂದಿರುತ್ತದೆ. ಆದರೆ ಕರೋನಾ ವೈರಾಣುವಿನ ರೂಪಾಂತರ ಗುಣ ಇಡೀ ಸಮಾಜಕ್ಕೆ ಮತ್ತಷ್ಟು ಮಾರಕವಾದರೂ ಅಚ್ಚರಿಯಿಲ್ಲ. ಈಗಿರುವ ವೈರಾಣುವಿನ ಹತ್ತು ಪಟ್ಟು ಶಕ್ತಿಶಾಲಿ ಆಗಿರುತ್ತದೆ ಎಂದಿದ್ದಾರೆ. ಇದನ್ನು ‘D614G` ಕರೆಯಲಾಗಿದೆ. ಈ ಮಾಹಿತಿಯನ್ನು ಮಲೇಷಿಯಾ ಆರೋಗ್ಯ ಇಲಾಖೆ ಡೈರೆಕ್ಟರ್ ಜನರಲ್ ನೂರ್ ಹಿಶಾಮ್ ಅಬ್ದುಲ್ಲಾ ಫೇಸ್ಬುಕ್ ಪೋಸ್ಟ್ನಲ್ಲಿ ಹಾಕಿದ್ದಾರೆ. ಅದೂ ಕೂಡ ರೂಪಾಂತರಗೊಂಡ ವೈರಾಣು ಮಲೇಷಿಯಾದಲ್ಲಿ ರೆಸ್ಟೋರೆಂಟ್ ಮಾಲೀಕನಾಗಿರುವ ಅನಿವಾಸಿ ಭಾರತೀಯ ಸೇರಿ ಮೂವರಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಅದೂ ಕೂಡ ಭಾರತದಿಂದ ವಾಪಸ್ ಆದ ಬಳಿಕ ಈ ರೀತಿಯ ವೈರಾಣು ಪತ್ತೆಯಾಗಿದೆ ಎನ್ನಲಾಗಿದೆ.

ರಷ್ಯಾ ಈಗಾಗಲೇ ಕರೋನಾ ಸೋಂಕಿಗೆ ಲಸಿಕೆ ಪತ್ತೆ ಮಾಡಿದ್ದು ನೋಂದಣಿ ಕೂಡ ಮಾಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವವ್ಯಾಪಿ ತಯಾರಿಸಲು ಮುಂದಾಗಿದೆ. ಆದರೆ ಮಲೇಷಿಯಾ ಸರ್ಕಾರ ಕೊಟ್ಟಿರುವ ಮಾಹಿತಿ ಇಡೀ ವಿಶ್ವಕ್ಕೆ ಭೀತಿಯನ್ನು ಉಂಟು ಮಾಡುತ್ತಿದೆ. ರಷ್ಯಾ ಪತ್ತೆ ಮಾಡಿರುವ ವೈರಾಣು ಈ ಲಸಿಕೆಗೆ ಜಗ್ಗುವುದಿಲ್ಲ. ಇನ್ನೂ ಇಲ್ಲೀವರೆಗೂ ಸೂಪರ್ ಸ್ಪ್ರೆಡರ್ ಆಗಿ ಕೆಲವೊಬ್ಬರು ಮಾತ್ರ ಇರುತ್ತಿದ್ದರು. ಆದರೆ ಇನ್ಮುಂದೆ ಈ ವೈರಾಣು ಭಾದಿಸಲು ಶುರು ಮಾಡಿದರೆ ಪ್ರತಿಯೊಬ್ಬರೂ ಸೂಪರ್ ಸ್ಪ್ರೆಡರ್ ಆಗಲಿದ್ದಾರೆ. ಈಗಾಗಲೇ ರೂಪಾಂತರ ಆಗಿರುವ ವೈರಾಣು ಮೇಲೆ ಅಧ್ಯಯನಗಳು ಶುರುವಾಗಿದ್ದು ಇನ್ನೂ ಪ್ರಾರಂಭಿಕ ಹಂತದಲ್ಲಿ ಇದೆ ಎಂದಿದ್ದಾರೆ.
ಈ ರೂಪಾಂತರ ವೈರಾಣು ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ ಕರೋನಾ ವೈರಸ್ ತನ್ನ ರೂಪವನ್ನು ಬದಲಿಸಿರುವ ಹೇಳಿಕೆಗಳಿಗೆ ಇನ್ನೂ ಕೂಡ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಸಾಕ್ಷ್ಯಗಳಿಲ್ಲದೆ ಒಪ್ಪಲಾಗದು ಎಂದಿದೆ. ಇನ್ನೂ ಈಗ ಸಿದ್ಧವಾಗುತ್ತಿರುವ ಲಸಿಕೆ ಈ ವೈರಾಣುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದೆ. ಇಲ್ಲೀವರೆಗೂ ವಿಶ್ವದಲ್ಲಿ 7 ಲಕ್ಷದ 75 ಸಾವಿರದ 275 ಜನರನ್ನು ಬಲಿ ಪಡೆದಿರುವ ಕರೋನಾ ವೈರಸ್ ರೂಪಾಂತರ ಊಹಿಸಲೂ ಸಾಧ್ಯವಾಗ್ತಿಲ್ಲ.
ಈ ನಡುವೆ ಕರ್ನಾಟಕ ರಾಜ್ಯ ಸರ್ಕಾರ ಸೀಲ್ಡೌನ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದು, ಯಾವುದೇ ಓರವ ವ್ಯಕ್ತಿಗೆ ಸೋಂಕು ತಗುಲಿದರೆ ಮನೆಯನ್ನು ಸೀಲ್ಡೌನ್ ಮಾಡುವ ಪದ್ದತಿಯನ್ನು ಕೈಬಿಟ್ಟಿದೆ. ಕೇವಲ ಆ ಮನೆಯ ಎದುರು ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಒಂದೇ ರಸ್ತೆಯ ಅಥವಾ 100 ಮೀಟರ್ ವ್ಯಾಪ್ತಿಯಲ್ಲಿ ಮೂವರಿಗೆ ಸೋಂಕು ಬಂದರೆ ಮಾತ್ರ ಸೀಲ್ಡೌನ್ ಮಾಡಲಾಗುತ್ತದೆ ಎಂದಿದ್ದಾರೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್. ಯಾವುದಕ್ಕೂ ಜನರೇ ಮುಂಜಾಗ್ರತೆ ವಹಿಸಿ ಕೈಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಾ ಕಣ್ಣು ಬಾಯಿಯನ್ನು ಮುಟ್ಟದಿದ್ದರೆ ಎಲ್ಲಾ ರೀತಿಯ ಸೋಂಕಿನಿಂದಲೂ ಪಾರಾಗಬಹುದು ಎನ್ನುತ್ತಾರೆ ವೈದ್ಯರು.






