ಕರೋನಾ ಸಂಕಷ್ಟದಿಂದ ಹೊರ ಬರಲು ಇಡೀ ವಿಶ್ವವೇ ಲಾಕ್ಡೌನ್ ಮೊರೆ ಹೋಗಿದೆ. ವಿದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ರೀತಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಮೊದಲ ಹಂತದ ಯೋಜನೆ ಜಾರಿಯಲ್ಲಿದ್ದು, ಮೇ 16ರಿಂದ 22ರವರೆಗೆ 2ನೇ ಹಂತದ ʼವಂದೇ ಭಾರತ್ʼ ಮಿಷನ್ ಜಾರಿ ಮಾಡಲಾಗುತ್ತಿದೆ. 31 ದೇಶಗಳಿಂದ 149 ವಿಶೇಷ ವಿಮಾನಗಳ ಮೂಲಕ ಭಾರತೀಯರನ್ನು ವಾಪಸ್ ಕರೆತರಲು ವ್ಯವಸ್ಥೆ ಮಾಡಲಾಗಿದೆ. 14 ದೇಶಗಳಿಂದ ಕರ್ನಾಟಕಕ್ಕೆ 17 ವಿಮಾನಗಳು ಸಂಚರಿಸಲಿವೆ. ಅಮೆರಿಕ ಒಂದರಿಂದಲೇ ಬೆಂಗಳೂರಿಗೆ 3 ವಿಮಾನಗಳು ಆಗಮಿಸಿಲಿವೆ. ದೇಶದ 15 ನಗರಗಳಿಗೆ ವಿಶ್ವದ ವಿವಿಧ ಭಾಗಗಳಿಂದ ವಿಮಾನ ಆಗಮಿಸಲಿವೆ. ಕೆನಡಾದಿಂದ ಕರ್ನಾಟಕಕ್ಕೆ 2 ವಿಮಾನಗಳು ಆಗಮಿಸಲಿವೆ. ಇನ್ನೂ ಯುಎಇ, ಸೌದಿ ಅರೆಬಿಯಾ, ಮಲೇಷಿಯಾ, ಒಮನ್, ಫಿಲಿಪೈನ್ಸ್, ಫ್ರಾನ್ಸ್, ಜರ್ಮನಿ, ಕತಾರ್, ಇಂಡೋನೇಷ್ಯಾ, ಐರ್ಲೆಂಡ್, ಆಸ್ಟ್ರೇಲಿಯಾ, ಜಪಾನ್ ಗಳಿಂದ ಒಂದೊಂದು ವಿಮಾನ ಆಗಮಿಸಲಿದೆ.
![](https://pratidhvani.in/wp-content/uploads/2021/02/pratidhvani_2020_04_e241e77c_4e48_4c8a_8518_5c7e48e673cc_Stay_Home_2-111.jpg)
![](https://pratidhvani.in/wp-content/uploads/2021/02/WhatsApp_Image_2020_05_12_at_11_38_17_PM-1.jpeg)
ಮಂಗಳವಾರ (12ಶ್ರ-05-2020) ದುಬೈನಿಂದ ಮಂಗಳೂರು ಏರ್ ಪೋರ್ಟ್ಗೆ ವಂದೇ ಭಾರತ್ ಯೋಜನೆ ಅಡಿ ಭಾರತೀಯರನ್ನು ಕತರುವ ಕೆಲಸ ಮಾಡಲಾಗ್ತಿದೆ. ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ 176 ಪ್ರಯಾಣಿಕರು ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆಯನ್ನೂ ಮಾಡಲಾಗಿದೆ. ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗ್ತಿದೆ. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆಯೂ ನಡೆಯುತ್ತಿದೆ. ವಿಮಾನ ಆಗಮನ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
![](https://pratidhvani.in/wp-content/uploads/2021/02/WhatsApp_Image_2020_05_12_at_11_38_18_PM__1_-1.jpeg)
ಇನ್ನೂ ಇತ್ತ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಿಂಗಾಪುರದಿಂದ ವಿಮಾನ ಆಗಮಿಸಿದ್ದು, ಒಟ್ಟು 180 ಪ್ರಯಾಣಿಕರನ್ನು ಹೊತ್ತು ಬಂದಿದೆ. ಇದರಲ್ಲಿ ಕರ್ನಾಟಕದ 39, ಹಾಗೂ ತಮಿಳುನಾಡಿನ ಇಬ್ಬರನ್ನು ಇಲ್ಲಿ ಇಳಿಸಿದ ಬಳಿಕ ಕೇರಳ 139 ಜನರನ್ನು ಕೊಚ್ಚಿಯಲ್ಲಿ ಇಳಿಸಲಿದೆ. ಈಗ ಬಂದಿರುವ 180 ಜನರಲ್ಲಿ 15 ಮಂದಿ ಗರ್ಭಿಣಿಯರು ಸೇರಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ನಲ್ಲೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದ್ದು, ಸ್ಕ್ರೀನಿಂಗ್ ಮುಗಿಸಿ ಬರುವ ಪ್ರಯಾಣಿಕರಿಗಾಗಿ ಹೊಟೆಲ್ ಬುಕ್ಕಿಂಗ್ ಗೆ ಪ್ರತ್ಯೇಕ ಕೌಂಟರ್ ಓಪನ್ ಮಾಡಲಾಗಿದೆ. ಟರ್ಮಿನಲ್ ಹೊರ ಭಾಗದಲ್ಲಿ ಮೂರು ಪ್ರತ್ಯೇಕ ಕೌಂಟರ್ ಸ್ಥಾಪಿಸಿದ್ದು, 5 ಸ್ಟಾರ್, 3 ಸ್ಟಾರ್ ಮತ್ತು ಸಾಮಾನ್ಯ ಹೋಟೆಲ್ ಬುಕ್ಕಿಂಗ್ ಗೆ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಅವರ ಆರ್ಥಿಕತೆಗೆ ತಕ್ಕಂತೆ ಹೊಟೇಲ್ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೊಟೇಲ್ ಬುಕ್ಕಿಂಗ್ ನಂತರ ಆಯ್ಕೆ ಮಾಡಿಕೊಂಡ ಹೋಟೆಲ್ ಗೆ ಬಸ್ ಮುಖಾಂತರ ಅಧಿಕಾರಿಗಳು ಕರೆದೊಯ್ಯಲಿದ್ದಾರೆ.