ಕರೋನಾ ವೈರಸ್ ವಿರುದ್ದದ ಸಮರಕ್ಕೆ ದೇಶದೆಲ್ಲೆಡೆ ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಭಾರೀ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕರ್ನಾಟಕದಲ್ಲಿ, ವಲಸೆ ಕಾರ್ಮಿಕರ ಪುನರ್ವಸತಿ, ರೋಗಿಗಳ ಆರೈಕೆ, ಕ್ವಾರೆಂಟೈನ್ ಸೆಂಟರ್ ಹೀಗೇ ನಾನಾ ರೀತಿಯ ಖರ್ಚು ವೆಚ್ಚಗಳನ್ನು ಭರಿಸಲು ಕೇಂದ್ರದ ಮೊರೆ ಹೋಗುವ ಬದಲು ನಾವೇ ಸಿದ್ದರಾಗಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ತಮ್ಮ ಒಂದು ವರ್ಷದ ಸಂಬಳವನ್ನೇ ಕೋವಿಡ್-19 ವಿರುದ್ದದ ಸಮರಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಈ ರೀತಿ ದೇಶದ ಎಲ್ಲಾ ರಾಜಕೀಯ ನಾಯಕರಿಗೆ ಮಾದರಿ ಎನಿಸಿಕೊಂಡಿದ್ದಾರೆ.
ಕಳೆದ ವಾರದಿಂದ ಹಲವು ರಾಜಕಾರಣಿಗಳು ತಮ್ಮ ಒಂದು ದಿನದ ಸಂಬಳ ಹಾಗೂ ತಮ್ಮ ಸಂಸದರ ಹಾಗೂ ಶಾಸಕರ ನಿಧಿಯಿಂದ ಹಣವನ್ನು ದಾನವಾಗಿ ನೀಡಿದ್ದರ ಕುರಿತು ವರದಿಯಾಗಿತ್ತು. ಇದು ಜನರ ಹಣವನ್ನು ಜನರಿಗೇ ನೀಡಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂಬ ಅಪವಾದವೂ ಹಲವರ ಮೇಲೆ ಇತ್ತು. ಈ ಕುರಿತಾಗಿ ಪ್ರತಿಧ್ವನಿ ವಿಸ್ತೃತವಾದ ವರದಿಯನ್ನು ಪ್ರಕಟಿಸಿತ್ತು ಕೂಡಾ. ಇಂಥಹವರಿಗೆಲ್ಲಾ ಯಡಿಯೂರಪ್ಪನವರು ಮಾದರಿಯಾಗಬೇಕಿದೆ.
ತಮ್ಮ ಸರ್ಕಾರದ ಮಂತ್ರಿಗಳಿಗೆ, ಶಾಸಕರಿಗೆ, ರಾಜ್ಯದ ಸಂಸದರಿಗೆ, ಸರ್ಕಾರಿ ನೌಕಕರಿಗೆ ಹಾಗೂ ಕನ್ನಡಿಗರಿಗೆ ಮನವಿ ಮಾಡಿರುವ ಬಿ ಎಸ್ ಯಡಿಯೂರಪ್ಪನವರು, ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ರಾಜ್ಯದಿಂದ ಕರೋನಾ ವೈರಸ್ ಓಡಿಸಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
“ರಾಜ್ಯ ಬಹಳ ಕಷ್ಟದ ಸಂದರ್ಭಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲಾ ಜೊತೆಯಾಗಿದ್ದುಕೊಂಡು ಇದನ್ನು ಎದುರಿಸಬೇಕು. ನಾನು ವೈಯಕ್ತಿಕವಾಗಿ ನನ್ನ ಒಂದು ವರ್ಷದ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದೇನೆ. ಧನ್ಯವಾದಗಳು,” ಎಂದು ಯಡಿಯೂರಪ್ಪನವರು ಹೇಳಿದ್ದಾರೆ.
#ಕೊರೊನ ಸೋಂಕು ವಿರುದ್ಧದ ಹೋರಾಟಕ್ಕೆ ನನ್ನ ಒಂದು ವರ್ಷದ ಸಂಬಳವನ್ನು 'ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19' ಕ್ಕೆ ನೀಡುತ್ತಿದ್ದೇನೆ. ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಕೈಲಾದ ಮಟ್ಟಿಗೆ ದೇಣಿಗೆ ನೀಡಿ ಈ ಹೋರಾಟಕ್ಕೆ ಬಲ ತುಂಬಬೇಕು ಎಂದು ಮನವಿ ಮಾಡುತ್ತೇನೆ.#KarnatakaFightsCorona #COVID19 pic.twitter.com/DAeOTDo6Z1
— B.S. Yediyurappa (@BSYBJP) April 1, 2020

ಕರೋನಾ ವೈರಸ್ ವಿರುದ್ದ ಹೋರಾಡಲು ಅಗತ್ಯವಿರುವ ಮುಂದುವರಿದ ಅರೋಗ್ಯ ಸಲಕರಣೆಗಳನ್ನು ಹೋಂದಿಸಲು ಧನ ಸಹಾಯವನ್ನು ರಾಜ್ಯದ ಜನತೆ ನೀಡಬೇಕೆಂದು ಮಾರ್ಚ್ 25ರಂದು ಸಿಎಂ ಯಡಿಯೂರಪ್ಪನವರು ಹೇಳಿದ್ದರು.
ಇತ್ತ ಕೆಪಿಸಿಸಿ ಆರಂಭಿಸಿರುವ ಕರೋನಾ ಪರಿಹಾರ ನಿಧಿಗೆ ಕಾಂಗ್ರೆಸ್ ಶಾಸಕರು, ಸಂಸದರು ತಲಾ ಒಂದು ಲಕ್ಷ ರೂಪಾಯಿ ನೀಡುವಂತೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿಕೊಂಡಿದ್ದಾರೆ.
ಕರೋನಾ ಲಾಕ್ಡೌನ್ ನಿಂದ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳೆರಡೂ ವಿಫಲವಾಗಿದೆ. ಆದ್ದರಿಂದ ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರದಲ್ಲಿದ್ದು ಪರಿಣಾಮಕಾರಿ ಕೆಲಸ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ.