ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೀಡಿದ್ದ ವಿವಾದಾತ್ಮಕ ಹೇಳಿಕೆಯೇ ದೆಹಲಿ ಗಲಭೆ ಪ್ರಚೋದನೆ ನೀಡಿತ್ತು ಅನ್ನೋದನ್ನ ಫೇಸ್ಬುಕ್ ಸಿಇಓ ಮಾರ್ಕ್ ಝುಕರ್ಬರ್ಗ್ ತಿಳಿಸಿರುವ ಆಡಿಯೋವೊಂದು ವೈರಲ್ ಆಗಿದೆ. ತನ್ನ ಸಂಸ್ಥೆಯ ಸಹೋದ್ಯೋಗಿಗಳ ಜೊತೆ ಮಾತನಾಡುವ ಸಮಯದಲ್ಲಿ ಇಂತಹ ಹೇಳಿಕೆಯೊಂದನ್ನ ನೀಡಿರೋದಾಗಿ ವೈರಲ್ ಆದ ಆಡಿಯೋದಿಂದಾಗಿ ಗೊತ್ತಾಗಿದೆ. ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಪರವಹಿಸಿ ಮಾತನಾಡಿದ್ದ ಹಾಗೂ ಅವರ ಹೇಳಿಕೆಯನ್ನ ತೆಗೆದು ಹಾಕದಿರಲು ನಿರ್ಧರಿಸಿದ್ದ ಮಾರ್ಕ್ ಝುಕರ್ಬರ್ಗ್ ನಡೆಯಿಂದ ಅವರ ಕಂಪೆನಿ ಉದ್ಯೋಗಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಮೇ 28 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ಬುಕ್ ನಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ಸಂಬಂಧ “ಲೂಟಿ ಆರಂಭಗೊಂಡಾಗ ಶೂಟಿಂಗ್ ಆರಂಭವಾಗುತ್ತದೆ” ಎನ್ನುವ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಇದು ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ಆಗಿರುವ ಕಾರಣ, ಅದು ಫೇಸ್ಬುಕ್ ನಿಯಮಕ್ಕೆ ವಿರುದ್ಧವಾಗಿತ್ತು. ಆದರೂ ಮಾರ್ಕ್ ಝುಕರ್ಬರ್ಗ್ ಅದನ್ನ ತೆಗೆದು ಹಾಕದಿರಲು ನಿರ್ಧರಿಸಿದ್ದರು. ಆ ಬಳಿಕ ಅದr ಸ್ಪಷ್ಟನೆಗಾಗಿ ಉದ್ಯೋಗಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಸುಮಾರು ಒಂದೂವರೆ ಗಂಟೆ ಕಾಲ ನಡೆದ ವೀಡಿಯೋ ಸಂವಾದದಲ್ಲಿ ಅವರು ಡೊನಾಲ್ಡ್ ಟ್ರಂಪ್ ಹೇಳಿಕೆ ಫೇಸ್ಬುಕ್ ನೀತಿ ನಿಯಮಾವಳಿಗೆ ವಿರುದ್ಧವಾಗಿಲ್ಲ ಮತ್ತು ಹಿಂಸೆಗೆ ಪ್ರಚೋದನೆ ನೀಡಿರಲಿಲ್ಲ ಎಂದು ಹೇಳಿದ್ದರು. ಇದಕ್ಕೆ ವೀಡಿಯೋ ಸಂವಾದದಲ್ಲಿಯೇ ಕೆಲವು ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜೀನಾಮೆಯನ್ನೂ ಸಲ್ಲಿಸಿದ್ದರು.
ಹೀಗೆ ನಡೆದ ವೀಡಿಯೋ ಸಂವಾದದಲ್ಲಿಯೇ ಮಾರ್ಕ್ ಝುಕರ್ಬರ್ಗ್ ಕಪಿಲ್ ಮಿಶ್ರಾ ವಿರುದ್ಧವೂ ಹೇಳಿಕೆ ನೀಡಿದ್ದಾರೆ ಅನ್ನೋ ಆಡಿಯೋವೊಂದು ವೈರಲ್ ಆಗಿದೆ. ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಗೆ ಅನುಗುಣವಾಗಿ ಉದಾಹರಿಸುತ್ತಾ ಅವರು ಕಪಿಲ್ ಮಿಶ್ರಾ ಹೇಳಿಕೆಯನ್ನ ಉಲ್ಲೇಖಿಸಿದ್ದಾರೆ. ಕಪಿಲ್ ಮಿಶ್ರಾ ದ್ವೇಷಪೂರಿತ ಹೇಳಿಕೆ ನೀಡಿದ್ದೇ ಕಾರಣವಾಗಿತ್ತು ಅಂತಾ ತಿಳಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ನಲ್ಲಿ ಈ ಆಡಿಯೋ ಸದ್ಯ ವೈರಲ್ ಆಗಿದೆ.
ಆದರೆ ಅವರು ಎಲ್ಲೂ ಕಪಿಲ್ ಮಿಶ್ರಾ ಹೆಸರನ್ನ ನೇರವಾಗಿ ಉಲ್ಲೇಖಿಸದೇ, ಅವರ ಹೇಳಿಕೆಯನ್ನಷ್ಟೇ ಉಲ್ಲೇಖಿಸುವ ಮೂಲಕ ಪರೋಕ್ಷವಾಗಿ ತಿಳಿಸಿದ್ದಾರೆ. ದೆಹಲಿಯ ಶಾಹಿನ್ ಬಾಗ್ ನಂತಹ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯುದ್ದನ್ನ ಉದ್ದೇಶಿಸಿ ಮಾತನಾಡಿದ್ದ ಬಿಜೆಪಿ ನಾಯಕ ಮಿಶ್ರಾ, “ಪೊಲೀಸರು ಪ್ರತಿಭಟನಾಕಾರರ ಬಳಿ ಇಲ್ಲದೇ ಹೋಗಿದ್ದರೆ, ನಮ್ಮ ಕಾರ್ಯಕರ್ತರು ಅಲ್ಲಿಗೆ ಹೋಗಿ ತೆರವುಗೊಳಿಸುತ್ತಿದ್ದರು” ಎಂದಿದ್ದರು. ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೂ ಮುನ್ನ ಈ ಹೇಳಿಕೆಯನ್ನ ನೀಡಿದ್ದರು. ಈ ಹೇಳಿಕೆಯನ್ನೇ ಸುಮಾರು 25 ಸಾವಿರ ಮಂದಿ ಪಾಲ್ಗೊಂಡಿದ್ದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಮಾರ್ಕ್ ಝುಕರ್ಬರ್ಗ್ ಉಲ್ಲೇಖಿಸಿದ್ದಾರೆ.
ಅಲ್ಲದೇ ಅಂದು ಮುಂದುವರಿದು ಕಪಿಲ್ ಮಿಶ್ರಾ “ ಅಮೆರಿಕಾ ಅಧ್ಯಕ್ಷರು ಎಲ್ಲಿತನಕ ಭಾರತದಲ್ಲಿ ಇರುವರೋ ಅಲ್ಲಿ ತನಕ ನಾವು ಶಾಂತರಾಗಿರುವೆವು. ನಂತರ ನಾವು ಪೊಲೀಸರ ಮಾತನ್ನೂ ಆಲಿಸಲಾರೆವು, ಎಲ್ಲರನ್ನೂ ತೆರವುಗೊಳಿಸುವೆವು” ಎಂದಿದ್ದರು. ಆನಂತರದ ಕ್ಷಣದಲ್ಲಿ ದೆಹಲಿ ಈಶಾನ್ಯ ಭಾಗದಲ್ಲಿ ಗಲಭೆ ತಾರಕಕ್ಕೇರಿ, ಕೋಮು ಗಲಭೆಯೇ ನಡೆದಿತ್ತು. ಗುಪ್ತಚರ ಅಧಿಕಾರಿ ಸಹಿತ ಸುಮಾರು 54 ಮಂದಿಯ ಹತ್ಯೆ ನಡೆದಿತ್ತು.
Also Read: ಯಾವುದು ಪ್ರಚೋದನೆ? ಯಾವುದು ದೇಶದ್ರೋಹ? ದೇಶದಲ್ಲಿ ಶುರುವಾಯ್ತಾ ಭಯದ ವಾತಾವರಣ?
ಆದ್ದರಿಂದ ಇಂತಹ ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಯನ್ನ ಫೇಸ್ಬುಕ್ ಸಹಿಸುವುದಿಲ್ಲ ಎಂದಿದ್ದಾರೆ. ಆದರೆ ಅಮೆರಿಕಾ ಗಲಭೆಗೆ ಸಾಕಷ್ಟು ದುಪ್ಪ್ರೇರಣೆ ನೀಡಿದ್ದ ಅಮೆರಿಕಾ ಅಧ್ಯಕ್ಷರ ಹೇಳಿಕೆಯನ್ನ ಮಾತ್ರ ಝುಕರ್ಬರ್ಗ್ ಖಂಡಿಸದೇ ಇರೋದು ಹಾಗೂ ಅದಕ್ಕಿಂತಲೂ ಜಾಸ್ತಿ ಅದನ್ನ ಅಳಿಸಿ ಹಾಕದೇ ಇರೋದು ಚರ್ಚೆಗೆ ಕಾರಣವಾಗಿದೆ.
ಆದರೆ ಕಪಿಲ್ ಮಿಶ್ರಾ ದೆಹಲಿ ಪೊಲೀಸರಿಂದ ಹೆಚ್ಚಿನ ವಿಚಾರಣೆ ಎದುರಿಸದೇ, ನ್ಯಾಯಾಲಯದಲ್ಲೂ ಸುಲಭವಾಗಿ ಜಾಮೀನು ಪಡೆಯುತ್ತಾರೆ. ಆದರೆ ಗಲಭೆಯಲ್ಲಿ ಭಾಗಿ ಅನ್ನೋ ಆರೋಪ ಹೊರಿಸಿ ವಿದ್ಯಾರ್ಥಿನಿ ಸಫೂರಾ ಝರ್ಗಾರ್ ಅಂತಹವರನ್ನ ಇಂದಿಗೂ ತಿಹಾರ್ ಜೈಲಿನಲ್ಲಿ ಬಂಧಿಸಿಡಲಾಗಿದೆ. ಒಟ್ಟಿನಲ್ಲಿ ಫೇಸ್ಬುಕ್ ಸಿಇಓ ಇಂತಹ ಹೇಳಿಕೆ ನೀಡಿರೋದು ಒಂದರ್ಥದಲ್ಲಿ ಜಾಗತಿಕ ಮಟ್ಟದಲ್ಲಿಯೇ ದೆಹಲಿ ಗಲಭೆಗೆ ಬಿಜೆಪಿ ನಾಯಕರೇ ಕಾರಣ ಅನ್ನೋದನ್ನ ಬೊಟ್ಟು ಮಾಡಿ ತೋರಿಸಿದೆ.