ದೇಶದಲ್ಲಿ ಕರೋನಾ ಸೋಂಕು ಅಬ್ಬರ ನಡೆಸುತ್ತಿದೆ. ಜುಲೈ ಅಂತ್ಯದ ವೇಳೆಗೆ ದೆಹಲಿ ಒಂದರಲ್ಲೇ ಐದೂವರೆ ಲಕ್ಷ ಜನರಿಗೆ ಸೋಂಕು ಹರಡಲಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಅಷ್ಟು ಮಾತ್ರವಲ್ಲ ಇದೀಗ 30 ಸಾವಿರ ಕರೋನಾ ಸೋಂಕಿತರನ್ನು ಹೊಂದಿರುವ ದೆಹಲಿಯಲ್ಲಿ ಜೂನ್ 15ರ ವೇಳೆಗೆ 44 ಸಾವಿರ ಸೋಂಕಿತರಾಗಲಿದ್ದು, 6,600 ಜನರಿಗೆ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಬೇಕಾಗಿದೆ. ಜೂನ್ ಅಂತ್ಯದ ವೇಳೆಗೆ ದೆಹಲಿಯಲ್ಲಿ ಒಂದು ಲಕ್ಷ ಗಡಿ ದಾಟಲಿದ್ದು, 15 ಸಾವಿರ ಬೆಡ್ಗಳ ವ್ಯವಸ್ಥೆ ಬೇಕಿದೆ. ಅದೇ ರೀತಿ ಜುಲೈ 15ರ ವೇಳೆ ಎರಡೂವರೆ ಲಕ್ಷ ಜನರಿಗೆ ಸೋಂಕು ಹರಡಲಿದ್ದು, 15 ಸಾವಿರ ಬೆಡ್ಗಳ ಅವಶ್ಯಕತೆ ಎದುರಾಗಲಿದೆ. ಜುಲೈ ಅಂತ್ಯಕ್ಕೆ ರಾಷ್ಟ್ರ ರಾಜಧಾನಿಯ ಐದೂವರೆ ಲಕ್ಷ ಜನರು ಸೋಂಕಿಗೆ ತುತ್ತಾಗಲಿದ್ದಾರೆ ಎಂದು ಸ್ವತಃ ಉಪಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ, ದೆಹಲಿ ಜನರಿಗಾಗಿ ಆಸ್ಪತ್ರೆ ಬೆಡ್ ಕಾಯ್ದಿರಿಸಿದ್ದ ದೆಹಲಿ ಸರ್ಕಾರದ ನಿರ್ಧಾರವನ್ನು ಲೆಫ್ಟಿನೆಂಟ್ ಗವರ್ನರ್ ತೆಗೆದುಹಾಕಿದ್ದಾರೆ.
ಲಾಕ್ಡೌನ್ ಎಂಬುದೇ ಮೊದಲ ಗೊಂದಲ..!
ಮಾಚ್ 24ರಂದು ಲಾಕ್ಡೌನ್ ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಲಾಕ್ಡೌನ್ ಆದೇಶ ಜಾರಿ ಮಾಡಿದ್ದರು. ಮುಂಜಾಗ್ರತಾ ಕ್ರಮ ಕೈಗೊಳ್ಳದೆ ತೆಗೆದುಕೊಂಡ ಕೇಂದ್ರ ಸರ್ಕಾರದ ಮಹಾನ್ ಎಡವಟ್ಟು ಇಡೀ ದೇಶಾದ್ಯಂತ ಜನರು ಹಸಿವಿನಿಂದ ಕಂಗಾಲಾಗುವಂತೆ ಮಾಡಿತ್ತು. ಮಾರ್ಚ್ 24ರಂದು ಭಾರತದಲ್ಲಿ ಕೇವಲ 564 ಕೇಸ್ಗಳು ಮಾತ್ರ ಇದ್ದವು. 10 ಜನರು ಮಾತ್ರ ಸಾವನ್ನಪ್ಪಿದ್ದರು. 564 ಪ್ರಕರಣಗಳ ಪೈಕಿ 107 ಕೇಸ್ಗಳು ಕೇರಳದಲ್ಲಿ 101 ಕೇಸ್ಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದವು. ಆಗಲೇ ಲಾಕ್ಡೌನ್ ಮಾಡಿದ್ದು ತುಂಬಾ ಒಳ್ಳೆಯದು. ಆದರೆ, ಲಾಕ್ಡೌನ್ ಘೋಷಣೆ ಮಾಡಿದ ಬಳಿಕ ಕೆಲವು ದಿನಗಳ ಕಾಲ ವಲಸೆ ಕಾರ್ಮಿಕರು ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿದ್ದ ಪ್ರವಾಸಿಗರು, ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವುದಕ್ಕೆ ಅವಕಾಶ ಕೊಟ್ಟಿದ್ದರೆ ಇಷ್ಟು ಪ್ರಮಾಣದ ಸೋಂಕಿತರು ಏರಿಕೆಯಾಗುತ್ತಿರಲಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಲಾಕ್ಡೌನ್ ವಿನಾಯಿತಿ ವೇಳೆ ಸಂಕಷ್ಟದಲ್ಲಿತ್ತು ಭಾರತ..!
ಸರ್ಕಾರಕ್ಕೆ ತಾನು ಮಾಡಿದ ಎಡವಟ್ಟು ಮೇ ಅಂತ್ಯದ ವೇಳೆಗೆ ಅರಿವಾಗುತ್ತಾ ಹೋಯ್ತು. ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ಸಾಗುತ್ತಾ ಸಾವಿನ ಮನೆ ಸೇರಲು ಶುರು ಮಾಡಿದ್ರು. ಇದನ್ನು ಸರಿ ಮಾಡಲು ಮುಂದಾದ ಕೇಂದ್ರ ಸರ್ಕಾರ ಮೇ 1 ರಿಂದ ಶ್ರಮಿಕ್ ರೈಲು ಆರಂಭ ಮಾಡಿತ್ತು. ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಸಿ ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು ಎಲ್ಲಾ ದಾಖಲಾತಿಗಳನ್ನು ಪಡೆದು ಹುಟ್ಟೂರಿಗೆ ತೆರಳಲು ಅನುವು ಮಾಡಿಕೊಡಲಾಯ್ತು. ಆ ವೇಳೆಗೆ ಭಾರತದಲ್ಲಿ 37,257 ಅಂದರೆ ಹೆಚ್ಚುಕಡಿಮೆ 40 ಸಾವಿರ. 38 ದಿನಗಳ ಬಳಿಕ ಲಾಕ್ಡೌನ್ನಲ್ಲಿ ಸ್ವಲ್ಪ ವಿನಾಯಿತಿ ಸಿಗುತ್ತಿದ್ದ ಹಾಗೆ ಮೇ 20 ರಿಂದ ದೇಶಾದ್ಯಂತ ಕೈಗಾರಿಕೆಗಳನ್ನು ತೆರೆಯಲು ಅನುವು ಮಾಡಿಕೊಡಲಾಯ್ತು. ಜೂನ್ 1 ರಿಂದ ಬಸ್ ಸಂಚಾರ ರೈಲುಗಳ ಸಂಚಾರವೂ ಶುರುವಾಯ್ತು. ಇದೀಗ ದೇಶದಲ್ಲಿ ಪ್ರತಿದಿನ ಸರಾಸರಿ 10 ಸಾವಿರ ಕೇಸ್ಗಳು ಪತ್ತೆಯಾಗುತ್ತಿವೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರಿಗೆ ಸೋಂಕು ಬರುತ್ತಿದೆ. ದೆಹಲಿಯಲ್ಲಿ ಗಂಗಾರಾಮ್ ಆಸ್ಪತ್ರೆಯ 300 ಸಿಬ್ಬಂದಿ ಹಾಗೂ ಕುಟುಂಬದ 100 ಜನ ಸೇರಿ ಒಟ್ಟು 400 ಜನರಿಗೆ ಸೋಂಕು ಬಂದಿದೆ. ಅಂದರೆ ಸೋಂಕಿತರ ಸಂಖ್ಯೆ ಹೆಚ್ಚಾದ ಬಳಿಕ ವಿನಾಯಿತಿ ಕೊಟ್ಟು ಸರ್ಕಾರವೇ ಸೋಂಕು ಹರಡುವುದಕ್ಕೆ ಕಾರಣವಾಯ್ತು ಎನ್ನುವಂತಾಗಿದೆ. ದೆಹಲಿಯಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ. ಇದನ್ನು ಏಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಕೂಡ ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತಿಲ್ಲ.

ಕರ್ನಾಟಕದಲ್ಲೂ ನಿಂತಿಲ್ಲ ಗೊಂದಲದ ನಿರ್ಧಾರಗಳು..!
ಕರ್ನಾಟಕದಲ್ಲೂ ಸೋಂಕಿತರ ಪ್ರಮಾಣ ನಿಧಾನವಾಗಿ ಏರುಗತಿಯಲ್ಲಿ ಸಾಗುತ್ತಿತ್ತು. ಆ ಬಳಿಕ ಮಹಾರಾಷ್ಟ್ರದಿಂದ ಬಂದವರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಸೋಂಕು ಹರಡಿಸಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಲೇ ಸಾಗಿತು. ಇದೀಗ ದಿನೆ ದಿನೇ ಸೋಂಕು ಹೆಚ್ಚುತ್ತಲೇ ಸಾಗಿದೆ. ಕರೋನಾ ಸೋಂಕು ಎಲ್ಲಿಂದ ಯಾರಿಗೆ ಹೇಗೆ ಬರುತ್ತಿದೆ ಎನ್ನುವುದೇ ಅರ್ಥವಾಗದ ರೀತಿಯಲ್ಲಿ ಸೋಂಕು ಹಬ್ಬುತ್ತಿದೆ. ಆದರೆ, ಸರ್ಕಾರ ಮಾತ್ರ ಸಮುದಾಯಕ್ಕೆ ಸೋಂಕು ಹರಡುತ್ತಿಲ್ಲ. ಎಲ್ಲರೂ ಕ್ವಾರಂಟೈನ್ನಲ್ಲಿದ್ದವರಿಗೆ ಬರುತ್ತಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಲೇ ಇದೆ. ಸೋಂಕು ಏರುತ್ತಲೇ ಇದೆ. ಎಲ್ಲಾ ವ್ಯವಹಾರ ತೆರೆದುಕೊಂಡಿದೆ, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ ಎಂದು ಹೇಳುತ್ತಾ ಫ್ರೀ ಮಾಡಿದೆ. ಹೋಟೆಲ್, ರೆಸ್ಟೋರೆಂಟ್, ಮಾಲ್ ಸೇರಿದಂತೆ ಯಾವುದೇ ವ್ಯವಹಾರಕ್ಕೂ ಅಡ್ಡಿಯಿಲ್ಲ. ಸರ್ಕಾರಿ ಕಚೇರಿಗಳು ಖಾಸಗಿ ಕಚೇರಿ, ಕಂಪನಿಗಳು, ಫ್ಯಾಕ್ಟರಿಗಳೂ ಕೆಲಸ ಮಾಡುತ್ತಿವೆ. ಆದರೆ ಸರ್ಕಾರ ಮಾತ್ರ ಮದುವೆ ಕಾರ್ಯಕ್ರಮದಲ್ಲಿ 50 ಜನ ಹಾಗೂ ಶವಸಂಸ್ಕಾರದಲ್ಲಿ 20 ಜನರು ಅಷ್ಟೇ ಭಾಗಿಯಾಗಬೇಕು ಎಂದು ಮತ್ತೊಮ್ಮೆ ನೆನಪು ಮಾಡಿದೆ.
ಡಿ.ಕೆ ಶಿವಕುಮಾರ್ ಪದಗ್ರಹಣಕ್ಕೆ ಅಡ್ಡಿ..!
ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ ಶಿವಕುಮಾರ್ ಮೂರು ತಿಂಗಳ ಕಾಲ ಅಧಿಕಾರ ಸ್ವೀಕಾರ ಮಾಡಲು ಸಾಧ್ಯವಾಗಿಲ್ಲ. ಆದರೆ ಸರ್ಕಾರಕ್ಕೆ ಮೂರು ಮೂರು ಬಾರಿ ಮನವಿ ಮಾಡಿಕೊಂಡರು ಸರ್ಕಾರ ಮಾತ್ರ ಅನುಮತಿ ನಿರಾಕರಿಸಿದೆ. ಜೂನ್ 14 ರಂದು ಕಾರ್ಯಕ್ರಮ ನಡೆಸಲು ಮುಂದಾಗಿದ್ದ ಕಾಂಗ್ರೆಸ್ಗೆ ಸರ್ಕಾರ ಅನುಮತಿ ನಿರಾಕರಿಸಿದೆ. ಇದಕ್ಕೆ ಕೊಟ್ಟಿರುವ ಕಾರಣ ಮದುವೆಗೆ 50 ಜನ ಮತ್ತು ಶವಸಂಸ್ಕಾರಕ್ಕೆ 20 ಜನ ಮಾತ್ರ ಭಾಗವಹಿಸಲು ಅವಕಾಶ ಕೊಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಸ್ಪಷ್ಟವಾಗಿದೆ. ಹೀಗಾಗಿ ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಪತ್ರದ ಮೂಲಕ ತಿಳಿಸಿದೆ ಎಂದಿದೆ. ಸರ್ಕಾರ ಕಾನೂನು ಪಾಲನೆ ಮಾಡುತ್ತಿದೆ ಎಂದು ಭಾವಿಸುವುದು ತಮಾಷೆ ಎನಿಸುತ್ತಿದೆ. ಶ್ರೀರಾಮುಲು ಅವರ ಬಹಿರಂಗ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರು ಭಾಗಿಯಾಗುತ್ತಾರೆ. ಈಶ್ವರಪ್ಪ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವೇ ಮಾಯಾಗಿರುತ್ತದೆ. ಅದೇ ರೀತಿ ಮುತ್ತಪ್ಪ ರೈ ಸೇರಿದಂತೆ ಎಲ್ಲರ ಶವಸಂಸ್ಕಾರದಲ್ಲೂ 20 ಜನರು ಎಂದು ಕಾನೂನು ಜಾರಿ ಮಾಡುವ ಸರ್ಕಾರ ಚಿರಂಜೀವಿ ಸರ್ಜಾ ಶವಸಂಸ್ಕಾರದಲ್ಲಿ ಯಾವುದೇ ಕಾನೂನು ಪಾಲನೆ ಆಗುವುದಿಲ್ಲ. ಸರ್ಕಾರದ ಈ ರೀತಿಯ ಧ್ವಂದ್ವ ನಿಲುವುಗಳೇ ಕರೋನಾ ಸೋಂಕು ಹರಡುವುದಕ್ಕೆ ಕಾರಣವಾಗುತ್ತಿದೆ ಎನ್ನುತ್ತಿದ್ದಾರೆ ಜನ.
ಇನ್ನಾದರೂ ಸರ್ಕಾರ ತಾನು ಸೂಚಿಸಿದ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯ ಆಗುವಂತೆ ನೋಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಸರ್ಕಾರ ಮೇಲೆ ಜನರಿಗೆ ಜಿಗುಪ್ಸೆ ಬರಲಿದ್ದು ಒಂದಲ್ಲ ಒಂದು ದಿನ ಅಧಿಕಾರಿಗಳ ವಿರುದ್ಧ ತಿರುಗಿ ಬೀಳುವುದು ಖಚಿತ.







