ಕರೋನಾ ಸೋಂಕು ಹರಡುವ ಭೀತಿಯಿಂದ ವಾರ್ಷಿಕ ಪುರಿ ಜಗನ್ನಾಥ ರಥ ಯಾತ್ರೆಗೆ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಕೇವಲ ಯಾತ್ರೆಗಷ್ಟೇ ಅಲ್ಲದೇ, ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆಯುವ ಎಲ್ಲಾ ರೀತಿಯ ಚಟುವಟಿಕೆಗಳಿಗೂ ತಡೆ ನೀಡಿ ಆದೇಶ ಹೊರಡಿಸಿದೆ.
ಜೂನ್ 23ರಿಂದ ಆರಂಭವಾಗಬೇಕಿದ್ದ ಯಾತ್ರೆಗೆ ತಡೆ ಕೋರಿ ಒಡಿಶಾ ವಿಕಾಸ್ ಪರಿಷದ್ ಎಂಬ ಸರ್ಕಾರೇತರ ಸಂಸ್ಥೆ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು. ಯಾತ್ರೆ ನಡೆಯುವ ಸ್ಥಳದಲ್ಲಿ ಲಕ್ಷಾಂತರ ಭಕ್ತರು ಸೇರುವುದರಿಂದ ಕರೋನಾ ಸೋಂಕು ಹರಡುವ ಸಾಧ್ಯತೆಗಳಿವೆ ಎಂದು ಪ್ರತಿಪಾದಿಸಿತ್ತು.
ಪುರಿ ಜಗನ್ನಾಥ ಯಾತ್ರೆಯ ಸಮಯದಲ್ಲಿ ನಡೆಯುವ ರಥೋತ್ಸವದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಸಾಧ್ಯ. ರಥ ಎಳೆಯುವ ಸಂದರ್ಭದಲ್ಲಿ ಜನರು ಒತ್ತೊತ್ತಾಗಿ ನಿಲ್ಲುತ್ತಾರೆ. ಹಾಗಾಗಿ ಸೋಂಕು ಹರಡುವುದು ಕೂಡಾ ಹೆಚ್ಚಾಗಬಹುದು, ಎಂದು ವಾದಿಸಿದ್ದರು.
“ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ರಥ ಯಾತ್ರೆ ಹಾಗೂ ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದಕ್ಕೆ ತಡೆ ವಿಧಿಸುತ್ತಿದ್ದೇವೆ,” ಎಂದು ಸುಪ್ರಿಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾದ ಎಸ್ ಎ ಬೊಬ್ಡೆ ಆದೇಶಿಸಿದ್ದಾರೆ.
![](https://pratidhvani.in/wp-content/uploads/2021/02/TPFI-121.jpg)
ಈ ಸಂದರ್ಭದಲ್ಲಿ ಸಂಪೂರ್ಣ ತಡೆ ನೀಡುವುದರ ಬದಲು ಕೆಲವೊಂದು ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಬೇಕೆಂದು ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿನಂತಿಸಿದಾಗ “ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವ ರೀತಿ ಜನ ಸೇರುತ್ತಾರೆಂಬುದರ ಕುರಿತು ನಮಗೆ ಸಾಕಾಷ್ಟು ಅನುಭವವಿದೆ. ಜಗನ್ನಾಥ ಸ್ವಾಮಿ ನಮ್ಮನ್ನು ಕ್ಷಮಿಸುತ್ತಾರೆ,” ಎಂದು ಸಿಜೆಐ ಬೊಬ್ಡೆ ಉತ್ತರಿಸಿದ್ದಾರೆ.