ರಾಷ್ಟ್ರೀಯ ಅಪರಾಧ ದಾಖಲಾತಿ ಕಚೇರಿ (ಎನ್ಸಿಆರ್ಬಿ )ಇತ್ತೀಚಿಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಉತ್ತರ ಪ್ರದೇಶದಲ್ಲಿ 2017 ರಲ್ಲಿ 4,669 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮೊದಲನೆಯ ಸ್ಥಾನದಲ್ಲಿ ಮಧ್ಯ ಪ್ರದೇಶ ಇದ್ದು ಇಲ್ಲಿ 5,599 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ ಒಟ್ಟು 676 ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಸೇರಿದಂತೆ, ದೇಶದಲ್ಲಿ ಅತಿ ಹೆಚ್ಚು ಅಪರಾಧ ಪ್ರರಣಗಳು ವರದಿ ಆಗುತ್ತಿರುವುದು ಕಳವಳಕಾರಿಯಾಗಿದೆ.
2016 ರಲ್ಲೂ ಉತ್ತರ ಪ್ರದೇಶದಲ್ಲಿ 4,817 ಅತ್ಯಾಚಾರ ಪ್ರಕರಣಗಳು ವರದಿ ಆಗಿದ್ದು, ಇದರಲ್ಲಿ 682 ಸಾಮೂಹಿಕ ಅತ್ಯಚಾರ ಪ್ರಕರಣಗಳಾಗಿವೆ. ಮಧ್ಯ ಪ್ರದೇಶದಲ್ಲಿ ಇದೇ ಅವಧಿಯಲ್ಲಿ 4,902 ಅತ್ಯಚಾರ ಪ್ರಕರಣಗಳು ನಡೆದಿದ್ದ, 266 ಸಾಮೂಹಿಕ ಅತ್ಯಾಚಾರ ಪ್ರಕರಣಗಳು. 2016 ರಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆದಿರುವ ಅಪರಾಧ ಪ್ರಕರಣಗಳು 49,262 ಆಗಿದ್ದರೆ, ಮಧ್ಯ ಪ್ರದೇಶದಲ್ಲಿ 26,604 ಪ್ರಕರಣಗಳು ವರದಿ ಆಗಿವೆ. ಮಕ್ಕಳ ಅಪಹರಣ ಪ್ರಕರಣದಲ್ಲೂ ಉತ್ತರ ಪ್ರದೇಶ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. 2017 ರಲ್ಲಿ ಇಲ್ಲಿ ಒಟ್ಟು 15,898 ಮಕ್ಕಳ ಅಪಹರಣ ಪ್ರಕರಣಗಳು ವರದಿ ಆಗಿದ್ದು, ಮಧ್ಯ ಪ್ರದೇಶದಲ್ಲಿ 7,123 ಪ್ರಕರಣಗಳು ವರದಿ ಆಗಿವೆ.
ಇಷ್ಟೆಲ್ಲಾ ಇದ್ದರೂ, 2017 ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಅಪರಾಧ ಕಾನೂನು (ಅಪರಾಧಗಳ ಸಂಯೋಜನೆ ಮತ್ತು ವಿಚಾರಣೆಗಳ ಇಳಿಕೆ ) ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವ ಮೂಲಕ ರಾಜಕೀಯ ವ್ಯಕ್ತಿಗಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಹಿಂತೆಗೆದುಕೊಂಡರು. ಕೇಂದ್ರದ ಮಾಜಿ ಆಂತರಿಕ ವ್ಯವಹಾರಗಳ ಸಚಿವ ಷಹಜಹಾನ್ಪುರದ ಸಂಸದ ಸ್ವಾಮಿ ಚಿನ್ಮಯಾನಂದ್ ಆ ಕಾನೂನಿನ ಫಲಾನುಭವಿಗಳಲ್ಲಿ ಒಬ್ಬರು.

2011 ರಲ್ಲಿ ಚಿನ್ಮಯಾನಂದ ಅವರ ಆಶ್ರಮದಲ್ಲೇ ಕೆಲಸ ಮಾಡುತಿದ್ದ ಮ್ಯಾನೇಜರ್ ಒಬ್ಬರು ಚಿನ್ಮಯಾನಂದ ಮೇಲೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. ತಿದ್ದುಪಡಿ ಕಾಯ್ದೆಯನ್ವಯ ಅದನ್ನು ಹಿಂತೆಗೆದುಕೊಳ್ಳಬೇಕಿದೆ. ಆದರೆ, 2018 ರಲ್ಲಿ ಶಹಜಹಾನ್ಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಈ ಪ್ರಕರಣವನ್ನು ಮುಂದುವರೆಸಬೇಕೆಂದು ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಚಿನ್ಮಯಾನಂದರ ಬಂಧನವನ್ನು ಹೈಕೋರ್ಟ್ ತಡೆ ಹಿಡಿದಿತ್ತು. ಆಶ್ರಮವನ್ನು ನಿರ್ವಹಿಸುತ್ತಿದ್ದ ಮಹಿಳಾ ಮ್ಯಾನೇಜರ್ ಆರೋಪಿ ತನ್ನನ್ನು ಸೆರೆಯಲ್ಲಿಟ್ಟುಕೊಂಡು ಹಲವಾರು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪವನ್ನೇ ಮಾಡಿದ್ದಾರೆ.
ಇದು ಸುಳ್ಳು ಪ್ರಕರಣ ಎಂದು ಮಾಜಿ ಸಚಿವರು ಹೇಳಿದ್ದಾರೆ. ಆದರೆ, ಕಳೆದ ಸೆಪ್ಟೆಂಬರ್ನಲ್ಲಿ ಅವರು ನಡೆಸುತ್ತಿರುವ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರದ ಆರೋಪ ಹೊರಿಸಿದಾಗಲೂ, ಆಕೆ ತನ್ನ ಸಹಚರರೊಂದಿಗೆ ಸುಲಿಗೆ ಮಾಡಿದ ಆರೋಪದ ಮೇಲೆ ಕೌಂಟರ್ ಕೇಸ್ ದಾಖಲಿಸಲಾಗಿದೆ. ಪರಿಣಾಮವಾಗಿ, ದೂರುದಾರ ಸಂತ್ರಸ್ಥೆಯ ಸಹಪಾಠಿಗಳು ಹಾಗೂ ಆರೋಪಿ ಇಬ್ಬರೂ ಜೈಲಿನಲ್ಲಿದ್ದಾರೆ.
ದೂರುದಾರೆ ಕಾನೂನು ವಿದ್ಯಾರ್ಥಿನಿ ತನ್ನ ಮೇಲೆ ಒಂದು ವರ್ಷ ಸತತ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ನಡೆದಿತ್ತು ಎಂದು ಹೇಳಿದ್ದಳು ಮತ್ತು ಹಿಂದಿನ ಪ್ರಕರಣಗಳಿಗಿಂತ ಇದು ಸ್ಪಷ್ಟವಾಗಿದೆ. ಆದರೆ ಸ್ವಾಮಿ ಚಿನ್ಮಯಾನಂದ್ ಅವರಿಗೆ ದೊಡ್ಡ ಮೊತ್ತವನ್ನು ನೀಡುವಂತೆ ಅವರನ್ನು ಬಲೆಗೆ ಬೀಳಿಸಲು ಯತ್ನಿಸಿದ್ದಕ್ಕಾಗಿ ಪೊಲೀಸರು ಆಕೆಯ ಮತ್ತು ಮೂವರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿದ್ದು, ಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ನಡೆಯುತಿದ್ದು, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಸಿ ಪ್ರಕಾರ ಮತ್ತು ಸ್ವಾಮಿ ವಿರುದ್ಧ ಅಕ್ರಮ ಬಂಧನ, ಹಿಂಬಾಲಿಸುವುದು, ಕ್ರಿಮಿನಲ್ ಬೆದರಿಕೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾನೂನು ವಿದ್ಯಾರ್ಥಿ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿದ ನಂತರ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್ ಅಂತ್ಯದಲ್ಲಿ ವಕೀಲರ ಗುಂಪೊಂದು ಇದನ್ನು ಸುಪ್ರೀಂ ಕೋರ್ಟ್ನಲ್ಲಿ ದೂರು ದಾಖಲಿಸುವ ಮೂಲಕ ಇದು ಬೆಳಕಿಗೆ ಬಂದಿತು. ನಂತರ ನ್ಯಾಯಾಲಯವು ಎಸ್ಐಟಿಯನ್ನು ರಚಿಸಿತು ಮತ್ತು ಪ್ರಕರಣದ ಮೇಲ್ವಿಚಾರಣೆ ನಡೆಸುವಂತೆ ಹೈಕೋರ್ಟ್ನ ಅಲಹಾಬಾದ್ ಪೀಠಕ್ಕೆ ನಿರ್ದೇಶಿಸಿತು. ಉನ್ನಾವ್ ಅತ್ಯಾಚಾರ ಪ್ರಕರಣದ ನಂತರ ಮತ್ತು ಸಂತ್ರಸ್ಥರು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬೇಕಾಗಿ ಬಂದಾಗ, ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಅಸ್ತವ್ಯಸ್ತವಾಗಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಭಾರತದ ಅತಿದೊಡ್ಡ ರಾಜ್ಯದಲ್ಲಿನ ಕಳವಳಕಾರಿಯಾಗಿರುವ ಕಾನೂನು ಮತ್ತು ಸುವ್ಯವಸ್ಥೆಯ ಜ್ವಲಂತ ನಿದರ್ಶನ ಇದಾಗಿದೆ.

ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ದೂರು ದಾಖಲಿಸುವ ಮೊದಲು ಹಲವು ಬಾರಿ ಯೋಚಿಸಬೇಕಾಗಿದೆ. ಇದು ದೇಶದ ಉಳಿದ ಭಾಗಗಳಲ್ಲೂ ಇರುವ ಪರಿಸ್ಥಿತಿ. ಅತ್ಯಾಚಾರದಿಂದ ಬದುಕುಳಿದವರು ಹಲವಾರು ಬಾರಿ ಮತ್ತೆ ಮತ್ತೆ ಅವಮಾನವನ್ನು ಎದುರಿಸಬೇಕಾಗುತ್ತದೆ. ಮೊದಲು ಹಲ್ಲೆಗೆ ಒಳಗಾದ ಮತ್ತು ನಂತರ ದೂರು ನೀಡಲು ಧೈರ್ಯ ಮಾಡಿದ್ದಕ್ಕಾಗಿ ಹೆಚ್ಚಾಗಿ ಮಹಿಳೆಯರನ್ನು ದೂಷಿಸಲಾಗುತ್ತದೆ. ನಿರ್ಭಯಾ ಪ್ರಕರಣವು 2012 ರಲ್ಲಿ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಆದರೆ ಉತ್ತರ ಪ್ರದೇಶದಲ್ಲಿ ಕಾನೂನು ವಿದ್ಯಾರ್ಥಿನಿ ಅತ್ಯಾಚಾರದ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದಕ್ಕಾಗಿ ಜೈಲಿಗೆ ಹೋಗಬೇಕಾಗಿದೆ.
ಉತ್ತರಪ್ರದೇಶದಲ್ಲಿ ಮಹಿಳೆಯಾಗಿ ಬದುಕುವುದು ಕಷ್ಟಕರವಾಗುತ್ತಿದೆ , ಅದರಲ್ಲೂ ಸಂತ್ರಸ್ಥೆ ಲೈಂಗಿಕ ಹಲ್ಲೆಗೆ ಒಳಗಾಗಿದ್ದರೆ ಪರಿಸ್ಥಿತಿ ಇನ್ನೂ ಭೀಕರ. ಎನ್ಸಿಆರ್ಬಿ 2017 ರ ವರದಿಯ ಪ್ರಕಾರ, ಕಾರ್ಯಂಗ ಮತ್ತು ನ್ಯಾಯಂಗದ ಮೂಲಕ ಸಂತ್ರಸ್ತರಿಗೆ ನ್ಯಾಯ ದೊರಕುವ ಸಾಧ್ಯತೆ ತೀರಾ ಕನಿಷ್ಟವಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಅತ್ಯಾಚಾರದ ಆರೋಪಿಗಳ ಪತ್ತೆ ಪ್ರಮಾಣವು ಶೇಕಡಾ 33 ನ್ನು ಮೀರುವುದಿಲ್ಲ ಎಂದಾಗ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಯಾರಾದರೂ ಊಹಿಸಿಕೊಳ್ಳಬಹುದಾಗಿದೆ. ಚಿನ್ಮಯಾನಂದ ಅತ್ಯಾಚಾರ ಪ್ರಕರಣದಲ್ಲಿ ಗಂಭೀರ ಪ್ರಕರಣವೇ ಆಗಿದ್ದರೂ ಚಿನ್ಮಯಾನಂದ್ ಬಂಧನಕ್ಕೆ ಒಳಗಾಗಿರಲಿಲ್ಲ ಎಂದಾಗ ರಾಜ್ಯ ಸರ್ಕಾರದ ಮೌನ ಸಮ್ಮತಿಯೂ ಇದಕ್ಕಿದೆ ಎಂಬ ಸಂದೇಶ ಕಾಣುತ್ತಿದೆ.
ಈ ಪ್ರಕರಣದಲ್ಲಿ ಕಾನೂನು ವಿದ್ಯಾರ್ಥಿನಿ ಕೆಲ ಕಾಲ ನಾಪತ್ತೆ ಆಗಿ ನಂತರ ದೂರದ ರಾಜಸ್ಥಾನದಲ್ಲಿ ಪತ್ತೆಯಾಗಿದ್ದುದರಿಂದ, ಆಕೆಯ ಆರೋಪವನ್ನು ಸಾಬೀತುಪಡಿಸಲು ಹೆಣಗಾಡಬೇಕಿದೆ. ಪೊಲೀಸರು ಪತ್ತೆಹಚ್ಚುವ ಮೊದಲು ಆಕೆಯ ದೀರ್ಘಕಾಲದ ಕಣ್ಮರೆ ಚಿನ್ಮಯಾನಂದ್ ಅವರನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸುತ್ತಿದ್ದ ಪ್ರಕರಣಕ್ಕೆ ಮದ್ದುಗುಂಡುಗಳನ್ನು ಸೇರಿಸುತ್ತಿದೆ. 2012 ರ ಕ್ರೂರ ನಿರ್ಭಯಾ ಅತ್ಯಾಚಾರದ ನಂತರ ಕಾನೂನನ್ನು ಮತ್ತು ಪೋಲೀಸರ ತನಿಖಾ ವಿಧಾನವನ್ನು ಚುರುಕುಗೊಳಿಸಿದರೂ ಪ್ರಗತಿ ಮಾತ್ರ ಅತ್ಯಲ್ಪವೇ ಆಗಿದೆ. ಸರ್ಕಾರ ವಿಶೇಷ ಮತ್ತು ತ್ವರಿತಗತಿಯ ಕೋರ್ಟುಗಳನ್ನು ಸ್ಥಾಪಿಸಿದೆಯಾದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.
ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯು ಆರೋಪಿ ಶಾಸಕ ಕುಲದೀಪ್ ಸೆಂಗಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತು. ಪ್ರತಿ ಬಾರಿಯೂ ಸಂತ್ರಸ್ತ ಮಹಿಳೆಯರು ತಮ್ಮ ಧ್ವನಿ ಕೇಳುವಂತೆ ಮಾಡಲು ಸುಪ್ರೀಂ ಕೋರ್ಟ್ ಸಂಪರ್ಕಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಸಾವಿರಾರು ಪ್ರಕರಣಗಳಲ್ಲಿ ಮಹಿಳೆಯರಿಗೆ ತಮ್ಮ ದೂರನ್ನು ದಾಖಲಿಸುವುದೂ ಸಾಧ್ಯವಾಗುತ್ತಿಲ್ಲ. ಸರ್ಕಾರ ಮಹಿಳೆಯರ ರಕ್ಷಣೆಗೆಂದೇ ಇನ್ನಷು ವಿಶೇಷ ಮತ್ತು ತ್ವರಿತಗತಿಯ ನಾಯಾಲಯಗಳನ್ನು ಸ್ಥಾಪಿಸಲೇಬೇಕಾಗಿದೆ. ಪೋಲೀಸ್ ಠಾಣೆಗಳಲ್ಲಿ ಮಹಿಳಾ ದೌರ್ಜನ್ಯ ದೂರುಗಳಿಗೆ ಪ್ರತ್ಯೇಕ ವಿಭಾಗವನ್ನೂ ತೆರೆಯಬೇಕಿದೆ. ಆ ಮೂಲಕ ಸಂತ್ರಸ್ಥ ಮಹಿಳೆಯರಿಗೆ ಠಾಣೆಗಳಲ್ಲಿ ಕಿರುಕುಳ ಮತ್ತು ಬೆದರಿಸುವಿಕೆಯ ಘಟನೆಗಳನ್ನು ಕಡಿಮೆ ಮಾಡಬಹುದಾಗಿದೆ.
ಉನ್ನಾವೋ ಮತ್ತು ಚಿನ್ಮಯಾನಂದ ಪ್ರಕರಣಗಳಲ್ಲಿ ಸಂತ್ರಸ್ಥರಿಗೆ ನವದೆಹಲಿಯ ಕೋರ್ಟಿನಿಂದ ಮಾತ್ರ ಅಲ್ಪ ನ್ಯಾಯ ದೊರೆಯುವ ನಿರೀಕ್ಷೆಯಿದೆ. ಏಕೆಂದರೆ, ಈ ಎರಡೂ ಪ್ರಕರಣಗಳ ತನಿಖೆ ಹೈ ಕೋರ್ಟಿನ ಮೇಲ್ವಿಚಾರಣೆಯಡಿಯಲ್ಲಿ ನಡೆದಿದೆ. ಕೇಂದ್ರ ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಈ ಅತ್ಯಾಚಾರ ಕುಸಂಸ್ಕ್ರತಿ ಮುಂದುವರೆಯಲಿದೆ.