ನಾಳೆ ನಡೆಯಲಿರುವ ದೆಹಲಿ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಈಗಾಗಲೇ ತೆರೆ ಬಿದ್ದಿದೆ. ಪೌರತ್ವ ಕಾಯಿದೆ ತಿದ್ದುಪಡಿ, ಎನ್ಆರ್ಸಿಯ ವಿರುದ್ದದ ಪ್ರತಿಭಟನೆಗಳ ನಡುವೆ ದೆಹಲಿಯು ವಿಧಾನಸಭಾ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ಸಾಕ್ಷುಯಾಗಿತ್ತು. ಪ್ರಚೋದನಾಕಾರಿ ಭಾಷಣ ಮತ್ತು ಆ ನಂತರ ನಡೆದ ಗುಂಡಿನ ದಾಳಿ ಹೀಗೆ ಹಲವಾರು ಕಾರಣಗಳಿಗೆ ಈ ಬಾರಿಯ ದೆಹಲಿ ಚುನಾವಣೆ ಸದ್ದು ಮಾಡಿದೆ. ಬಿಜೆಪಿಯಂತು ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಪಡೆಯಲು ತಮ್ಮ ಪಕ್ಷ ಅತಿರಥ, ಮಹಾರಥರನ್ನು ಚುನಾವಣಾ ಪ್ರಚಾರಕ್ಕಾಗಿ ಕಣಕ್ಕಿಳಿಸಿತ್ತು.
ಪ್ರಚಾರದ ಕೊನೆಯ ದಿನವಾದ ನಿನ್ನೆ CAA, NRC, ಶಾಹಿನ್ ಬಾಘ್ ಹಾಗೂ ದೆಹಲಿಯ ಅಭಿವೃದ್ದಿಯ ಕುರಿತಾದ ವಿಚಾರಗಳು ರಾಜಕೀಯ ನಾಯಕರ ಬಾಯಲ್ಲಿ ಹರಿದಾಡಿದವು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರ ವಿಜಯ ಸಂಕಲ್ಪ ಯಾತ್ರೆ ಕೂಡ ನಿನ್ನೆ ಸಂಪನ್ನಗೊಂಡಿತು. ಇನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಈಶಾನ್ಯ ದೆಹಲಿಯ ರೋಡ್ಶೋನಲ್ಲೊ ಪಾಲ್ಗೊಂಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ಪಕ್ಷದ ಪರ ಪ್ರಚಾರ ಕೈಗೊಂಡಿದ್ದರು.
ಈ ಬಾರಿಯ ಚುನಾವಣಾ ಪ್ರಚಾರದ ಸಮಯದಲ್ಲಿ ಬಹಳಷ್ಟು ವಿಚಾರಗಳು ಚರ್ಚೆಗೆ ಒಳಪಟ್ಟಿದ್ದವು. ಅದರಲ್ಲೂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಕಳೆದ ಡಿಸೆಂಬರ್ನಲ್ಲಿ ತಮ್ಮ ಪಕ್ಷದ ಸಾಧನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ ತಾವು 2015ರ ಚುನಾವಣೆಯಲ್ಲಿ ಘೋಷಿಸಿದ್ದ ಎಲ್ಲಾ 70 ಆಶ್ವಾಸನೆಗಳನ್ನು ಈಡೇರಿಸಿರುವುದಕ್ಕೆ ದಾಖಲೆ ಒದಗಿಸಿದೆ. ಈ ಬಾರಿಯ ಚುನಾವಣೆಯಲ್ಲೂ ಅಭಿವೃದ್ದಿಯನ್ನೇ ಮೂಲಮಂತ್ರವಾಗಿರಿಸಿಕೊಂಡು ಆಮ್ ಆದ್ಮಿ ಪಕ್ಷವು ಪ್ರಚಾರ ಕಾರ್ಯ ಕೈಗೊಂಡಿತ್ತು.
ಚುನಾವಣೆ ಘೋಷಣೆಯಾಗುತ್ತಿದ್ದಂತೆ, 10 ಆಶ್ವಾಸನೆಗಳನ್ನು ನೀಡಿರುವ ಆಪ್, ಅವುಗಳನ್ನು ಈಡೇರಿಸಲು ತಮ್ಮನ್ನು ಮತ್ತೆ ಅಧಿಕಾರಕ್ಕೇರಿಸಿ ಎಂದು ಮತದಾರರಲ್ಲಿ ಮನವಿ ಮಾಡಿದೆ. ಭೂಗತ ವಿದ್ಯುತ್ ಸಂಪರ್ಕ, ದಿನವಿಡೀ ಕುಡಿಯುವ ನೀರು ಮತ್ತು ಈಗಿರುವ ಯೋಜನೆಗಳ ಸಮರ್ಪಕ ನಿರ್ವಹಣೆ ಆಪ್ನ ಪ್ರಮುಖ ಆಶ್ವಾಸನೆಗಳಲ್ಲಿ ಒಂದು. ಈ ಬಾರಿಯೂ, ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡುವುದಾಗಿ ಆಪ್ ಸರ್ಕಾರ ಹೇಳಿದೆ. ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಆಗಿರುವ ಮಹತ್ತರವಾದ ಬದಲಾವಣೆಗಳು ದಶದ ಜನರ ಹುಬ್ಬೇರುವಂತೆ ಮಾಡಿದೆ. ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದ ಮೂಲಭೂತ ಸೌಕರ್ಯಗಳು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವತ್ತ ದೆಹಲಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದಿದೆ.
ಇದನ್ನೂ ಓದಿ: ದೆಹಲಿ‘ರಣಾಂಗಣ‘ದಲ್ಲಿ ಕೇಜ್ರಿವಾಲ್ ಮುಂದೆ ಮೋ-ಶಾ ಮಂಕಾಗಿ ಕಾಣುತ್ತಿರುವುದೇಕೆ?
ಸಂಪೂರ್ಣ ದೆಹಲಿಯಲ್ಲಿ ಉಚಿತ ವೈಫೈ, ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಓಡಾಡಲು ಉಚಿತ ಪಿಂಕ್ ಟಿಕೆಟ್ ಜನರಿಗೆ ಆಮ್ ಆದ್ಮಿ ಪಕ್ಷದ ಕಡೆಗೆ ಒಲವು ತೋರುವಂತೆ ಮಾಡಿವೆ. ಸಾರಿಗೆ, ಶಿಕ್ಷಣ, ಆಧುನಿಕರಣ, ನೀರು ಮತ್ತು ನೈರ್ಮಲ್ಯ ಹೀಗೆ ದೆಹಲಿಯ ಮೂಲಭೂತ ಸಮಸ್ಯೆಗಳಿಗೆ ಆಮ್ ಆದ್ಮಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಪರಿಹಾರ ಒದಗಿಸಿದೆ. ಈ ಐದು ವರ್ಷದ ಸಾಧನೆಯನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯನ್ನು ಆಪ್ ಎದುರಿಸಲಿದೆ.
ಇನ್ನು ಈ ಬಾರಿಯ ಪ್ರಚಾರದಲ್ಲಿ ಬಿಜೆಪಿ ಪಕ್ಷವು ಹಲವು ಎಡವಟ್ಟುಗಳನ್ನು ಮಾಡಿಕೊಂಡಿದ್ದು ಅದಕ್ಕೆ ಮುಳುವಾಯಿತು. ಚುನಾವಣೆಯ ಸಮಯದಲ್ಲಿ ಪೌರತ್ವ ಕಾಯಿದೆಗೆ ತಿದ್ದುಪಡಿ ತಂದು ಅದರ ವಿರುದ್ದ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳು ಬಿಜೆಪಿಯನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದವು. ಇನ್ನು ತಮ್ಮ ಪ್ರಚಾರ ಭಾಷಣದಲ್ಲಿ ಬಿಜೆಪಿ ನಾಯಕರು ದೆಹಲಿಯ ಅಭಿವೃದ್ದಿಯ ಕುರಿತು ಮಾತನಾಡಿದ್ದಕ್ಕಿಂತ, CAA ವಿರುದ್ದದ ಪ್ರತಿಭಟನೆಗಳ ಕುರಿತು ಮಾತನಾಡಿದ್ದೇ ಹೆಚ್ಚು. ಅದರಲ್ಲೂ ಶಾಹೀನ್ ಬಾಗ್ ಕುರಿತು ಬೇಕಾಬಿಟ್ಟಿ ನಾಲಗೆ ಹರಿಬಿಟ್ಟ ನಾಯಕರು, ಪ್ರತಿಪಕ್ಷಗಳೇ ಪ್ರತಿಭಟನೆಗಳಿಗೆ ಕಾರಣ ಎಂದು ವಾದ ಮಂಡಿಸಿದರು. ಪ್ರಚೋದನಾಕಾರಿ ಭಾಷಣಗಳಿಗೆ ಜನಪ್ರಿಯರಾಗಿರುವ ಬಿಜೆಪಿಯ ಹಲವು ನಾಯಕರು ಈ ಬಾರಿಯೂ ತಮ್ಮ ಚಾಳಿಯನ್ನು ಮುಂದುವರೆಸಿದ್ದರು. ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂದು ಬಿಜೆಪಿ ನಾಯಕ ಅನುರಾಗ್ ಠಾಕೂರ್ ಹೇಳಿದ ಮರುದಿನವೇ, ಜಾಮಿಯಾ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದರಿಂದಾಗಿ ಬಿಜೆಪಿಯು ತೀವ್ರ ಮುಜುಗರಕ್ಕೆ ಉಂಟಾಗಿತ್ತು.
ಇದನ್ನೂ ಓದಿ: ದೆಹಲಿ ಚುನಾವಣೆ ಗೆಲ್ಲಲು ಕೋಮು ಪ್ರಚೋದನೆಗೆ ಮುಂದಾದ ಬಿಜೆಪಿ
ತಮ್ಮ ನಾಯಕರ ಅಸಂಬದ್ದ ಹೇಳಿಕೆಗಳಿಂದಲೇ ಮುಜುಗರ ಅನುಭವಿಸುವ ಹಲವು ಪ್ರಸಂಗಗಳು ಈ ಬಾರಿಯ ಚುನಾವಣಾ ಪ್ರಚಾರ ಸಮಯದಲ್ಲಿ ಬಿಜೆಪಿಗೆ ಎದುರಾದವು. ಶಾಹಿನ್ ಬಾಘ್ ಮತ್ತು ಬಿರಿಯಾನಿಯನ್ನೇ ಬಂಡವಾಳವಾಗಿಟ್ಟುಕೊಂಡು ಪ್ರಚಾರ ಗಿಟ್ಟಿಸಿಕೊಂಡಿದ್ದೇ ಬಂತು. ಕೋಮು ಸೌಹಾರ್ದವನ್ನು ಕೆದಕುವ ಮತ್ತು ಸಮಾಜದಲ್ಲಿ ಒಡಕು ಉಂಟು ಮಾಡುವ ಭಾಷಣಗಳು ಈ ಬಾರಿಯ ಬಿಜೆಪಿ ಪ್ರಚಾರ ಸಭೆಗಳಲ್ಲಿ ತುಂಬಿದ್ದವು. ಅಮಿತ್ ಶಾ, ಜೆ ಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಮಂತ್ರಿ ಅನುರಾಗ್ ಠಾಕೂರ್, ಸಂಸದ ಪರ್ವೇಶ್ ವರ್ಮಾ ಹೀಗೆ ಹಲವು ಘಟಾನುಘಟಿ ನಾಯಕರು ತಮ್ಮ ದ್ವೇಷಭರಿತ ಭಾಷಣಗಳಿಂದ ಸುದ್ದಿಯಾದರು. ಚುನಾವಣಾ ಆಯೋಗವು ಅನುರಾಗ್ ಠಾಕೂರ್ ಹಾಗೂ ಪರ್ವೇಶ್ ವರ್ಮಾ ಅವರಿಗೆ ಪ್ರಚಾರದಿಂದ ನಿಷೇಧ ಹೇರುವ ಪ್ರಸಂಗವೂ ಎದುರಾಗಿತ್ತು.
ಇದನ್ನೂ ಓದಿ: ದೆಹಲಿ ಗೆಲಲ್ಲು ಮೋದಿ ಕಸರತ್ತು! ರಾಮ ಮಂದಿರ ಟ್ರಸ್ಟ್ ದಾಳ!?
ಇನ್ನು ಕೇಜ್ರೀವಾಲ್ ಅವರ ಹಿಂದುತ್ವದ ನಂಬಿಕೆಯ ಮೇಲೆ ಪ್ರಶ್ನೆ ಮಾಡಿದ್ದ ಬಿಜೆಪಿಗರಿಗೆ ಕೇಜ್ರೀವಾಲ್ ಹನುಮಾನ್ ಚಾಳೀಸವನ್ನು ಜಪಿಸುವ ಮೂಲಕ ಉತ್ತರ ಕೊಟ್ಟಿದ್ದರು. ಶಾಹಿನ್ ಬಾಘ್ನಲ್ಲಿ ನಡೆದ ಗುಂಡಿನ ದಾಳಿಯನ್ನು ಆಪ್ ಮೇಲೆ ಕಟ್ಟಲು ಹೊರಟ ದೆಹಲಿ ಪೊಲೀಸರಿಗೆ ಚುನಾವಣಾ ಆಯೋಗವು ಛೀಮಾರಿ ಹಾಕಿದ ಘಟನೆಯೂ ನಡೆಯಿತು. ಹೀಗೆ ಎಲ್ಲಾ ದಿಕ್ಕುಗಳಿಂದಲೂ ಆಮ್ ಆದ್ಮಿ ಪಕ್ಷದ ಮೇಲೆ ಒತ್ತಡ ಹೇರಲು ಹೊರಟಿದ್ದ ಬಿಜೆಪಿಗೆ ಏನೂ ದಕ್ಕಲಿಲ್ಲ.
ಇದನ್ನೂ ಓದಿ: ಬಿಜೆಪಿ ನಾಯಕರ ಪ್ರಚೋದನೆ ಬೆನ್ನಲ್ಲೇ ಜಾಮಿಯಾ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ
ಇನ್ನು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ತೀರ ಸಪ್ಪೆಯಾಗಿತ್ತು. ಆಪ್ ಮತ್ತು ಬಿಜೆಪಿಯ ಭರ್ಜರಿ ಪ್ರಚಾರಗಳ ನಡುವೆ ಕಾಂಗ್ರೆಸ್ ಪಕ್ಷದ ಪ್ರಚಾರ ಕಳೆಗುಂದಿತ್ತು. 1998 ಮತ್ತು 2003ರಲ್ಲಿ ಶೀಲಾ ದೀಕ್ಷಿತ್ ನೇತೃತ್ವದಲ್ಲಿ ದೆಹಲಿ ಗದ್ದುಗೆಗೆ ಏರಿದ್ದ ಕಾಂಗ್ರೆಸ್ ಆ ನಂತರ ರಾಷ್ಟ್ರ ರಾಜಧಾನಿಯಲ್ಲಿ ಮೂಲೆಗುಂಪಾಗಿತ್ತು. ವಿಪರ್ಯಾಸವೇನೆಂದರೆ, ಕಳೆದ ಚುನಾವಣೆಯಲ್ಲಿ ಒಂದೇ ಒಂದು ಸೀಟು ಗೆಲ್ಲಲು ಕೂಡ ಕಾಂಗ್ರೆಸ್ನಿಂದ ಸಾಧ್ಯವಾಗಿರಲಿಲ್ಲ. ಈ ಬಾರಿಯೂ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು ಅಷ್ಟೇನು ಮಹತ್ವ ನೀಡಲಿಲ್ಲ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರ ಅವರು ಒಂದೆರಡು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡದ್ದು ಬಿಟ್ಟರೆ ಅಷ್ಟೇ ಮಹತ್ವದ ಪ್ರಚಾರ ಕಾಂಗ್ರೆಸ್ನಿಂದ ಮೂಡಿ ಬರಲಿಲ್ಲ. ಯುದ್ದಕ್ಕೂ ಮೊದಲೇ ಶಸ್ತ್ರ ತ್ಯಾಗವನ್ನು ಮಾಡಿದಂತಿತ್ತು ಕಾಂಗ್ರೆಸ್ನ ವರಸೆ.
ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಮೇಲಗೈ
ಈ ಬಾರಿಯ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸುವುದೆಂದು ಎಲ್ಲಾ ಸಮೀಕ್ಷೆಗಳು ಹೇಳಿವೆ. ಶೇಕಡಾ 50ರಷ್ಟು ಮತಗಳನ್ನು ಈ ಬಾರಿ ಆಮ್ ಆದ್ಮಿ ಪಕ್ಷವು ಅನಾಯಸವಾಗಿ ಪಡೆಯಲಿದೆ ಎಂದು ಟೈಮ್ಸ್ ನೌ, ಐಎಎನ್ಎಸ್ ಹಾಗೂ ನ್ಯೂಸ್ ಎಕ್ಸ್ ಸಮೀಕ್ಷೆಗಳು ಹೇಳಿವೆ. ಇನ್ನು ಬಿಜೆಪಿ ಪಕ್ಷಕ್ಕೆ 25-35 ಶೇಕಡಾ ಮತಗಳು ಲಭಿಸಲಿದ್ದು ಕಾಂಗ್ರೆಸ್ಗೆ ಹೆಚ್ಚೆಂದರೆ 10ಶೇಕಡಾ ಮತಗಳು ಲಭಿಸಲಿವೆ ಎಂದು ಸಮೀಕ್ಷೆಗಳು ತಿಳಿಸಿವೆ.
ಒಟ್ಟಿನಲ್ಲಿ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ದೆಹಲಿ ಚುನಾವಣೆಯ ಪ್ರಚಾರ, ಅಭಿವೃದ್ದಿ ಮತ್ತು ವಿಭಜನೆಯ ಜಪವನ್ನು ಕಂಡಿದೆ. ಒಂದೆಡೆ ಅಭಿವೃದ್ದಿಯನ್ನು ಮಂತ್ರವಾಗಿರಿಸಿ ಮತ ಭಿಕ್ಷೆ ಕೇಳಿದರೆ, ಇನ್ನೊಂದೆಡೆ ಸಮಾಜವನ್ನು ವಿಭಜಿಸುವ ಮಾತುಗಳಿಂದ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ. ಮತದಾರ ಅಭಿವೃದ್ದಿಗೆ ಮತ ಹಾಕುತ್ತಾನೋ? ಇಲ್ಲ ವಿಭಜನೆಯ ಮಂತ್ರಕ್ಕೆ ಶರಣಾಗುತ್ತಾನೋ? ಎಂಬುದು ಫೆಬ್ರುವರಿ 11ರಂದು ಹೊರ ಬೀಳಲಿರುವ ಚುನಾವಣಾ ಫಲಿತಾಂಶದಲ್ಲಿ ತಿಳಿಯಲಿದೆ.