ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ನಡೆದ ಎರಡನೇ ಸುತ್ತಿನ ಸಭೆಯೂ ವಿಫಲವಾಗಿದೆ. ಡಿಸೆಂಬರ್ ಮೂರನೇ ತಾರೀಕಿನಂದು ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ದೇಶದ ಹಲವು ರೈತ ಸಂಘಟನೆಗಳು ಸೇರಿದ್ದವು. ಈ ಎರಡನೇ ಸುತ್ತಿನ ಸಭೆಯಲ್ಲೂ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆ ಮುಖಂಡರು ತಮ್ಮ ಸಮಸ್ಯೆಗಳ ಕುರಿತಾಗಿ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಸರ್ಕಾರ ಮೂರನೇ ಸುತ್ತಿನ ಸಭೆಯನ್ನು ನಾಳೆ ಅಂದರೆ ಡಿ.5ರಂದು ನಡೆಸಲು ತೀರ್ಮಾನಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗುರುವಾರ ನಡೆದ ಎರಡನೇ ಸುತ್ತಿನ ಸಭೆಯಲ್ಲಿ ರೈತ ಸಂಘಟನೆಗಳು ನೂತನ ಕೃಷಿ ಕಾನೂನುಗಳನ್ನು ಪಟ್ಟು ಹಿಡಿದಿದ್ದವು. ಕೃಷಿ ನೀತಿಗಳ ಒಳಿತು-ಕೆಡಕುಗಳ ಕುರಿತು ಚರ್ಚಿಸಲು ತಜ್ಞ ಸಲಹಾ ಸಮಿತಿ ರಚನೆಯ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದವು. ಮುಂದಿನ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿ ಸರ್ವಸಮ್ಮತ ನಿರ್ಧಾರಕ್ಕೆ ಸರ್ಕಾರ ಬರದೇ ಹೋದಲ್ಲಿ ತಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದವು.
ಇನ್ನು, ರೈತ ಸಂಘಟನೆಗಳ ಜತೆಗಿನ ಸಭೆ ಬಳಿಕ ಮಾತಾಡಿದ ತೋಮರ್ ಅವರು, ನೂತನ ಕೃಷಿ ಕಾನೂನುಗಳ ಪೂರ್ವಾಪರ ಕುರಿತು ಚರ್ಚಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಹಂ ಇಲ್ಲ. ರೈತರೊಂದಿಗೆ ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಿ ಅವರಿಗಿರುವ ಎಲ್ಲಾ ಆತಂಕಗಳನ್ನು ದೂರ ಮಾಡಲಾಗುವುದು ಎಂದರು.
ಪ್ರತಿಭಟನಾ ನಿರತ ರೈತ ಸಂಘಟನೆಗಳೊಂದಿಗಿನ ಎರಡನೇ ಸುತ್ತಿನ ಸಭೆಯೂ ಆಶಾದಾಯಕ ಎಂದು ಬಣ್ಣಿಸಿದ ತೋಮರ್, ಎಂಎಸ್ಪಿ ಕುರಿತ ಪ್ರತಿಭಟನಾಕಾರರ ಆತಂಕ ದೂರ ಮಾಡಲಿದ್ದೇವೆ. ಈ ಹಿಂದಿನ ವ್ಯವಸ್ಥೆ ಕೇಂದ್ರ ಸರ್ಕಾರ ಮುಂದುವರಿಸಲಿದೆ ಎಂಬ ಭರವಸೆ ನೀಡಿದರು.
Also Read: ಪದ್ಮ ವಿಭೂಷಣ ಪ್ರಶಸ್ತಿ ಮರಳಿಸಿದ ಪಂಜಾಬ್ ಮಾಜಿ ಸಿಎಂ ಪರಕಾಶ್ ಸಿಂಗ್ ಬಾದಲ್
ಕೃಷಿ ಮಾರುಕಟ್ಟೆಗಳು ಬಂದ್ ಆಗಲಿವೆ ಎಂಬ ರೈತರ ಆತಂಕ ಸತ್ಯಕ್ಕೆ ದೂರವಾದುದು. ಕೇಂದ್ರ ಸರ್ಕಾರ ಎಪಿಎಎಂಸಿಗಳನ್ನು ಮತ್ತಷ್ಟು ಸಧೃಡಗೊಳಿಸಲಿದೆಯೇ ಹೊರತು ಯಾವುದೇ ಕಾರಣಕ್ಕೂ ನಾಶ ಮಾಡುವ ಉದ್ದೇಶ ಹೊಂದಿಲ್ಲ ಎಂದರು ತೋಮರ್.
ರೈತರೊಂದಿಗಿನ ಎರಡನೇ ಸಭೆಯಲ್ಲಿ ನಿಕಟತೆ ಸಾಧಿಸಿದ್ದೇವೆ ಎಂದು ತೋಮರ್ ಹೇಳುತ್ತಿದ್ದಾರಾದರೂ ಪ್ರತಿಭಟನಾ ನಿರತ ಹೋರಾಟಗಾರರು ಇಷ್ಟು ಸುಲಭವಾಗಿ ಬಗ್ಗುವಂತೆ ಕಾಣುತ್ತಿಲ್ಲ. ಆದ್ದರಿಂದಲೇ ಡಿ.5ರಂದು ಶನಿವಾರ ಇನ್ನೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಲಾಗಿದೆ.
Also Read: ಇಂದಾದರೂ ರೈತರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಪ್ಪುತ್ತಾ?
ಎಂಎಸ್ಪಿ ಹಾಗೂ ಎಪಿಎಂಸಿ ವ್ಯವಸ್ಥೆಗಳನ್ನು ದುರ್ಬಲಗೊಳಿಸುವ ನಿರ್ಧಾರ ಸರ್ಕಾರ ಬದಲಿಸಬೇಕು. ಹಾಗೆಯೇ ಹೊಸ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹ.