ಭಾನುವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ಕೃಷಿ ಮಾರುಕಟ್ಟೆ ಮಸೂದೆಗಳ ವಿರುದ್ಧ ಪಂಜಾಬ್ನಾದ್ಯಂತ ಆಂದೋಲನ ನಡೆಸುತ್ತಿರುವ ರೈತರನ್ನು ಟೀಕಿಸುವ ಅವಸರದಲ್ಲಿ ವಿವಾದಾತ್ಮಕ ನಟಿ ಕಂಗನಾ ರಾನಾವತ್ ಪ್ರತಿಭಟನಾನಿರತಾ ರೈತರನ್ನು ಪರೋಕ್ಷವಾಗಿ ಭಯೋತ್ಪಾದಕರಿಗೆ ಹೋಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾನುವಾರ ಸಂಜೆ ಮಾಡಿದ ಟ್ವೀಟ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟ್ವೀಟ್ ಅನ್ನು ಉಲ್ಲೇಖಿಸಿದ ಕಂಗನಾ, ಪ್ರತಿಭಟನಕಾರರನ್ನು ”ಸಿಎಎ ಕಾರಣದಿಂದಾಗಿ ಯಾವುದೇ ನಾಗರಿಕರ ಪೌರತ್ವ ಕಳೆದುಹೋಗದಿದ್ದರೂ ರಕ್ತಪಾತದಲ್ಲಿ ತೊಡಗಿದ ಭಯೋತ್ಪಾದಕರಂತೆ” ಎಂದು ಬಣ್ಣಿಸಿದ್ದಾರೆ.
ಕಂಗನಾರ ಈ ಟ್ವೀಟ್ ಬಾರೀ ವಿವಾದ ಸೃಷ್ಟಿಸಿದ್ದು ಬಿಜೆಪಿಯನ್ನು ಹಾಗೂ ನರೇಂದ್ರ ಮೋದಿಯನ್ನು ಓಲೈಸಲು ರೈತರನ್ನು ಹಾಗೂ ಸಿಎಎ ವಿರೋಧಿ ಹೋರಾಟಗಾರರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಕಿಡಿಕಾರಿದ್ದಾರೆ.
प्रधानमंत्री जी कोई सो रहा हो उसे जगाया जा सकता है, जिसे ग़लतफ़हमी हो उसे समझाया जा सकता है मगर जो सोने की ऐक्टिंग करे, नासमझने की ऐक्टिंग करे उसे आपके समझाने से क्या फ़र्क़ पड़ेगा? ये वही आतंकी हैं CAA से एक भी इंसान की सिटिज़ेन्शिप नहीं गयी मगर इन्होंने ख़ून की नदियाँ बहा दी. https://t.co/ni4G6pMmc3
— Kangana Ranaut (@KanganaTeam) September 20, 2020
ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಯ ವಿರುದ್ಧ ಪ್ರತಿಪಕ್ಷಗಳು ಮಾತ್ರವಲ್ಲದೆ, ಆರ್ಎಸ್ಎಸ್ ಅಡಿಯಲ್ಲಿ ಕಾರ್ಯ ನಿರ್ವಹಿಸುವ ರೈತ ಸಂಘಟನೆ ʼಭಾರತೀಯ ಕಿಸಾನ್ ಸಂಘ್ʼ ವಿರೋಧಿಸಿದೆ, ಅಲ್ಲದೆ ಎನ್ಡಿಎ ಮೈತ್ರಿಕೂಟದ ಸಚಿವೆಯೊಬ್ಬರೂ ಖುದ್ದು ರಾಜಿನಾಮೆ ನೀಡಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ರೈತರು ಸಹಸ್ರ ಸಂಖ್ಯೆಯಲ್ಲಿ ಪ್ರತಿಭಟನೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಬಾಲಿವುಡ್ ನಟಿ ಕಂಗನಾ ಹೊಸ ಕೃಷಿ ನೀತಿಗೆ ಪೇಲವ ಬೆಂಬಲ ವ್ಯಕ್ತ ಪಡಿಸಿದ್ದು ಮಾತ್ರವಲ್ಲ, ಪ್ರತಿಭಟನಾಕಾರರನ್ನು ಭಯೋತ್ಪಾದಕರೆಂದು ಸಂಬೋಧಿಸಿರುವುದು ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ.

ಬಿಜೆಪಿಯ ಓಲೈಕೆಯಲ್ಲಿ ತೊಡಗಿದ ಕಂಗನಾ
ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು ಅದನ್ನು ಗಮನದಲ್ಲಿಟ್ಟು ಕಂಗನಾ ಬಿಜೆಪಿ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಶಿವಸೇನೆಯನ್ನು ಟೀಕಿಸಿದ್ದ ಕಂಗನಾ, ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು. ಇದೀಗ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನಾಕಾರರನ್ನು ಭಯೋತ್ಪಾದಕರಿಗೆ ಹೋಲಿಸಿದ ಕಂಗನಾ, ʼತನ್ನ ಭಾಷೆಯನ್ನು ಬಿಜೆಪಿ ಪಕ್ಷಕ್ಕೆ ಒಗ್ಗುವ ರೀತಿಯಲ್ಲಿʼ ಸಂಪೂರ್ಣವಾಗಿ ಪರಿವರ್ತಿಸಿಕೊಂಡಿದ್ದಾರೆ.
ಕಂಗನಾ, ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆಂಬ ಆರೋಪ ಹೊಸದೇನಲ್ಲ. ಅತಿಭಾವುಕತನದಿಂದ ಬಳಲುತ್ತಿದ್ದ ಎನ್ನಲಾದ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯ ಒದಗಿಸುತ್ತೇನೆಂದು ಅಖಾಡಕ್ಕಿಳಿದ ಕಂಗನಾ, ಸಾಮಾಜಿಕ ಜಾಲತಾಣದಲ್ಲಿ ಉಂಟು ಮಾಡಿದ ಸಂಚಲನವನ್ನು ಬಿಜೆಪಿ ಬಿಹಾರ ಚುನಾವಣೆಗೆ ಫಲಪ್ರದವಾಗಿ ಬಳಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ವೈಫಲ್ಯವನ್ನು ಮರೆಮಾಚಲು ʼಬಿಜೆಪಿ ಕೃಪಾಪೋಷಿತ ಮಾಧ್ಯಮಗಳುʼ ಈ ವಿಷಯವನ್ನೇ ಪ್ರೈಮ್ ಟೈಮ್ ಚರ್ಚೆಯಲ್ಲಿಟ್ಟಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿರುದ್ಧ ಕೆಂಡಕಾರುವ ಕಂಗನಾರ ಕಛೇರಿಯ ಭಾಗವನ್ನು ಕೆಲವು ದಿನಗಳ ಹಿಂದೆ ಮುಂಬೈ ಪಾಲಿಕೆ ಅನಧಿಕೃತ ಎಂದು ತೆರವುಗೊಳಿಸಿತ್ತು. ಮುಂಬೈ ಪಾಲಿಕೆ ಈ ಹಿಂದೆಯೂ ಹಲವು ಬಾಲಿವುಡ್ ನಟ, ನಟಿಯರ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ ಇತಿಹಾಸ ಇದೆಯಾದರೂ, ಕಂಗನಾರ ಕಟ್ಟಡ ತೆರವುಗೊಳಿಸುವಿಕೆಯನ್ನು ಶಿವಸೇನೆಯ ಧ್ವೇಷ ರಾಜಕಾರಣವೆಂದು ವಿಶ್ಲೇಷಿಸಲಾಗಿತ್ತು.
ರೈತರನ್ನು ಭಯೋತ್ಪಾದಕರಿಗೆ ಹೋಲಿಸಿಲ್ಲ- ಕಂಗನಾ
ಸಾಮಾಜಿಕ ಜಾಲತಾಣದಲ್ಲಿ ನಟಿ ಕಂಗನಾರ ಟ್ವೀಟ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಸ್ಪಷ್ಟನೆ ನೀಡಿದ ಕಂಗನಾ, ತಾನು ರೈತರನ್ನು ಭಯೋತ್ಪಾದಕರೆಂದು ಕರೆದೇ ಇಲ್ಲ, ಹಾಗೆ ಕರೆದಿರುವುದನ್ನು ಸಾಬೀತುಪಡಿಸಿದರೆ ತಾನು ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
जैसे श्री कृष्ण की नारायणी सेना थी, वैसे ही पप्पु की भी अपनी एक चंपू सेना है जो की सिर्फ़ अफ़वाहों के दम पे लड़ना जानती है, यह है मेरा अरिजिनल ट्वीट अगर कोई यह सिद्ध करदे की मैंने किसानों को आतंकी कहा, मैं माफ़ी माँगकर हमेशा केलिए ट्वीटर छोड़ दूँगी https://t.co/26LwVH1QD9
— Kangana Ranaut (@KanganaTeam) September 21, 2020
ಕಂಗನಾ ಇಷ್ಟು ನಿರ್ಭೀತರಾಗಿ ಸವಾಲು ಹಾಕಲೂ ಒಂದು ಕಾರಣವಿದೆ. ಯಾಕೆಂದರೆ ಕಂಗನಾ ನೇರವಾಗಿ ರೈತರನ್ನು ಭಯೋತ್ಪಾದಕರೆಂದು ಕರೆಯದೆ, ಸಿಎಎ ಹೋರಾಟಗಾರರನ್ನು ಭಯೋತ್ಪಾದಕರೆಂದು ಕರೆದಿದ್ದಾರೆ ಹಾಗೂ ಆ “ಭಯೋತ್ಪಾದಕರಿಗೆ” ರೈತ ಹೋರಾಟಗಾರರನ್ನು ಹೋಲಿಸಿದ್ದಾರೆ. ಇದು ಗಣಿತದಲ್ಲಿ ಬರುವ ಟ್ರಾನ್ಸಿಶನ್ ಸೂತ್ರ (if A=B and B=C then C=A) ದಂತಿದೆ. ಒಟ್ಟಾರೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟದಲ್ಲಿ ತೊಡಗಿರುವವರನ್ನು ಭಯೋತ್ಪಾದರೆಂದು ಕರೆದಿರುವ ಕಂಗನಾ ಮೋದಿ ಹಾಗೂ ಬಿಜೆಪಿಯ ಓಲೈಕೆಯಲ್ಲಿ ತೊಡಗಿರುವುದು ಗಣಿತದ ನಿಯಮಗಳಂತೆ ಸುಳ್ಳಾಗಿಸಲು ಸಾಧ್ಯವಾಗದ ನಿಚ್ಚಳ ಸತ್ಯ.