ಕೋವಿಡ್ 19 ವಿಚಾರ ರಾಜ್ಯ ಸರ್ಕಾರ ಚಿತ್ರ ವಿಚಿತ್ರ ನಿರ್ಧಾರಗಳನ್ನು ಮಾಡುತ್ತಲೇ ಸಾಗುತ್ತಿದೆ. ಲಾಕ್ಡೌನ್ ವಿಚಾರ ಇರಬಹುದು, ಅನ್ಲಾಕ್ ವಿಚಾರ ಇರಬಹುದು ಸ್ವಂತಿಕೆಯಿಂದ ಕಠಿಣ ನಿರ್ಧಾರ ಕೈಗೊಂಡು ಕೋವಿಡ್ ನಿಯಂತ್ರಣ ಮಾಡುವಲ್ಲಿ ಸೋಲುಂಡಿದೆ. ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಮಂತ್ರಿ ಮಂಡಲವೇ ನಾವು ಕೋವಿಡ್ ವಿರುದ್ಧ ಸೋತಿದ್ದೇವೆ ಎನ್ನುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಕೋವಿಡ್ ನಿಯಂತ್ರಣಕ್ಕೆ ಮಾಡಿರುವ ಖರ್ಚು ವೆಚ್ಚದಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವ ವಿಚಾರವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಒಂದೊಂದೇ ಎಡವಟ್ಟು ನಿರ್ಧಾರಗಳನ್ನು ರಾಜ್ಯದ ಜನರ ಮುಂದೆ ತೆರೆದಿಟ್ಟರು. ಅದರಲ್ಲಿ ಕೋವಿಡ್ 19 ವಿಚಾರವೂ ಒಂದು. ವರ್ಕಿಂಗ್ ಇನ್ಸ್ಪೆಕ್ಟರ್ ಮತ್ತು ಪೌರಕಾರ್ಮಿಕರು, ಬಿಬಿಎಂಪಿ ಎಇಇ ಸಾವಿನ ಪ್ರಕರಣಗಳನ್ನು ನೋಡಿದರೆ ಗೊತ್ತಾಗುತ್ತಿದೆ. ಇಡೀ ಬಿಬಿಎಂಪಿ ನಿಷ್ಕ್ರಿಯ ಆಗಿದೆ. ಕೋವಿಡ್ 19 ನಿಯಂತ್ರಣ ಮಾಡುವಲ್ಲಿ ಇಡೀ ಸರ್ಕಾರವೇ ವಿಫಲವಾಗಿದೆ ಎಂದು ಕಿಡಿ ಕಾರಿದರು. ಕರೋನಾ ವಾರಿಯರರ್ಸ್ಗೆ ಸರ್ಕಾರ ಸಹಾಯ ಮಾಡಲು ಆಗಿಲ್ಲ ಎಂದರೆ ಎನು ಹೇಳೋದು..? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರವೇ ಕರೋನಾ ಬಗ್ಗೆ ಸೂಕ್ತವಾದ ಕ್ರಮ ತಗೊಂಡಿಲ್ಲ.ಸರ್ಕಾರ ಮಾಡಬೇಕಿರುವುದು ಕೇವಲ ಎರಡೇ ಕೆಲಸ, ಒಂದು ಪಾಸಿಟಿವ್ ಬಂದಿರುವ ಜನರನ್ನು ಚಿಕಿತ್ಸೆ ಕೊಟ್ಟು ಗುಣಪಡಿಸಬೇಕು. ಇನ್ನೊಂದು ರೋಗ ಹರಡದಂತೆ ತಡೆಯಬೇಕು. ಇದು ಈ ಸರ್ಕಾರಕ್ಕೆ ಆದ್ಯತೆ ಆಗಿರಬೇಕು ಎಂದು ಆಗ್ರಹ ಮಾಡಿದ್ದಾರೆ.

ಇನ್ನೂ ಕೋವಿಡ್ 19 ಲೂಟಿ ಬಗ್ಗೆ ಬಗ್ಗೆ ಮಾತಾನಾಡಿದ ಸಿದ್ದರಾಮಯ್ಯ, ಕೋವಿಡ್ ಖರ್ಚು ವೆಚ್ಚದ ಲೆಕ್ಕ ಕೊಡಿ ಎಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ.ಎರಡ್ಮೂರು ದಿನದಲ್ಲಿ ಲೆಕ್ಕ ಕೊಡುವುದಾಗಿ ಹೇಳಿದ್ದಾರೆ. ಲೆಕ್ಕ ಕೊಟ್ಟ ಮೇಲೆ ಮತ್ತೆ ಬರುತ್ತೇನೆ. ಕೋವಿಡ್ 19 ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ. ಸೋಂಕು ಹರಡದಂತೆ ಕ್ರಮ ವಹಿಸಬೇಕು. ಜನರಿಗೆ ಮೂಲಭೂತ ಸೌಲಭ್ಯಗಳನ್ನ ಒದಗಿಸುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ, ಕೇವಲ ಬಿಜೆಪಿ ಸರ್ಕಾರದಲ್ಲಿ ಸಚಿವರು ಹಣ ಮಾಡುವುದನ್ನು ಮಾತ್ರವೇ ಗಮನಿಸುತ್ತಿದ್ದಾರೆ, ಯಾವುದೇ ಕೆಲಸ ಮಾಡುತ್ತಿಲ್ಲ ಎನ್ನುವ ಮಾತು ರಾಜ್ಯಾದ್ಯಂತ ಕೇಳಿಬರುತ್ತಿದೆ. ಅದನ್ನು ಜನರ ಮಾತಿನಲ್ಲಿ ಬರದಂತೆ ತಡೆಯಲು ರಾಜ್ಯ ಸರ್ಕಾರ ಡ್ರೋಣ್ ಹಿಡಿದು ನಿಂತಿದೆ.
ಬಾಗಲಕೋಟೆಯಲ್ಲಿ ಮಾತನಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಕರೋನಾಗೆ 600 ಕೋಟಿ ಮಾತ್ರ ಖರ್ಚು ಮಾಡಿದ್ದೇವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ. ರಾಜ್ಯ ಸರ್ಕಾರ 600 ಕೋಟಿನೋ, 6 ಸಾವಿರ ಕೋಟಿ ಖರ್ಚು ಮಾಡಿದ್ದಾರೋ ಏನಿದೆ ಅದನ್ನು ಅಕೌಂಟ್ ಕೊಡಲಿ..! ವೈದ್ಯಕೀಯ ಸಾಮಾಗ್ರಿ ಖರೀದಿಗೆ ಎಷ್ಟು ಹಣ ಖರ್ಚಾಗಿದೆ ಎಂದು ಹೇಳಲಿ ಎಂದಿದ್ದಾರೆ. ಯಾವುದೇ ಅವ್ಯವಹಾರ ಆಗಿಲ್ಲ ಎಂದರೆ ನಾವೇ ಹಾರ, ಶಾಲು ಹಾಕಿ ಸನ್ಮಾನಿಸ್ತೀವಿ. ಈಗ ಖರೀದಿಸಿದ ಹಣ ಮಾರುಕಟ್ಟೆ ದರದ ಮೂರು, ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ. ವೈದ್ಯಕೀಯ ಕಿಟ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಇಡೀ ರಾಜ್ಯದ ಜನರೇ ಮಾತನಾಡುತ್ತಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಆಳುವ ಪಕ್ಷದ ಸದಸ್ಯರು ಪೆನ್ ಡ್ರೈವ್ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆಗೆ ಅವಕಾಶ ಕಲ್ಪಿಸಿಕೊಡಬೇಕು ಅಥವಾ ಸದನ ಸಮಿತಿ ನೇಮಿಸಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಆಗ್ರಹ ಮಾಡಿದ್ದಾರೆ.

ʼಪ್ರತಿಧ್ವನಿʼಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿಪಕ್ಷ ಆರೋಪದ ಬಳಿಕ ಸರ್ಕಾರದ ಡೈವರ್ಷನ್..!
ಬೆಂಗಳೂರಿನಲ್ಲಿ ಮಾತ್ರವಲ್ಲ, ಇಡೀ ರಾಜ್ಯಾದ್ಯಂತ ರಾಜ್ಯ ಸರ್ಕಾರದ ಕೆಲಸ ಕಾರ್ಯಗಳ ಬಗ್ಗೆ ಜನರು ದೂಷಣೆ ಮಾಡ್ತಿರೋದನ್ನು ಕಂಡ ಸರ್ಕಾರ ಜನರ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಿದೆ. ಬೆಂಗಳೂರು ದಕ್ಷಿಣ ವಲಯದಲ್ಲಿ ಕೋವಿಡ್-19 ಸಭೆ ನಡೆಸಿರುವ ಸಚಿವ ಅಶೋಕ್, ಬೆಂಗಳೂರು ದಕ್ಷಿಣದಲ್ಲಿ ಡ್ರೋಣ್ ಮೂಲಕ ಪ್ರತಿ ವಾರ್ಡ್ಗೂ ರಾಸಾಯನಿಕ ಸಿಂಪಡಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ರು. ಅಲ್ಲೇ ಡ್ರೋಣ್ ಮೂಲಕ ರಾಸಾಯನಿಕ ಸಿಂಪಡಿಕೆಗೆ ಚಾಲನೆ ನೀಡಿದ್ರು. ಜಯನಗರದ 3 ನೇ ಬ್ಲಾಕ್ನಲ್ಲಿ ಡ್ರೋಣ್ಗೆ ಚಾಲನೆ ನೀಡಲಾಯ್ತು. ಸುಗರ್ಧನ, ದಕ್ಷಾ ಸಂಘ ಜಂಟಿ ಸಹಭಾಗಿತ್ವದಲ್ಲಿ ಡ್ರೋಣ್ ಬಳಸಿ ರಾಸಾಯನಿಕ ಸಿಂಪಡಣೆ ಮಾಡಲಾಯ್ತು.
ಇಂದಿನಿಂದ ಡ್ರೋಣ್ ಮೂಲಕ ಬೆಂಗಳೂರು ದಕ್ಷಿಣ ವಲಯದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲು ಚಾಲನೆ ನೀಡಲಾಗಿದೆ. 50 ಮೀಟರ್ ಎತ್ತರಕ್ಕೆ ಡ್ರೋಣ್ ಹಾರಿಸಿ, ಪ್ರತಿ ರಸ್ತೆಯಲ್ಲೂ ಕರೊನಾ ನಿಯಂತ್ರಣಕ್ಕೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಒಂದು ಡ್ರೋಣ್ನಲ್ಲಿ 16 ಲೀಟರ್ ರಾಸಾಯನಿಕ ದ್ರವ ತುಂಬಿಸಲು ಅವಕಾಶವಿದ್ದು, ಒಂದು ಬಾರಿ ಡ್ರೋಣ್ ಹಾರಿಸಿದ್ರೆ, 15 ನಿಮಿಷ ಹಾರಟ ನಡೆಸಲಿದೆ. ಕೇವಲ 15 ನಿಮಿಷದಲ್ಲಿ ಒಂದೂವರೆ ಎಕರೆ ಪ್ರದೇಶಕ್ಕೆ ರಾಸಾಯನಿಕ ಸಿಂಪಡಿಸಲು ಶಕ್ತವಾಗಿದೆ ಎಂದು ಮಾಹಿತಿ ನೀಡಿದರು.
ಆಕಾಶದಲ್ಲಿ ಔಷಧಿ ಸಿಂಪಡಣೆ ಮಾಡಿದ್ರೆ ಕರೋನಾ ಸಾಯುತ್ತಾ..?
ಕರೋನಾ ಶುರುವಾದ ಸಮಯದಲ್ಲಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದ ದಿನ ಆಕಾಶದಲ್ಲಿ ಕೇಂದ್ರ ಸರ್ಕಾರ ಔಷಧಿ ಸಿಂಪಡಣೆ ಮಾಡುತ್ತೆ ಮನೆಬಿಟ್ಟು ಯಾರೂ ಹೊರಕ್ಕೆ ಬರಬೇಡಿ ಎನ್ನುವ ವದಂತಿಯೊಂದು ಹಬ್ಬಿತ್ತು. ಆದರೆ ಆ ರೀತಿಯ ಯಾವುದೇ ಔಷಧಿ ಸಿಂಪಡಣೆ ಮಾಡಲ್ಲ ಎಂದು ಸ್ಪಷ್ಟನೆಯೂ ಸಿಕ್ಕಿತ್ತು. ಆದರೆ ಇಂದು ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನ ಡ್ರೋಣ್ ಮೂಲಕ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಎಷ್ಟು ಕೋಟಿ ರೂಪಾಯಿ ಯೋಜನೆ..? ಎಲ್ಲೆಲ್ಲಿ ಸಿಂಪಡಣೆ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನುವ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.
ಸೈನ್ಸ್ ವೆಬ್ಸೈಟ್ನಲ್ಲಿ ಬಂದಿರುವ ಆರ್ಟಿಕಲ್ ಪ್ರಕಾರ ಸೋಡಿಯಂ ಹೈಪೋಕ್ಲೋರೇಟ್ ಸಿಂಪಡಣೆ ಮಾಡುವುದರಿಂದ ಕರೋನಾ ವೈರಾಣು ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಅದು ಕೇವಲ ಮಾಲಿನ್ಯ ಉಂಟುಮಾಡಬಹುದು ಅಷ್ಟೇ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದರೆ ಆಕಾಶದಲ್ಲಿ ಸೋಡಿಯಂ ಹೈಪೋಕ್ಲೋರೇಟ್ ಸ್ಪ್ರೇ ಮಾಡುವುದಕ್ಕೂ ಮನೆಯ ಒಳಗೆ ಇರುವ ಕರೋನಾ ವೈರಾಣೂವಿಗೂ ಎತ್ತಣದಿಂತ್ತಣ ಸಂಬಂಧ ಎನ್ನುವಂತಾಗಿದೆ. ಆದರೂ ಸರ್ಕಾರ ಇಂತಹದೊಂದು ಕ್ರಮಕ್ಕೆ ಮುಂದಾಗಿದೆ ಎಂದ ಮೇಲೆ ಭ್ರಷ್ಟಾಚಾರ ಆರೋಪದ ಬಗ್ಗೆ ರಾಜ್ಯದ ಜನರ ದೃಷ್ಠಿ ಕೇಂದ್ರೀಕೃತ ಆಗದಂತೆ ತಡೆಯಲು ಅಥವಾ ಆಗಸದಲ್ಲಿ ಮೋಡ ಬಿತ್ತನೆ ಮಾಡಿ ಕಾಸು ಮಾಡುವ ಯೋಜನೆಯಂತೆ ಔಷಧಿ ಸಿಂಪಡಣೆಯ ಹೆಸರಲ್ಲಿ ಕರೋನಾ ದುಡ್ಡು ಲಪಟಾಯಿಸಲು ಅಷ್ಟೆ ಎನ್ನಲಾಗ್ತಿದೆ.






