ಗಡಿ ವಿವಾದಗಳನ್ನು ಮುಂದಿಟ್ಟು ಭಾರತದೊಂದಿಗೆ ಜಗಳಕ್ಕೆ ನಿಲ್ಲುವ ಚೀನಾ, ಈ ಬಾರಿ ಇನ್ನೂ ಮುಂದೆ ಹೋಗಿ ಭಾರತದ 20 ಯೋಧರನ್ನು ಬಲಿ ಪಡೆದುಕೊಂಡಿದೆ. ಉಭಯ ಸೈನ್ಯದ ಮುಖಾಮುಖಿ ಸಂಘರ್ಷದಲ್ಲಿ ಚೈನಾದ 43 ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದ್ದರೂ ಚೀನಾ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಕುತೂಹಲಕಾರಿ ಸಂಗತಿ ಏನೆಂದರೆ ಉಭಯ ರಾಷ್ಟ್ರಗಳ ಸೈನಿಕರ ನೇರ ಸಂಘರ್ಷದಲ್ಲಿ ಬಂದೂಕು ಅಥವಾ ಯಾವುದೇ ಮಿಲಿಟರಿ ಆಯುಧಗಳನ್ನು ಬಳಸದಿರುವುದು. ಬರೀ ಕೈ, ಕಲ್ಲುಗಳಿಂದ ಹೊಡೆದಾಡಿ ಭಾರತದ 20 ಮಂದಿ ಯೋಧರನ್ನು ಬಲಿ ತೆಗೆದಿರುವಾಗ ಯಾಕೆ ಬಂದೂಕುಗಳನ್ನು ಬಳಸಿಲ್ಲ ಎಂದು ಭಾರತೀಯ ನಾಗರೀಕರು ಗೊಂದಲಕ್ಕೀಡಾಗಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಬಳಿ ಗಸ್ತು ತಿರುಗುವಾಗ ಬಂದೂಕುಗಳೊಂದಿಗೆ ತಿರುಗಾಡುವ ಭಾರತೀಯ ಸೈನ್ಯ ಚೈನಾ ಯೋಧರೊಂದಿಗೆ ಮಾತನಾಡಲು ಮುಂದಾಗುವಾಗ ಒಪ್ಪಂದದಂತೆ ನಿರಾಯುಧರಾಗುತ್ತಾರೆ. 1993 ಹಾಗೂ 1996 ರಲ್ಲಿ ಭಾರತ ಹಾಗೂ ಚೀನಾ ನಡುವೆ ಒಪ್ಪಂದ ನಡೆದಿದ್ದು, ಅದರಂತೆ ಭಾರತೀಯ ಯೋಧರು ಒಪ್ಪಂದ ಮುರಿಯದೆ ಕಾದಾಡಿದ್ದಾರೆ.
1993 ರ ಒಪ್ಪಂದದ ಪ್ರಕಾರ, ಯಾರೇ ಗಡಿ ದಾಟಿ ಬಂದರೂ ಅವರಿಗೆ ಎಚ್ಚರಿಕೆಯನ್ನ ನೀಡಿ ಹಿಂದೆ ಕಳುಹಿಸಬೇಕು. 1996 ರಲ್ಲಿ ನಡೆದ ಒಪ್ಪಂದ ಪ್ರಕಾರ ಗಡಿಯ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸ್ಫೋಟಕ ಬಳಸಿ ದಾಳಿ ಮಾಡುವಂತಿಲ್ಲ. ಈ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಾರತೀಯ ಯೋಧರಿಗೆ ನಿರ್ದೇಶಿಸಲಾಗಿದೆ.

ಗಲ್ವಾನ್ ಕಣಿವೆಯಲ್ಲಿ ಕಲ್ಲು ಮತ್ತು ಕೈಗಳಿಂದ ನಡೆದ ಜಗಳಗಳಲ್ಲಿ ಕರ್ನಲ್ ಸಂತೋಷ್ ಬಾಬು ಸೇರಿದಂತೆ ಇಪ್ಪತ್ತು ಮಂದಿ ಯೋಧರು ಹುತಾತ್ಮರಾದ ಬಳಿಕ ಭಾರತೀಯ ಸೇನೆ ಈ ಒಪ್ಪಂದವನ್ನು ಪುನರ್ವಿಮರ್ಶಿಸಲು ಮುಂದಾಗಿದೆ.
ಭಾರತೀಯ ಯೋಧರ ಬಲಿದಾನದ ಬಳಿಕ ಇದು ದೊಡ್ಡ ವಿವಾದವನ್ನು ಹುಟ್ಟು ಹಾಕಿದೆ. ಮಾರಣಾಂತಿಕ ಆಕ್ರಮಣ ಎದುರಾಗುವಾಗಲೂ ಭಾರತೀಯ ಸೇನೆ ಏಕೆ ಆಯುಧಗಳನ್ನು ಬಳಸಿಕೊಂಡಿಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ. ಸೇನಾ ತುಕಡಿಯು ಬಂದೂಕುಗಳನ್ನು ಹೊಂದಿದೆ. ಆದರೆ ಉಭಯ ಪಕ್ಷೀಯ ಒಪ್ಪಂದದಂತೆ ಗುಂಡು ಚಲಾಯಿಸುವಂತಿಲ್ಲ, ಹಾಗಾಗಿ ಬಂದೂಕು ಬಳಸಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ವಿದೇಶಾಂಗ ಸಚಿವರ ಹೇಳಿಕೆಯನ್ನು ಹಲವು ಮಿಲಿಟರಿ ಮಾಜಿ ಅಧಿಕಾರಿಗಳು ವಿರೋಧಿಸಿದ್ದಾರೆ.
ಈ ಒಪ್ಪಂದಗಳು ಗಡಿ ನಿರ್ವಹಣೆಗೆ ಮಾತ್ರ ಅನ್ವಯಿಸಬೇಕು. ಯುದ್ಧ ತಂತ್ರದಂತಹ ಪರಿಸ್ಥಿತಿಗಳನ್ನು ಎದುರಿಸುವಾಗ ಅಲ್ಲ, ಸೈನಿಕರ ಜೀವಕ್ಕೆ ಕುತ್ತು ಬರುವಾಗ ಫಿರಂಗಿಯೂ ಸೇರಿದಂತೆ ಎಲ್ಲಾ ಆಯುಧಗಳನ್ನು ಬಳಸಬೇಕೆಂದು ಮಾಜಿ ಕಮಾಂಡರ್ ಲೆ. ಜನರಲ್ ಎಚ್ ಎಸ್ ಪಾನಂಗ್ ಟ್ವೀಟ್ ಮಾಡಿದ್ದಾರೆ.
ನಿಮ್ಮ ಕರ್ನಲ್ ನಿಮ್ಮೆದುರೇ ಸಾಯುತ್ತಿರುವಾಗ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಬೇಕು. ಶತ್ರುಗಳು ಪ್ರೋಟೊಕಾಲ್ ಮುರಿದು ಆಕ್ರಮಣ ಮಾಡುವಾಗ ಒಪ್ಪಂದಗಳನ್ನು ಏಕೆ ಮುಂದುವರೆಸಬೇಕೆಂದು ನಿವೃತ್ತ ಬ್ರಿಗೇಡಿಯರ್ ಸಂದೀಪ್ ಥಾಪರ್ ಹೇಳಿದ್ದಾರೆ.