ಜನರಿಂದ ಆಯ್ಕೆಯಾಗಿ ಬರುವ ಸರ್ಕಾರಗಳು ಜನರ ರಕ್ಷೆಗಾಗಿ ಕೆಲಸ ಮಾಡಬೇಕು. ಆದರೆ, ಲಾಕ್ಡೌನ್ನಿಂದಾಗಿ ಬಡ ಕೂಲಿ ಕಾರ್ಮಿಕ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಮಾಯಕ ಮಹಿಳೆಯ ಸಾವಿಗೆ ಸ್ವತಃ ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಗಳೇ ಕಾರಣವಾಗಿದೆ. ಇತ್ತೀಚಿಗಷ್ಟೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಭಾರತದಲ್ಲಿ ಲಾಕ್ಡೌನ್ ಹೆಸರಲ್ಲಿ ದೇಶಿಯ ವಲಸೆ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಧ್ವನಿ ಕೂಡ ವರದಿ ಮಾಡಿತ್ತು. ಆದರೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಗಮನಸೆಳೆದಿದ್ದು, ದೆಹಲಿಯಲ್ಲಿ ಸಾವನ್ನಪ್ಪಿದ್ದ ಕಾರ್ಮಿಕನ ವಿಚಾರ. ಆದರೆ ನಮ್ಮ ರಾಜ್ಯದಲ್ಲೇ ಲಾಕ್ಡೌನ್ನಿಂದ ಅನ್ನ, ನೀರು ಸಿಗದೆ ಸಾವನ್ನಪ್ಪಿದ್ದಾಳೆ 29 ವರ್ಷದ ಮಹಿಳೆ!
ಜೀವನ ನಡೆಸಲು ದುಡಿಯುವ ಉದ್ದೇಶಿದಿಂದ ಬೆಂಗಳೂರಿಗೆ ಹೋಗಿದ್ದ ಮಹಿಳೆ ಲಾಕ್ಡೌನ್ ಆದ ಬಳಿಕ ಅನ್ನಾಹಾರ ಸಿಗದ ಕಾರಣಕ್ಕೆ ಸಾವಿನ ಮನೆ ಸೇರಿದ್ದಾರೆ. ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಎಂದು ಘೋಷಣೆ ಮಾಡಿದ್ದರು. ಆ ಬಳಿಕ ತಮ್ಮ ಹುಟ್ಟೂರುಗಳಿಗೆ ತೆರಳಲು ಸಿಎಂ ಯಡಿಯೂರಪ್ಪ ಅವಕಾಶವನ್ನೂ ನೀಡಿದ್ದರು. ಆದರೆ ಬಸ್ ಸೌಕರ್ಯ ಮಾಡಿಕೊಡಲಿಲ್ಲ. ಉಳ್ಳವರು ಕಾರು, ಬೈಕ್, ಖಾಸಗಿ ವಾಹನಗಳನ್ನು ಮಾಡಿಕೊಂಡು ಹುಟ್ಟೂರಿಗೆ ಹೋಗಿ ಸೇರಿಕೊಂಡರು. ಆದರೆ, ಬಡ ಹೆಣ್ಣುಮಗಳು ಖಾಸಗಿಯವರು ಕೇಳಿದಷ್ಟು ಹಣವನ್ನು ಕೊಡಲಾಗದೆ, ಬೆಂಗಳೂರಿನಲ್ಲಿ 21 ದಿನಗಳ ಕಾಲ ಕೂಲಿಯಿಲ್ಲದೆ ಜೀವನ ನಡೆಸುವುದು ಅಸಾಧ್ಯವೆಂದು ಹುಟ್ಟೂರಿನತ್ತ ತೆರಳುವ ನಿರ್ಧಾರ ಮಾಡಿದ್ದಳು. ಬೆಂಗಳೂರಿನಿಂದ ರಾಯಚೂರಿನ ಸಿಂಧನೂರಿಗೆ ಬರೋಬ್ಬರಿ 425 ಕಿಲೋ ಮೀಟರ್ ದೂರ ಟ್ರಾಕ್ಟರ್ನಲ್ಲಿ ಊರು ಸೇರಲು ಮುಂದಾಗಿದ್ದರು. ಆದರೆ ಕರೋನಾ ಭೀತಿಯಲ್ಲಿ ಲಾಕ್ಡೌನ್ ಆದ ದೇಶದಲ್ಲಿ, ಬಡ ಕೂಲಿಕಾರ್ಮಿಕ ಹೆಣ್ಣುಮಗಳು ಊಟ, ನೀರು ಸಿಗದೆ ದಾರಿ ಮಧ್ಯದಲ್ಲೇ ಸಾವನ್ನಪ್ಪುವ ಪರಿಸ್ಥಿತಿಗೆ ಬಂದು ನಿಂತಿದೆ.
ರಾಯಚೂರಿನ ಸಿಂಧನೂರು ತಾಲೂಕಿನ ವೆಂಕಟೇಶ್ವರ ನಗರ ನಿವಾಸಿ ಗಂಗಮ್ಮ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಭಾನುವಾರ (ಮಾರ್ಚ್ 22) ದಂದು ಜನತಾ ಕರ್ಫ್ಯೂ ಆಗಿದ್ದರಿಂದ ಕಂಗಾಲಾದ ಮಹಿಳೆ ಹಾಗೂ ಆಕೆಯ ಕುಟುಂಬ ಊರಿಗೆ ಹೋಗುವ ನಿರ್ಧಾರ ಮಾಡಿತ್ತು. ಆದರೆ ಬಸ್ಗಳಿಲ್ಲ ಕಾರಣ ಊರಿಗೆ ಹೋಗಲು ಆಗದೆ ಪರಿತಪಿಸುವಂತಾಗಿತ್ತು. 21 ದಿನಗಳ ಕಾಲ ಮನೆ ಬಿಟ್ಟು ಹೊರ ಬಾರದಂತೆ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಣೆ ಮಾಡಿದ ಬಳಿಕ, ಸಿಎಂ ಯಡಿಯೂರಪ್ಪ ಯುಗಾದಿ ಹಬ್ಬಕ್ಕೆ ಹೋಗುವವರು ಹೋಗಬಹುದು ಎಂದಿದ್ದರು. ಇದೇ ಅವಕಾಶ ಬಳಸಿಕೊಂಡ ಬಡ ಕಾರ್ಮಿಕ ಕುಟುಂಬಗಳು ಬಸ್ ಇಲ್ಲದೆ, ಊರಿಗೆ ಹೋಗಲು 20 ಸಾವಿರ ಬಾಡಿಗೆ ಮಾತನಾಡಿಕೊಂಡು ಟ್ರ್ಯಾಕ್ಟರ್ನಲ್ಲಿ ಹೊರಟರು. ಟ್ರಾಕ್ಟರ್ನಲ್ಲಿ ರಾತ್ರಿ ಹೊರಟರೂ ಮುಂಜಾನೆ ತುಮಕೂರಿನ ಬಳಿ ತಡೆಯಲಾಯ್ತು. ಅಲ್ಲಿಂದ ಇಳಿದು ಕಾಲ್ನಡಿಯಲ್ಲಿ ಹೊರಟವರು ಬಳ್ಳಾರಿ ತಲುಪಿದ್ದರು. ಮೂರು ದಿವಸ ಉಪವಾಸವಿದ್ದು ನಡೆದುಕೊಂಡು ಹೊರಟಿದ್ದರು. ಅಷ್ಟರಲ್ಲಿ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಎಪ್ರಿಲ್ 2 ರಂದು ಬಳ್ಳಾರಿ ವಿಮ್ಸ್ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಏಪ್ರಿಲ್ 5ರಂದು ಮೃತಪಟ್ಟಿದ್ದಾರೆ.
ಕೂಲಿನಾಲಿ ಮಾಡಿಕೊಂಡು ಜೀವನ ನಡೆಸಲು ಬೆಂಗಳೂರು ಪಟ್ಟಣಕ್ಕೆ ಬಂದಿದ್ದ ಗಂಗಮ್ಮ ಮೂರು ದಿನ ಪಾದಯಾತ್ರೆ ಮೂಲಕ ಊರು ತಲುಪಲು ಮುಂದಾಗಿದ್ದು, ದಾರಿ ನಡುವೆ ಅನ್ನ, ನೀರು ಸರಿಯಾಗಿ ಸಿಗದ ಕಾರಣ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿ ಸಾವನ್ನಪ್ಪಿದ್ದಾರೆ. ವೈದ್ಯರು ಸಾವಿಗೆ ಬೇರೆ ಬೇರೆ ಕಾರಣ ಹೇಳುತ್ತಿದ್ದಾರೆ. ಮಹಿಳೆ ಕಾಮಾಲೆ ರೋಗದಿಂದಲೂ ಬಳಲುತ್ತಿದ್ದಳು. ಮಾನಸಿಕವಾಗಿಯೂ ತೀರಾ ಕುಗ್ಗಿದ್ದಳು ಎಂದಿದ್ದಾರೆ. ನಿಜ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿ, ಅಂದಿನ ಕೂಳನ್ನು ಅಂದೇ ಸಂಪಾದಿಸುವ ಈ ಬಡ ಕುಟುಂಬಕ್ಕೆ ಕಾಯಿಲೆ ಚಿಂತೆ ಎಲ್ಲಿರಬೇಕು. ದುಡಿತು ತಿನ್ನುತ್ತಿದ್ದ ಮಹಿಳೆ ಊರಿಗೆ ಹೋಗದಿದ್ದರೂ ಬೆಂಗಳೂರಿನಲ್ಲಿ ಸರ್ಕಾರದ ಸೌಲಭ್ಯ ಪಡೆದು ಬದುಕಬಹುದಿತ್ತು.
ಕೂಲಿ ಇಲ್ಲದಿದ್ದರೆ 21 ದಿನಗಳ ಕಾಲ ಬದುಕುವುದು ಹೇಗೆ ಎಂಬ ಚಿಂತೆಗೆ ಬಿದ್ದ ಕೂಲಿ ಕಾರ್ಮಿಕರು ಊರುಗಳತ್ತ ಹೊರಟಿದ್ದರು. ದಾರಿ ಮಧ್ಯೆ ತಡೆದ ಪೊಲೀಸರು ಸೂಕ್ತ ವಸತಿ ವ್ಯವಸ್ಥೆ ಮಾಡಿದ್ದರೂ ಯಾವುದೇ ಸಮಸ್ಯೆ ಇಲ್ಲದೆ ಜೀವನ ನಡೆಸುತ್ತಿದ್ದರು. ಆದರೆ ಬೆಂಗಳೂರಿನಿಂದ ಹೋಗಲೂ ಬಿಟ್ಟರು. ದಾರಿ ಮಧ್ಯೆ ತಡೆದು ಕಾಲ್ನಡಿಗೆಯಲ್ಲಿ ಹೋಗಲು ಬಿಟ್ಟರು. ಅಂತಿಮವಾಗಿ ಅನ್ನ ನೀರು ಸಿಗದೆ ಮಹಿಳೆ ಸಾವನ್ನಪ್ಪಿದ್ದಳು. ಒಟ್ಟಾರೆ, ಇಂದೊಂದು ರೀತಿಯ ಸರ್ಕಾರಿ ಪ್ರಾಯೋಜಿತ ಕೊಲೆ ಎಂದರೆ ತಪ್ಪಾಗುವುದಿಲ್ಲ. ಕರೋನಾದಿಂದ ಸಾವನ್ನಪ್ಪಲಿಲ್ಲ. ಸರ್ಕಾರದ ಅಸಡ್ಡೆ ಕೆಲಸದಿಂದ ಸಾವನ್ನಪ್ಪಿದ್ದಾಳೆ ಮಹಿಳೆ ಗಂಗಮ್ಮ.
ಇನ್ನು ಘಟನೆಯ ಕುರಿತಾಗಿ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಗಮ್ಮ ಸಾವಿನ ಪ್ರಕರಣದಲ್ಲಿ ಕೂಲಿ ನೀಡದ ಗುತ್ತಿಗೆದಾರನೊಬ್ಬನದ್ದೇ ತಪ್ಪಿಲ್ಲ. ಸರ್ಕಾರದ್ದೂ ತಪ್ಪಿದೆ. ಕಾರ್ಮಿಕರ ಇಲಾಖೆಯಲ್ಲಿ ₹ 8,000 ಕೋಟಿ ಹಣವಿದೆ. ಆದರೆ ಇಂಥವರಿಗೆ ಹಣ ವಿನಿಯೋಗವಾಗುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ. ಆಕೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರಾಶ್ರಿತರ ಕ್ಯಾಂಪ್ನಲ್ಲಿ ಇರಿಸಿತ್ತಂತೆ. ಕ್ಯಾಂಪ್ನಲ್ಲಿದ್ದೂ ಆಕೆಗೆ ಆಹಾರ, ಚಿಕಿತ್ಸೆ ಸಿಗಲಿಲ್ಲ ಏಕೆ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಇದೇ ರೀತಿ ಮಾರ್ಚ್ ಅಂತ್ಯದಲ್ಲಿ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದ. ಬೆಂಗಳೂರಿನಿಂದ ಬಂದಿದ್ದ ರಾಯಚೂರಿನ ಲಿಂಗಸೂಗೂರು ತಾಲೂಕಿನ ಬಂಡಾ ಗ್ರಾಮದ 55 ವರ್ಷದ ಮಲ್ಲಪ್ಪ ತಳವಾರ ಎಂಬುವರರು ಸಾವನ್ನಪ್ಪಿದ್ದರು. ಆ ವ್ಯಕ್ತಿ ಕರೋನಾ ವೈರಸ್ನಿಂದಲೇ ಸಾವನ್ನಪ್ಪಿದ್ದಾನೆಂದು ಭಯಗೊಂಡ ಗ್ರಾಮಸ್ಥರು ಶವದ ಬಳಿಗೂ ಬಂದಿರಲಿಲ್ಲ. ಆದರೆ ವಲಸೆ ಕಾರ್ಮಿಕರು ಅನ್ನ ಸಿಗದೆ ಸಾವನ್ನಪ್ಪುತ್ತಿರುವುದು ದುರಂತದ ವಿಚಾರ.