ಇನ್ನು ಕೇವಲ ಆರು ತಿಂಗಳ ಒಳಗಾಗಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಲ ಪ್ರದರ್ಶನಕ್ಕೆ ನಿಂತಿದೆ. ಆದರೆ, ಈ ಬಲ ಪ್ರದರ್ಶನಕ್ಕೆ ಕಾರಣವಾಗಬೇಕಿದ್ದ ಪ್ರತಿಭಟನೆ ಪಕ್ಷದೊಳಗಿನ ಭಿನ್ನಮತವನ್ನು ಜಗಜ್ಜಾಹೀರಾಗಿಸಿದೆ. ಇದರೊಂದಿಗೆ ಪೊಲೀಸರ ಲಾಠಿ ಚಾರ್ಜ್ಪಶ್ಚಮ ಬಂಗಾಳದಲ್ಲಿ ಬಿಜೆಪಿಯ ಯೋಜನೆಯನ್ನು ತಲೆಕೆಳಗಾಗಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೊದಲು ಬಿಜೆಪಿಯ ಯೋಜನೆಗೆ ಕೊಡಲಿ ಏಟು ನೀಡಿದ್ದು ಪಶ್ಚಿಮ ಬಂಗಾಳ ಪೊಲೀಸರು. ಪ್ರತಿಭಟನಾ ರ್ಯಾಲಿಯನ್ನು ಚದುರಿಸಲು ಪೊಲೀಸರು ನಡೆಸಿದ ಲಾಠಿ ಚಾರ್ಜ್ನಿಂದಾಗಿ ಪ್ರತಿಭಟನೆಯು ಸಮರ್ಪಕವಾಗಿ ಕೊನೆಗೊಳ್ಳಲಿಲ್ಲ. ಈ ಲಾಠಿ ಚಾರ್ಜ್ ಅನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತಾದರೂ, ಅದು ಅಷ್ಟರ ಮಟ್ಟಿಗಿನ ಯಶಸ್ಸು ನೀಡಲಿಲ್ಲ.

ಇನ್ನು ಪಶ್ಚಿಮ ಬಂಗಾಳದ ಹಿರಿಯ ಬಿಜೆಪಿ ನಾಯಕರ ಮುನಿಸು ಈ ಪ್ರತಿಭಟನಾ ರ್ಯಾಲಿಯನ್ನು ಮಂಕಾಗಿಸಿತು. ಯೋಜನೆಯ ಪ್ರಕಾರ ಬುರ್ರಾಬಜಾ಼ರ್, ಹೇಸ್ಟಿಂಗ್ಸ್, ಸೆಂಟ್ರಲ್ ಅವೆನ್ಯೂ ಹಾಗೂ ಸಂತ್ರಗಾಚಿಯಿಂದ ನಬನ್ನಾವರೆಗೆ ಏಕಕಾಲದಲ್ಲಿ ರ್ಯಾಲಿ ನಡೆಸಲು ತೀರ್ಮಾನಿಸಲಾಗಿತ್ತು.
ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರು ಬುರ್ರಾಬಜಾ಼ರ್ನಿಂದ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಅವರು ನೇರವಾಗಿ ಇತ್ತೀಚಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮುಕುಲ್ ರಾಯ್ ಅವರೊಂದಿಗೆ ಹೇಸ್ಟಿಂಗ್ಸ್ ಪ್ರದೇಶದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಇಲ್ಲಿ ದಿಲೀಪ್ ಘೋಷ್ ಏಕಾಂಗಿ ನಾಯಕರಾಗಿ ತಮ್ಮ ರ್ಯಾಲಿಯನ್ನು ನಡೆಸಿದರು.
ಉಳಿದಂತೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು ಹೌರಾದಲ್ಲಿದ್ದರು.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಕಳೆದ ನಾಲ್ಕು ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಶ್ರಮಪಟ್ಟಿದ್ದ ರಾಹುಲ್ ಸಿನ್ಹಾ ಅವರು, ಸಂಪೂರ್ಣ ರ್ಯಾಲಿಯಿಂದ ದೂರ ಉಳಿದಿದ್ದರು. ತಮ್ಮ ಗೈರಿಗೆ ಕಾರಣ ನೀಡಲು ನಿರಾಕರಿಸಿರುವ ರಾಹುಲ್, ತಾನು ಮನೆಯಲ್ಲಿದ್ದೆ ಎಂದಷಷ್ಟೇ ಹೇಳಿದ್ದಾರೆ. ಆದರೆ, ಚುನಾವಣೆಗೂ ಮುನ್ನ ಪಕ್ಷದ ಅತೀ ದೊಡ್ಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರುವುದು ಪ.ಬಂ. ಬಿಜೆಪಿಯಲ್ಲಿನ ಬಂಡಾಯವನ್ನು ತೆರೆದಿಟ್ಟಿದೆ.
ಬಿಜೆಪಿ ಮೂಲಗಲ ಪ್ರಕಾರ, ಇದೇ ಮೊದಲ ಬಾರಿಗೆ ರಾಹುಲ್ ಅವರು ರಾಜ್ಯ ಮಟ್ಟದ ಕಾರ್ಯಕ್ರಮವೊಂದಕ್ಕೆ ಗೈರಾಗುತ್ತಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದಾಗ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕಿತ್ತೊಗೆಯಲಾಗಿತ್ತು. ಈ ಅಸಮಾಧಾನ ವ್ಯಕ್ತಪಡಿಸಿದ್ದ ರಾಹುಲ್, “40 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದಕ್ಕೆ ಒಳ್ಳೆಯ ಬಹುಮಾನ ದೊರೆತಿದೆ. ತೃಣಮೂಲ ಕಾಂಗ್ರೆಸ್ನ ನಾಯಕ ಪಕ್ಷಕ್ಕೆ ಸೇರಿದ್ದಾನೆ ಎಂಬ ಕಾರಣಕ್ಕೆ ಅವರಿಗೆ ಅಧಿಕಾರ ದೊರೆತಿದೆ. ಇದಕ್ಕಿಂತ ದುರದೃಷ್ಟ ಇನ್ನೇನಿದೆ?” ಎಂದು ಹೇಳಿದ್ದರು.

ಬಿಜೆಪಿ ಹೈಕಮಾಂಡ್ ನ ನಿರ್ಧಾರದಿಂದ ಬೇಸತ್ತು ರಾಹುಲ್ ಸಿನ್ಹಾ ಬಿಜೆಪಿ ತೊರೆಯುವ ನಿರ್ಧಾರ ಮಾಡಿದ್ದಾರೆಯ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈಗ ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಆರ್ಎಸ್ಎಸ್ ಬೆಂಬಲದ ದಿಲೀಪ್ ಘೋಷ್ ಬಣ ಹಾಗೂ ತೃಣಮೂಲ ಕಾಂಗ್ರೆಸ್ನಿಂದ ಬಂದಂತಹ ಮುಕುಲ್ ರಾಯ್ ಬಣದ ನಡುವಿನ ಸಂಘರ್ಷ ಈಗ ಬಹಿರಂಗವಾಗಿದೆ.
ತೃಣಮೂಲ ಕಾಂಗ್ರೆಸ್ ಮೂಲದ ನಾಯಕರ ಹಿಡಿತ:
ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮುಕುಲ್ ರಾಯ್ ಅವರು ಬಿಜೆಪಿಯಲ್ಲಿ “ತೃಣಮೂಲ ಕಾಂಗ್ರೆಸ್” ಬಣದ ನೇತೃತ್ವ ವಹಿಸಿಕೊಂಡಿದ್ದಾರೆ. ಇವರೊಂದಿಗೆ ಶಂಕುದೇವ್ ಪಾಂಡಾ, ಸಬ್ಯಸಾಚಿ ದತ್ತ, ಅರ್ಜುನ್ ಸಿಂಗ್ ಸೇರಿದಂತೆ ಇತರ ಪ್ರಮುಖ ನಾಯಕರು ಇದ್ದಾರೆ.

ಮುಕುಲ್ ರಾಯ್ ಅವರು ರಾಜ್ಯ ಬಿಜೆಪಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ತಮಗೂ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಯಾವುದೇ ಸ್ಥಾನ ಸಿಗದ ಕಾರಣಕ್ಕಾಗಿ ನಿರಾಶರಾಗಿ ಮತ್ತೆ ತಮ್ಮ ಮಾತೃ ಪಕ್ಷಕ್ಕೆ ಮರಳುವ ಯೋಚನೆ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿತ್ತು. ಇದು ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಅವರಿಗಿರುವ ಹಿಡಿತವನ್ನು ಸ್ಪಷ್ಟಪಡಿಸುತ್ತದೆ. ಈ ಘಟನೆಯು ಹಲವು ಮೂಲ ಬಿಜೆಪಿ ನಾಯಕರ ಕಣ್ಣನ್ನು ಕೆಂಪಾಗಿಸಿತ್ತು.