ಬಿಹಾರದ ಸೀತಮಾರ್ಹಿ ಜಿಲ್ಲೆಯ ಇಂಡೋ-ನೇಪಾಳ ಗಡಿಯಲ್ಲಿ ನೇಪಾಳ ಸೇನೆಯು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಸೀಮಾ ಸುರಕ್ಷಾ ಬಾಲ್ (ಎಸ್ಎಸ್ಬಿ) ದೃಢಪಡಿಸಿದೆ.
ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ನೇಪಾಳ ಸೇನೆ ಗುಂಡಿನ ದಾಳಿ ನಡೆಸಿದ ಪ್ರದೇಶದಲ್ಲಿ ಭಾರತೀಯರ ಗುಂಪು ಕೃಷಿ ಮಾಡುತ್ತಿತ್ತು.
ಈ ಘಟನೆಯ ಬಗ್ಗೆ ನಾನು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ. ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ನಾವು ಎಲ್ಲದರ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ಎಸ್ಎಸ್ಬಿ ಐಜಿ ಸಂಜಯ್ ಕುಮಾರ್ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಭಾರತ ನೇಪಾಳ ಗಡಿ ದಾಟಲು ಭಾರತೀಯರು ಪ್ರಯತ್ನಿಸಿದಕ್ಕಾಗಿ ನಾವು ಗುಂಡಿನ ದಾಳಿ ನಡೆಸಿದ್ದೇವೆ ಎಂದು ನೇಪಾಳಿ ಪಡೆಗಳು ಸಮರ್ಥಿಸಿಕೊಂಡಿವೆ. ಸರ್ಲಾಹಿ ಗಡಿಯ ನಾರಾಯಣಪುರದಲ್ಲಿ ನೇಪಾಳದ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ಸಿಬ್ಬಂದಿ, ಭಾರತೀಯ ಪ್ರಜೆಗಳ ಗುಂಪೊಂದು ಗಡಿ ರೇಖೆ ದಾಟಿ ನೇಪಾಳವನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ ನಂತರ ಈ ಘಟನೆ ಸಂಭವಿಸಿವೆ ಎಂದು ಹೇಳಿದ್ದಾರೆ.
ಮೃತಪಟ್ಟವರನ್ನು 25 ವರ್ಷದ ದಿಕೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಗುಂಡು ತಗುಲಿ ಗಾಯಗೊಂಡಿರುವ ಉಮೇಶ್ ರಾಮ್ ಹಾಗೂ ಉದಯ್ ಠಾಕೂರ್ ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಿಲಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪಟ್ಟಣಕ್ಕೆ ಕರೆತರಲಾಗಿದೆ. ನೇಪಾಳ ಸೇನೆಯು ಓರ್ವ ಭಾರತೀಯ ಪ್ರಜೆಯನ್ನು ಸೆರೆಹಿಡಿದಿದೆ ಎಂದು ಸ್ಥಳೀಯ ಜನರು ತಿಳಿಸಿದ್ದಾರೆ ಎಂದು ಡಿಎನ್ಎ ಸುದ್ದಿಸಂಸ್ಥೆ ವರದಿ ಮಾಡಿದೆ.