70 ಕ್ಷೇತ್ರಗಳ ಪುಟ್ಟ ರಾಜ್ಯ ದೆಹಲಿ. ಆದರೂ ದೆಹಲಿ ರಾಷ್ಟ್ರ ರಾಜಧಾನಿ ಎನ್ನುವ ಕಾರಣಕ್ಕೆ ಇಡೀ ದೇಶದ ಗಮನ ಸೆಳೆದಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದ್ದು, ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕೇವಲ 70 ಕ್ಷೇತ್ರಗಳ ರಕ್ಷಣೆಗೆ 90 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಎಂದರೆ ಕ್ಷೇತ್ರಕ್ಕೆ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದ್ದು, ಈಗಾಗಲೇ ಪ್ರತಿಭಟನಾಕಾರರ ಮೇಲೆ ಮೂರ್ನಾಲ್ಕು ಕಡೆಗಳಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಇಂದು ಮತದಾನ ನಡೆಯುವಾಗ ಯಾವುದೇ ಅಹಿತಕರ ಘಟನೆ ಜರುಗಬಾರದು ಎನ್ನುವ ಕಾರಣಕ್ಕೆ ಎಲ್ಲೆಡೆ ಖಾಕಿ ಸರ್ಪಗಾವಲು ಹಾಕಲಾಗಿದೆ. ಅರಸೇನಾಪಡೆ ಜೊತೆಗೆ ಅಲ್ಲಲ್ಲಿ ಭಾರತೀಯ ಸೇನಾ ಸಿಬ್ಬಂದಿ ಕೂಡ ಗಸ್ತು ತಿರುಗಲಿದ್ದಾರೆ.
ದೆಹಲಿಯಲ್ಲಿ 1,46,92,136 ಮತದಾರರಿದ್ದು, 13,750 ಮತಗಟ್ಟೆಗಳನ್ನ ನಿರ್ಮಾಣ ಮಾಡಲಾಗಿದೆ. 1 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸೂಕ್ಷ್ಮಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 2015ರಲ್ಲಿ 70 ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಾಟಿ 67 ಸ್ಥಾನಗಳಲ್ಲಿ ಜಯಭೇರಿ ಬಾರಿ ಇಡಿ ದೇಶವನ್ನೇ ಅಚ್ಚರಿಗೆ ಒಳಪಡಿಸಿತ್ತು. ಬಿಜೆಪಿ ಇಡೀ ದೇಶದಲ್ಲೇ ಹವಾ ಸೃಷ್ಟಿಸಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿ ಕೇವಲ 1 ವರ್ಷವಾಗಿತ್ತು. ಆದರೆ ದೆಹಲಿ ಗೆಲ್ಲುವುದು ಮಾತ್ರ ಸಾಧ್ಯವಾಗಲಿಲ್ಲ. ಕೇವಲ 3 ಸ್ಥಾನಗಳಿಗೆ ತೃಪ್ತಿಪಡಬೇಕಾಯ್ತು. ಕಾಂಗ್ರೆಸ್ ಮಾತ್ರ ಹೇಳ ಹೆಸರೇಳದಂತೆ ಹೊರಟುಹೋಯ್ತು.
1993ರಲ್ಲಿ ರಾಜ್ಯ ಸ್ಥಾನಮಾನ ಪಡೆದುಕೊಂಡ ದೆಹಲಿ, ಇಲ್ಲೀವರೆಗೂ 6 ಚುನಾವಣೆಗಳನ್ನು ಕಂಡಿದೆ. ಮೊದಲ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಹಿಡಿದಿತ್ತು. ಆ ಬಳಿಕ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಹ್ಯಾಟ್ರಿಕ್ ಗೆಲುವು ಸಾಧಿಸಿ ದಿವಂಗತ ಶೀಲಾ ದೀಕ್ಷಿತ್ ಮುಖ್ಯಮಂತ್ರಿ ಆಗಿದ್ದರು. ಆ ಬಳಿಕ ಅರವಿಂದ್ ಕೇಜ್ರಿವಾಲ್ ಸರದಿಯಾಗಿದೆ.
ದೆಹಲಿಯ 70 ಕ್ಷೇತ್ರಗಳಲ್ಲಿ ಒಟ್ಟು 672 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ ಬಾರಿ ಶೇಕಡ 54..3 ರಷ್ಟು ಮತ ಪಡೆದಿದ್ದ ಆಮ್ ಆದ್ಮಿ ಪಾರ್ಟಿ ಈ ಬಾರಿ ಕೂಡ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಬಿಜೆಪಿ ಶೇಕಡ 32ರಷ್ಟು ಮತ ಗಳಿಸುವಲ್ಲಿ ಯಶಸ್ವಿಯಾಗಿದ್ದರೂ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸೋಲುಂಡಿತ್ತು. ಆದರೆ ಈ ಬಾರಿ ಅಧಿಕಾರ ಹಿಡಿಯಲು ಕಷ್ಟ ಎನ್ನುವುದು ಬಿಜೆಪಿಯ ಆಂತರಿಕ ವರದಿಗಳಲ್ಲೂ ಗೊತ್ತಾಗಿದೆ ಎನ್ನಲಾಗಿದೆ. ಆದರೆ ಎಷ್ಟು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವೋ ಅಷ್ಟೂ ಜನರನ್ನು ಗೆಲ್ಲಿಸಲು ಪಣತೊಟ್ಟಿದೆ. ಇನ್ನು ಕಾಂಗ್ರೆಸ್ ಕಳೆದ ಬಾರಿ ಕೇವಲ ಶೇಕಡ 9.6 ರಷ್ಟು ಮತ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಖಾತೆಯನ್ನಾದರೂ ತೆರೆಯುವ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಾರ್ಟಿ ಪೈಪೋಟಿ ನಡೆಸುತ್ತಿವೆ. ಆದರೆ ಇಲ್ಲಿ ದೇಶಭಕ್ತಿ ಹಾಗು ಅಭಿವೃದ್ಧಿ ಅಷ್ಟೇ ಪ್ರಬಾವ ಬೀರಲಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.
ಕಳೆದ ಬಾರಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿ ಎಡವಟ್ಟು ಮಾಡಿಕೊಂಡಿದ್ದ ಬಿಜೆಪಿ ಹಾಗು ಕಾಂಗ್ರೆಸ್ ಈ ಬಾರಿ ಜಾಣತನ ಪ್ರದರ್ಶನ ಮಾಡಿವೆ. ಆಮ್ ಆದ್ಮಿ ಪಾರ್ಟಿ ಮಾತ್ರ ಮತ್ತೊಮ್ಮೆ ಅರವಿಂದ್ ಕೇಜ್ರಿವಾಲ್ ಎನ್ನುವ ಘೋಷವಾಕ್ಯ ಜೋರಾಗಿದೆ. ಪೌರತ್ವ ತಿದ್ದುಪಡಿ ವಿರೋಧ ಮಾಡ್ತಿರುವ ಜನ ದೇಶದ್ರೋಹಿಗಳು ಎನ್ನುವ ಪಟ್ಟವನ್ನು ಬಹಿರಂಗವಾಗಿ ನೀಡುವ ಮೂಲಕ ಮತಗಳನ್ನು ವಿಭಜನೆ ಮಾಡುವ ಪ್ರಯತ್ನ ಮಾಡಿತ್ತು. ಆದರೆ ಇದನ್ನು ಅಲ್ಲಗಳೆದಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟ, ಪರ ವಿರೋಧ ಯಾವುದೇ ಪರಿಣಾಮ ಬೀರುವುದಿಲ್ಲ.
ದೆಹಲಿ ಜನರು ಕೇವಲ ಅಭಿವೃದ್ಧಿಯನ್ನು ಮಾತ್ರ ನೋಡ್ತಾರೆ ಎನ್ನುವ ಮೂಲಕ ಮತಗಳನ್ನು ಒಟ್ಟುಗೂಡಿಸಿ ಹೆಚ್ಚೆಚ್ಚು ಸ್ಥಾನ ಗಳಿಸುವ ಉತ್ಸಾಹದಲ್ಲಿದ್ದಾರೆ. ಇಂದು ಎಲ್ಲಾ ಹೋರಾಟಗಳಿಗೂ ಮತದಾರ ಉತ್ತರ ಕೊಡಲಿದ್ದು, ಈ ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿ ಜಯಭೇರಿ ಬಾರಿಸುವ ಜಗಜಟ್ಟಿ ಯಾರು ಎನ್ನುವುದು ಫೆಬ್ರವರಿ 11ರಂದು ಗೊತ್ತಾಗಲಿದೆ.