ವಿಶ್ವದಾದ್ಯಂತ ಕರೋನಾ ವೈರಸ್ ಸೋಂಕಿತರ ಸಂಖ್ಯೆ 12 ಲಕ್ಷ ಗಡಿ ದಾಟಿ ಮುಂದೆ ಹೊರಟಿದೆ. ಸಾವಿನ ಸಂಖ್ಯೆ 65 ಸಾವಿರ ತಲುಪಿದೆ. ಭಾರತದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ. 21 ದಿನಗಳ ದೇಶವನ್ನು ಲಾಕ್ ಡೌನ್
ಮಾಡುವಂತೆ ಆದೇಶ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 25ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ವಿದ್ಯುತ್ ದೀಪವನ್ನು ಆರಿಸಿ, ಆ ಸಮಯದಲ್ಲಿ ಮೊಂಬತ್ತಿ, ಮೊಬೈಲ್ ಟಾರ್ಚ್, ಬ್ಯಾಟರಿ, ದೀಪ ಬೆಳಗುವಂತೆ ಕರೆ ನೀಡಿದ್ದಾರೆ. ಇದರಿಂದ ಕರೋನಾ ವೈರಸ್ ನಾಶವಾಗುತ್ತಾ ಎನ್ನುವ ಟೀಕೆ ವಿರೋಧ ಪಕ್ಷಗಳಿಂದ ಕೇಳಿಬಂದಿದೆ. 21 ದಿನಗಳ ಲಾಕ್ ಡೌನ್ ಗೂ ಮುನ್ನ ಮಾರ್ಚ್ 22ರಂದು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರು ಅವತ್ತು ಸಂಜೆ 5 ಗಂಟೆಗೆ ಚಪ್ಪಾಳೆ ಹೊಡೆಸಿದ್ದರು. ಇದೀಗ ದೀಪ ಹಚ್ಚುವ ಯೋಜನೆ ಬಗ್ಗ ಪರ ವಿರೋಧ ಚರ್ಚೆ ನಡೆಯುತ್ತಿದೆ. ವಿದ್ಯುಪ್ ದೀಪ ಆರಿಸಿ ಎಣ್ಣೆ ದೀಪ ಹಚ್ಚುವುದು ಎಷ್ಟು ಪರಿಣಾಮಕಾರಿ ಎನ್ನುವ ಚರ್ಚೆಗಳಿಗಿಂತ, ದೇಶದ ವಿದ್ಯುತ್ ಜಾಲಕ್ಕೆ ಸಮಸ್ಯೆ ಆಗಲಿದೆಯೇ ಎನ್ನುವ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಾ ಇವೆ.
ಇಡೀ ದೇಶದ ವಿದ್ಯುತ್ ವಿತರಣಾ ಜಾಲದಲ್ಲಿ ಒಂದು ದಿನಕ್ಕೆ ಇಂತಿಷ್ಟು ವಿದ್ಯುತ್ ಬೇಕಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ವಿದ್ಯುತ್ ಹರಿಸಲಾಗುತ್ತದೆ. ಕೇಂದ್ರ ಜಾಲ ಎಲ್ಲಾ ರಾಜ್ಯಗಳನ್ನು ಸಂಪರ್ಕ ಮಾಡಿರುತ್ತದೆ. ಆ ಕೇಂದ್ರ ಜಾಲದಿಂದ ರಾಜ್ಯ ಸರ್ಕಾರಗಳು ವಿದ್ಯುತ್ ಪಡೆಯುತ್ತವೆ. ಇದೀಗ ಇಡೀ ದೇಶದ ಜನರು ಏಕಕಾಲದಲ್ಲಿ ವಿದ್ಯುತ್ ಬಳಕೆಯನ್ನು ಒಮ್ಮೆಗೆ ನಿಲ್ಲಿಸಿದರೆ, ಕೇಂದ್ರ ಜಾಲಕ್ಕೆ ವಿರುದ್ಧ ದಿಕ್ಕಿನಲ್ಲಿ ವಿದ್ಯುತ್ ಪಸರಿಸುತ್ತದೆ. ಒಮ್ಮೆಗೆ ವಿದ್ಯುತ್ ಹರಿವು ನಿಂತಾಗ ವಿದ್ಯುತ್ ಹಿಮ್ಮುಖ ಸಂಚಾರದ ಘರ್ಷಣೆಗೆ ಒಳಗಾಗುತ್ತದೆ. ಸ್ಥಳೀಯ ಪವರ್ ಸ್ಟೇಷನ್ ಗಳು, ರಾಜ್ಯದ ಪವರ್
ಗ್ರಿಡ್ ಗಳು ಸಿಡಿಯುವ (ಬರ್ಸ್ಟ್) ಸಾಧ್ಯತೆಯಿದೆ ಎಂಬ ವಾದ ಕೇಳಿ ಬರುತ್ತಿದೆ. 9 ಗಂಟೆ 9 ನಿಮಿಷಕ್ಕೆ ಒಮ್ಮೆಗೆ ವಿದ್ಯುತ್ ಪುನಃ ಹರಿದಾಗ ಮನೆಗಳಲ್ಲೂ ಕೆಲವು ಸಣ್ಣಪುಟ್ಟ ಸಮಸ್ಯೆಗಳಿಗೂ ಕಾರಣ ಆಗಬಹುದು ಎನ್ನುವ ಲೆಕ್ಕಾಚಾರಗಳನ್ನು ಕೆಲವು ವಿದ್ಯುತ್ ಸರಬರಾಜು ಕಂಪೆನಿಗಳ ಎಂಜಿನಿಯರ್ ಗಳು ವ್ಯಕ್ತಪಡಿಸಿದ್ದಾರೆ.

ದೇಶದಾದ್ಯಂತ ಏಕಕಾಲಕ್ಕೆ ವಿದ್ಯುತ್ ಬಳಕೆ ನಿಲ್ಲಿಸಿದರೆ ವಿದ್ಯುತ್ ಜಾಲದ ಮೇಲೆ ಭಾರೀ ಒತ್ತಡ ಉಂಟಾಗಿ ವಿದ್ಯುತ್ ಲೈನ್ ಗಳಲ್ಲಿ ಏರುಪೇರಾಗಲಿದೆ. ಇದರಿಂದ ಗ್ರಿಡ್ಗಳಿಗೆ ಹಾನಿಯಾದರೆ ದೇಶವೇ ಕತ್ತಲಲ್ಲಿ ಮುಳುಗುವ ಅಪಾಯವಿದೆ ಎನ್ನುವ ತಜ್ಞರ ಮಾತನ್ನು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಆದರೆ ದೀಪ ಬೆಳಗಿಸುವ ಅವಧಿಯಲ್ಲಿ ಎಷ್ಟು ಪ್ರಮಾಣದ ವಿದ್ಯುತ್ ಕಡಿಮೆ ಆಗುತ್ತೆಯೋ ಅಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಲಾಗುತ್ತದೆ. ವಿದ್ಯುತ್ ವಿತರಣಾ ಜಾಲದ ಮೇಲೆ ಪರಿಣಾಮ ಬೀರದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿದಿನ ರಾತ್ರಿ 9 ಗಂಟೆ ವೇಳೆಯಲ್ಲಿ ವಿದ್ಯುತ್ ಬಳಕೆ ಪ್ರಮಾಣ ಅತಿ ಹೆಚ್ಚಾಗಿರುತ್ತದೆ. 12 ರಿಂದ 13 ಗಿಗಾ ವ್ಯಾಟ್ ಬಳಕೆ ಮಾಡಲಾಗುತ್ತದೆ. ಒಮ್ಮೆಗೆ 9 ನಿಮಿಷ ವಿದ್ಯುತ್ ಬಂದ್ ಮಾಡುವುದರಿಂದ ಸಮಸ್ಯೆ ಆಗುವುದನ್ನು ತಡೆಗಟ್ಟಲು ಸಂಜೆ 6 ಗಂಟೆ 10 ನಿಮಿಷದಿಂದ ರಾತ್ರಿ 8ಗಂಟೆ ತನಕ ಜಲವಿದ್ಯುತ್ ಉತ್ಪಾದನೆ ಕಡಿಮೆ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ.
ಕೇಂದ್ರದಲ್ಲಿ ಇಂಧನ ಸಚಿವರಾಗಿದ್ದ ಜೈರಾಮ್ ರಮೇಶ್ ಮಾತನಾಡಿ ಪವರ್ ಗ್ರಿಡ್ಗೆ ಅಡ್ಡಿ ಆಗಬಹುದು ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಆದರೆ ವಿದ್ಯುತ್ ಗ್ರಿಡ್ಗಳ ಸುರಕ್ಷತೆ ಬಗ್ಗೆ ಯಾವುದೇ ಅನುಮಾನ ಬೇಡ. ಇಂದು ರಾತ್ರಿ ವಿದ್ಯುತ್ ನಿರ್ವಹಣೆಗೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಭರವಸೆ ನೀಡಿದೆ. ಕೆಲವೊಂದು ಸಲಹೆಗಳನ್ನೂ ಕೊಟ್ಟಿದೆ. ಎಸಿ, ಫ್ಯಾನ್ಗಳು, ಟಿ.ವಿ, ರೆಫ್ರಿಜರೇಟರ್ ಬಂದ್ ಮಾಡಬಾರದು. ಆಸ್ಪತ್ರೆ, ಅಪಾರ್ಟ್ ಮೆಂಟ್ ಗಳು, ಪೊಲೀಸ್ ಠಾಣೆಗಳು, ನಗರ, ಪಟ್ಟಣ, ಹಳ್ಳಿಗಳು ಸೇರಿಂದತೆ ಎಲ್ಲಾ ಕಡೆ ಬೀದಿ ದೀಪ ಉರಿಯುತ್ತಿರಲಿ. ಕೇವಲ ಮನೆಯ ದೀಪಗಳನ್ನು ಮಾತ್ರ ಆರಿಸಿ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಸಲಹೆ ನೀಡಿದೆ. ಯಾವುದೇ ಕಾರಣಕ್ಕೂ ಮನೆಗೆ ವಿದ್ಯುತ್ ಸಂಚಾರ ಮಾಡುವ ಮುಖ್ಯ ಸ್ವಿಚ್ ಬಂದ್ ಮಾಡದಂತೆ ಸ್ಥಳೀಯ ವಿದ್ಯುತ್ ಕಂಪನಿಗಳು ಎಚ್ಚರವಹಿಸಬೇಕು ಎಂದು ಸೂಚಿಸಿದೆ.
ಭಾರತದಲ್ಲಿ ಮನೆ ಬಳಕೆ ವಿದ್ಯುತ್ ಪ್ರಮಾಣ ತುಂಬಾ ಕಡಿಮೆ ಪ್ರಮಾಣದಲ್ಲಿದೆ. ಹಾಗಾಗಿ ಆತಂಕಪಡುವ ಯಾವುದೇ ಅವಶ್ಯಕತೆ ಇಲ್ಲ. ಭಾರತದ ಗೃಹ ಬಳಕೆ ವಿದ್ಯುತ್
ಬಳಕೆಯನ್ನು ಮಾತ್ರ ನಾವು ಗಮನಿಸಿದಾಗ ಶೇಕಡವಾರು ಕಡಿಮೆ ಪ್ರಮಾಣದಲ್ಲಿದ್ದು, ಅಂದಾಜು ಶೇಕಡ 3ಕ್ಕಿಂತಲೂ ಕಡಿಮೆಯಷ್ಟಿದೆ. ಮಾರ್ಚ್ 29ರಿಂದ ವಿದ್ಯುತ್ ಬಳಕೆ ಬಗ್ಗೆ ಈಗಾಗಲೇ ಅಧ್ಯಯನ ಮಾಡಿಕೊಂಡಿದ್ದಾರೆ. ಸಂಜೆ 6 ರಿಂದ ರಾತ್ರಿ 9 ಗಂಟೆ ತನಕ 1 ಲಕ್ಷ ದಿಂದ 1 ಲಕ್ಷ 12 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದೆ. ಇದೇ ರೀತಿ ವಿದ್ಯುತ್ ಬಳಕೆಯ ಬಗ್ಗೆ ಅಧ್ಯಯನ ಮಾಡಿದ ಬಳಿಕ ಸಮಸ್ಯೆ ಆಗದಂತೆ ಅಧಿಕಾರಿಗಳು ಯೋಜನೆ ಮಾಡಿಕೊಳ್ತಾರೆ. ಇಡೀ ಭಾರತದಲ್ಲಿ 11 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಗೃಹ ಉಪಯೋಗಕ್ಕೆ ಬಳಕೆಯಾಗುತ್ತಿದೆ. ಆದರೆ ಏಕಕಾಲದಲ್ಲಿ ಕಡಿಮೆಯಾಗುವ ಬಳಕೆಯನ್ನು ಸರಿದೂಗಿಸಲು ಉತ್ಪಾದನೆ ಹಾಗು ಬಳಕೆಯನ್ನು ಸರಿದೂಗಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಣು ವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ ಅನಿಲ ವಿದ್ಯುತ್ , ವಾಯು ವಿದ್ಯುತ್
ಸೇರಿದಂತೆ ಹಲವಾರು ರೀತಿಯ ಸಣ್ಣ ಸಣ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡುತ್ತಾರೆ. 2012ರಲ್ಲಿ ಗ್ರಿಡ್ ಸಮಸ್ಯೆ ಆಗಿತ್ತು, ಎರಡು ದಿನಗಳ ಕಾಲ ಕರೆಂಟ್
ಇಲ್ಲದಂತೆ ಸಮಸ್ಯೆ ಕೂಡ ಆಗಿತ್ತು ಎಂದು ಹಲವಾರು ವರ್ಷಗಳ ಕಾಲ ವಿದ್ಯುತ್ ಕ್ಷೇತ್ರದಲ್ಲಿ ವರದಿಗಾರಿಕೆ ಮಾಡಿದ ಅನುಭವಿ ಪತ್ರಕರ್ತ ಕ. ಮ. ರವಿಶಂಕರ್ ಪ್ರತಿಧ್ವನಿಗೆ ಮಾಹಿತಿ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರಕ್ಕೂ ತೊಂದರೆ ಆಗುವುದಿಲ್ಲ ಎನ್ನುವ ಸಂಪೂರ್ಣ ನಂಬಿಕೆಯಿಲ್ಲ. ಅದೇ ಕಾರಣದಿಂದ ಎಲ್ಲಾ ವಿದ್ಯುತ್ ಉತ್ಪಾದನೆಯನ್ನು ನಿಗದಿಯ ಸಮಯದಲ್ಲಿ ನಿಲ್ಲಿಸುವ ಬಗ್ಗೆಯೂ ಲೆಕ್ಕಾಚಾರ ಮಾಡಲಾಗಿದೆ. ಸಬ್ ಸ್ಟೇಷನ್ ಸೇರಿದಂತೆ ವಿದ್ಯುತ್ ವಿನಿಮಯ ಕಚೇರಿಗಳಲ್ಲಿ ಸಿಬ್ಬಂದಿಗಳು ಹಾಜರಿದ್ದು, ಎಲ್ಲವನ್ನೂ ಸೂಕ್ತ ರೀತಿಯಲ್ಲಿ ನಿಬಾಯಿಸಬೇಕು ಇಂಟರ್ ಸ್ಟೇಟ್ ಜನರೇಟಿಂಗ್ ಸ್ಟೇಷನ್ (ISGS) ಸ್ಟೇಷನ್ ಗಳಲ್ಲಿ ಕ್ರಮೇಣವಾಗಿ ಒತ್ತಡವನ್ನು ಕಡಿಮೆ ಮಾಡುತ್ತಾ ಸಾಗಬೇಕು. ಸೆಂಟ್ರಲ್ ಗ್ರಿಡ್ ನಲ್ಲೂ ವೋಲ್ಟೇಜ್ ವೇರಿಯೇಷನ್ ತಡೆಯಬೇಕು ಎನ್ನುವ ಆದೇಶ ಮಾಡಲಾಗಿದೆ. 9 ನಿಮಿಷಗಳಲ್ಲಿ ಏನಾಗುತ್ತೋ ಏನೋ ಎನ್ನುವ ಭೀತಿ ದೇಶದ ಜನರಲ್ಲೂ ಇದೆ. ಆದರೇ ಅದನ್ನು ನಿಬಾಯಿಸುವ ಉಮೇಧಿನಲ್ಲಿ ಕೇಂದ್ರ ಸರ್ಕಾರವಿದೆ. ಆದರೆ ಅಪಾರ್ಟ್ ಮೆಂಟ್ ಗಳು, ಮನೆಗಳಲ್ಲಿ ಜನರು ಯಾವ ರೀತಿ ವಿದ್ಯುತ್ ಬಂದ್ ಮಾಡ್ತಾರೆ ಎನ್ನುವುದು ಹಾಗೂ ತಂತ್ರಜ್ಙರು ಯಾವ ರೀತಿ ವಿದ್ಯುತ್ ಪ್ರಸಾರದ ಮೇಲೆ ನಿಯಂತ್ರಣ ಕಾಪಾಡಿಕೊಳ್ತಾರೆ ಎನ್ನುವುದರ ಮೇಲೆ ದೇಶದ ಕತ್ತಲು ಬೆಳಕಿನ ನಿರ್ಧಾರವಾಗಲಿದೆ.