ಬೇಹುಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿರುವ ಭಾರತೀಯ ನೌಕಾಪಡೆಯ ಮಾಜಿ ಕಮಾಂಡರ್ ಕುಲಭೂಷಣ್ ಜಾಧವ್ ಪರ ವಕೀಲರನ್ನು ನೇಮಕ ಮಾಡಲು ಭಾರತಕ್ಕೆ ಅವಕಾಶ ನೀಡಬೇಕು ಎಂದು ಹೇಳಿರುವ ಇಸ್ಲಾಮಾಬಾದ್ ಹೈಕೋರ್ಟ್, ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 3 ವರೆಗೆ ಮುಂದೂಡಿದೆ.
ವಕೀಲರು ಪಾಕಿಸ್ತಾನ ಪ್ರಜೆಯಾಗಿರಬೇಕು ಎಂಬ ಷರತ್ತಿನೊಂದಿಗೆ, ಈ ಪ್ರಕರಣದಲ್ಲಿ ಜಾಧವ್ ಪರ ಕಾನೂನು ಪ್ರತಿನಿಧಿಯನ್ನು ನೇಮಿಸಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡುವಂತೆ ನ್ಯಾಯಾಲಯ ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ನೀಡಿದೆ.
ಪಾಕಿಸ್ತಾನದಲ್ಲಿ ವಾದ ಮಾಡಲು ಅವಕಾಶವಿರುವ ವಕೀಲರನ್ನು ನೇಮಿಸಿಕೊಳ್ಳಲು ಭಾರತ ಸರ್ಕಾರವನ್ನು ಮತ್ತೆ ಸಂಪರ್ಕಿಸಬೇಕು ಎಂದು ನ್ಯಾಯಾಲಯ ಕೇಳಿದೆ ಎಂದು ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಾವೇದ್ ಖಾನ್, ಪಾಕಿಸ್ತಾನದ ಕಾನೂನು ತಂಡಕ್ಕೆ ಸಹಾಯ ಮಾಡಲು ಭಾರತೀಯ ವಕೀಲರಿಗೆ ನೀಡಲು ಇಲ್ಲಿಯವರೆಗೆ ಯಾವುದೇ ಅವಕಾಶವನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಕೀಲರನ್ನು ವ್ಯವಸ್ಥೆ ಮಾಡಲು ಭಾರತ ಸರ್ಕಾರಕ್ಕೆ ಮತ್ತು ಕುಲಭೂಷಣ್ ಜಾಧವ್ ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ವಕೀಲರನ್ನು ನೇಮಿಸಿಕೊಳ್ಳಲು ಭಾರತಕ್ಕೆ ಪ್ರಸ್ತಾಪವನ್ನು ನೀಡಲಾಗುತ್ತದೆ.
ಜಾಧವ್ ಪ್ರಕರಣದ ಪರಿಣಾಮಕಾರಿ ಪರಿಶೀಲನೆಗಾಗಿ ಪಾಕಿಸ್ತಾನವು ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿದೆ ಎಂದು ಭಾರತ ಆರೋಪಿಸಿತ್ತು. ಮಾಜಿ ನೌಕಾ ಅಧಿಕಾರಿ ಕುಲಭೂಷನ್ ಜಾಧವ್ ಅವರ ವಿಚಾರಣೆಯನ್ನು ಇಸ್ಲಾಮಾಬಾದ್ ವ್ಯವಸ್ಥಿತವಾಗಿ ನಿರ್ಬಂಧಿಸಿದೆ, ಅವರ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿಲ್ಲ ಮತ್ತು ಅವರ ಅಪರಾಧದ ವಿಚಾರಣೆಯಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ (ICJ) ಆದೇಶವನ್ನು ಉಲ್ಲಂಘಿಸಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪಿಸಿತ್ತು.