2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅದಿಕಾರ ಹಿಡಿಯಲು ಸಾಧ್ಯವಾಗದೆ ಇದ್ದಿದ್ದು ಲಿಂಗಾಯತ ಸಮುದಾಯದ ಕೋಪ. ಲಿಂಗಾಯತ ಹಾಗು ವೀರಶೈವ ಎರಡೂ ಬೇರೆ ಬೇರೆ ಎನ್ನುವ ನಿರ್ಧಾರಕ್ಕೆ ಬಂದಿದ್ದ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮ ಎಂದು ಘೋಷಣೆ ಮಾಡಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆಗ ಕಾಂಗ್ರೆಸ್ ಪಕ್ಷದ ನಾಯಕರೇ ಆಗಿದ್ದ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನೇರವಾಗಿಯೇ ವಾಗ್ದಾಳಿ ಮಾಡಿದ್ದರು. ವೀರಶೈವ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಚಿವ ಸಂಪುಟ ಸಭೆಯಲ್ಲೇ ಹೇಳಿ ಹೊರಬಂದಿದ್ದರು. ಬಹಿರಂಗವಾಗಿಯೂ ಸಿದ್ದರಾಮಯ್ಯ ನಡೆಯನ್ನು ವಿರೋಧ ಮಾಡಿದ್ದರು. ಅದರಂತೆ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾಯ್ತು. ಇದೀಗ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ.
ಶಾಮನೂರು ನೇತೃತ್ವದಲ್ಲಿ ನಡೆದಿದೆ ಮಹತ್ವದ ಸಭೆ..!
ಕಾಂಗ್ರೆಸ್ ಚುನಾವಣಾ ಸಮಿತಿ ಟಿಕೆಟ್ ಯಾರಿಗೆ ನೀಡಬೇಕು..? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುವ ಅಭ್ಯರ್ಥಿ ಎನ್ನುವುದನ್ನು ಅಳೆದು ತೂಗಿ ಟಿಕೆಟ್ ನೀಡುತ್ತಿದೆ. ಈ ನಡುವೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರು ಸಭೆ ನಡೆಸಿ, ಕಾಂಗ್ರೆಸ್ನಲ್ಲಿ ಲಿಂಗಾಯತ ಸಮುದಾಯಕ್ಕೆ ಕನಿಷ್ಟ 60 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಅವಕಾಶ ಕೊಡಬೇಕು ಎನ್ನುವ ಮನವಿ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಕಳೆದ ಬಾರಿ ಲಿಂಗಾಯತ ಧರ್ಮವನ್ನು ಇಬ್ಭಾಗ ಮಾಡಲು ಪಯತ್ನಿಸಿದ್ದಾರೆ ಅನ್ನೋ ಆರೋಪದಲ್ಲಿ ಅಧಿಕಾರ ಕಳೆದುಕೊಂಡಿದ್ದ ಸಿದ್ದರಾಮಯ್ಯ, ಈ ಬಾರಿ ಲಿಂಗಾಯತರಿಗೆ ಹೆಚ್ಚು ಟಿಕೆಟ್ ನೀಡಲಿಲ್ಲ ಎನ್ನುವ ಅಪವಾದ ಹೊತ್ತುಕೊಳ್ಳುವ ಸಾಧ್ಯತೆ ಜಾಸ್ತಿಯಾಗಿದೆ.
ಲಿಂಗಾಯತರ ಟಿಕೆಟ್ ಬೇಡಿಕೆಗೆ ಕಾರಣ ಏನು..?
ವೀರಶೈವ ಲಿಂಗಾಯತ ಸಮುದಾಯ ಪಂಚಮಸಾಲಿ ಸೇರಿದಂತೆ 224 ಕ್ಷೇತ್ರಗಳ ಪೈಕಿ 73 ಕ್ಷೇತ್ರಗಳಲ್ಲಿ ಮತದಾರರು ಹೆಚ್ಚಿದ್ದಾರೆ. ಅಷ್ಟು ಮಾತ್ರ ಅಲ್ಲದೆ 10 ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತರು 2ನೇ ಸ್ಥಾನದಲ್ಲಿ ಇದ್ದೇವೆ. 17 ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಜನಶಂಖ್ಯೆ 3ನೇ ಸ್ಥಾನವಿದೆ. ಉಳಿದ ಕ್ಷೇತ್ರಗಳಲ್ಲೂ 5ನೇ ಸ್ಥಾನದಲ್ಲಿದ್ದೇವೆ. ಕಳೆದ ಬಾರಿ 48 ಟಿಕೆಟ್ ನೀಡಲಾಗಿತ್ತು. ಈಗ ಮುಂಬರುವ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ 60 ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ನಾಯಕರಿಗೆ ಸ್ಪರ್ಧಿಸಲು ಅವಕಾಶ ಕೊಟ್ಟರೆ ಗೆಲುವು ಸುಲಭ ಅನ್ನೋದು ಲಿಂಗಾಯತ ಸಮುದಾಯದ ಒತ್ತಾಯ. ಆದರೆ ಕಾಂಗ್ರೆಸ್ ಕೇವಲ 60 ಜನ ಲಿಂಗಾಯತರಿಗೇ ಮಣೆ ಹಾಕಿದರೆ ಉಳಿದ ಸಮುದಾಯಗಳು ಕೆಂಗಣ್ಣು ಬೀರುವ ಸಾಧ್ಯತೆ ದಟ್ಟವಾಗಿದೆ.
ಟಿಕೆಟ್ ಹಂಚಿಕೆ ಗೊಂದಲದಲ್ಲಿರುವ ಕಾಂಗ್ರೆಸ್’ಗೆ ಸಂಕಷ್ಟ..!
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ಸಂಗ್ರಹ ಹಾಗು ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಹಾಕಿದ್ದಾರೆ ಎಂದಾಗ ಬೇರೆ ಪಕ್ಷಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು ಅನ್ನೋ ಕಾರಣಕ್ಕೆ ಅರ್ಜಿ ಸಲ್ಲಿಸುವಂತೆ ಕರೆ ನೀಡಿದ್ದರು. ಇದೀಗ ಪ್ರತಿಯೊಂದು ಕ್ಷೇತ್ರದಲ್ಲಿ ಹತ್ತಾರು ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಒಬ್ಬರಿಗೆ ಟಿಕೆಟ್ ಕೊಟ್ಟಾಗ ಮತ್ತೊಬ್ಬರು ಸಿಡಿದು ಬೀಳುವ ಭಯ ಸೃಷ್ಟಿಯಾಗಿದೆ. ಸಂಧಾನ ಮಾಡುವ ಪ್ರಯತ್ನ ಕೂಡ ನಡೆದಿದ್ದು, ಒಂದು ವೇಳೆ ಸಂಧಾನ ಯಶಸ್ವಿಯಾಗದಿದ್ದರೆ ಬೇರೆ ಪಕ್ಷಗಳ ಕಡೆಗೆ ಮುಖ ಮಾಡಿದರೆ ಮುಂದೇನು ಎನ್ನುವ ಚಿಂತೆ ಕಾಡುತ್ತಿದೆ. ಇದರ ನಡುವೆ ಲಿಂಗಾಯತ ಸಮುದಾಯದಿಂದ 60 ಕ್ಷೇತ್ರಗಳಲ್ಲಿ ಟಿಕೆಟ್ಗಾಗಿ ಒತ್ತಾಯ ಮಾಡಿರುವುದು ‘ಕೈ’ನೊಳಗೆ ಕಸಿವಿಸಿ ಸೃಷ್ಟಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕಾಂಗ್ರೆಸ್ ಟಿಕೆಟ್ ಮುಂದಿನ ವಾರ ಘೋಷಣೆ ಆಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ದೆಹಲಿ ಮೂಲಗಳಿಂದ ಹೊರಬಿದ್ದಿದೆ.