ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕಿಳಿದು ಜಯ ಸಾಧಿಸಿದ್ದ ಸುಮಲತಾ ಅಂಬರೀಷ್ ಕ್ಷೇತ್ರ ಕಳೆದುಕೊಳ್ತಾರಾ..? ಅನ್ನೋ ಪ್ರಶ್ನೆ ಸೃಷ್ಟಿಯಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ JDS ವಿರುದ್ಧ ತೊಡೆ ತಟ್ಟಿ ಗೆಲುವು ಸಾಧಿಸಿದ್ದರು. ಆದರೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಜೆಡಿಎಸ್, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮೈತ್ರಿ ಬಗ್ಗೆ ಅಧಿಕೃತವಾಗಿ ಘೋಷಣೆ ಹೊರ ಬೀಳಲಿದೆ. ಆದರೆ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಆಗಿ ಗೆಲುವು ಕಂಡಿದ್ದ ಸುಮಲತಾ ಅಂಬರೀಷ್ ಇಕ್ಕಟ್ಟಿಗೆ ಸಿಲುಕಿದ್ದಾರೆ ಎನಿಸುತ್ತಿದೆ.
ಬಿಜೆಪಿ ಬೆಂಬಲಿಸಿ ಸಂಕಷ್ಟಕ್ಕೆ ಸಿಲುಕಿದ್ರಾ ಸಂಸದೆ ಸುಮಲತಾ..?
ಸಂಸದರಾಗಿ ಆಯ್ಕೆಯಾದ ಬಳಿಕ ಸುಮಲತಾ ಅಂಬರೀಷ್ ಅವರು ಸಾಕಷ್ಟು ವರ್ಷಗಳ ಕಾಲ ಪಕ್ಷೇತರ ಸಂಸದೆ ಆಗಿಯೇ ಉಳಿದಿದ್ದ ಸುಮಲತಾ, ಕೊನೆಯ ಒಂದೂವರೆ ವರ್ಷ ಇದ್ದ ಹಾಗೆ ನಾನು ಬಿಜೆಪಿಯನ್ನು ಬೆಂಬಲಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡರು. ವಿಧಾನಸಭಾ ಚುನಾವಣೆಗೂ ಮುನ್ನ ಬೆಂಬಲ ಘೋಷಣೆ ಮಾಡಿ, ತನ್ನ ಬೆಂಬಲಿಗರಿಗೆ ಟಿಕೆಟ್ ಕೊಡಿಸಿ ಚುನಾವಣೆಯಲ್ಲಿ ಗೆಲ್ಲಿಸುವ ಪ್ರಯತ್ನ ಮಾಡಿದ್ದರು. ಆದರೆ ಫಲ ಕೊಡಲಿಲ್ಲ ಅಷ್ಟೆ. ಇದೀಗ ಬಿಜೆಪಿ ಹಾಗು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ಗೆ ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿರುವುದು ಸುಮಲತಾ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ತೆರಳ್ತಾರಾ ಸುಮಲತಾ..?
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ನಿರ್ಧಾರಕ್ಕೆ ಬಂದಿರುವ ಬಿಜೆಪಿ ನಾಯಕರು, ಸಂಸದೆ ಸುಮಲತಾ ಅಂಬರೀಷ್ ಅವರನ್ನು ಬೇರೆ ಕ್ಷೇತ್ರಕ್ಕೆ ಕರೆದುಕೊಂಡು ಹೋಗಲು ಬಿಜೆಪಿ ನಾಯಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಂಸದರಾಗಿರುವ ಡಿವಿ ಸದಾನಂದಗೌಡರಿಗೆ ಈ ಬಾರಿ ಟಿಕೆಟ್ ನೀಡದೆ ಇರಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗಿದೆ. ಇದೇ ಕ್ಷೇತ್ರಕ್ಕೆ ಸುಮಲತಾ ಅವರನ್ನು ಕರೆದುಕೊಂಡು ಬರುವ ಸೂಚನೆ ಸಿಕ್ಕಿದೆ ಎನ್ನಲಾಗಿದೆ. ಆದರೆ ಸುಮಲತಾ ಕಳೆದ ಬಾರಿ ಜೆಡಿಎಸ್ ವಿರುದ್ಧ ಹೋರಾಟ ಮಾಡಿ ಗೆಲುವು ಸಾಧಿಸಿದ್ದ ಸುಮಲತಾ, ಈ ಬಾರಿ ಅಷ್ಟು ಸುಲಭವಾಗಿ ಕ್ಷೇತ್ರವನ್ನು ಜೆಡಿಎಸ್ ಪಾಲಿಗೆ ಬಿಟ್ಟು ಹೋಗುವುದಕ್ಕೆ ಸಿದ್ಧರಿಲ್ಲ ಎನ್ನುವುದು ಸುಮಲತಾ ಆಪ್ತ ವಲಯದಲ್ಲಿ ಕೇಳಿ ಬರ್ತಿದೆ.

ಸುಮಲತಾ ಸೋತರೂ ಪರವಾಗಿಲ್ಲ, ಜೆಡಿಎಸ್ಗೆ ಬಿಡಲ್ಲ..!
ಸುಮಲತಾ ಕಳೆದ ಬಾರಿ ಜೆಡಿಎಸ್ ವಿರುದ್ಧ ಗೆಲುವು ಸಾಧಿಸಲು ಪ್ರಮುಖ ಕಾರಣ ಅಂದ್ರೆ ಸಿದ್ದರಾಮಯ್ಯ ಪರೋಕ್ಷವಾಗಿ ಸಪೋರ್ಟ್ ಮಾಡಿದ್ದರು. ಇಂದಿನ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಜೆಡಿಎಸ್ ವಿರುದ್ಧ ಕೆಲಸ ಮಾಡಿದ್ದರು. ಅಂದರೆ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲದಿಂದ ಸುಮಲತಾ ಗೆಲುವು ಸಾಧಿಸಿದ್ದರು. ಇದೇ ಕಾರಣಕ್ಕೆ ಈ ಬಾರಿ ಸಂಸದೆ ಸುಮಲತಾ ಅವರು ತಾನು ಸಂಸದೆಯಾಗಿರುವ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡದೆ, ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡಲು ನಿರ್ಧಾರ ಮಾಡಲಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಅಖಾಡಕ್ಕೆ ಇಳಿದರೆ ಒಂದಿಷ್ಟು ಮತಗಳನ್ನು ಸೆಳೆಯಲಿದ್ದು, ಕಾಂಗ್ರೆಸ್ ಗೆಲುವಿಗೆ ಸಹಕಾರಿ ಆಗಲಿದ್ದಾರೆ ಅನ್ನೋ ಮಾತುಗಳು ಹರಿದಾಡುತ್ತಿವೆ. ಸಂಸದೆ ಆಗಿ ಗೆಲುವು ಸಾಧಿಸಲು ಸಾಧ್ಯವಿಲ್ಲದಿದ್ದರೂ ಕಾಂಗ್ರೆಸ್ ಗೆಲುವಿಗೆ ಸಹಕಾರಿ ಆಗಿ ಋಣ ತೀರಿಸುವ ಕೆಲಸ ಮಾಡುತ್ತಾರೆ ಎನ್ನಲಾಗ್ತಿದೆ. ಮುಂದಿನ ದಿನಗಳಲ್ಲಿ ಎಲ್ಲದ್ದಕ್ಕೂ ಸೂಕ್ತ ಉತ್ತರ ಸಿಗಬೇಕಿದೆ.
ಕೃಷ್ಣಮಣಿ