ಪ್ರಾಯೋಗಿಕವಾಗಿ ಹಾಗೂ ನಡೆದಾಡಲು ಸಾಧ್ಯವಾಗದವರಿಗಾಗಿ ಮಹಾರಾಷ್ಟ್ರದಲ್ಲಿ ಮನೆ ಮನೆಗೆ ಕೋವಿಡ್ ಲಸಿಕೆ ತಲುಪಿಸುವ ಅಭಿಯಾನವನ್ನು ಆರಂಭಿಸುತ್ತೇವೆ ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರ ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ಈ ಯೋಜನೆಯ ಅನುಷ್ಟಾನಕ್ಕಾಗಿ ಒಕ್ಕೂಟ ಸರ್ಕಾರದ ಅನುಮತಿ ಪಡೆಯಲು ಕಾಯುವುದಿಲ್ಲ ಎಂದು ಕೂಡಾ ಹೇಳಿದ್ದು, ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ಚಾಟಿ ಬಿಸಿದೆ.

ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ಜಸ್ಟೀಸ್ ಜೆ ಎಸ್ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠಕ್ಕೆ ಮಾಃಇತಿ ನೀಡಿರುವ ರಾಜ್ಯದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರು, ಈ ಅಭಿಯಾನವನ್ನು ಪ್ರಾಯೋಗಿಕವಾಗಿ ಪುಣೆಯಲ್ಲಿ ಆರಂಭಿಸಲಾಗುವುದು. ಈ ಯೋಜನೆಯ ರೂಪುರೇಷೆಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡುವವರೆಗೂ ಕಾಯುವುದಿಲ್ಲ. ರಾಜ್ಯ ಸರ್ಕಾರವೇ ಇದರ ನಿರ್ಣಯ ಕೈಗೊಳ್ಳಲಿದೆ, ಎಂದು ಹೇಳಿದ್ದಾರೆ.
ಇನ್ನು, ಈ ಯೋಜನೆ ಅನುಷ್ಟಾನಗೊಳಿಸುವ ರೂಪುರೇಷೆಗಳನ್ನು ಹೈಕೋರ್ಟ್ ಗೆ ವಿವರಿಸಿರುವ ಮಹಾರಾಷ್ಟ್ರ ಸರ್ಕಾರ, ಲಸಿಕೆ ಪಡೆಯುವ ಮುನ್ನ, ಲಸಿಕೆ ಪಡೆಯುತ್ತಿರುವ ಕುಟುಂಬದವರಿಂದ ಹಾಗೂ ಅವರ ಕುಟುಂಬದ ವೈದ್ಯರಿಂದ ಅನುಮತಿ ಪತ್ರಕ್ಕೆ ಸಹಿ ಪಡೆಯಲಾಗುವುದು. ಲಸಿಕೆಯಿಂದ ಏನಾದರೂ ಋಣಾತ್ಮಕ ಪರಿಣಾಮ ಬೀರಿದ್ದಲ್ಲಿ ಅದಕ್ಕೆ ಆ ಕುಟುಂಬದವರೇ ಹೊಣೆಗಾರರಾಗುವರು, ಎಂದು ಅಫಿಡವಿಟ್ ಸಲ್ಲಿಸಲಾಗಿದೆ.

ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿರುವ ಕೋರ್ಟ್, ಒಬ್ಬ ವೈದ್ಯ ಪ್ರಮಾಣ ಪತ್ರ ನೀಡಲು ಹೇಗೆ ಸಾಧ್ಯ. ಇಂತಹ ಅಪ್ರಾಯೋಗಿಕವಾದ ನಿಯಮಗಳನ್ನು ಹೇರಬೇಡಿ, ಎಂದಿದೆ.
ಮಂಗಳವಾರ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಮನೆ ಮನೆಗೆ ಲಸಿಕೆ ನೀಡಲು ಕೇಂದ್ರದ ಅನುಮತಿ ಕೋರುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದ ಕಾರಣಕ್ಕೆ, ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೇರಳ, ಕಾರ್ಝಂಡ್ ನಂತಹ ರಾಜ್ಯಗಳು ಕೇಂದ್ರದ ಅನುಮತಿಗಾಗಿ ಕಾಯಲಿಲ್ಲ. ಅವರು ಈಗಾಗಲೇ ಅಭಿಯಾನ ಆರಂಭಿಸಿ ಆಗಿದೆ. ಕೇಂದ್ರದ ಅನುಮತಿಯ ಅಗತ್ಯ ಏನಿದೆ? ಎಂದು ಪ್ರಶ್ನಿಸಿತ್ತು.

ಇದಕ್ಕೆ ಉತ್ತರವಾಗಿ ಇಂದು ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಕೇಂದ್ರದ ಅನುಮತಿಗಾಗಿ ಕಾಯುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.