ದೆಹಲಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ಜನಪ್ರಿಯತೆಯನ್ನು ಪಡೆದು ದೇಶದ ಗಮನವನ್ನು ಸೆಳೆದಿರುವ ಆಮ್ ಆದ್ಮಿ ಪಕ್ಷ ಮುಂದಿನ ವರ್ಷ ನಡೆಯಲಿರುವ ಪಂಜಾಬ್, ಗೋವಾ, ಉತ್ತರಾಖಂಡ್ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜನೆ ರೂಪಿಸಿದೆ.
ದೆಹಲಿಯಲ್ಲಿ ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಆಪ್ ಪಕ್ಷವು ಉತ್ತರ ಪ್ರದೇಶದಲ್ಲೂ ಗದ್ದುಗೆ ಏರುವ ಮಹಾತ್ವಾಕಾಂಕ್ಷೆಯನ್ನು ಹೊಂದಿದೆ. ಇದೀಗ 2022ರಲ್ಲಿ ನಡೆಯಲಿರುವ ಉತ್ತರಪ್ರದೇಶ ಚುನಾವಣೆಯಲ್ಲೂ ಎಎಪಿ ಸ್ಪರ್ಧಿಸಲು ಮುಂದಾಗಿದ್ದು ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮುಂಬರುವ ಉತ್ತರ ಪ್ರದೇಶ ಚುನಾವಣೆಯ ಮೇಲೆ ಎಲ್ಲಾ ಪಕ್ಷಗಳು ಕಣ್ಣಿಟ್ಟಿವೆ. ಉತ್ತರ ಪ್ರದೇಶದಲ್ಲಿ ಗೆದ್ದು ಅಧಿಕಾರವನ್ನ ಹಿಡಿಯುವ ಪಕ್ಷ ದೇಶದ ಚುಕ್ಕಾಣಿ ಹಿಡಿಯುತ್ತದೆ ಎಂಬ ಮಾತಿದೆ. ಹೀಗಾಗಿ ಬಿಜೆಪಿ ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಯಲು ಹೆಣಗಾಡುತ್ತಿದ್ದೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಪರಿಶ್ರಮಿಸುತ್ತಿವೆ. ಇನ್ನು ಕಾಂಗ್ರೆಸ್ ಪಕ್ಷ ಉತ್ತರಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಅದಕ್ಕಾಗಿಯ ಇತ್ತೀಚಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕ ಗಾಂಧಿ ವಾದ್ರಾ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 40% ಮೀಸಲಾತಿಯನ್ನು ಘೋಷಿಸಿತ್ತು.

ದೆಹಲಿಯಲ್ಲಿ ಈಗಾಗಲೇ ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯದಂತಹ ವಿಭಾಗದಲ್ಲಿ ಮಾಡಿರುವ ಕ್ರಾಂತಿಯನ್ನು ಉತ್ತರ ಪ್ರದೇಶಕ್ಕೂ ವಿಸ್ತರಿಸಲು ಮುಂದಾಗಿರುವ ಆಪ್ ಈಗಾಗಲೇ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರವನ್ನ ಆರಂಭಿಸಿದೆ. ಜನರಿಗೆ 300 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ.
ಉಚಿತ ವಿದ್ಯುತ್ ಮತ್ತು ಉಚಿತ ಕುಡಿಯುವ ನೀರು ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ ಜನಪ್ರಿಯ ಘೋಷನೆಗಳಲ್ಲೊಂದು. ಈ ಜನಪ್ರಿಯ ಯೋಜನೆಗಳ ಘೋಷಣೆ ಕಾರಣಕ್ಕೆ ದೆಹಲಿಯಲ್ಲಿ ಅಧಿಕಾರವನ್ನು ಮತ್ತು ಜನರ ಭರವಸೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಇದೇ ಮಾದರಿಯನ್ನು ಮುಂದಿಟ್ಟುಕೊಂಡು ತನ್ನ ನೆಲೆಯನ್ನು ಉತ್ತರ ಪ್ರದೇಶದಲ್ಲೂ ವಿಸ್ತರಿಸಲು ಮುಂದಾಗಿರುವ ಆಮ್ ಆದ್ಮಿ ಪಕ್ಷ, ಉತ್ತರ ಪ್ರದೇಶದ ಗೌತಮ ಬುದ್ದ ನಗರದಿಂದ ತನ್ನ ಚುನಾವಣಾ ಪ್ರಚಾರವನ್ನ ಆರಂಭಿಸಿದೆ.
ರಾಜ್ಯದ ಜನತೆಗೆ ಆಪ್ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದೆ ಎಂದು ಪಕ್ಷದ ಪದಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಉಚಿತ ವಿದ್ಯುತ್ ಅಭಿಯಾನವನ್ನು ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ಸಂಜಯ್ ಸಿಂಗ್ ಅಕ್ಟೋಬರ್ 10 ರಂದು ಆರಂಭಿಸಿದ್ದಾರೆ ಎಂದು ಎಎಪಿ ಗೌತಮ್ ಬುದ್ಧ ನಗರ ಘಟಕದ ಅಧ್ಯಕ್ಷ ಭೂಪೇಂದ್ರ ಜಡೌನ್ ಹೇಳಿದ್ದಾರೆ.

ಈ ಅಭಿಯಾನ ಇದುವರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರತಿದೆ. ಎಎಪಿ ಕಾರ್ಯಕರ್ತರು ಇಲ್ಲಿರುವ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳಾದ ನೋಯ್ಡಾ, ಜೇವರ್ ಮತ್ತು ದಾದ್ರಿಗಳಲ್ಲಿ ಮತದಾರರನ್ನು ಈ ಆಪ್ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಅತಿ ಹೆಚ್ಚು ಜನರನ್ನು ತಲುಪುತ್ತಿದ್ದಾರೆ. ಅಲ್ಲದೆ, ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಮತ್ತು ರೈತರು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಾಕಿ ಮನ್ನಾ ಮಾಡಲಾಗುವುದು ಎಂದು ಜಡೌನ್ ತಿಳಿಸಿದ್ದಾರೆ.

“ಪ್ರೀ ಬಿಜ್ಲಿ ಕಿ ಬಾತ್, ಜನತಾ ಕೇ ಸಾಥ್” ಎಂಬ ಕಾರ್ಯಕ್ರಮವನ್ನು ಈಗಾಗಲೇ ಎಎಪಿ ಕಾರ್ಯಕರ್ತರು ಶುರು ಮಾಡಿದ್ದಾರೆ. ರಾಜ್ಯದ ಪ್ರತಿಯೊಂದು ಕುಟುಂಬಕ್ಕು ʻಖಾತರಿ ಕಾರ್ಡ್ʼ ನೀಡಲಾಗುವುದು ಮತ್ತು ರಾಜ್ಯದಲ್ಲಿ ಜನರು ಎದುರುಸುತ್ತಿರುವ ಮೂಲಭೂತ ಸೌಕರ್ಯಗಳ ಸಮಸ್ಯೆಗಳೊಂದಿಗೆ ಸಾರ್ವಜನಿಕರ ಬಳಿಗೆ ಹೋಗುವುದರಿಂದ ಜನರ ಪ್ರೀತಿ ಮತ್ತು ಬೆಂಬಲ ನಮ್ಮ ಪಕ್ಷಕ್ಕೆ ಬೆಂಬಲವಾಗುತ್ತದೆ ಎಂಬುದನ್ನು ನಾವು ನಂಬಿದ್ದೇವೆ ಎಂದು ಜಡೌನ್ ಹೇಳಿದ್ದಾರೆ.