ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಪರಿಸರದ ಮೇಲಾಗುವ ದುಷ್ಟರಿಣಾಮಗಳು ಏರುಗತಿಯಲ್ಲಿ ಸಾಗುತ್ತಿವೆ. ಬೃಹತ್ ಗಾತ್ರದ ಕಟ್ಟಡಗಳು, ರಸ್ತೆ ಕಾಮಗಾರಿಗಳಿಗೆ ಮರಗಳನ್ನು ಕಡಿಯುತ್ತಿರುವುದು ಹೆಚ್ಚಾಗಿದೆ. ಬೆಂಗಳೂರಿನ ಸರ್ಜಾಪುರ-ಅತ್ತಿಬೆಲೆ ರಸ್ತೆ ಅಗಲೀಕರಣಕ್ಕೋಸ್ಕರ ರಸ್ತೆ ಬದಿಯಿರುವ ಸುಮಾರು ಎರಡೂವರೆ ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು ಮುಂದಾಗಿದ್ದು, ಈ ನಿರ್ಧಾರದ ಕುರಿತು ಪರಿಸರ ಕಾರ್ಯಕರ್ತರು ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸರ್ಜಾಪುರ-ಅತ್ತಿಬೆಲೆ ರಸ್ತೆ ಅಗಲೀಕರಣಕ್ಕೆಂದು ಸುಮಾರು ಐದು ಸಾವಿರ ಮರಗಳನ್ನು ಕಡಿಯಲು ಪ್ರಸ್ತಾವನೆ ಮಾಡಲಾಗಿತ್ತು. ಈ ವಿಚಾರಕ್ಕೆ ಪರಿಸರವಾದಿಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ನಡುವೆಯು ಕೆಆರ್ಡಿಸಿಎಲ್ ಈಗಾಗಲೇ 2300ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಿದೆ.
ಪರಿಸರವಾದಿಗಳು ಮರಗಳ ಉಳಿವಿಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅಕ್ಟೋಬರ್ ೨೯ ರಂದು ಅರ್ಜಿಯ ವಿಚಾರಣೆ ನಿಗದಿಯಾಗಿತ್ತು, ಆದರೆ, ವಿಚಾರಣೆಗೆ ಮೊದಲೇ ಕೆಆರ್ಡಿಸಿಎಲ್ ಮರಗಳನ್ನು ಕಡಿಯಲು ಮುಂದಾಗಿದೆ. ಆದರೆ ಅರ್ಜಿಯ ವಿಚಾರಣೆಯು ಇನ್ನೂ ನ್ಯಾಯಾಲಯದಲ್ಲಿರುವಾಗಲೇ ಕೆಆರ್ಡಿಸಿಎಲ್ ಮರ ಕಡಿಯಲು ಮುಂದಾಗಿರುವುದಕ್ಕೆ ಪರಿಸರವಾದಿಗಳು ಆಕ್ರೋಶಗೊಂಡಿದ್ದು, ಅರಣ್ಯ ಇಲಾಖೆಯ ಬೇಜಾವಾಬ್ದಾರಿತನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಸಕರ ಮೋಜು ಮಸ್ತಿನ ಕ್ಲಬ್ ಗೆ ಮರಗಳ ನಾಶ
ಬೆಂಗಳೂರು ನಗರದಲ್ಲಿ ಮರಗಳ ನಾಶಕ್ಕೆ ಮುಂದಾಗಿರುವುದು ಇದೇ ಮೊದಲಲ್ಲ, ಕೆಲ ದಿನಗಳ ಹಿಂದೆ ನಗರದಲ್ಲಿರುವ ಐತಿಹಾಸಿಕ ಬಾಲಬ್ರೂಯಿ ಅತಿಥಿಗೃಹವನ್ನು ಕೆಡವಿ ಶಾಸಕರ ಕ್ಲಬ್ ಆಗಿ ಪರಿವರ್ತಿಸಲು ನಿರ್ಧರಿಸಲಾಗಿತ್ತು. ಈ ಅತಿಥಿಗೃಹದ ಆವರಣದಲ್ಲಿ ನೂರಕ್ಕೂ ಹೆಚ್ಚು ಔಷದೀಯ ಸಸ್ಯಗಳು ಹಾಗೂ ಇತರ ಗಿಡಮೂಲಿಕೆಗಳಿದ್ದು, ಬಿಬಿಎಂಪಿ ಈ ಪ್ರದೇಶದಲ್ಲಿ ಕ್ಲಬ್ ನಿರ್ಮಾಣ ಮಾಡಲು ನಿರ್ಧರಿಸಿರುವುದನ್ನು ಪರಿಸರವಾದಿಗಳು ಖಂಡಿಸಿದ್ದರು. ಸದ್ಯಕ್ಕೆ ಈ ಪ್ರಕರಣ ಇತ್ಯರ್ಥಗೊಳ್ಳದೆ ಕೋರ್ಟ್ ಮುಂದಿದೆ.
ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ರಾತ್ರೋರಾತ್ರಿ ಮರಗಳಿಗೆ ಕೊಡಲಿ ಏಟು!
ನಗರದ ಹೃದಯ ಭಾಗದಲ್ಲಿರುವ ಶಿವಾನಂದ ವೃತ್ತದ ಬಳಿ ಸ್ಟೀಲ್ ಬ್ರಿಡ್ಜ್ ಕಾಮಗಾರಿಯಿಂದ ಈಗಾಗಲೇ 500 ರಿಂದ 600 ಮರಗಳ ಮಾರಣ ಹೋಮ ನಡೆದಿತ್ತು. ಈ ಕಾಮಗಾರಿಗೆ 2017ರ ಜೂನ್ನಲಲ್ಲೇ ಆದೇಶಿಸಲಾಗಿತ್ತು. ಆರಂಭದಲ್ಲಿ ಬಿಬಿಎಂಪಿ 19.85 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮತ್ತು 32 ಕೋಟಿ ರೂ. ಭೂ ಸ್ವಾಧೀನ ವೆಚ್ಚ ಸೇರಿ ಒಟ್ಟು 50 ಕೋಟಿಯಷ್ಟು ಗಾತ್ರದ ಯೋಜನೆಯನ್ನು ರೂಪಿಸಿತ್ತು. ಆದರೆ, ಯೋಜನೆಯ ಕಾರ್ಯರೂಪಕ್ಕೆ ನೂರಾರು ಮರಗಳ ನಾಶವಾಗಬಹುದು ಎಂದು ಅರಿತ ಸ್ಥಳೀಯರು ಹಾಗೂ ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಕೊನೆಗೆ ನೂರಾರು ಮರಗಳ ಮಾರಣ ಹೋಮ ನಡೆದು ಸ್ಟೀಲ್ ಬ್ರಿಡ್ಜ್ ಗೆ ಬುನಾದಿ ಹಾಕಲಾಯಿತು.
ಬಾಲಬ್ರೂಯಿ ಅತಿಥಿಗೃಹದ ಸುತ್ತ ಔಷದಿಗೆ ಸಂಬಂಧಪಟ್ಟ ಗಿಡಗಳು ಹೆಚ್ಚಾಗಿವೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕಟ್ಟಿಸಿದ ಅತಿಥಿಗೃಹ ಇದಾಗಿದ್ದು, ಅಲ್ಲಿ ಹಲವು ಜಾತಿಯ ಪಕ್ಷಿಗಳು ಬರುತ್ತವೆ. ಇಂತಹ ಸಮೃದ್ಧವಾದ ಪರಿಸರವನ್ನು ಹಾಳುಕೆಡವುತ್ತಿರುವುದು ಬೇಸರ ತಂದಿತ್ತು, ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಶಾಸಕರ ಕ್ಲಬ್ ಮಾಡುತ್ತಿರುವುದು ನನಗೆ ಬೇಸರವಿಲ್ಲ ಆದರೆ, ಈ ಆವರಣದಲ್ಲಿರುವ ಮರಗಿಡಗಳನ್ನು ಕೆಡವಿ ಕ್ಲಬ್ ಆರಂಭಿಸುವುದು ಯಾಕೆ? ಎಂದು ಬೆಂಗಳೂರು ಪರಿಸರ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ರೆಡ್ಡಿ ಪ್ರತಿಧ್ವನಿಗೆ ತಿಳಿಸಿದ್ದಾರೆ.