ಬೆಂಗಳೂರು: ”ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದ ಚೈತ್ರಾ ಪ್ರಕರಣದಲ್ಲಿ ಐಟಿ ದಾಳಿ ಯಾಕೆ ಮಾಡಲಿಲ್ಲ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಐಟಿ ದಾಳಿ ವಿಚಾರವಾಗಿ ಮಾಜಿ ಸಿಎಂ ಹೆಚ್ಡಿಕೆ ಹಾಗೂ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ”ಚೈತ್ರಾ ಕೇಸ್ನಲ್ಲಿ ಐಟಿ ರೇಡ್ ಯಾಕ್ ಆಗಿಲ್ಲ? ಹಣ ವರ್ಗಾವಣೆ ನಡೆದಿತ್ತು. ಆದರೆ, ಯಾಕೆ ಐಟಿ ದಾಳಿ ನಡೆದಿಲ್ಲ. ರಾಜಕೀಯ ಪ್ರೇರಿತವಾಗಿ ಐಟಿ ದಾಳೆ ಮಾಡುತ್ತಿದ್ದಾರೆ. ತನಿಖೆ ಆಗಬೇಕು, ಉಪ್ಪು ತಿಂದೋರು ನೀರು ಕುಡಿಯಲೇಬೇಕು” ಎಂದರು.
”ಗುತ್ತಿಗೆದಾರರಿಂದ ಕಲೆಕ್ಷನ್ ಮಾಡಿದ್ದಾರೆ ಅನ್ನೋದು ಹಾಸ್ಯಾಸ್ಪದ ಹೇಳಿಕೆ. ಐಟಿ ಇಲಾಖೆಯಲ್ಲಿ ಸೆಲೆಕ್ಟಿವ್ ರೇಡ್ ಯಾಕಾಗ್ತಿದೆ? ಐಟಿ, ಇಡಿ ಎಲ್ಲಾ ಬಿಜೆಪಿಯವರ ಕೈಯಲ್ಲಿಯೇ ಇದೆ. ಕಲೆಕ್ಷನ್ ಮಾಡಲಾಗಿದೆ ಅಂದ್ರೆ, ತನಿಖೆಯಾಗಬೇಕು ಎಂದು ಆರೋಪ ಮಾಡುವ ಬಿಜೆಪಿಯರ ಮೇಲೆ ಬಾಸ್ ಗಳಿದ್ದಾರಲ್ಲ, ಅವರಿಗೆ ಹೋಗಿ ಸಾಕ್ಷಿ ಕೊಡಲಿ” ಎಂದು ಸವಾಲು ಹಾಕಿದರು.
”ಹೆಚ್ಡಿಕೆ ಬಿಜೆಪಿ ಜೊತೆ ವಿಲೀನ ಆಗಿಬಿಟ್ಟಿದ್ದಾರೆ. ಕುಮಾರಸ್ವಾಮಿ ಅವರು ನೇರವಾಗಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡ್ತಾರೆ. ಡೈರಿ, ಪೆನ್ ಡ್ರೈವ್ ಎಲ್ಲಾ ಕೊಡಿ ಅವರಿಗೆ. ವಿಪಕ್ಷದಲ್ಲಿರೋರನ್ನು ಟಾರ್ಗೆಟ್ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಗುಜರಾತ್ ಸೇರಿ ಎಲ್ಲಾ ಕಡೆ ವಿಪಕ್ಷಗಳ ಮೇಲೆ ಐಟಿ, ಇಡಿ ದಾಳಿ ನಡೆಸುತ್ತಿದ್ದಾರೆ. ಎಷ್ಟು ಜನ ಬಿಜೆಪಿಯವರ ಮೇಲೆ ದಾಳಿ ಆಗಿದೆ? ಈ ಬಗ್ಗೆ ಲೆಕ್ಕ ತಗೆದುಕೊಳ್ಳಿ. ಯಾಕೆ ಅದಾನಿ ಮೇಲೆ ಐಟಿ, ಇಡಿ ದಾಳಿ ಆಗ್ತಿಲ್ಲ? ಐಟಿ, ಇಡಿ ದಾಳಿಗೆ ನಾವು ಬಗ್ಗೋರಲ್ಲ, ಜಗ್ಗೋರಲ್ಲ” ಎಂದು ಹೇಳಿದರು.