ಏಳು ವರ್ಷ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಬೇಕೆಂಬ ಹಠ ವಿರೋಧ ಪಕ್ಷಗಳದ್ದು. ಆದರೆ, ಪ್ರಧಾನಿ ಮೋದಿಯನ್ನು ಸೋಲಿಸುವಂತಹ ಅತಿರಥ, ಮಹಾರಥರ ವಿಪಕ್ಷಗಳಲ್ಲಿ ಯಾರಿದ್ದಾರೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ.
ಪ್ರಮುಖವಾಗಿ ನಮ್ಮ ಮುಂದೆ ಬರುವಂತಹ ಮೂರು ಪ್ರಶ್ನೆಗಳು ಯಾವುದೆಂದರೆ, ನರೇಂದ್ರ ಮೋದಿಯನ್ನು ಸೋಲಿಸಬಹುದೇ? ಒಂದು ವೇಳೆ ಸೋಲಿಸಬಹುದಾದರೆ, ಅದಕ್ಕಾಗಿ ಏನು ಬೇಕು? ಒಂದು ಮುಖವೇ? ಘೋಷಣೆಯೇ? ಪ್ರಣಾಳಿಕೆಯೇ? ಸಿದ್ದಾಂತವೇ? ಅಥವಾ ಈ ಎಲ್ಲಾ ಅಂಶಗಳು ಬೇಕೇ? ಈ ಎಲ್ಲದಕ್ಕೂ ನಿಮ್ಮಲ್ಲಿ ಉತ್ತರ ಇದೆಯೆಂದಾದರೆ, ಕೊನೆಯ ಪ್ರಶ್ನೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಯಾರಿಂದ ಮೋದಿಯನ್ನು ಸೋಲಿಸಲು ಸಾಧ್ಯ?
ಮೊದಲ ಎರಡು ಪ್ರಶ್ನೆಗಳಿಗೆ ಸುಲಭದಲ್ಲಿ ಉತ್ತರ ಕಂಡಕೊಳ್ಳಬಹುದೇನೋ. ಆದರೆ, ಮೂರನೇಯ ಪ್ರಶ್ನೆಗೆ ಕಳೆದ ಏಳು ವರ್ಷಗಳಿಂದ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆಯಾದರೂ, ಯಾರಿಗೂ ಉತ್ತರ ಸಿಕ್ಕಿಲ್ಲ.
ದೇಶದಲ್ಲಿ ಎರಡನೇ ಅತೀ ಹೆಚ್ಚು ಮತದಾರರ ಬೆಂಬಲ ಹೊಂದಿರುವ ಕಾಂಗ್ರೆಸ್ ಪಕ್ಷದ ಯುವರಾಜನಿಂದ ಇದು ಸಾಧ್ಯವೇ? ಸದ್ಯದ ಮಟ್ಟಿಗೆ ಅವರ ಬೆಂಬಲಿಗರು ಇದಕ್ಕೆ ಹೌದು ಎಂದು ಉತ್ತರಿಸಬಹುದು. ಆದರೆ, ಇದಕ್ಕೆ ರಾಹುಲ್ ಗಾಂಧಿಯವರು ತಯಾರಿದ್ದಾರೆಯೇ? ಕಾಂಗ್ರೆಸ್ ಪಕ್ಷ ತಯಾರಿದೆಯೇ? ದೇಶದ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ತನ್ನ ಸಿಎಂ ಹೊಂದಿರುವ ಕಾಂಗ್ರೆಸ್ ಅಲ್ಲಿಯೂ ಆಂತರಿಕ ಕಲಹದಿಂದ ಕಮರುತ್ತಿದೆ. ದೇಶದ ನಾಗರಿಕರಿಗೆ ಅಭಯ ನೀಡುತ್ತೇವೆ ಎಂದು ಹೇಳಿದ ಕಾಂಗ್ರೆಸ್’ಗೆ ಪಂಜಾಬ್, ಛತ್ತೀಸ್ ಘಡ ಹಾಗೂ ರಾಜಸ್ಥಾನದಲ್ಲಿ ಅಭಯ ಇಲ್ಲದಂತಾಗಿದೆ. ಎಲ್ಲಕ್ಕಿಂತಲು ಮಿಗಿಲಾಗಿ ಪಕ್ಷದ ಕಾರ್ಯಕರ್ತರು, ಇವರೇ ನಮ್ಮ ನಾಯಕರು ಎಂದು ಹೇಳಿಕೊಳ್ಳುವಂತಹ ಒಬ್ಬ ನಾಯಕನಿದ್ದಾನೆಯೇ? ಒಂದು ಘೋಷ ವಾಕ್ಯ, ಒಂದು ದಿಟ್ಟ ಪ್ರಣಾಳಿಕೆ, ಕನಿಷ್ಟ ಪಕ್ಷ ಸೈದ್ಧಾಂತಿಕವಾಗಿಯಾದರೂ ಪ್ರಧಾನಿ ಮೋದಿಯನ್ನು ಸೋಲಿಸಲು ಈ ಪಕ್ಷದಿಂದ ಸಾಧ್ಯವೇ? ಎಂಬುದು ಕೂಡಾ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಕಾಂಗ್ರೆಸ್’ನ ದೀರ್ಘ ಕಾಲದ ಸ್ನೇಹಿತರಾಗಿರುವ ಶರದ್ ಪವಾರ್ ಅವರು ಹೇಳುವ ಪ್ರಕಾರ, ಕಾಂಗ್ರೆಸ್ ಪಕ್ಷದಿಂದ ಹಳೆಯ ಜಮಾನ್ದಾರಿ ಮನಸ್ಥಿತಿ ಇನ್ನೂ ಹೋಗಿಲ್ಲ. ಎಲ್ಲಾ ಜಮೀನು ಕಳೆದುಕೊಂಡಿದ್ದರೂ, ತಾವಿರುವ ಕೋಟೆಯನ್ನೇ ನಮಬಿಕೊಂಡು ಇನ್ನು ದಿನ ದೂಡುತ್ತಿದ್ದಾರೆ. ಹಳೆಯ ಮನಸ್ಥಿತಿ ಕರಗಿ ಹೊಸ ಕ್ರಾಂತಿ ಪಕ್ಷದಲ್ಲಿ ಆಗಬೇಕಿದೆ, ಎಂದು ಅವರು ಹೇಳಿದ್ದಾರೆ.
ಭಾರತದ ಮಾರುಕಟ್ಟೆಗಳಲ್ಲಿ ಒಮದು ವಸ್ತು ಬಿಕರಿಯಾಗಲು ಎಷ್ಟು ತೀವ್ರವಾದ ಸ್ಪರ್ಧೆ ಇದೆಯೋ, ಭಾರತದ ರಾಜಕೀಯ ರಂಗದಲ್ಲೂ ಅಷ್ಟೇ ಕಠಿಣವಾದ ಸ್ಪರ್ಧೆ ಇದೆ. ತಮ್ಮ ಸಿದ್ದಾಂತಗಳ ಬಗ್ಗೆಯೇ ಕಾಂಗ್ರೆಸ್ ಗೊಂದಲದಲ್ಲಿದೆ- ಕಠಿಣ ಜಾತ್ಯಾತೀತವಾದ ಅಥವಾ ಮೃದು ಹಿಂದುತ್ವ? ಈ ಎರಡರ ನಡುವಿನ ಆಯ್ಕೆ ಇನ್ನೂ ನಡೆದಿಲ್ಲ. ಇನ್ನು ಘೋಷಣೆಯ ವಿಚಾರಕ್ಕೆ ಬಂದರೆ, ಹೊಸ ಗರೀಬಿ ಹಠಾವೋ ಮತ್ತು ಚೌಕಿದಾರ್ ಚೋರ್ ಹೇ ಎಂಬ ಘೋಷಣೆಯೇ ಮತ್ತೆ ಪುನರಾವರ್ತನೆಯಾದರೂ ಆಗಬಹುದು.
ಆದರೆ, ವಿಪಕ್ಷಗಳ ಪೈಕಿ ಪ್ರಮುಖ ಆರು ಪಕ್ಷಗಳಿಗಿಂತಲೂ 20% ಹೆಚ್ಚಿನ ಮತಗಳನ್ನು ಗೆಲ್ಲುವ ತಾಕತ್ತು ಕಾಂಗ್ರೆಸ್’ಗೆ ಇದೆ. ದೇಶದಲ್ಲಿ ಆಳವಾಗಿ ಬೇರೂರಿರುವ ಪಕ್ಷವನ್ನು ಒಂದೇ ಏಟಿಗೆ ಬುಡ ಸಮೇತ ಕಿತ್ತೊಗೆಯಲು ಆಗುವುದಿಲ್ಲ. ಆದರೆ, ನರೇಂದ್ರ ಮೋದಿ ಹಾಗು ಅಮಿತ್ ಶಾ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಈ ಪ್ರಮಾಣ ಸಾಕಾಗುವುದೇ?
ಕಾಂಗ್ರೆಸ್ ಹೊರತಾಗಿ ಇತರ ಪಕ್ಷಗಳ ನಾಯಕರನ್ನು ಗಮನಿಸುವುದಾದರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ವಿರುದ್ದ ಮಮತಾ ಬ್ಯಾನರ್ಜಿ ದಾಖಲಿಸಿದ ಗೆಲುವು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಗೆಲುವಿಗಿಂತಲೂ ಪ್ರಮುಖವಾದದ್ದು. ಚುನಾವಣೆಗೂ ಮೊದಲು ತೀವ್ರವಾದ ಪೈಪೋಟಿ ನೀಡಿದ್ದ ಬಿಜೆಪಿ ಫಲಿತಾಂಶ ಘೋಷಣೆ ವೇಳೆ ಮಕಾಡೆ ಮಲಗಿತ್ತು. ಚುನಾವಣೆಗೂ ಮೊದಲು ಟಿಎಂಸಿಯಿಂದ ಬಿಜೆಪಿಯೆಡೆಗೆ ವಾಲಿದ್ದ ನಾಯಕರು, ಚುನಾವಣೆಯ ನಂತರ ಬಿಜೆಪಿಯ ನಾಯಕರೊಂದಿಗೆ ವಾಪಸ್ ಬರಲು ಆರಂಭಿಸಿದ್ದಾರೆ. ಇಂತಹ ನಾಯಕಿ ವಿಪಕ್ಷಗಳ ನಿಷ್ಕ್ರೀಯತೆಯ ಕುರಿತು ಕುಹಕವಾಡಿದಾಗ ಅವರು ಸರಿ ಎಂದು ಅನ್ನಿಸುತ್ತದೆ. ಕೇಂದ್ರದ ವೈಫಲ್ಯ, ಸಿದ್ದಾಂತಗಳ ವಿರುದ್ದ ಪ್ರಮುಖ ನಾಯಕರ ಮೌನ ದೀದಿಯನ್ನು ಕೆರಳಿಸಿದೆ. ಆದರೆ, ಅವರ ವ್ಯಾಪ್ತಿ ಕೇವಲ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಿಗೆ ಸೀಮಿತವಾಗಿದೆ.
ಭಾರತದ ರಾಜಕಾರಣಿಗಲ ವಯಸ್ಸನ್ನು ಗಮನಿಸಿದರೆ, ದೀದಿಗೆ ಅಂತಹ ವಯಸ್ಸೇನು ಆಗಿಲ್ಲ. ಅವರು ಮೋದಿಗಿಂತಲೂ ಕಿರಿಯರು. ಆದರೆ, ಬಂಗಾಳಿ ಪಕ್ಷವೊಂದನ್ನು ರಾಷ್ಟ್ರೀಯ ಪಕ್ಷವಾಗಿ ಬೆಳೆಸಲು ಬೇಕಾದ ಕ್ಷಮತೆ ಅವರಲ್ಲಿ ಇದೆಯೋ ಇಲ್ಲವೋ ಎಂಬುದು ಚರ್ಚಾಸ್ಪದ ವಿಚಾರ.
ಇನ್ನೊಬ್ಬ ನಾಯಕ ಅರವಿಂದ ಕೇಜ್ರಿವಾಲ್. ಕೇವಲ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ದಾಖಲಿಸಿರುವ ಸಾಧನೆಯನ್ನು ಪರಿಗಣಿಸಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಹೋಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ವಾದವು ಇದೆ. ಆದರೆ, ಗುಜರಾತ್, ಪಂಜಾಬ್, ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಪ್ ಸಾಧನೆ ಆಯಾ ರಾಜ್ಯಗಳ ವಿಧಾನಸಭೆ ಚುನಾವಣೆಗೂ ವಿಸ್ತರಿಸಿದರೆ ಕೇಜ್ರಿವಾಲ್ ಸಾಮರ್ಥ್ಯ ಏನೆಂಬುದು ಬಹಿರಂಗವಾಗಬಹುದು. ಆದರೆ, ಪ್ರಸ್ತುತ ರಾಜಕೀಯದಲ್ಲಿರುವ ಕಿರಿಯರನ್ನು ಹೋಲಿಸಿದರೆ, ಕೇಜ್ರಿವಾಲ್ ಬಳಿ ಇನ್ನೂ ಸಮಯವಿದೆ. ದೇಶದ ಅತ್ಯಂತ ಪ್ರಮುಖ ರಾಜಕಾರಣಿಗಳ ಅರವಿಂದ ಕೇಜ್ರಿವಾಲ್ ಅತ್ಯಂತ ಕಿರಿಯರು. ಒಬ್ಬರನ್ನು ಹೊರತುಪಡಿಸಿ- ಯೋಗಿ ಆದಿತ್ಯನಾಥ್, ಅವರು ಬಿಜೆಪಿಯಲ್ಲಿದ್ದಾರೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರದಂತೆಯೇ ಲೋಕಸಭಾ ಸ್ಥಾನಗಳ ಆಧಾರದ ಮೇಲೆ ತಮಿಳುನಾಡು ಕೂಡಾ ದೊಡ್ಡ ರಾಜ್ಯ. ಇಲ್ಲಿ ಅಧಿಕಾರದಲ್ಲಿರುವ ಸ್ಟಾಲಿನ್ ಕೂಡಾ ತ.ನಾ.ನ ಪ್ರಮುಖ ರಾಜಕೀಯ ನಾಯಕ. ಆದರೆ, ರಾಜ್ಯದ ಹೊರಗೆ ಅವರ ಪ್ರಭಾವ ಮಾತ್ರ ನಿಜಕ್ಕೂ ಶೂನ್ಯ. ಉಳಿದಂತೆ, ಮಾಯಾವತಿ ಅವರು ಬಿಜೆಪಿ ವಿರುದ್ದ ಸೆಣಸಾಡುವರೋ ಇಲ್ಲವೋ ಎಂಬುದು ಅವರಿಗೇ ಸ್ಪಷ್ಟವಾಗಿಲ್ಲ. ರಾಷ್ಟ್ರೀಯ ರಾಜಕಾರಣದ ಧುರೀಣ ನಿತೀಶ್ ಕುಮಾರ್ ಬಿಜೆಪಿ ಮೈತ್ರಿ ತೊರೆಯುವರೋ? ಗೊತ್ತಿಲ್ಲ.
ಇಂತಹ ಸಂದಿಗ್ಧ ಎಲ್ಲ ವಿರೋಧ ಪಕ್ಷಗಳು ಮೋದಿ ತನ್ನನ್ನು ತಾನೇ ಸೋಲಿಸುತ್ತಾರೆ ಎಂಬ ಆಶಾಭಾವನೆಯಲ್ಲಿ ಕೂತಿದ್ದರೆ ಅವರಿಗೊಂದು ಕಹಿ ಸುದ್ದಿಯಿದೆ. ಸದ್ಯಕ್ಕೆ ಅಂತಹ ಯಾವುದೇ ಸೂಚನೆಯನ್ನು ಮೋದಿ ನೀಡಿಲ್ಲ. ಇಂದಿಗೂ ಮೊದಿ ಹಾಗೂ ಬಿಜೆಪಿ ಪ್ರತಿಯೊಂದು ಚುನಾವಣೆಯಲ್ಲಿಯೂ ಮಾಡು ಇಲ್ಲವೇ ಮಡಿ ಎಂಬ ರೀತಿಯಲ್ಲಿ ಹೋರಾಡುತ್ತಿದೆ. ಚುನಾವಣೆ ಸೋತು ಅಧಿಕಾರ ಕೈತಪ್ಪಿದರೂ, ಪ್ರತೀ ರಾಜ್ಯಗಳಲ್ಲಿಯೂ ತಮ್ಮ ನೆಲೆ ವಿಸ್ತರಿಸಿದ ಸಾಧನೆ ಬಿಜೆಪಿಯದ್ದು.
ಇವೆಲ್ಲದರ ನಡುವೆ ಮೋದಿಯನ್ನು ಸೋಲಿಸಲು ಕಾಂಗ್ರೆಸ್ಸೇತರ ತೃತೀಯ ರಂಗವನ್ನು ಕಟ್ಟುವ ಪ್ರಯತ್ನವನ್ನು ವಿಪಕ್ಷಗಳು ಮಾಡಿದ್ದಲ್ಲಿ ಅದು ಬಿಜೆಪಿಗೆ ವಿಪಕ್ಷಗಳು ನೀಡುವ ಅತಿ ದೊಡ್ಡ ಕಾಣಿಕೆಯಾಗಲಿದೆ. ಒಂದು ವೇಳೆ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಮೈತ್ರಿಕೂಟ ಸೃಷ್ಟಿಸಿದರೆ, ಅದನ್ನು ಮುನ್ನಡೆಸುವ ನಾಯಕರ ಯಾರು ಎಂಬ ಪ್ರಶ್ನೆ ಎದುರಾಗಲಿದೆ. ಏಕೆಂದರೆ, ಕಲೆದ ಏಳು ವರ್ಷಗಳಲ್ಲಿ ಕಾಂಗ್ರೆಸ್ ತನ್ನ ಪಕ್ಷಕ್ಕೇ ಒಬ್ಬ ಸಮರ್ಥ ನಾಯಕನನ್ನು ಹುಡುಕುವಲ್ಲಿ ವಿಫಲವಾಗಿದೆ.
ಆದರೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಬೇಕು ಎಂದರೆ, ಅದಕ್ಕಿಂತಲು ಮುಂಚೆ ಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ದುರ್ಬಲಗೊಳಿಸಬೇಕು. ಪಂಜಾಬ್, ರಾಜಸ್ಥಾನ್, ಛತ್ತೀಸ್ಘಡ, ಉತ್ತರ ಪ್ರದೇಶ, ಗೋವಾಗಳಲ್ಲಿ ಬಿಜೆಪಿಯ ಬಲ ಕುಂಠಿತವಾಗಬೇಕು. ಆಗ ಮಾತ್ರ ಲೋಕಸಭಾ ಚುನಾವಣೆಗೆ ವಿಪಕ್ಷಗಳಿಗೆ ಸದೃಢ ವೇದಿಕೆ ಸಿದ್ದವಾಗಲಿದೆ. ಇಲ್ಲವಾದರೆ, ಮುಂದಿನ ಲೋಕಸಭಾ ಚುನಾವಣೆಯ ಬಳಿಕವು ಬೆಂಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲಿಯೇ ವಿಪಕ್ಷಗಳ ಸಮಯ ವ್ಯರ್ಥವಾಗಲಿದೆ.