
ನಿನ್ನೆ (ಜೂ.4) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ ಒಟ್ಟು 11 ಜನ ಸಾವಿಗೀಡಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ವಿನ್ನಿಂಗ್ ಸೆಲೆಬ್ರೇಶನ್ ನಲ್ಲಿ ಭಾಗಿಯಾಗಬೇಕು ಎಂದು ಸ್ಟೇಡಿಯಂ ಬಳಿ ಬಂದಿದ್ದ ಅದೆಷ್ಟೋ ಜನ ಅಸ್ವಸ್ಥರಾಗಿದ್ದಾರೆ. ಈ ಘಟನೆ ನಡೆದಿದ್ದು ಹೇಗೆ..? ಇದಕ್ಕೆ ಮರಣ ಏನು..?! ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಆರ್.ಸಿ.ಬಿ ತಂಡ 18 ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆದ್ದ ನಂತರ ಬೆಂಗಳೂರಲ್ಲಿ ಈ ರೀತಿ ಸೆಲೆಬ್ರೇಶನ್ ಕಾರ್ಯಕ್ರಮ ಆಯೋಜಿಸಬೇಕು ಎಂದು ಯಾವುದೇ ಮುಂದಾಲೋಚನೆ ಅಥವಾ ಪೂರ್ವ ತಯಾರಿ ಕೊಂಚವೂ ಇರಲಿಲ್ಲ ಎಂಬುದು ಸತ್ಯ. ಈ ಕೊರತೆಯಿಂದಲೇ ಇಂಥ ದೊಡ್ಡ ದುರಂತ ನಡೆದು ಹೋಗಿದೆ.

ಆರ್.ಸಿ.ಬಿ ಐಪಿಎಲ್ ಕಪ್ ಗೆದ್ದ ನಂತರ ತರಾತುರಿಯಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಯ್ತು. ಅಭಿಮಾನಿಗಳಿಗೆ ಪಾಸ್ ವ್ಯವಸ್ಥೆ ಮಾಡಬೇಕೋ ಅಥವಾ ಎಲ್ಲರಿಗೂ ಮುಕ್ತ ಅವಕಾಶ ನೀಡಬೇಕೋ ಎಂಬ ಗೊಂದಲ ಕೊನೆ ಕ್ಷಣದವರೆಗೂ ಇತ್ತು. ಆದ್ರೆ ಅಷ್ಟರಲ್ಲಾಗಲೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಜಮಾಯಿಸಲು ಮುಂದಾಗಿದ್ರು.

ಹೀಗೆ ನೋಡ ನೋಡ್ತಿದ್ದಾನೆ ಸುಮಾರು 2 ಲಕ್ಷಕ್ಕೂ ಅಧಿಕ ಜನ ಸ್ಟೇಡಿಯಂ ಬಳಿ ಜಮಾಯಿಸಿಬಿಟ್ರು. ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತಾದ್ರೂ ಈ ಪ್ರಮಾಣದ ಜನರನ್ನು ಯಾರೂ ಊಹಿಸಿರಲಿಲ್ಲ. ಹೀಗೆ ಬಂದ ಅಭಿಮಾನಿಗಳನ್ನು ಗೇಟ್ ಒಳಗೆ ಬಿಡಲು ಗಂಟೆ ಗಟ್ಟಲೆ ಕಾಯಿಸಿದ್ದು ಈ ದುರಂತಕ್ಕೆ ದಾರಿ ಮಾಡಿಕೊಟ್ಟಿದೆ.
ಈ ಅವಘಡ ಸಂಭವಿಸುವಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ನ ಆಡಳಿತ ಮಂಡಳಿಯ ಮಹಾ ಎಡವಟ್ಟು ಇರೋದು ಸ್ಪಷ್ಟವಾಗಿ ಗೋಚರವಾಗುತ್ತದೆ. ಚಿನ್ನಸ್ವಾಮಿ ಸ್ಟೇಡಿಯಂ ಗೆ ಹಲವಾರು ಗೇಟ್ ಗಳು ಇದ್ದರೂ ಕೇವಲ ಮೂರು ಮತ್ತೊಂದು ಗೇಟ್ ಗಳನ್ನು ಓಪನ್ ಮಾಡಲು ಮುಂದಾಗಿದ್ದರು. ಹೀಗಾಗಿ ಗೇಟ್ ಓಪನ್ ಆಗುತ್ತಿದ್ದಂತೆ ಒಳಗೆ ನುಗ್ಗಲು ಅಭಿಮಾನಿಗಳು ಮುಂದಾದ ವೇಳೆ ಈ ದುರಂತ ನಡೆದುಹೋಗಿದೆ.