ಉಪಚುನಾವಣೆ ನಡೆಯಲಿರುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಜೆಡಿ(ಎಸ್) ದುರ್ಬಲವಾಗಿದೆ. ಈ ಹಿನ್ನೆಲೆಯಲ್ಲಿ ತಮಗಿರುವ ಅಲ್ಪಸ್ವಲ್ಪ ಬಲವನ್ನು ಬಿಜೆಪಿಗೆ ಧಾರೆಯೆರೆದು ಆ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜೆಡಿ(ಎಸ್) ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಕುಲಶಾಸ್ತ್ರ ಅಧ್ಯಯನ ಮಾಡುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗ ಆದೇಶಿಸಿದ್ದೆ, ಈಗಲೂ ಅಧ್ಯಯನ ನಡೆಯುತ್ತಿದೆ, ಅದು ಮುಗಿದು ವರದಿ ಬಂದ ನಂತರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈಗಲೇ ಸಮಾವೇಶ, ರ್ಯಾಲಿಗಳು ಅನಗತ್ಯ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕುರುಬರ ಮೀಸಲಾತಿ ಹೋರಾಟದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಕುರುಬ ಸಮುದಾಯವನ್ನು ಒಡೆಯುವುದೇ ಅವರ ಮುಖ್ಯ ಉದ್ದೇಶ. ಈಶ್ವರಪ್ಪನವರು ಹೋರಾಟ ಮಾಡುತ್ತಿರೋದು ಯಾರ ವಿರುದ್ಧ? ತಮ್ಮದೇ ಸರ್ಕಾರದ ವಿರುದ್ಧವಲ್ಲವೇ? ಅರ್ಥವಾಗೋಕೆ ಇದಕ್ಕಿಂತ ಹೆಚ್ಚು ಬೇಕಾ? ಎಂದು ಪ್ರಶ್ನಿಸಿರುವ ಅವರು, 5 ವರ್ಷ ಮುಖ್ಯಮಂತ್ರಿಯಾಗಿ ನಾಡಿನ ಶೋಷಿತ ಸಮುದಾಯಗಳಿಗಾಗಿ ಏನೆಲ್ಲಾ ಕೆಲಸ ಮಾಡಿದ್ದೇನೆ ಎಂದು ಜನರಿಗೆ ಗೊತ್ತು. ನನ್ನ ಕೆಲಸದ ಬಗ್ಗೆ ಸರ್ಟಿಫಿಕೇಟ್ ಕೊಡೋಕೆ ಈಶ್ವರಪ್ಪ ಯಾರು? ಅವರು ಕೊಡೋ ಸರ್ಟಿಫಿಕೇಟ್ ಅಗತ್ಯ ನನಗಿಲ್ಲ. ತಮ್ಮ ಸರ್ಕಾರ ಏನು ಮಾಡಿದೆ ಎಂದು ಅವರು ಹೇಳಬೇಕು ಎಂದು ಆಗ್ರಹಿಸಿದ್ದಾರೆ.