ಬೆಂಗಳೂರಿನ ಜಾಲಹಳ್ಳಿಯ ಬೋವಿ ಕಾಲೋನಿಯಲ್ಲಿ ಯುಗಾದಿ ಹಬ್ಬದ ರಾತ್ರಿ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ತಾಯಿ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ಗಂಗಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೈಲಿಗೆ ಹೋದ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಗಂಗಾದೇವಿ.

ಜೈಲಿನ ಶೌಚಾಲಯದಲ್ಲಿ ತನ್ನ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಮಂಗಳವಾರ ರಾತ್ರಿ ಇಬ್ಬರು ಮಕ್ಕಳನ್ನ ಸಾಯಿಸಿದ್ದ ಗಂಗಾದೇವಿ, ಪೊಲೀಸ್ ಕಾಲ್ ಸೆಂಟರ್ 112 ಗೆ ಕರೆ ಮಾಡಿ ಕೊಲೆಯ ವಿಚಾರ ತಿಳಿಸಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಆದರೆ ಅಷ್ಟರಲ್ಲಿ ಸ್ಥಳಕ್ಕೆ ಬಂದಿದ್ದ ಜಾಲಹಳ್ಳಿ ಪೊಲೀಸ್ರು, ಬಂಧಿಸಿ ಕರೆದೊಯ್ದಿದ್ದರು.

ಕಳೆದ ತಿಂಗಳು ಮಗಳ ಕೈಲಿಂದಲೇ ಪೋಕ್ಸೋ ಕೇಸ್ ಕೊಡಿಸಿದ್ದ ಮಹಿಳೆ ಗಂಡನನ್ನು ಜೈಲಿಗೆ ಕಳುಹಿಸಿದ್ದಳು. ಮಕ್ಕಳ ಕೊಲೆ ಮಾಡಿದ ಬಳಿಕ ಬಂಧನವಾಗಿ ಜೈಲಿಗೆ ಹೋದಾಗ ಮಕ್ಕಳ ಅಂತ್ಯಕ್ರಿಯೆ ಮಾಡಲು ಅವಕಾಶ ಬೇಕಾ ಎಂದು ಕೇಳಿದ್ದಕ್ಕೆ ಬೇಡ, ನಾನು ಮಕ್ಕಳನ್ನು ನೋಡುವುದಿಲ್ಲ ಎಂದಿದ್ದಂತೆ. ಆ ಬಳಿಕ ಮಕ್ಕಳ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿತ್ತು. ಜೈಲಿಗೆ ಹೋದ ರಾತ್ರಿಯೇ ತನ್ನ ಸೀರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಗಂಗಾದೇವಿ.