ಕಾಂಗ್ರೆಸ್ ಪಕ್ಷ ಭರ್ಜರಿ ಜಯ ದಾಖಲಿಸಿದ ಬಳಿಕ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಸುತ್ತಿದೆ. ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಎಷ್ಟಿದೆಯೋ ಅಷ್ಟೇ ಪ್ರಮಾಣ ಅಥವಾ ಅದಕ್ಕಿಂತಲೂ ತುಸು ಹೆಚ್ಚಾಗಿಯೇ ಕೆಲಸ ಮಾಡಿರುವ ಡಿ.ಕೆ ಶಿವಕುಮಾರ್, ಇದೀಗ ಸಿಎಂ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಈಗಾಗಲೇ ಶಾಸಕರಿಂದ ಮಾಹಿತಿ ಸಂಗ್ರಹ ಮಾಡಿರುವ ಹೈಕಮಾಂಡ್ ವೀಕ್ಷಕರ ತಂಡ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಕೆ ಮಾಡಿದೆ. ಬಹುತೇಕ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಆಗಿ ಆಯ್ಕೆಯಾಗುವುದು ಬಹುತೇಕ ನಿಚ್ಚಳ ಆಗಿದ್ದರೂ ಡಿ.ಕೆ ಶಿವಕುಮಾರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಂದು ಹೆಜ್ಜೆಯನ್ನು ಮುಂದೆ ಇಡಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ನೀರುಣಿಸಿ, ಸೊಗಸಾಗಿ ಫಲ ನೀಡುವಂತೆ ಮಾಡಿದ್ದೇ ಡಿ.ಕೆ ಶಿವಕುಮಾರ್ ಅನ್ನೋ ಸತ್ಯ ಹೈಕಮಾಂಡ್ ನಾಯಕರಿಗೂ ಗೊತ್ತಿರುವ ಕಾರಣಕ್ಕೆ ಏಕಾಏಕಿ ನಿರ್ಧಾರ ಮಾಡಲು ಸಾಧ್ಯವಾಗ್ತಿಲ್ಲ.
ಸಂಜೆ ದೆಹಲಿಗೆ ಹೋಗ್ತೀನಿ ಅಂದಿದ್ದ ಡಿ.ಕೆ ಶಿವಕುಮಾರ್ ಯೂ ಟರ್ನ್..
ದೆಹಲಿ ಅಂಗಳಕ್ಕೆ ಮುಖ್ಯಮಂತ್ರಿ ಆಯ್ಕೆ ಚೆಂಡು ಬಿದ್ದಿರುವ ಕಾರಣಕ್ಕೆ ಸಿದ್ದರಾಮಯ್ಯ ಅಂಡ್ ಟೀಂ ದೆಹಲಿ ತಲುಪಿದೆ. ಇಜ ಬೆಳವಣಿಗೆ ಬೆನ್ನಲ್ಲೇ ನಿನ್ನೆ ಸಂಜೆ ಡಿ.ಕೆ ಶಿವಕುಮಾರ್ ಹಾಗು ಆಪ್ತರ ತಂಡ ದೆಹಲಿಗೆ ತೆರಳಲಿದೆ ಅನ್ನೋ ಮಾಹಿತಿ ಹೊರಬಿದ್ದಿತ್ತು. ಸಂಜೆ 4 ಗಂಟೆ ಸುಮಾರಿಗೆ ಸುದ್ದಿಗೋಷ್ಟಿ ನಡೆಸಿದ ಡಿ.ಕೆ ಶಿವಕುಮಾರ್, ನಾನು ಗುರುಗಳನ್ನು ಭೇಟಿ ಮಾಡಿದ ಬಳಿಕ ದೆಹಲಿಗೆ ತೆರಳುತ್ತೇನೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡ್ತೇನೆ ಎಂದು ತಾವೇ ಸ್ವತಃ ಬಹಿರಂಗ ಮಾಡಿದ್ದರು. ಆ ಬಳಿಕ ನಿಗದಿಯಂತೆ ಬಸವೇಶ್ವರ ನಗರದಲ್ಲಿ ನೊಣವಿನಕೆರೆ ಅಜ್ಜಯ್ಯ ಅವರ ಶಾಖಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದವನ್ನೂ ಪಡೆದುಕೊಂಡರು. ಮನೆ ಬಳಿಗೆ ಬರುತ್ತಿದ್ದ ಹಾಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ದೆಹಲಿಗೆ ತೆರಳುತ್ತಿಲ್ಲ. ನನಗೆ ಹೊಟ್ಟೆಯಲ್ಲಿ ಸಮಸ್ಯೆ ಆಗಿದೆ ಎಂದಿದ್ದರು. ಕೆಲವೇ ಗಂಟೆಗಳ ಹಿಂದೆ ಮಾತನಾಡಿದ್ದ ಹೇಳಿಕೆಯಿಂದ ಯು ಟರ್ನ್ ತೆಗೆದುಕೊಂಡಿದ್ದರು.
ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರಾ.. ತಡ ಆಗ್ತಿರೋದ್ಯಾಕೆ..?
ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಆಡಳಿತ ಸುಭದ್ರವಾಗಿ ಇರಲಿದೆ ಅನ್ನೋದು ಬಹುತೇಕ ನಾಯಕರ ಮನದಾಳದ ಮಾತು. ಆದರೆ ಕಾಂಗ್ರೆಸ್ ಈ ಪ್ರಮಾಣದಲ್ಲಿ ಗೆಲು ಸಾಧಿಸಲು ಶ್ರಮ ಹಾಕಿರುವ ಡಿ.ಕೆ ಶಿವಕುಮಾರ್ ಏಕಾಏಕಿ ಸುಮ್ಮನೆ ಬಿಟ್ಟು ಕೊಟ್ಟರೆ, ಆ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕಿದಂತೆ ಆಗಲ್ಲ. ಇದೇ ಕಾರಣಕ್ಕೆ ಚೌಕಾಸಿ ಶುರು ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ತನ್ನನ್ನೇ ಸಿಎಂ ಮಾಡಬೇಕು ಎಂದು ಹೈಕಮಾಂಡ್ಗೆ ಕೇಳಿಕೊಂಡಿದ್ದಾರೆ. ಇನ್ನು ದೆಹಲಿಗೆ ತೆರಳದೆ ಹೊಟ್ಟೆ ನೋವಿನ ನೆಪ ಹೇಳಿದ್ರಿಂದ ದೆಹಲಿಯಲ್ಲಿ ನಾಯಕರು ದಿಕ್ಕು ತೋಚದಂತಾದರು. ಡಿ.ಕೆ ಶಿವಕುಮಾರ್ ಇಲ್ಲದೆ ಘೋಷಣೆ ಮಾಡಿದರೆ ಮತ್ತೊಂದು ರೀತಿಯ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ, ಇನ್ನು ಚರ್ಚೆ ನಡೆಸುತ್ತಿದ್ದು, ಇತರೆ ರಾಜ್ಯಗಳ ನಾಯಕರ ಜೊತೆಗೂ ಚರ್ಚೆ ಮಾಡಿದ ಬಳಿಕ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ, ನನಗೂ ಸಿಗಲಿ..
ಈಗಾಗಲೇ ಕೇಂದ್ರ ಸರ್ಕಾರದ ಹಿಡಿತದಲ್ಲಿ ಇರುವ ಸಂಸ್ಥೆಗಳಾದ ಐಟಿ, ಇ.ಡಿ, ಸಿಬಿಐ ಸೇರಿದಂತೆ ಹಲವಾರು ಸಂಸ್ಥೆಗಳಿಂದ ಡಿ.ಕೆ ಶಿವಕುಮಾರ್ ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಡಿ.ಕೆ ಶಿವಕುಮಾರ್ಗೆ ಎಲ್ಲಾ ಕೇಸ್ಗಳಿಂದ ಹೊರಬಂದರೆ ಸಾಕು ಎನ್ನುವಂತಾಗಬೇಕಿದೆ. ಆದರೆ ಮುಖ್ಯಮಂತ್ರಿ ಸ್ಥಾನದ ಮೇಲೆ ಸಾಕಷ್ಟು ಕನಸು ಕಟ್ಟಿಕೊಂಡಿರುವ ಡಿ.ಕೆ ಶಿವಕುಮಾರ್, ಅದನ್ನು ಪಡೆದೇ ತೀರಬೇಕು ಎಂದುಕೊಂಡಿದ್ದಾರೆ. ಹೀಗಾಗಿ ಕಡೆಯ ಎರಡು ವರ್ಷಗಳಾದರೂ ನನಗೆ ಸಿಎಂ ಸ್ಥಾನ ಕೊಡಬೇಕು ಅನ್ನೋ ಬಗ್ಗೆ ಈಗಲೇ ಮಾತು ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಮಾಧ್ಯಮಗಳ ಎದುರು ಮಾತನಾಡುತ್ತಾ, ನಾನು ನನ್ನ ಕೆಲಸ ಮಾಡಿದ್ದೇನೆ. ನನ್ನ ಜೊತೆಗೆ ಯಾವುದೇ ಶಾಸಕರಿಲ್ಲ, ಕೆಲವರು ಬ್ಲಾಕ್ ಮೇಲ್ ಮಾಡಿಕೊಂಡು ಲಾಭ ಪಡೆಯುತ್ತಾರೆ. ಆದರೆ ನನಗೆ ಬ್ಲಾಕ್ ಮೇಲ್ ಮಾಡಹವ ಅನಿವಾರ್ಯತೆ ಎಂದಿದ್ದಾರೆ.
ಅಂದರೆ ಸಿದ್ದರಾಮಯ್ಯ ಸಿಎಂ ಆದರೂ ಪರವಾಗಿಲ್ಲ. ನಾನೂ ಕೂಡ ಈ ಬಾರಿ ಮುಖ್ಯಮಂತ್ರಿ ಆಗಬೇಕು ಅನ್ನೋ ಸಂದೇಶ ಕಳುಹಿಸಿದ್ದಾರೆ. ಸಿದ್ದರಾಮಯ್ಯ ಹೆಸರು ಘೋಷಣೆ ಆಗಲಿದೆ ಎನ್ನುವ ವಿಚಾರ ಹೊರ ಬೀಳಗ್ತಿದ್ದ ಹಾಗೆ ತಾನು ದೆಹಲಿ ಪ್ರವಾಸವನ್ನು ಮೊಟಕು ಮಾಡಿದ್ರು. ಪುನಃ ಡಿ.ಕೆ ಶಿವಕುಮಾರ್ ಜೊತೆಗೆ ಮಾತನಾಡಿರುವ ಹೈಕಮಾಂಡ್ ನಾಯಕರು, ದೆಹಲಿಗೆ ಬರಬೇಕು ಎಂದು ಸೂಚಿಸಿದ್ದಾರೆ. ಇಂದು ಮುಖ್ಯಮಂತ್ರಿ ಯಾರು ಅನ್ನೋದನ್ನು ಸ್ವತಃ ಡಿ.ಕೆ ಶಿವಕುಮಾರ್ ಘೋಷಣೆ ಮಾಡಲಿದ್ದಾರೆ ಎನ್ನುವ ಮಾತುಗಳು ದೆಹಲಿ ಮೂಲದಿಂದ ತೂರಿಬಂದಿವೆ.
ಕೃಷ್ಣಮಣಿ