ಶಿವಮೊಗ್ಗ: ಸಾಗರ ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Dr. Shivananda Shivayogi Rajendra Swamiji( ಅವರು ಪ್ರಕೃತಿ ವಿಕೋಪ, ಮಳೆ ಹಾಗೂ ರಾಜ್ಯ ರಾಜಕೀಯದ ಕುರಿತು ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ.
ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅನಿರೀಕ್ಷಿತ ಹವಾಮಾನ ವೈಪರೀತ್ಯಗಳಿಂದ ಮುಂದಿನ ದಿನಗಳಲ್ಲಿ ಜಗತ್ತು ಸಂಕಷ್ಟ ಎದುರಿಸಲಿದೆ ಎಂದು ಎಚ್ಚರಿಸಿದ ಶ್ರೀಗಳು, ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಅಕಾಲಿಕ ಮಳೆಯ ಪರಿಣಾಮ ಜಲಕಂಟಕ ಸೃಷ್ಟಿಯಾಗುವ ಸಾಧ್ಯತೆಯಿದ್ದು, ಪ್ರಕೃತಿಯ ವಿಕೋಪಕ್ಕೆ ಮನುಕುಲ ತತ್ತರಿಸಲಿದೆ ಎಂದು ಅವರು ತಿಳಿಸಿದ್ದಾರೆ. ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೊಡ್ಡ ನಗರಗಳು ಅನಿರೀಕ್ಷಿತ ಅವಘಡಗಳಿಗೆ ತುತ್ತಾಗಿ ಸಂಕಷ್ಟ ಅನುಭವಿಸಬೇಕಾಗಬಹುದು ಎಂದು ಕೋಡಿಶ್ರೀಗಳು ಸೂಚಿಸಿದ್ದಾರೆ.
ಇನ್ನೊಂದೆಡೆ ರಾಜ್ಯದ ರೈತರಿಗೆ ಆಶಾದಾಯಕ ಭವಿಷ್ಯವನ್ನೂ ನುಡಿದ ಶ್ರೀಗಳು, ಈ ಬಾರಿ ರಾಜ್ಯದಲ್ಲಿ ಸಕಾಲಕ್ಕೆ ಉತ್ತಮ ಮಳೆಯಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ ಎಂದರು. ಬೆಳೆ ಸಮೃದ್ಧಿಯಾಗಿ ಬಂದು ರೈತರ ಬದುಕಿನಲ್ಲಿ ಹಸಿರು ನಳನಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಕೋಡಿಶ್ರೀಗಳು, “ಅರಸನ ಅರಮನೆ ಕಳೆಗುಂದಿತು, ಪಟ್ಟದ ಆನೆ ತನ್ನ ಗಾಂಭೀರ್ಯ ಕಳೆದುಕೊಂಡಿತು” ಎಂಬ ಮಾರ್ಮಿಕ ಮಾತುಗಳ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣರಾದರು. ಶ್ರೀಗಳ ಈ ಹೇಳಿಕೆ ರಾಜ್ಯದ ಆಡಳಿತ ವ್ಯವಸ್ಥೆ ಅಥವಾ ಪ್ರಭಾವಿ ನಾಯಕರ ಭವಿಷ್ಯದ ಬದಲಾವಣೆಗಳ ಸೂಚನೆಯೇ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ಮೂಡಿಸಿದೆ.ಪ್ರಕೃತಿಯ ಮುನಿಸು, ಮಳೆ ಪರಿಸ್ಥಿತಿ ಹಾಗೂ ರಾಜಕೀಯ ಏರುಪೇರುಗಳ ಕುರಿತ ಕೋಡಿಶ್ರೀಗಳ ಭವಿಷ್ಯ ನುಡಿಗಳು ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.






