ಬೆಂಗಳೂರು: CM ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ದೂರವಾಣಿ ಮೂಲಕ ಮಾತನಾಡಿ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ನಿಮ್ಮ ಬೇಡಿಕೆ ಸರಿಯಾಗಿದೆ. ಸದ್ಯಕ್ಕೆ ಪಕ್ಷದ ಹಿತದೃಷ್ಟಿಯಿಂದ ಎರಡು ವರ್ಷ ಸಿದ್ದರಾಯಮ್ಮ ಅವರಿಗೆ ಅವಕಾಶ ಬಿಟ್ಟುಕೊಡಿ. ಎರಡು ವರ್ಷ ನಂತರ ನಾವೇ ಅಧಿಕಾರ ಹಸ್ತಾಂತರ ಮಾಡಿಸುತ್ತೇವೆ. ಈಗ ಡಿಸಿಎಂ ಆಗಿ, ಬೇಕಿದ್ದರೆ ನೀವೊಬ್ಬರೇ ಡಿಸಿಎಂ ಆಗಿ ಎಂದು ಸೋನಿಯಾ ಗಾಂಧಿ ಮಾತು ನೀಡಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ನೀವು ಯಾವ ಖಾತೆಯನ್ನು ಕೇಳುತ್ತೀರೋ ಅದನ್ನೇ ಕೊಡುತ್ತೇವೆ. ಒಂದು ವೇಳೆ ಸಿದ್ದರಾಮಯ್ಯ ಅವರೊಂದಿಗೆ ಸಂಪುಟದಲ್ಲಿ ಒಟ್ಟಾಗಿ ಕೆಲಸ ಮಾಡಲು ಇಷ್ಟವಿಲ್ಲ ಎಂದಾದರೆ, ನೀವು ಪಕ್ಷದ ಜವಾಬ್ದಾರಿಯಲ್ಲಿ ಮುಂದುವರಿಯಿರಿ. ಪಕ್ಷಕ್ಕಾಗಿ ನಿಮ್ಮ ಪ್ರಯತ್ನದ ಬಗ್ಗೆ ನಮಗೆ ಸಂಪೂರ್ಣ ಅರಿವು ಇದೆ. ಈಗಲೇ ಸಿಎಂ ಬೇಕು ಅಂತ ಹಠ ಹಿಡಿಯಬೇಡಿ. ಬೇರೆ ರಾಜ್ಯದಲ್ಲಾದಂತೆ ಕರ್ನಾಟಕದಲ್ಲಿ ಆಗಲು ನಾವು ಬಿಡುವುದಿಲ್ಲ ಎಂದು ಭರವಸೆ ನೀಡುವ ಮೂಲಕ ಡಿಕೆಶಿಗೆ ಸೋನಿಯಾ ಗಾಂಧಿ ಅಭಯಹಸ್ತ ನೀಡಿರುವುದಾಗಿ ತಿಳಿದುಬಂದಿದೆ.

ಮೇ 13 ರಂದು ಚುನಾವಣಾ ಫಲಿತಾಂಶ ಹೊರಬಿದ್ದಾಗಿನಿಂದ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಸ್ಥಾನಕ್ಕಾಗಿ ಭಾರೀ ಪೈಪೋಟಿ ಆರಂಭವಾಗಿತ್ತು. ಅದರಲ್ಲೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಜಿ.ಪರಮೇಶ್ವರ್ ಕೂಡ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಅಲ್ಲದೆ, ಲಿಂಗಾಯತ ಸಮುದಾಯದಿಂದಲೂ ಬೇಡಿಕೆ ಬಂದಿತ್ತು. ಸಿಎಂ ಸ್ಥಾನಕ್ಕಾಗಿ ನಾಲ್ಕೈದು ದಿನಗಳಿಂದ ನಡೆದ ಪೈಪೋಟಿಗೆ ಇಂದು ತೆರೆಬಿದ್ದಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಇಂದು ಅಧಿಕೃತಗೊಳಿಸಿದೆ. ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಪ್ರಮಾನವಚನ ಸ್ವೀಕರಿಸಲಿದ್ದಾರೆ.


