ಜಲ ಜೀವನ್ ಮಿಷನ್ ಅಡಿ ಬಾಕಿ ಇರುವ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ತ್ವರಿತವಾಗಿ ಕೈಗೊಳ್ಳಬೇಕು. ಇದಕ್ಕಾಗಿ ಮೀಸಲು ಇರಿಸಿರುವ ಅನುದಾನವನ್ನು ನಿಗದಿತ ಅವಧಿಯೊಳಗೆ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮತ್ತು CEO ಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಗುತ್ತಿಗೆದಾರರಿಗೆ 1 ಕೋಟಿವರೆಗೆ ಟೆಂಡರ್ ಕಾಮಗಾರಿ ಮಂಜೂರು ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಆಗುತ್ತಿಲ್ಲ. ಯೋಜನೆಗೆ ನೀರಿನ ಮೂಲ ಸರಿಯಿಲ್ಲದ ಕಡೆಗಳಲ್ಲಿ ನೀರಿನ ಮೂಲವನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕು. ಯೋಜನೆ ಸರಿಯಾಗಿ ಅನುಷ್ಠಾನ ಗೊಳ್ಳದಿದ್ದರೆ, ಯೋಜನೆಗೆ ಹಾಕಿದ ಹಣ ವ್ಯರ್ಥವಾಗುತ್ತದೆ, ಹಾಗಾಗಿ, ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಎಲ್ಲ ಯೋಜನೆಗಳ ಕಾಮಗಾರಿಗಳಿಗೆ ಮುಂದಿನ ಮಾರ್ಚ್ 15 ರೊಳಗೆ ಚಾಲನೆ ನೀಡಬೇಕು ಎಂದು ಅವರು ಹೇಳಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗಳಿಗೆ ನೀಡಲಾಗುವ ಮಾನವ ದಿನಗಳ ಗುರಿಯನ್ನು ಸಾಧಿಸಲೇಬೇಕು. ವಿನಾಕಾರಣ ನೆಪಗಳನ್ನು ಅಧಿಕಾರಿಗಳು ಹೇಳಬಾರದು ಎಂದು ಅವರು ಹೇಳಿದ್ದಾರೆ.
ಫಸಲ್ ಬೀಮಾ ಯೋಜನೆಯ ಲಾಭವನ್ನು ಖಾಸಗಿ ಕಂಪನಿಗಳು ಲೂಟಿ ಹೊಡೆಯುತ್ತಿವೆ. ಆದ್ದರಿಂದ ಈ ಯೋಜನೆಯಡಿ ಸರ್ಕಾರಿ ವಿಮಾ ಕಂಪನಿಗಳನ್ನು ಸೇರಿಸಬೇಕು, ಇದರಿಂದ ರೈತರಿಗೂ ಲಾಭವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು