ವಿಜಯಪುರ: ಬಾಯಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ದೊಡ್ಡ ಮೊಸಳೆಯೊಂದು ಕೊಲ್ಹಾರ ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218 ರ ಕೃಷ್ಣಾ ನದಿ ಸೇತುವೆ ಮೇಲೆ ಶನಿವಾರ ಪತ್ತೆಯಾಗಿದೆ.
ಮೊಸಳೆ ಬಾಯಿಗೆ ಹಗ್ಗ ಕಟ್ಟಿರುವುದರಿಂದ ಆಹಾರ ಸೇವಿಸಲಾಗದೇ ನದಿಯಿಂದ ಆಚೆ ಬಂದಿರಬಹುದು ಅಥವಾ ಜನವಸತಿ ಪ್ರದೇಶಕ್ಕೆ ನುಗ್ಗಿರುವಾಗ ಹಿಡಿದು ಹಗ್ಗ ಕಟ್ಟಿ ತಂದು ಇಲ್ಲಿ ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಹೆದ್ದಾರಿ ಗಸ್ತು ಪೊಲೀಸರು ಆಗಮಿಸಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಆಡಚಣೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳೀಯ ಯುವಕರ ಸಹಾಯದಿಂದ ಮೊಸಳೆಯನ್ನು ಹಗ್ಗದಿಂದ ರಸ್ತೆ ದಂಡೆಗೆ ಸರಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಬಂದ ಮೇಲೆ ಮೊಸಳೆ ಬಾಯಿಗೆ ಕಟ್ಟಿರುವ ಹಗ್ಗ ಬಿಚ್ಚಿ, ನದಿಗೆ ಬಿಡುವುದಾಗಿ ಪೊಲೀಸರು ತಿಳಿಸಿದ್ದಾರೆ.