ಸರಕಾರ ರೈತಾಪಿ ವರ್ಗಕ್ಕೆ ಸಹಾಯಕವಾಗಲಿ ಎಂದು ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ರೈತರಿಗೆ ಹೆಚ್ಚಿನ ಹಣ ಸಿಗಲಿ ಅನ್ನುವ ಕಾರಣದಿಂದಾ ಪಿ ಕೆ ಪಿ ಎಸ್ ಮೂಲಕ, ಖದೀರಿ ಕೇಂದ್ರದ ಮೂಲಕ ಬೆಳೆಯನ್ನು ಖರೀದಿಸುತ್ತದೆ. ಆದರೆ ಈ ವರ್ಷ ತೊಗರಿ ಬೆಳೆದ ಬೆಳೆಗಾರರಿಗೆ ಸರಕಾರ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಆದರೆ ಸರ್ಕಾರದ ನಿಯಮಗಳಲ್ಲೆ ಲೋಪದೋಷ ಕಂಡು ಬಂದ ಕಾರಣ ಹಾಗೂ ಖರೀದಿ ಕೇಂದ್ರದ ಸಿಬ್ಬಂದಿಗಳ ವರ್ತನೆ ರೈತನ್ನು ಖರೀದಿ ಕೇಂದ್ರದಿಂದ ದೂರವಿರಿಸಿದೆ. ಇದರ ಪರಿಣಾಮವಾಗಿ ಜಿಲ್ಲೆಯ ತೊಗರಿ ಖರೀದಿ ಕೇಂದ್ರಗಳು ಖಾಲಿ ಖಾಲಿಯಾಗಿದ್ದು, ರೈತರು ಖಾಸಗಿ ವ್ಯಕ್ತಿಗಳ ಮೊರೆ ಹೋಗಿದ್ದಾರೆ.
ರಾಜ್ಯದಲ್ಲಿ ಕಲಬುರ್ಗಿ ಜಿಲ್ಲೆ ಬಿಟ್ಟರೆ ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ತೊಗರಿ ಬೆಳೆಯುತ್ತಾರೆ. ಎರಡನೇ ತೊಗರಿ ಕಣಜ ಅಂತ ವಿಜಯಪುರ ಜಿಲ್ಲೆ ಹೆಸರು ವಾಸಿಯಾಗಿದೆ. ಸರ್ಕಾರ ಬೆಂಬಲ ಬೆಲೆಯಲ್ಲಿ ತೊಗರಿ ಕಾಳು ಖರೀದಿ ಕೇಂದ್ರ ತೆರೆದಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ರೈತರು ಮಾತ್ರ ತೊಗರಿ ಕೇಂದ್ರದತ್ತ ಸುಳಿಯುತ್ತಿಲ್ಲ. ಇದಕ್ಕೆ ಕಾರಣ ಸರ್ಕಾರ ಘೋಷಿಸಿರೋ ಬೆಂಬಲ ಬೆಲೆ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಒಂದೇ ಆಗಿದೆ ಅನ್ನೋದು. ಸರ್ಕಾರ ಪ್ರತಿ ಕ್ವಿಂಟಾಲ್ ತೊಗರಿಗೆ 6300 ಬೆಂಬಲ ಬೆಲೆ ನಿಗದಿ ಮಾಡಿದೆ. ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಪ್ರತಿ ಕ್ವಿಂಟಾಲ್ ತೊಗರಿಗೆ 6200 ಗೆ ಖರೀದಿ ಮಾಡುತ್ತಿದ್ದಾರೆ, ಹೀಗಾಗಿ ರೈತರು ಸರ್ಕಾರ ತೆರೆದಿರೋ ತೊಗರಿ ಕಾಳು ಖರೀದಿ ಕೇಂದ್ರದತ್ತ ಬರ್ತಿಲ್ಲ.
ವಿಜಯಪುರ ಜಿಲ್ಲೆಯಲ್ಲಿ 4.76ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು, ಅಂದಾಜು 30 ಲಕ್ಷ ಕ್ವಿಂಟಾಲ್ ತೊಗರಿ ಬೆಳೆ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಜಿಲ್ಲಾಡಳಿತ 145 ತೊಗರಿ ಕಾಳು ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದ್ರೆ. ಅದರಲ್ಲಿ 127 ಕೇಂದ್ರದಲ್ಲಿ 27444 ರೈತರು ನೊಂದಣಿ ಮಾಡಿಸಿದ್ದಾರೆ. ಮೂರು ವರ್ಷಗಳಿಂದ ರಾಜ್ಯ ಸರ್ಕಾರ ತೊಗರಿಗೆ ಸಹಾಯಧನ ನೀಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಘೋಷಿಸಿರೋ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲಾಗ್ತಿದೆ. ರಾಜ್ಯ ಸರ್ಕಾರ ತೊಗರಿಗೆ ಪ್ರತಿ ಕ್ವಿಂಟಾಲ್ ಗೆ ಐದುನೂರು ಸಹಾಯಧನದ ಜೊತೆಗೆ 8 ಸಾವಿರ ಬೆಂಬಲ ಬೆಲೆ ನೀಡಲಿ ಅಂತಿದ್ದಾರೆ ರೈತ ಮುಖಂಡರು.

ವಿಜಯಪುರದಲ್ಲಿ ಸದ್ಯ 18 ತೊಗರಿ ಖರೀದಿ ಕೇಂದ್ರದಲ್ಲಿ ಈವರೆಗೆ ಕೇವಲ 540 ರೈತರು 6933 ಕ್ವಿಂಟಾಲ್ ತೊಗರಿ ಮಾರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ಕ್ವಿಂಟಾಲ್ ಗೆ 6100 ರಂತೆ 2019-2020 ರಲ್ಲಿ 8 ಲಕ್ಷ 16 ಸಾವಿರ ಕ್ವಿಂಟಾಲ್ ತೊಗರಿಯನ್ನು ಖರೀದಿಸಿದ್ರೆ, 2020-21 ರಲ್ಲಿ 58 ಸಾವಿರ ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ಅಂದ್ರೆ ವರ್ಷದಿಂದ ವರ್ಷಕ್ಕೆ ರೈತರು ಸರ್ಕಾರ ತೆರೆದಿರೋ ತೊಗರಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡೋ ಪ್ರಮಾಣ ಇಳಿಕೆಯಾಗ್ತಿದೆ. ನಾಮಕಾವಸ್ತೆ ತೊಗರಿ ಖರೀದಿ ಕೇಂದ್ರ ತೆರೆಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಸರ್ಕಾರ ಬೆಂಬಲ ಬೆಲೆ ನೀಡಿ ತೊಗರಿ ಖರೀದಿ ಕೇಂದ್ರಕ್ಕೆ ಬೆಲೆ ನಿಗದಿ ಮಾಡಿದರೆ ಅಷ್ಟೇ ಪ್ರಮಾಣದಲ್ಲಿ ಹಣ ನೀಡಿ ಖಾಸಗಿ ಅವರು ಖರೀದಿ ಮಾಡುತ್ತಿರುವ ಹಿನ್ನಲೆ ರೈತರು ತೊಗರಿ ಖರೀದಿ ಕೇಂದ್ರದತ್ತ ಸುಳಿಯುತ್ತಿಲ್ಲ, ಸರ್ಕಾರ ವೈಜ್ಞಾನಿಕ ಬೆಲೆ ನೀಡಿ ತೊಗರಿ ಬೆಳೆಗಾರರ ನೆರವಿಗೆ ಬರಬೇಕಿದೆ.