ಧರ್ಮವು ಮನುಷ್ಯನ ಒಳಿತಿನ ಆಶಯಗಳಿಂದ ರೂಪುಗೊಂಡ ಒಂದು ವ್ಯವಸ್ಥೆ. ಆ ಒಳಿತಿನ ಆಶಯಗಳನ್ನು ಮೀರಿ ಅದು ಆತನ ಅಹಂ ಮತ್ತು ಆಸ್ಮಿತೆಯ ಮಾರ್ಗವಾಗಿರುವುದು ಸಮಕಾಲಿನ ದುರಂತ. ಮನುಷ್ಯನಿಂದಲೇ ಸೃಷ್ಟಿಗೊಂಡಿರುವ ಧರ್ಮವು ಆತನ ನಿಯಂತ್ರಣ ಮೀರಿ ಮನುಷ್ಯ ಜನಾಂಗವನ್ನೇ ನಿಯಂತ್ರಿಸುತ್ತಿರುವುದು ವಿಪರ್ಯಾಸದ ಸಂಗತಿ. ಜಗತ್ತಿನ ಎಲ್ಲಾ ಮನುಷ್ಯರು ಒಂದಲ್ಲ ಒಂದು ಬಗೆಯಲ್ಲಿ ಧರ್ಮದ ಬಾಹುಗಳಲ್ಲಿ ಬಂಧಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಂವಿಧಾನ ಮಾನ್ಯತೆಯ ಕುರಿತು ಬಹುವಿಧ ಚರ್ಚೆಗಳು ಕೇಳಿಬರುತ್ತಿವೆ. ಲಿಂಗಾಯತರ ಬೇಡಿಕೆಯು ನ್ಯಾಯಸಮ್ಮತವಾಗಿದ್ದಾಗ್ಯೂ ಇಲ್ಲಿ ಕುತೂಹಲದ ವಿಷಯವೆಂದರೆ, ಲಿಂಗಾಯತರು ವೈದಿಕ ನಿಯಂತ್ರಿತ ಹಿಂದೂ ಧರ್ಮದಿಂದ ಹೊರಹೋದರೆ ತಮಗಾಗುವ ರಾಜಕೀಯ ನಷ್ಟವನ್ನು ಲೆಕ್ಕಹಾಕಿ ಹತಾಷೆಯಿಂದ ಕಂಗಾಲಾಗಿರುವ ಕರ್ಮಟರ ಪೇಚಾಟ. ಲಿಂಗಾಯತವು ಹಿಂದೂ ಧರ್ಮದಿಂದ ಬೇರ್ಪಟ್ಟರೆ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಏಟು ಬೀಳಬಹುದು ಎನ್ನುವ ಆತಂಕದಿಂದ ಹಾವಿನಪುರದ ಹಾಫ್ ಚಡ್ಡಿಯವರು ಹತಾಷೆಯಿಂದ ಹಾರಾಡುತ್ತಿದ್ದಾರೆ. ಅವರ ಆತಂಕ ಮತ್ತು ಗಲಿಬಿಲಿ ಸಹಜ ಕೂಡ.
ಐದು ವರ್ಷಗಳ ಹಿಂದೆ ದಿವಂಗತ ಮಹಾದೇವ್ ಪ್ರಕಾಶ್ ಅವರ ಸಂಪಾದಕತ್ವದ ‘ಈ ಭಾನುವಾರ’ ಮಾಸಿಕದಲ್ಲಿ ಹಿರಿಯ ಹಿಂದೂ ಸಂಶೋಧಕರಾದ ಲಿಂಗೈಕ್ಯ ಡಾ. ಚಿದಾನಂದ ಮೂರ್ತಿಯವರು ‘ವೀರಶೈವರು ಹಿಂದೂಗಳಲ್ಲ ಎಂಬುದು ಸರಿಯಲ್ಲ’ ಎನ್ನುವ ತಲೆಬರಹದ ಲೇಖನ ಬರೆದಿದ್ದರು. ಅವರ ಅಂಕಣಕ್ಕೆ ಪ್ರತಿಯಾಗಿ ಅದೇ ಮಾಸಿಕದ ಮುಂದಿನ ಸಂಚಿಕೆಯಲ್ಲಿ ನಾನು ಅವರಿಗೆ ಈ ಅಂಕಣದ ಮೂಲಕ ಉತ್ತರಿಸಿದ್ದೇನೆ. ಅವರ ಲೇಖನದ ಶಿರ್ಷಿಕೆಯು ವಾಸ್ತವವನ್ನೇ ಹೇಳುತ್ತಿತ್ತು. ಏಕೆಂದರೆ ವೀರಶೈವರು ಹಿಂದೂಗಳಲ್ಲ ಅನ್ನುವುದು ನಮ್ಮ ವಾದ ಅಲ್ಲವೇ ಅಲ್ಲ. ಆದರೆ ಲಿಂಗಾಯತರು ಹಿಂದೂಗಳಲ್ಲವೆಂದು ನಾವೆಲ್ಲ ಬಸವಾನುಯಾಯಿ ಲಿಂಗಾಯತರು ಒಕ್ಕೂರಲಿನಿಂದ ಹೇಳುವುದಂತೂ ಸತ್ಯ. ವೀರಶೈವರು ಅಪ್ಪಟ ಕರ್ಮಟ ಹಿಂದೂಗಳೆಂದು ಬೇರೆ ಯಾರೂ ಸಾಬೀತು ಮಾಡುವ ಅಗತ್ಯವೇಯಿಲ್ಲ. ಏಕೆಂದರೆ ವೀರಶೈವ ಆಚಾರ-ವಿಚಾರಗಳೇ ಅದನ್ನು ಒತ್ತಿ ಹೇಳುತ್ತವೆ. ವೀರಶೈವರು ತಮ್ಮ ಅನುಯಾಯಿಗಳನ್ನು ‘ಗುರು’ ಮತ್ತು ‘ಭಕ್ತ ‘ ವರ್ಗಗಳೆಂದು ವಿಭಜಿಸಿˌ ಮುಗ್ಧ ಭಕ್ತರ ಹೆಗಲ ಮೇಲೇರಿ ಅಡ್ಡಪಲ್ಲಕ್ಕಿಯಲ್ಲಿ ವಿಜ್ರಂಭಿಸುತ್ತಿದ್ದಾರೆ. ವೀರಶೈವ ಆಗಮಿಕರ ಪಾದಪೂಜೆˌ ದಕ್ಷಿಣೆˌ ಮಡಿ-ಮೈಲಿಗೆˌ ಹೋಮ-ಹವನˌ ಪಂಚಾಂಗˌ ಜ್ಯೋತಿಷ್ಯ ˌ ಮುಹೂರ್ತ ಮುಂತಾದ ವೈದಿಕ ಆಚರಣೆಗಳೇ ವೀರಶೈವವು ಹಿಂದೂ ಧರ್ಮದ ಒಂದು ಶೈವ ಶಾಖಾ ಪಂಥವೆನ್ನುವುದನ್ನು ದೃಢೀಕರಿಸುತ್ತದೆ.
ಡಾ. ಚಿಮೂ ಅವರು ಹಿಂದೂ-ವೀರಶೈವ ಪಂಥದ ಅನಧಿಕೃತ ವಕ್ತಾರರಾಗಿದ್ದರು ಎಂಬುದು ನಮಗೆಲ್ಲರಿಗೆ ಗೊತ್ತಿರುವ ಸಂಗತಿ. ಚಿಮೂ ಎತ್ತಿದ ಅನೇಕ ಪ್ರಶ್ನೆಗಳಿಗೆ ಅನೇಕ ಹಿರಿಯ ವಿದ್ವಾಂಸರು ವಿವಿಧ ವೇದಿಕೆ ಮತ್ತು ಮಾದ್ಯಮಗಳ ಮುಖಾಂತರ ಸ್ಪಷ್ಟವಾದ ಉತ್ತರಗಳನ್ನು ಕೊಟ್ಟಿದ್ದಾರೆ. ಆದರೆ ಚಿಮೂ ಅವರ ಹಿಂದೂ ಕರ್ಮಟ ಮನಸ್ಥಿತಿಯ ಪೂರ್ವಾಗ್ರಹಗಳು ಬದಲಾಗುತ್ತಾವೆನ್ನುವ ಆಶಾವಾದ ನಮಗಿರಲಿಲ್ಲ. ಅವರ ಪ್ರತಿವೊಂದು ಪ್ರಶ್ನೆಗಳಿಗೂ ಬಿಡದೆ ಉತ್ತರಿಸುವ ಅಗತ್ಯವೂ ಲಿಂಗಾಯತರಿಗಿರಲಿಲ್ಲ. ಆದರೆ ಮುಗ್ಧ ಜನರನ್ನು ದಾರಿ ತಪ್ಪಿಸುವ ಅವರ ವಿತಂಡವಾದವನ್ನು ಸಮರ್ಥವಾಗಿ ಅಲ್ಲಗಳೆಯುವ ಕೆಲಸ ಮಾಡಲಾಗಿದೆ. ಮೂರ್ತಿಯವರ ಎಲ್ಲ ಅನುಮಾನಗಳಿಗೆ ಈಗಾಗಲೇ ಅನೇಕ ತಜ್ಞರು ಪ್ರತಿಪಾದಿಸಿರುವ ವಿಷಯಗಳನ್ನು ಈ ಕೆಳಗಿನಂತೆ ನೀಡಲಿಚ್ಛಿಸಿಸುತ್ತೇನೆ.

೧. ಪಂಚಪೀಠಾಧಿಪತಿಗಳು ಮೂಲತಃ ಚತುರಾಚಾರ್ಯರು ಎಂಬುದಕ್ಕೆ ೧೬೯೮ ರಲ್ಲಿ ಪ್ರಕಟವಾದ ಸಂಪಾದನೆಯ ಪರ್ವತೇಶದ ಚತುರಾಚಾರ್ಯರ ಚರಿತ್ರೆಯು ಒಂದು ಆಕರ ಗ್ರಂಥ.
೨. ಕೊಲ್ಲಿಪಾಕಿಯ ರೇಣುಕˌ ಉಜ್ಜೈನಿಯ ಮರುಳಸಿದ್ಧ ˌ ಕೇದಾರದ ಭೀಮಾಶಂಕರˌ ಶ್ರೀಶೈಲದ ಪಂಡಿತಾರಾಧ್ಯ ಈ ಚತುರಾಚಾರ್ಯರು ೧೫ನೇ ಶತಮಾನದ ನಂತರ ಪ್ರವರ್ಧಮಾನಕ್ಕೆ ಬಂದವರುˌ ೧೭ನೇ ಶತಮಾನದಲ್ಲಿ ಕಾಶಿಯ ಗೋಸಾಯಿˌ ನಾಥಪರಂಪರೆಯ ಪೀಠವನ್ನು ಅತಿಕ್ರಮಿಸಿ ಐದನೇ ಪೀಠವೊಂದನ್ನು ಸ್ಥಾಪನೆಮಾಡಿಕೊಂಡು ಆಂಧ್ರದ ಆರಾಧ್ಯ ಬ್ರಾಹ್ಮಣರು ಪಂಚಾಚಾರ್ಯರೆಂದು ಸ್ವಯಂ ಘೋಷಿಸಿಕೊಂಡರು.
೩. ಮೂಲತಃ ಆಂದ್ರಪ್ರದೇಶದ ಲಿಂಗೀ ಬ್ರಾಹ್ಮಣರಾದ (ಆರಾಧ್ಯ ಬ್ರಾಹ್ಮಣರು) ಇವರು ವಾಸ್ತವದಲ್ಲಿ ಶೈವಪಂಥದ ಆರಾಧಕರಾಗಿದ್ದು ಕ್ರಮೇಣ ಲಿಂಗಧಾರಿಗಳಾಗಿ ಲಿಂಗಾಯತರಿಗೆ ತಾವೇ ಗುರುಗಳೆಂದು ಪ್ರತಿಪಾದಿಸಿದವರು.
೪. ೧೪ನೇ ಶತಮಾನದ ನಂತರ ಸಂಸ್ಕ್ರತದಲ್ಲಿ ಶಿವಾಗಮ ಆಧರಿತ ಸಿದ್ಧಾಂತ ಶಿಖಾಮಣಿ ಎಂಬ ಅನಾಮಿಕ ಖೊಟ್ಟಿ ಗ್ರಂಥವೊಂದನ್ನು ಸೃಷ್ಠಿಸಿಕೊಂಡರು.
೫. ೨೦ನೇ ಶತಮಾನದಲ್ಲಿ ನಾಡಿನಾದ್ಯಂತ ಸ್ಥಾಪಿಲಾದ ಅನೇಕ ಸಂಘ-ಸಂಸ್ಥೆಗಳಿಗೆ ಎಲ್ಲೂ ವೀರಶೈವ ಎಂಬ ಶಬ್ಧ ಬಳಕೆಯಾಗಿರುವುದಿಲ್ಲ.
▪️೧೮೬೭ ರಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರು ಸ್ಥಾಪಿಸಿದ ಲಿಂಗಾಯತ ಉಚಿತ ಪ್ರಸಾದ ನಿಲಯ,
▪️೧೮೫೫ ರಲ್ಲಿ ಧಾರವಾಡದಲ್ಲಿ ಆರಂಭವಾದ ಲಿಂಗಾಯತ ವಿಧ್ಯಾಭಿವೃದ್ಧಿ ಸಂಸ್ಥೆ,
▪️೧೯೦೬ ರಲ್ಲಿ ಬಾಗಲಕೋಟೆಯಲ್ಲಿ ಬೀಳೂರು ಗುರುಬಸವ ಸ್ವಾಮಿಗಳು ಆರಂಭಿಸಿದ ಬಸವೇಶ್ವರ ವಿಧ್ಯಾವರ್ಧಕ ಸಂಘ (೨೦೦೪ ರ ನಂತರ ಪಟ್ಟಭದ್ರರು ವೀರಶೈವ ಎಂಬ ಶಬ್ಧವನ್ನು ಸೇರಿಸಿದ್ದಾರೆ),
▪️೧೯೧೦ ರಲ್ಲಿ ಡಾ. ಫ ಗು ಹಳಕಟ್ಟಿಯವರು ವಿಜಾಪುರದಲ್ಲಿ ಸ್ಥಾಪಿಸಿದ ವಿಜಾಪುರ ಜಿಲ್ಲಾ ಲಿಂಗಾಯತ ವಿಧ್ಯಾಭಿವೃದ್ಧಿ ಸಂಸ್ಥೆ,
▪️೧೯೧೬ ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿಸಲಾದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ˌಹಾಗೂ
ಬೆಂಗಳೂರಲ್ಲಿ ಪುಟ್ಟಣ್ಣ ಶೆಟ್ಟರು ಆರಂಭಿಸಿದ ಲಿಂಗಾಯತ ಹೆಸರಿನ ಶಿಕ್ಷಣ ಸಂಸ್ಥೆಗಳು ಇದಕ್ಕೆ ನಿದರ್ಶನ.
ಇನ್ನು ಚಿಮೂರವರು ತಮ್ಮ ಲೇಖನದಲ್ಲಿ ಹಿಂದೂ ವಿವಾಹ ಕಾಯ್ದೆ ಮತ್ತು ಡಾ. ಎಸ್ ರಾಧಾಕ್ರಷ್ಣನ್ ಅವರ ಉಲ್ಲೇಖವನ್ನು ಲಿಂಗಾಯತರು ಹಿಂದೂಗಳೆಂದು ಸಾಧಿಸಲು ದುರುಪಯೋಗಪಡಿಸಿಕೊಂಡಿದದ್ದರು. ಆದರೆ ನಿವೃತ್ತ ಐಎಎಸ್ ಅಧಿಕಾರಿ ಡಾ. ಶಿವಾನಂದ ಜಾಮದಾರರ ಪ್ರಕಾರ ಹಿಂದೂ ವಿವಾಹ ಕಾಯ್ದೆ ಮತ್ತು ಇತರ ಮೂರು ಹಿಂದೂ ಕೌಟುಂಬಿಕ ಕಾನೂನುಗಳಲ್ಲಿ ‘ಹಿಂದೂ’ ಶಬ್ಧದ ವ್ಯಾಖ್ಯಾನವಿದೆ. ಅದರಲ್ಲಿ ಲಿಂಗಾಯತ, ಬೌದ್ಧ, ಜೈನ, ಸಿಖ್ ಧರ್ಮಗಳನ್ನು ವಿಶೇಷವಾಗಿ ಹೆಸರಿಸಿ ಹಿಂದೂ ಧರ್ಮದ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ ಮತ್ತು ಈ ನಾಲ್ಕೂ ಧರ್ಮಗಳು ಪ್ರತ್ಯೇಕ ಧರ್ಮಗಳೆಂದು ಆಗಿನ ಕಾನೂನು ತಜ್ಞರು ಅರಿತದ್ದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ. ಡಾ. ರಾಧಾಕ್ರಷ್ಣನ್ ಅವರು ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕ ಮತ್ತು ಈ ನಾಲ್ಕೂ ಧರ್ಮಗಳು ಹಿಂದೂ ಧರ್ಮದ ಪಂಥಗಳೆಂದು ಹಿಂದೂ ಜೀವನ ಪದ್ಧತಿಗೆ ಅನ್ವಿಯಿಸಿ ಹೇಳುತ್ತಾರೆಯೇ ಹೊರತು ಧರ್ಮದ ಪರಿಭಾಷೆಯಲ್ಲಿ ಅಲ್ಲ ಅನ್ನುತ್ತಾರೆ ಡಾ. ಜಾಮದಾರ. ಮುಂದುವರೆದು ಅವರು ಡಾ. ಚಿಮೂ ಅವರ ದ್ವಂದ್ವವನ್ನು ಈ ರೀತಿಯಾಗಿ ಮಾರ್ಮಿಕವಾಗಿ ವಿಡಂಬಿಸುತ್ತಾರೆ: “ಸಿದ್ಧಾಂತ ಶಿಖಾಮಣಿಯು ೧೪ನೇ ಶತಮಾನದ ಕೃತಿಯೆಂದು ಆಗ ಮೂರ್ತಿಯವರೇ ಸಂಶೋಧನಾತ್ಮಕವಾಗಿ ಬರೆದು, ಈಗ ಅದು ತಪ್ಪೆಂದು ವಾದಿಸುವುದು ಅವರ ಬುದ್ಧಿವಂತಿಕೆಯ ಲಕ್ಷಣ.”
ಲಿಂಗಾಯತವು ಸ್ವತಂತ್ರಪೂರ್ವದಲ್ಲಿ ಆಂಗ್ಲ ಸರಕಾರದ ಜನಗಣತಿ ಮತ್ತು ರಾಜ್ಯಪತ್ರ (ಗೆಜೆಟ್ )ದಲ್ಲಿ ನಮೂದಾಗಿರುವುದನ್ನು ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆಯ ಉಮರಗಿ ತಾಲೂಕಿನ ಮುರುಮ್ ಗ್ರಾಮದ ಬಸವಾನುಯಾಯಿ ಶ್ರೀ ರಾಮಲಿಂಗ ಕಾಶಿನಾಥ ಪುರಾಣೆಯವರು ಕೇಂದ್ರ ಸರಕಾರದ ಗೃಹ ಇಲಾಖೆಯಿಂದ ಮಾಹಿತಿ ಹಕ್ಕುಗಳಡಿಯಲ್ಲಿ ಪಡೆದ ದಾಖಲೆಯಲ್ಲಿ ಸ್ಪಷ್ಟವಾಗಿ ೧೮೯೧ ಮತ್ತು ೧೯೧೧ ರ ಜನಗಣತಿಯು ಸ್ವತಂತ್ರ ಧರ್ಮವೆಂದು ಸಾರಿಹೇಳುತ್ತದೆ. ಇಷ್ಟೆಲ್ಲದರ ನಡುವೆ ಆರಾಧ್ಯರು, ಹಿರೇಮಠ ಮುಂತಾದ ಹೆಸರಿನಡಿಯಲ್ಲಿ ಗುರುತಿಸಿಕೊಳ್ಳುವ ಅಯ್ಯನವರು ಕಾಲಾನುಕ್ರಮದಲ್ಲಿ ಹಾನಗಲ್ ಕುಮಾರಸ್ವಾಮಿಗಳ ಮೂಲಕ ಲಿಂಗಾಯತಕ್ಕೆ ವೀರಶೈವವೆಂಬ ಪರ್ಯಾಯ ಪದಬಳಕೆ ಆರಂಭಿಸಿ, ಮಠಗಳಲ್ಲಿ ಸಂಸ್ಕ್ರತಾಧ್ಯಯನ ಹಾಗೂ ವೈದಿಕ ಆಚರಣೆಗಳನ್ನು ವಿಸ್ತರಿಸುತ್ತಾ ಲಿಂಗಾಯತವನ್ನು ಕುಲಗೆಡಿಸುವ ಕಾರ್ಯಮಾಡಿದ್ದು ಸರ್ವವಿಧಿತ. ಡಾ. ಚಿಮೂರವರು ಇದೇ ಜಂಗಮ ಗುಂಪಿಗೆ ಸೇರೀದವರಾಗಿದ್ದು ಕರ್ಮಟ ವೀರಶೈವ ಮತದ ಪರವಹಿಸಿ ಪ್ರಗತಿಪರ ಲಿಂಗಾಯತ ಧರ್ಮದ ವಿರುದ್ಧ ಹಲ್ಲುಮಸೆಯುವುದು ಸಹಜ ನಡವಳಿಕೆ ಎಂದೇ ಭಾವಿಸಬೇಕಾಗಿದೆ.
ಕೊನೆಯದಾಗಿ ಡಾ. ಚಿಮೂರವರಿಗೆ ವೀರಶೈವ ಆಚಾರ್ಯರ ಮತ ಮತ್ತು ಬಸವ ಪ್ರಣೀತ ಶರಣ ಧರ್ಮಗಳ ನಡುವಿನ ಮೂಲಭೂತ ವ್ಯತ್ಯಾಸಗಳನ್ನು ಈ ಕೆಳಗಿನ ಅಂಶಗಳ ಮೂಲಕ ಹೇಳಿದ್ದೇನೆ:
೧. ವೀರಶೈವ ಆಚಾರ್ಯ ಸಂಸ್ಕ್ರತಿಗೆ ಮೌಢ್ಯˌ ಅಜ್ಞಾನ ಮತ್ತು ಕಾಲ್ಪನಿಕ ಪುರಾಣಗಳು ತಳಹದಿಯಾದರೆ
ಲಿಂಗಾಯತರ ಶರಣ ಸಂಸ್ಕ್ರತಿಗೆ ವೈಚಾರಿಕತೆ, ವಿಜ್ಞಾನ ಮತ್ತು ಇತಿಹಾಸವೇ ತಳಹದಿ.
೨. ಆಚಾರ್ಯ ಸಂಸ್ಕ್ರತಿ ಕರ್ಮವನ್ನು ನಂಬುತ್ತದೆ.
ಶರಣ ಸಂಸ್ಕ್ರತಿ ಕಾಯಕವನ್ನು ಪುರಸ್ಕರಿಸುತ್ತದೆ.
೩. ಆಚಾರ್ಯ ಸಂಸ್ಕ್ರತಿ ಅಸಮಾನತೆ, ತಾರತಮ್ಯ ಸ್ವೀಕರಿಸುತ್ತದೆ. ಶರಣ ಸಂಸ್ಕ್ರತಿ ಸಮಾನತೆ ಸಹೋದರತೆಯನ್ನು ಪುರಸ್ಕರಿಸುತ್ತದೆ.
೪. ಆಚಾರ್ಯ ಸಂಸ್ಕ್ರತಿ ಮುಗ್ಧ ಮಾನವರ ಹೆಗಲೇರಿ ಪಲ್ಲಕ್ಕಿಯಲ್ಲಿ ಕುಳಿತು ಆಕಾಶದಲ್ಲಿ ಅಟ್ಟಹಾಸಗೈಯುತ್ತದೆ.
ಶರಣ ಸಂಸ್ಕ್ರತಿ ನೆಲದ ಮೇಲೆ ನಿಂತು ಎಲ್ಲರೊರಡೆ ವಿನಮ್ರವಾಗಿ ವ್ಯವಹರಿಸುತ್ತದೆ.
೫. ಆಚಾರ್ಯ ಸಂಸ್ಕ್ರತಿ ವೈದಿಕರ ವರ್ಣಾಶ್ರಮ ಪದ್ಧತಿಯನ್ನು ಒಪ್ಪುತ್ತದೆ.
ಶರಣ ಸಂಸ್ಕ್ರತಿ ಅದನ್ನು ನಿರಾಕರಿಸುತ್ತದೆ.
೬. ಆಚಾರ್ಯ ಸಂಸ್ಕ್ರತಿ ವೈದಿಕರ ವೇದಾಗಮಗಳನ್ನು ಒಪ್ಪುತ್ತದೆ.
ಶರಣ ಸಂಸ್ಕ್ರತಿ ಅವುಗಳನ್ನು ತಿರಸ್ಕರಿಸುತ್ತದೆ.
೭. ಆಚಾರ್ಯ ಸಂಸ್ಕ್ರತಿ ಗುರುತನದ ಅಹಂನ್ನು ಸಾರುತ್ತದೆ.
ಶರಣ ಸಂಸ್ಕ್ರತಿ ಶರಣ ತತ್ವದ ಹಿರಿಮೆಯನ್ನು ಬೀರುತ್ತದೆ.
೮. ಆಚಾರ್ಯ ಸಂಸ್ಕ್ರತಿ ಮಾಲಿಕತ್ವ, ಶೋಷಣೆಯನ್ನು ಬೆಂಬಲಿಸುತ್ತದೆ.
ಶರಣ ಸಂಸ್ಕ್ರತಿ ಶ್ರಮ ಮತ್ತು ದುಡಿಮೆಯನ್ನು ಉತ್ತೇಜಿಸುತ್ತದೆ.
೯. ಆಚಾರ್ಯ ಸಂಸ್ಕ್ರತಿ ಬಹುದೇವೊಪಾಸನೆ ಪ್ರತಿನಿಧಿಸುತ್ತದೆ.
ಶರಣ ಸಂಸ್ಕ್ರತಿ ಏಕದೇವೋಪಾಸನೆಯನ್ನು ಸಾರುತ್ತದೆ.
೧೦. ಆಚಾರ್ಯ ಸಂಸ್ಕ್ರತಿ ಕರ್ನಾಟಕ ಸೇರಿದಂತೆ ಎಲ್ಲಿಯೂ ಬೇರೆಯವರನ್ನು ಆಕರ್ಶಿಸಿಲ್ಲ.
ಶರಣ ಸಂಸ್ಕ್ರತಿ ವಿಶ್ವದಾದ್ಯಂತ ತನ್ನ ಉದಾತ್ ವಿಚಾರಗಳಿಂದ ಜನರನ್ನು ಆಕರ್ಶಿಸಿದೆ.
೧೧. ಆಚಾರ್ಯ ಸಂಸ್ಕ್ರತಿ ಸಮಾಜಕ್ಕೆ ಏನನ್ನೂ ನೀಡಲಿಲ್ಲ.
ಶರಣ ಸಂಸ್ಕ್ರತಿಗೆ ಸೇರಿರುವ ಸಂಸ್ಥೆಗಳ ಸಾಮಾಜಿಕ ಕಾರ್ಯಗಳು ಅನನ್ಯ.
೧೨. ಆಚಾರ್ಯ ಸಂಸ್ಕ್ರತಿ ಜನರನ್ನು ವಿಭಜಿಸುತ್ತದೆ.
ಶರಣ ಸಂಸ್ಕ್ರತಿ ಜನರನ್ನು ಬೆಸೆಯುತ್ತದೆ.
೧೩. ಆಚಾರ್ಯ ಸಂಸ್ಕ್ರತಿ ಹೋಮ-ಹವನಗಳನ್ನು ಆಚರಿಸುತ್ತದೆˌ ಮಡಿ-ಮೈಲಿಗೆಗಳನ್ನು ಪಾಲಿಸುತ್ತದೆ.
ಶರಣ ಸಂಸ್ಕ್ರತಿಗೆ ಮಡಿ-ಮೈಲಿಗೆ, ಹೋಮ-ಹವನಗಳ ಹಂಗಿಲ್ಲ.
೧೪. ಆಚಾರ್ಯ ಸಂಸ್ಕ್ರತಿ ಸಂಸ್ಕ್ರತ ಮೂಲದ ಶಿವಾಗಮ ಆಧಾರಿತ ಸಿದ್ಧಾಂತ ಶಿಖಾಮಣಿ ಬಿಟ್ಟು ಸ್ಥಳೀಯ ಭಾಷೆಯಲ್ಲಿ ಯಾವುದೇ ಗ್ರಂಥಾಧಾರಗಳನ್ನು ಹೊಂದಿಲ್ಲ.
ಶರಣ ಸಂಸ್ಕ್ರತಿಗೆ ಭವ್ಯವಾದ ವಚನ ಸಾಹಿತ್ಯದ ಹಿನ್ನೆಲೆಯಿದೆ.
೧೫. ಆಚಾರ್ಯ ಸಂಸ್ಕ್ರತಿ ತೆಲಗು ಮೂಲದ ಲಿಂಗಿ ಬ್ರಾಹ್ಮಣ ಹಿನ್ನೆಲೆಯುಳ್ಳದ್ದು.
ಶರಣ ಸಂಸ್ಕ್ರತಿ ಕನ್ನಡ ಮಣ್ಣಿನ ಶ್ರಮ ಸಂಸ್ಕ್ರತಿಯ ವಾರಸುದಾರರ ಹಿನ್ಮೆಲೆಯುಳ್ಳದ್ದು.
ಒಟ್ಟಾರೆ ಆಚಾರ್ಯ ಸಂಸ್ಕ್ರತಿಯವರು ವೀರಶೈವರೇ ಹೊರತು ಲಿಂಗಾಯತರಲ್ಲˌ ಶರಣ ಸಂಸ್ಕ್ರತಿಯವರು ಅಪ್ಪಟ ಲಿಂಗಾಯತರೇ ಹೊರತು ವೀರಶೈವರಲ್ಲ.
~ ಡಾ. ಜೆ ಎಸ್ ಪಾಟೀಲ.






