ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಕೇವಲ ಆ ರಾಜ್ಯಗಳಷ್ಟೇ ಅಲ್ಲದೆ, ದೇಶದ ಮುಂದಿನ ರಾಜಕೀಯ ಭವಿಷ್ಯದ ಸೂಚನೆಯನ್ನೂ ನೀಡಿದೆ.
ಅದರಲ್ಲೂ ಅತಿ ಹೆಚ್ಚು ಸಂಸದರನ್ನು ಸಂಸತ್ತಿಗೆ ಕಳಿಸುವ ಉತ್ತರಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶ ರಾಷ್ಟ್ರಮಟ್ಟದಲ್ಲಿ ಬೀರಲಿರುವ ಪರಿಣಾಮಗಳ ಬಗ್ಗೆ ಸಹಜವಾಗೇ ವ್ಯಾಪಕ ಚರ್ಚೆ ನಡೆಯುತ್ತಿದೆ. ಅದರಲ್ಲೂ ಈ ಬಾರಿ ಅಲ್ಲಿನ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಆಡಳಿತದ ವಿರುದ್ಧ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಇದೆ. ಕರೋನಾ ಸಂಕಷ್ಟ, ರೈತ ಹೋರಾಟ, ಸಿಎಎ-ಎನ್ ಆರ್ಸಿ, ಹತ್ರಾಸ್ ದಲಿತ ಯುವತಿ ಅತ್ಯಾಚಾರ ಸೇರಿದಂತೆ ಹಲವು ವಿಷಯಗಳಲ್ಲಿ ಯೋಗಿ ಸರ್ಕಾರ ದಲಿತರು, ಮುಸ್ಲಿಮರು ಮತ್ತು ರೈತ ಸಮುದಾಯ ವಿರೋಧಿ ಧೋರಣೆ ಪ್ರದರ್ಶಿಸಿದೆ. ಆ ಹಿನ್ನೆಲೆಯಲ್ಲಿ ಯೋಗಿ ಮತ್ತೆ ಅಧಿಕಾರಕ್ಕೆ ಬರುವುದು ಅನುಮಾನ ಎಂಬ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಏಕೆಂದರೆ; ಉತ್ತರಪ್ರದೇಶದ ಚುನಾವಣೆ ಈ ಬಾರಿ ಬಿಜೆಪಿಯ ಹಿಂದುತ್ವ, ರಾಷ್ಟ್ರೀಯತಾವಾದದ ಅಜೆಂಡಾದ ಬದಲಾಗಿ ರೈತರು, ದಲಿತರು ಮತ್ತು ಮುಸ್ಲಿಮರ ವಿರುದ್ಧದ ಯೋಗಿ ಸರ್ಕಾರದ ವರಸೆಗಳ ಸುತ್ತಾ ಭಾರೀ ಚರ್ಚೆಗೆ ಕಾವು ನೀಡಿತ್ತು. ರೈತ ಹೋರಾಟಗಾರರ ಮೇಲೆ ಕಾರು ಹತ್ತಿಸಿ ಹತ್ಯಾಕಾಂಡ ನಡೆಸಿದ ಬಿಜೆಪಿ ನಾಯಕನ ಕ್ರೌರ್ಯ, ದಲಿತ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ, ಆಕೆಯ ಮೇಲಿನ ದೌರ್ಜನ್ಯದ ಕುರಿತು ವರದಿ ಮಾಡಲು ಕೂಡ ಮಾಧ್ಯಮಗಳಿಗೆ ಅವಕಾಶ ನೀಡದೆ ಕತ್ತು ಹಿಸುಕಿದ ಆಡಳಿತ ಪಕ್ಷದ ದಬ್ಬಾಳಿಕೆ, ಮತ್ತು ಅಂತಿಮವಾಗಿ ಸಿಎಎ-ಎನ್ ಆರ್ ಸಿ ಹೋರಾಟಗಾರರ ಆಸ್ತಿಮುಟ್ಟುಗೋಲು ಹಾಕಿಕೊಳ್ಳುವಂತಹ ಸರ್ವಾಧಿಕಾರಿ ವರಸೆಯೂ ಸೇರಿದಂತೆ ರಾಜ್ಯಾದ್ಯಂತ ಮುಸ್ಲಿಮರ ಮೇಲೆ ಕಳೆದ ಐದು ವರ್ಷಗಳಲ್ಲಿ ನಡೆದ ದಬ್ಬಾಳಿಕೆ ಪ್ರಕರಣಗಳೇ ಈ ಬಾರಿಯ ಚುನಾವಣಾ ವಿಷಯಗಳು ಎಂಬ ವಾದಗಳು ಕೇಳಿಬಂದಿದ್ದವು.
Also Read : ಬಿಜೆಪಿಗೆ ರಾಷ್ಟ್ರವ್ಯಾಪಿ ರಾಜಕೀಯ ಪರ್ಯಾಯ : ಪಂಜಾಬ್ ಫಲಿತಾಂಶ ಹೇಳುವುದೇನು?
ಆ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ದಲಿತ, ಮುಸ್ಲಿಂ ಬಾಹುಳ್ಯದ ಮೀಸಲು ಕ್ಷೇತ್ರಗಳು ಮತ್ತು ರೈತ ಹತ್ಯಾಕಾಂಡ ನಡೆದ ಲಖೀಂಪುರ ಖೇರಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣಿತ್ತು. ಆ ಕ್ಷೇತ್ರಗಳಲ್ಲಿ ಮತದಾರರ ಯಾರ ಪರ ಒಲವು ತೋರಿದ್ದಾನೆ ಎಂಬುದು ಕೇವಲ ಉತ್ತರಪ್ರದೇಶಕ್ಕೆ ಸೀಮಿತವಾಗಿ ಮಾತ್ರವಲ್ಲ; ರಾಷ್ಟ್ರವ್ಯಾಪಿಯಾಗಿ ಬಿಜೆಪಿ ಮತ್ತು ಅದರ ಕೋಮುವಾದಿ ಅಜೆಂಡಾದ ವಿರೋಧಿಗಳು ಎತ್ತುವ ಪ್ರಜಾಪ್ರಭುತ್ವ, ಸಮಾನತೆ, ಕೋಮು ಸಾಮರಸ್ಯ, ದಲಿತ ಸಬಲೀಕರಣ, ಅಲ್ಪಸಂಖ್ಯಾತರ ಒಳಗೊಳ್ಳುವಿಕೆ ಮತ್ತು ರೈತರ ಹಿತದಂತಹ ವಿಷಯಗಳನ್ನು ಮತದಾರ ಹೇಗೆ ಸ್ವೀಕರಿಸುತ್ತಾನೆ ಮತ್ತು ತನ್ನ ಅಧಿಕಾರ ಚಲಾಯಿಸುವ ಸಂದರ್ಭದಲ್ಲಿ ಆತನ ಆಯ್ಕೆಗಳು ಯಾವುದಾಗುತ್ತವೆ ಎಂಬ ಕಾರಣಕ್ಕೆ ದೇಶ ಈ ಕ್ಷೇತ್ರಗಳ ಫಲಿತಾಂಶವನ್ನು ಎದುರು ನೋಡುತ್ತಿತ್ತು.

ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಬಹುನಿರೀಕ್ಷೆಯಿಂದ ಗಮನಿಸುತ್ತಿದ್ದ ಈ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಬಹುತೇಕ ಅಭೂತಪೂರ್ವ ಜಯ ದಾಖಲಿಸಿದೆ. ಬಿಜೆಪಿಯ ಕೇಂದ್ರ ಸಚಿವರ ಪುತ್ರನೇ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಚಲಾಯಿಸಿ ಸಾಮೂಹಿತ ಹತ್ಯಾಕಾಂಡ ನಡೆಸಿದ ಘಟನೆ ನಡೆದ ಲಖೀಂಪುರ ಖೇರಿಯ ಫಲಿತಾಂಶ ಅಚ್ಚರಿ ತಂದಿದೆ. ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿಯೇ ರೈತರನ್ನು ಹತ್ಯೆ ಮಾಡಿದ್ದಾನೆ ಎಂಬ ಗಂಭೀರ ಆರೋಪದ ಹೊರತಾಗಿಯೂ ಮೋದಿಯವರ ಸಂಪುಟದಿಂದ ಆರೋಪಿಯ ತಂದೆ ಅಜಯ್ ಮಿಶ್ರಾರನ್ನು ಕೈಬಿಡಲಿಲ್ಲ. ಅಲ್ಲದೆ, ಕೃತ್ಯದ ಆರೋಪಿ ಆಶೀಶ್ ಮಿಶ್ರಾನನ್ನು ನ್ಯಾಯಾಂಗದ ಮಧ್ಯಪ್ರವೇಶದವರೆಗೂ ಸ್ಥಳೀಯ ಬಿಜೆಪಿ ಆಡಳಿತ ಆತನಿಗೆ ರಕ್ಷಣೆ ನೀಡುತ್ತಿತ್ತು ಎಂಬ ಆರೋಪಗಳೂ ಕೇಳಿಬಂದಿದ್ದವು. ಜೊತೆಗೆ ರೈತರ ಹತ್ಯಾಕಾಂಡವನ್ನು ಖಂಡಿಸಿ ರೈತ ನಾಯಕ ರಾಕೇಶ್ ನೇತೃತ್ವದಲ್ಲಿ ಆ ಭಾಗದಲ್ಲಿ ಭಾರೀ ಹೋರಾಟಗಳು ನಡೆದಿದ್ದವು. ಚುನಾವಣಾ ಪ್ರಚಾರದ ವೇಳೆ ಕೂಡ ರಾಕೇಶ್ ಟಿಕಾಯತ್ ನೇತೃತ್ವದ ರೈತ ಸಂಘಟನೆಗಳು ಬಿಜೆಪಿಗೆ ಮತ ನೀಡದಂತೆ ಪ್ರಚಾರ ನಡೆಸಿದ್ದವು. ರೈತ ಸಮುದಾಯವೇ ನಿರ್ಣಾಯಕವಾಗಿರುವ ಆ ಪ್ರದೇಶದಲ್ಲಿ ಲಖೀಂಪುರ ಖೇರಿ ಹತ್ಯಾಕಾಂಡ ಚುನಾವಣಾ ವಿಷಯವಾಗಿತ್ತು.
ಆದರೂ ಲಖೀಂಪುರ ಖೇರಿ ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ! ಅಲ್ಲಿನ ಎಂಟು ಕ್ಷೇತ್ರಗಳ ಪೈಕಿ ಮುಸ್ಲಿಂ ಬಾಹುಳ್ಯದ ಮೊಹಮ್ಮದಿ ಕ್ಷೇತ್ರದಲ್ಲಿ ಕೂಡ ಬಿಜೆಪಿಯ ಲಖೇಂದ್ರ ಪ್ರತಾಪ್ ಸಿಂಗ್ ಮುನ್ನಡೆ ಕಾಯ್ದುಕೊಂಡಿದ್ದಾರೆ! ಅಂದರೆ, ರೈತರು ಮತ್ತು ಮುಸ್ಲಿಮರ ವಿರೋಧಿ ಆಡಳಿತ ಎಂಬ ಬಿಜೆಪಿಯ ಯೋಗಿ ವಿರುದ್ಧದ ಪ್ರತಿಪಕ್ಷಗಳು ಮತ್ತು ರೈತ ನಾಯಕರ ಕೂಗಿಗೆ ಅದೇ ರೈತರು ಮತ್ತು ಮುಸ್ಲಿಮರೇ ಮನ್ನಣೆ ನೀಡಿಲ್ಲ ಎಂಬುದನ್ನು ಈ ಭರ್ಜರಿ ಜಯ ತೋರಿಸುತ್ತಿಲ್ಲವೆ?
ಇನ್ನು ದಲಿತ ಮೀಸಲಾತಿ ಕ್ಷೇತ್ರಗಳಲ್ಲಿ ಕೂಡ ಈ ಬಾರಿ ಬಿಜೆಪಿಗೆ ತಿರುಗೇಟು ಬೀಳಲಿದೆ. ಹತ್ರಾಸ್ ಘಟನೆಯೂ ಸೇರಿದಂತೆ ಯೋಗಿ ಆಡಳಿತದಲ್ಲಿ ರಾಜ್ಯದ ಉದ್ದಗಲಕ್ಕೆ ದಲಿತ ವಿರುದ್ಧದ ದೌರ್ಜನ್ಯ ಪ್ರಕರಣಗಳು ಮಿತಿಮೀರಿವೆ. ಬಹುಸಂಖ್ಯಾತ ಪ್ರಬಲ ಸಮುದಾಯಗಳ ಪರ ನಿಂತು ಸರ್ಕಾರವೇ ಇಂತಹ ದೌರ್ಜನ್ಯ, ದಬ್ಬಾಳಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ದಲಿತ ಮೀಸಲಾತಿಯ ಕ್ಷೇತ್ರಗಳ ಮತದಾರರ ನಿರ್ಧಾರ ಕುತೂಹಲಕ್ಕೆ ಕಾರಣವಾಗಿತ್ತು. ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 86 ಮೀಸಲು ಕ್ಷೇತ್ರಗಳಿದ್ದು(84- ಎಸ್ಸಿ, 2 ಎಸ್ಟಿ), ಆ ಎಲ್ಲಾ ಕಡೆ ಬಹುತೇಕ ಈ ಬಾರಿ ಬಿಜೆಪಿಯ ಅಭ್ಯರ್ಥಿಗಳು ಸೋಲು ಕಾಣುತ್ತಾರೆ, ದಲಿತರ ಐಕಾನ್ ಮಾಯಾವತಿಯವರ ಬಿಎಸ್ ಪಿ ಅಥವಾ ಎಸ್ಪಿ ಯಂತಹ ಪ್ರಮುಖ ಪಕ್ಷಗಳು ಆ ಕ್ಷೇತ್ರಗಳನ್ನು ಬಾಚಿಕೊಳ್ಳಲಿವೆ ಎಂಬ ಲೆಕ್ಕಾಚಾರಗಳಿದ್ದವು.

ಆದರೆ, ಚುನಾವಣಾ ಫಲಿತಾಂಶ ಅಂತಹ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ. ಒಟ್ಟು 84 ಮೀಸಲು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಬಿಎಸ್ ಪಿ ಮುನ್ನಡೆ ಕಾಯ್ದುಕೊಂಡಿದ್ದರೆ, 74 ಕ್ಷೇತ್ರಗಳನ್ನು ಸಾರಾಸಗಟಾಗಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು(ಬಿಜೆಪಿ 70, ಎಸ್ ಬಿಎಸ್ಪಿ 3, ಅಪ್ನಾ ದಳ 1 ) ಬಾಚಿಕೊಂಡಿದ್ದರೆ, ಸಮಾಜವಾದಿ ಪಾರ್ಟಿ 7 ಮತ್ತು ಪಕ್ಷೇತರ 1 ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ!
ಅಂದರೆ, ದಲಿತರು, ರೈತರು ಮತ್ತು ಮುಸ್ಲಿಮರು ನಿರ್ಣಾಯಕರಾಗಿರುವ ಕ್ಷೇತ್ರಗಳಲ್ಲೇ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಜಯ ಗಳಿಸಿವೆ. ಆ ಮೂಲಕ ದಲಿತರು ಬಿಎಸ್ ಪಿಯ ಮತಬ್ಯಾಂಕ್, ರೈತರು ಬಿಜೆಪಿ ವಿರುದ್ಧ ಮತ ಚಲಾಯಿಸುತ್ತಾರೆ ಮತ್ತು ಮುಸ್ಲಿಮರು ಕಾಂಗ್ರೆಸ್ ಅಥವಾ ಎಸ್ಪಿಯ ಮತಬ್ಯಾಂಕ್ ಎಂಬ ಕಲ್ಪನೆಗಳನ್ನೇ ಈ ಬಾರಿಯ ಚುನಾವಣೆ ತಲೆಕೆಳಗು ಮಾಡಿದೆ!